ಪುಟಗಳು

10.10.15

ಸಾತ್ವಿಕ ಸಿಟ್ಟು ಪ್ರದರ್ಶನದ ‘ಮಧ್ಯಮ ಮಾರ್ಗ’





- ರೇಶ್ಮಾರಾವ್ ಸೊನ್ಲೆ
‘‘ಆಯುಧವಿಲ್ಲದ, ಆಸ್ತಿಯಿಲ್ಲದ ಜನರ ಮೇಲೆ ಅಧಿಕಾರ ಬಳಸಿ, ದೌರ್ಜನ್ಯ ಎಸಗುವುದು ಹೀನಕೆಲಸ. ಪಂಜಾಬ್‌ನ ನನ್ನ ಸಹೋದರರು ಅನುಭವಿಸಿದ ಅವಮಾನ ಹಾಗೂ ಹಿಂಸೆಗಳು ಕಟ್ಟಿದ ಬಾಯಿಗಳಿಂದಲೇ ಮೌನವಾಗಿ ಹಬ್ಬಿ ದೇಶದ ಮೂಲೆ ಮೂಲೆಯನ್ನೂ ತಲುಪಿದೆ. ಆಂಗ್ಲೋ-ಇಂಡಿಯನ್ ಪತ್ರಿಕೆಗಳು ನಮ್ಮ ಮೇಲಿನ ದೌರ್ಜನ್ಯವನ್ನು ತಮಾಷೆಯ ವಸ್ತುವಿನಂತೆ ಬರೆದು ಸಂತೋಷ ಪಟ್ಟಿವೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಗೌರವವೆಂದು ನೀಡಿದ ಬ್ಯಾಡ್ಜ್ ಅಣಕಿಸುತ್ತಿದೆ. ನನ್ನ ದೇಶಕ್ಕಾಗಿ, ಕೋಟ್ಯಂತರ ಜನರ ಮೂಕ ಪ್ರತಿಭಟನೆಗೆ ದನಿ ನೀಡುವ ಸಲುವಾಗಿ ನಾನು ಮಾಡಬಹುದಾದ ಕನಿಷ್ಠ ಕೆಲಸವಾಗಿ, ನನಗೆ ನೀಡಿದ ‘ನೈಟ್‌ಹುಡ್’(‘ಸರ್’ ನಾಮಾಂಕಿತ) ಬಿರುದನ್ನು ಹಿಂಪಡೆಯಲು par ಕೋರುತ್ತೇನೆ.’’ಘಿ- ಇದು 1919ರ ಮೇನಲ್ಲಿ ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ್ ಠಾಗೋರ್ ಬ್ರಿಟಿಷ್ ವೈಸ್‌ರಾಯ್‌ಗೆ ಬರೆದಿದ್ದ ಪತ್ರದ ಸಾರಾಂಶ.
1919ರ ಏಪ್ರಿಲ್ 13ರಂದು ಪಂಜಾಬ್‌ನಲ್ಲಿ ನಡೆದ ಜಲಿಯನ್‌ವಾಲಾಭಾಗ್ ಹತ್ಯಾಕಾಂಡವನ್ನು ಖಂಡಿಸುವುದಕ್ಕಾಗಿಯೇ ಠಾಗೋರ್ ಅವರು, ಬ್ರಿಟಿಷ್ ಸರ್ಕಾರ ನೀಡಿದ್ದ ಅತ್ಯಂತ ಗೌರವಾನ್ವಿತವಾದ ನೈಟ್‌ಹುಡ್ ಬಿರುದನ್ನು ಮುಲಾಜಿಲ್ಲದೆ ಹಿಂತಿರುಗಿಸಿದ್ದರು. ಆ ಮೂಲಕ ಮಾನವೀಯತೆಯ ಮೇಲಿನ ಅತ್ಯಾಚಾರವನ್ನು ಖಂಡಿಸಿದ್ದರು. ಭಾರತದಲ್ಲಿ ಗೌರವವನ್ನು ಹಿಂದಿರುಗಿಸುವ ಮೂಲಕ ಅಗೌರವ ತೋರುವುದನ್ನು ಪ್ರತಿಭಟನೆಯ ಪ್ರಕಾರವಾಗಿ ಬಳಸಬಹುದೆಂದು ತೋರಿಸಿಕೊಟ್ಟವರಲ್ಲಿ ಠಾಗೋರ್ ಮೊದಲಿಗರು.
ಪಂಜಾಬ್‌ನ ಖುಷವಂತ್‌ಸಿಂಗ್ ಹೆಸರಾಂತ ಭಾರತೀಯ ಕಾದಂಬರಿಕಾರರಲ್ಲಿ ಒಬ್ಬರು. ಪ್ರಖ್ಯಾತ ಪತ್ರಕರ್ತ ಕೂಡಾ. 1974ರಲ್ಲಿ ಖುಷ್‌ವಂತ್ ಸಾಧನೆಗೆ ಖುಷಿಯಾದ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಆದರೆ ದಶಕಗಳ ಬಳಿಕ ಇಂದಿರಾ ಗಾಂಧಿ ಸರ್ಕಾರವು ಅಮೃತಸರದ ಗೋಲ್ಡನ್ ಟೆಂಪಲ್‌ನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ನಡೆಸಿದ ಆಪರೇಷನ್ ಬ್ಲೂಸ್ಟಾರ್ ವಿರೋಧಿಸಿ, ಖುಷವಂತ್ ತಮಗೆ ನೀಡಿದ ಪ್ರಶಸ್ತಿಯನ್ನು ಹಿಂದಿರುಗಿಸಿದರು. 2007ರಲ್ಲಿ ಸರ್ಕಾರ, ದೇಶದ ಎರಡನೇ ಅತಿ ದೊಡ್ಡ ಗೌರವವಾದ ಪದ್ಮ ವಿಭೂಷಣ ನೀಡಿತು.
ನವ್ಯ ಹಿಂದಿ ಸಾಹಿತ್ಯದ ಮೇರು ಬರಹಗಾರ ಫಣೀಶ್ವರನಾಥ್ ರೇಣು, 1970ರಲ್ಲಿ ತಮಗೆ ನೀಡಿದ್ದ ಪದ್ಮಶ್ರೀ ಪುರಸ್ಕಾರವನ್ನು ತುರ್ತು ಪರಿಸ್ಥಿತಿಯನ್ನು ಖಂಡಿಸಿ ಹಿಂದಿರುಗಿಸಿದ್ದರು.

ದೇಶದ ಹಿತ ಕಾಯಲಾಗದ ನಿಮಗೆ ಪ್ರಶಸ್ತಿ ಕೊಡುವ ಅರ್ಹತೆಯೂ ಇಲ್ಲ ಎಂದು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಯತ್ನವಿದು. ಅನಂತರದಲ್ಲಿ ಅನೇಕ ರಂಗಗಳಲ್ಲಿ ತಜ್ಞರೆನಿಕೊಂಡ ಹಲವರು ಸರ್ಕಾರ ತಮಗೆ ನೀಡಿದ ಪ್ರಶಸ್ತಿಗಳನ್ನು ಪ್ರತಿಭಟನಾ ಬತ್ತಳಿಕೆಯ ಆಯುಧವಾಗಿ ಬಳಸಿ ಹಿಂದಿರುಗಿಸಿದರಾದರೂ, ಹೆಚ್ಚಿನ ಬಾರಿ ದೇಶದ ಕಾಳಜಿಗಿಂತ ಸ್ವಹಿತಾಸಕ್ತಿಯೇ ಮೇಲುಗೈ ಸಾಧಿಸಿದೆ. ಇಂಥ ಸಮಯದಲ್ಲಿ ದಾದ್ರಿಯಲ್ಲಿ ಅಲ್ಪಸಂಖ್ಯಾತನ ಕೊಲೆ, ವಿಚಾರವಾದಿಗಳಾದ ಎಂ.ಎಂ. ಕಲಬುರ್ಗಿ, ಗೋವಿಂದ ಪಾನ್ಸರೆ ಹಾಗೂ ನರೇಂದ್ರ ದಾಬೋಲ್ಕರ್ ಹತ್ಯೆ  ಇತ್ಯಾದಿ ಘಟನೆಗಳನ್ನು ಪ್ರತಿಭಟಿಸುವ ಸಲುವಾಗಿ, ಮತ್ತೊಮ್ಮೆ ಠಾಗೋರರ ಅಸ್ಟ್ರಗಳು ಪ್ರಯೋಗವಾಗತೊಡಗಿವೆ. ಇನ್ನೂ ಈ ಅಸ್ತ್ರಗಳು ಮೊದಲಿನ ಮೊನಚನ್ನೇ ಉಳಿಸಿಕೊಂಡಿವೆಯೇ?

ಪ್ರಶಸ್ತಿ ನನ್ನ ಅರ್ಹತೆಗೆ ತಕ್ಕುದಲ್ಲ ಎಂದವರು!
ಖ್ಯಾತ ಸಿತಾರ್ ವಾದಕ ಉಸ್ತಾದ್ ವಿಲಾಯತ್‌ಖಾನ್ ಅವರಿಗೆ 1964ರಲ್ಲಿ ಪದ್ಮಶ್ರೀಯನ್ನೂ, 1968ರಲ್ಲಿ  ಪದ್ಮಭೂಷಣವನ್ನೂ ನೀಡಲಾಯಿತು. ‘‘ಆದರೆ ನನ್ನ ಸಂಗೀತವನ್ನು ವಿಶ್ಲೇಷಿಸಲು ಅನರ್ಹವಾದ ಅವಾರ್ಡ್ ಕಮಿಟಿ ನೀಡುವ ಪ್ರಶಸ್ತಿ ನನಗೆ ಬೇಡ,’’ ಎಂದು ಹೇಳುವ ಮೂಲಕ ವಿಲಾಯತ್‌ಖಾನ್ ಪ್ರಶಸ್ತಿಗಳನ್ನು ಧಿಕ್ಕರಿಸಿದ್ದರು. 2000ದಲ್ಲಿ ಅವರಿಗೆ ಪದ್ಮವಿಭೂಷಣ ನೀಡಿದಾಗಲೂ, ‘‘ಈ ಪ್ರಶಸ್ತಿ ಬಂದಿದೆ ಎಂಬುದೇ ಅವಮಾನ,’’ ಎಂದು ಜರಿದು, ‘‘ಭಾರತದಲ್ಲಿ ಸಿತಾರ್‌ಗೆಂದೇ ಯಾವುದಾದರೂ ಪ್ರಶಸ್ತಿ ನೀಡಿದರೆ ಅದು ಮೊದಲು ನನಗೇ ಬರಬೇಕು. ಅನರ್ಹರಿಗೇ ಅವಾರ್ಡ್‌ಗಳನ್ನು ಕೊಡುವ ಈ ದೇಶದಲ್ಲಿ ಅದನ್ನು ಸ್ವೀಕರಿಸುವುದೇ ಅವಮಾನ,’’ ಎಂದು ಸರ್ಕಾರದ ಪ್ರಶಸ್ತಿಗಳಿಗೆ ಮೂಗು ಮುರಿದರು.
ಕಥಕ್ ನೃತ್ಯಪಟು ಸಿತಾರಾ ದೇವಿಯವರಿಗೆ ‘ಪದ್ಮಭೂಷಣ’ ಒಲಿದಾಗ  ‘‘ಇದು ಗೌರವವಲ್ಲ, ಸರ್ಕಾರ ಮಾಡುತ್ತಿರುವ ಅವಮಾನ. ಹೆಸರೇ ಕೇಳದವರಿಗೆ, ಸಣ್ಣ ವಯಸ್ಸಿನವರಿಗೆಲ್ಲ ಪದ್ಮ ವಿಭೂಷಣ ಕೊಡುವಾಗ, ನನ್ನ ಸಾಧನೆಗೆ ಭಾರತರತ್ನ ಹೊರತುಪಡಿಸಿ ಇನ್ನಾವುದೇ ಅವಾರ್ಡ್ ನೀಡಿದರೂ ನನಗೆ ಬೇಡ,’’ ಎಂದು ಧಿಕ್ಕರಿಸಿದ್ದರು.
ಅವಾರ್ಡ್‌ಗಳ ಹೊದಿಕೆಯನ್ನೇ ಹೊದ್ದಿರುವ ಗಾಯಕಿ ಎಸ್. ಜಾನಕಿಯವರಿಗೆ 2013ರಲ್ಲಿ ಪದ್ಮಭೂಷಣ ಘೋಷಿಸಿದಾಗ, ತುಂಬಾ ತಡವಾಯಿತು ಹಾಗೂ ಪ್ರಶಸ್ತಿಗೆ ಪರಿಗಣಿಸುವಾಗ ದಕ್ಷಿಣದವರನ್ನು ಸದಾ ಕಾಲ ಕಡೆಗಣಿಸಲಾಗುತ್ತದೆ ಎಂಬ ಕಾರಣ ನೀಡಿ ಅವರದನ್ನು ತಿರಸ್ಕರಿಸಿದರು.
‘‘ಅಧಿಕಾರಿಗಳು ಹಾಗೂ ಪತ್ರಕರ್ತರು ಸರ್ಕಾರ ನೀಡುವ ಗೌರವಗಳನ್ನು ಸ್ವೀಕರಿಸಬಾರದು. ಸ್ವೀಕರಿಸಿದರೆ ಅಲ್ಲಿ ಲಾಭಿಯ ವಾಸನೆ ಬಡಿಯುತ್ತದೆ’’ ಎಂಬ ಕಾರಣ ಮಂಡಿಸುವ ಮೂಲಕ ರಕ್ಷಣಾ ವಿಶ್ಲೇಷಕ ಕೃಷ್ಣಸ್ವಾಮಿ ಸುಬ್ರಮಣ್ಯಂ 1999ರಲ್ಲಿ ತಮಗೆ ಒಲಿದ ಪದ್ಮಭೂಷಣವನ್ನು ದೂರ ತಳ್ಳಿದರು.
ಇಲ್ಲಿ ಹಲವರ ಧೋರಣೆ ಮೇಲ್ನೋಟಕ್ಕೆ ಸ್ವಾರ್ಥ, ಅಹಂ ಎಂದೆನಿಸಿದರೂ, ಅದು ಸರ್ಕಾರದ ಪ್ರಶಸ್ತಿ ಆಯ್ಕೆ ಯ ಅಸಮಂಜಸ ಪ್ರಕ್ರಿಯೆಯನ್ನು ಎತ್ತಿ ಹಿಡಿದು ಧಿಕ್ಕಾರ ಕೂಗುವ ಯತ್ನವೂ ಆಗಿದೆ.

ಮತ್ತೆ ಹಳೇ ಅಸ್ತ್ರ ಪ್ರಯೋಗ
ಇದೀಗ ಅವಾರ್ಡ್ ಹಿಂದಿರುಗಿಸುವ ಮೂಲಕ ಮತ್ತೆ ಸುದ್ದಿಯಲ್ಲಿರುವವರು ನೆಹರೂ ಸೋದರಸೊಸೆ, ಭಾರತೀಯ ಆಂಗ್ಲ ಲೇಖಕಿ, ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷೆ ನಯಂತಾರಾ ಸೆಹೆಗಲ್. ದಾದ್ರಿ ಪ್ರಕರಣ, ಎಂಎಂ ಕಲಬುರ್ಗಿ ಹತ್ಯೆ, ಗೋವಿಂದ ಪನ್ಸ್ಸಾರೆ ಹಾಗೂ ನರೇಂದ್ರ ದಾಭೋಲ್ಕರ್ ಹತ್ಯೆ ಖಂಡಿಸಿ, ನಿರಾಕರಣೆ ಹಕ್ಕನ್ನು ಪ್ರತಿಪಾದಿಸಿ, ತಮ್ಮ ‘ರಿಚ್ ಲೈಕ್ ಅಸ್’ ಪುಸ್ತಕಕ್ಕೆ 1986ರಲ್ಲಿ ನೀಡಿದ ಸಾಹಿತ್ಯ ಅಕಾಡೆಮಿ ಅವಾರ್ಡ್‌ನ್ನು ಹಿಂದಿರುಗಿಸಿದ್ದಾರೆ. ಮೋದಿ ಆಡಳಿತದಲ್ಲಿ ದೇಶ ಹಿಂದೆ ಓಡುತ್ತಿದೆ (ಅನ್‌ಮೇಕಿಂಗ್ ಆಫ್ ಇಂಡಿಯಾ) ಎಂದಿರುವ ಅವರು, ದೇಶದಲ್ಲಿ ಸದ್ದು ಮಾಡುತ್ತಿರುವ ಪ್ರಕರಣಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ಸಾಹಿತ್ಯ ಅಕಾಡೆಮಿಯ ಮೌನ ಖಂಡಿಸಿ ಪ್ರಶಸ್ತಿ ತಿರುಗಿಸಿರುವುದಾಗಿ ಹೇಳಿದ್ದಾರೆ. 88 ವರ್ಷದ ಸೆಹೆಗಲ್ ಅವರು ತಮ್ಮ ಸೋದರ ಸಂಬಂಧಿ ಇಂದಿರಾ ಗಾಂಧಿಯ ಆಡಳಿತ ಸಮಯದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯನ್ನೂ ಕಠಿಣವಾಗಿ ವಿರೋಧಿಸಿದ್ದರು.
ಸೆಹೆಗಲ್ ನಿರ್ಧಾರದ ಬೆನ್ನಿಗೇ ಹಿಂದಿಯ ಕವಿ, ಪ್ರಬಂಧಕಾರ, ವಿಮರ್ಶಕ 74 ವರ್ಷದ ಅಶೋಕ್ ವಾಜಪೇಯಿ ಕೂಡಾ ತಮ್ಮ ‘ಕಹಿ ನಹೀ ವಹೀ’ ಕವನ ಸಂಕಲನಕ್ಕೆ ಒಲಿದ ಸಾಹಿತ್ಯ ಅಕಾಡೆಮಿ ಅವಾರ್ಡ್ ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಲಲಿತ ಕಲಾ ಅಕಾಡೆಮಿಯ ರಾಷ್ಟ್ರೀಯ ಕಲಾ ವಿಭಾಗದ ಅಧ್ಯಕ್ಷರಾಗಿದ್ದವರು. ಬಹುಸಂಖ್ಯಾತರ ರಕ್ಷಣೆಗೆ ಸರ್ಕಾರ ನಿಂತಿದೆ ಎಂಬುದನ್ನು ವಾಚಾಳಿ ಮೋದಿ ಹೇಳದೆಯೇ ಸಮರ್ಥಿಸುತ್ತಿದ್ದಾರೆ ಎಂದು ಆರೋಪಿಸಿರುವ ವಾಜಪೇಯಿ, ಜೀವನ ಹಾಗೂ ಅಭಿವ್ಯಕ್ತಿ ಸ್ವಾತಂತ್ಯದ ಹಕ್ಕಿಗೆ ಧಕ್ಕೆ ಬಂದಿದೆ ಎಂದು ತಮ್ಮ ನಿರ್ಧಾರಕ್ಕೆ ವಿವರಣೆ ನೀಡಿದ್ದಾರೆ.

ಉದಯ್‌ರಿಂದ ಶುರುವಾಯಿತು
ಕಲಬುರ್ಗಿ ಹತ್ಯೆ ಹಿನ್ನೆಲೆಯಲ್ಲಿ ಪ್ರಶಸ್ತಿ ಹಿಂದಿರುಗಿಸಿದವರಲ್ಲಿ ಮೊದಲಿಗರು ಹಿಂದಿ ಬರಹಗಾರ ಉದಯ್ ಪ್ರಕಾಶ್. 2010ರಲ್ಲಿ ‘ಮೋಹನದಾಸ್’ ಕೃತಿಗೆ ಪಡೆದ ಸಾಹಿತ್ಯ ಅಕಾಡೆಮಿ ಅವಾರ್ಡ್‌ನ 1 ಲಕ್ಷ ಮೊತ್ತ, ಫಲಕ ಹಾಗೂ ಶಾಲನ್ನು ಹಿಂದಿರುಗಿಸಿದ್ದಾರೆ. ಇದು ಅಕಾಡೆಮಿಯನ್ನು ಎಚ್ಚರಿಸುವ ಪ್ರಯತ್ನ. ಹೀಗಾದರೂ ಅಕಾಡೆಮಿ ಕಲಬುರ್ಗಿ ವಿಷಯದಲ್ಲಿ ಮಾತನಾಡಲಿ ಎಂದು ಪ್ರತಿಪಾದಿಸಿದ್ದಾರೆ.
ಹೆಚ್ಚುತ್ತಿರುವ ಅಸಹಿಷ್ಣುತೆ, ಬಲಪಂಥೀಯತೆ, ನಿರಂಕುಶ ಫ್ರಭುತ್ವ, ಧರ್ಮಗಳ ಆಧಾರದಲ್ಲಿ ದೇಶ ಒಡೆಯುವ ತಂತ್ರ ಖಂಡಿಸಿ, ನಾಲ್ಕು ಪುಸ್ತಕಗಳ ಒಡೆಯ, ಉರ್ದು ಬರಹಗಾರ ರಹಮಾನ್ ಅಬ್ಬಾಸ್ ಕೂಡಾ ಮಹಾರಾಷ್ಟ್ರ ಸರ್ಕಾರ ನೀಡಿದ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಪ್ರಕಟಿಸಿದ್ದಾರೆ. ಇವರ ‘ಖುದಾ ಕೆ ಸಾಯೇ ಮೆ ಆಂಖ್ ಮಿಚೋಲಿ’(ದೇವರ ನೆರಳಿನಲ್ಲಿ ಕಣ್ಣಾಮುಚ್ಚಾಲೆ) ಎಂಬ ಪುಸ್ತಕಕ್ಕೆ ಉರ್ದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಉರ್ದುವಿನ ಪ್ರಮುಖ ಬರಹಗಾರರಾದ ಜಾವೇದ್ ಅಕ್ತರ್, ನಿದಾ ಫಜ್ಲಿ, ಸಲಾಂ ಬಿನ್ ರಜಾಕ್ ಅವರು ಕೂಡಾ ಧರ್ಮಗಳ ಆಧಾರದಲ್ಲಿ ದೇಶ ಒಡೆಯುವ ತಂತ್ರ ಖಂಡಿಸಿ ಅಕಾಡೆಮಿ ಅವಾಡ್ ರ್ ಹಿಂದಿರುಗಿಸಬೇಕು ಎಂದು  ಅಬ್ಬಾಸ್ ಒತ್ತಾಯಿಸಿದ್ದರು.
ಆದರೆ ಅಬ್ಬಾಸ್‌ನ ಕ್ರಮವನ್ನು ಮೂರ್ಖತನ ಎಂದಿರುವ ನಿದಾ ಫಜ್ಲಿ ‘‘ನನಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗ ಪದ್ಮಶ್ರೀ ಹಾಗೂ ಸಾಹಿತ್ಯ ಅಕಾಡೆಮಿ ಅವಾರ್ಡ್ ಬಂದಿದೆ. ಬಿಜೆಪಿ ಆಡಳಿತ ಖಂಡಿಸಿ ಅದನ್ನು ಹಿಂತಿರುಗಿಸುವುದು ಅರ್ಥವಿಲ್ಲದ ನಡೆ’’ ಎಂದು ತಿರುಗೇಟು ನೀಡಿದ್ದರು. ಇದಕ್ಕೆ ಉತ್ತರಿಸಿರುವ ಅಬ್ಬಾಸ್, ಅವಾರ್ಡನ್ನು ಬಿಡದಂತೆ ಹಿಡಿದಿರುವುದು ಉರ್ದು ಬರಹಗಾರರ ಅವಕಾಶವಾದಿತನ ಹಾಗೂ ಸ್ವಾರ್ಥವನ್ನು ತೋರುತ್ತದೆ ಎಂದು ಮಾತಿನ ಬಾಣ ಬಿಟ್ಟಿದ್ದಾರೆ.
ಇವರಲ್ಲನೇಕರ ನಡೆ ಸಮರ್ಥನೀಯವಾದರೂ, ಇನ್ನು ಕೆಲವರದು ‘ಬಹೋದ್ದೇಶ ಪ್ರಶಸ್ತಿ ತಿರಸ್ಕಾರ ಯೋಜನೆ’. ಪುಸ್ತಕ ಬರೆದಾಗ, ಪ್ರಶಸ್ತಿ ಸ್ವೀಕರಿಸಿದಾಗ ಹೆಸರಾಗದ ಕೆಲವರು ಪ್ರಶಸ್ತಿ ಹಿಂದಿರುಗಿಸಿ ಹೆಸರು ಮಾಡ್ತುತಿರುವುದು ವಿಪರ್ಯಾಸವೇ ಸರಿ!

22.3.15

sujet

ಸೂಜೆಟ್ ಕತ್ರೀನಾ ಜೊರ್ಡಾನ್- ಆಕೆ ಹಾಗೆಂದೇ ಎಲ್ಲರೂ ಅವಳನ್ನು ಗುರುತಿಸಬೇಕೆಂದು ಬಯಸಿದ್ದಳು. ಜೊತೆಗೆ ಒಬ್ಬ ತಾಯಿ, ತಂಗಿ, ಮಗಳಾಗಿ ನನ್ನ ಗುರುತಿಸಿ ಎಂದು ಗೋಗರೆದಿದ್ದಳು. ಆದರೆ ಆ ಗೋಗರೆತಕ್ಕೆ ಗೊರಕೆ ಹೊಡೆದ ಸಮಾಜ, ಕಡೆಗೂ ಅವಳನ್ನು ‘ಪಾರ್ಕ್ ಸ್ಟ್ರೀಟ್’ ಹೆಸರಿನಲ್ಲೇ ಕರೆದು, ಅವಳ ನೋವಿನ ಬೆಂಕಿಗೆ ತುಪ್ಪ ಸುರಿದು ಇಂಚಿಂಚಾಗಿ ಅವಳನ್ನು ಕೊಂದಿತು. ಒಬ್ಬ ಮಹಿಳೆಯ ಗೌರವ, ಮನುಷ್ಯಬದುಕಿನ ಘನತೆ ಗರಿಷ್ಠ ಎಷ್ಟು ಬಾರಿ ಅತ್ಯಾಚಾರಕ್ಕೊಳಗಾಗಬಹುದು ಎಂಬುದಕ್ಕೆ ಸೂಜೆಟ್ ಜೀವನವೇ ಒಂದು ವ್ಯಂಗ್ಯಚಿತ್ರ.
೪೦ ವರ್ಷದ ಸೂಜೆಟ್ ಶುಕ್ರವಾರ ಇಹಲೋಕ ವ್ಯಾಪಾರ ಮುಗಿಸಿದ್ದಾಳೆ. ಮೆನಿಂಜೋಸಿಫಲೈಟಿಸ್‌ಗೆ ಬಲಿಯಾದಳೆಂಬುದು ವೈದ್ಯರು ಬರೆದ ಶರಾ. ಆದರೆ ಆಕೆಯ ಸಾವಿನಲ್ಲಿ ಈ ಅಸ್ವಸ್ಥ ಸಮಾಜದ ಭಾಗವಾದ ನಮ್ಮೆಲ್ಲರ ಪಾಲಿದೆ ಎಂಬ ಸತ್ಯಕ್ಕೆ ತಲೆ ತಗ್ಗಿಸುವಷ್ಟಾದರೂ ಮಾನವೀಯತೆಯನ್ನು ಉಳಿಸಿಕೊಂಡಿದ್ದೇವೆಯೇ?
ದಿಟ್ಟತನಕ್ಕೆ ‘ಕೆಟ್ಟ’ ಪಟ್ಟ ಕಟ್ಟುವ ಸಮಾಜ ನಮ್ಮದು. ಆಕೆ ಪೋಲಿಪುಂಡರಿಗೆ ಹೊಡೆದರೆ ‘ಗಂಡುಬೀರಿ’, ಸಿಂಗಲ್ ಪೇರೆಂಟ್ ಆಗಿ ಅವಳ ಪಾಡಿಗೆ ಅವಳು ಸ್ವಾಭಿಮಾನದಿಂದ ಮಕ್ಕಳನ್ನು ಬೆಳೆಸುತ್ತಿದ್ದರೆ ‘ಗಂಡನ ಬಿಟ್ಟೋಳು, ಹೇಗೆ ಹಣ ಸಂಪಾದಿಸುತ್ತಾಳೋ’, ಅತ್ಯಾಚಾರವಾಗಿದೆ ನ್ಯಾಯ ಕೊಡಿಸಿ ಎಂದರೆ ‘ನೀನೇಕೆ ಅಷ್ಟೊತ್ತಿಗೆ ಕ್ಲಬ್ಬಿಗೆ ಹೋಗಿದ್ದೆ, ನಿನ್ನದೇ ತಪ್ಪು’, ನನ್ನ ತಪ್ಪಿಲ್ಲದ್ದಕ್ಕೆ ನಾನೇಕೆ ಗುರುತು ಮುಚ್ಚಿಟ್ಟುಕೊಂಡು ಓಡಾಡಬೇಕು ಎಂದರೆ ‘ಮಾನಗೆಟ್ಟವಳು’... ಹೆಣ್ಣಿನ ವಿಷಯದಲ್ಲಿ ವಿಷಯ ತಿಳಿಯದೆಯೂ ತೀರ್ಪು ಕೊಡುವ ಸ್ವಾತಂತ್ರ್ಯ ನಮ್ಮ ದೇಶದಲ್ಲಿ!
೨೦೧೨ ಫೆಬ್ರವರಿಯ ಒಂದು ರಾತ್ರಿ ೫ ಜನ ಕಾಮುಕಪಿಶಾಚಿಗಳು ಕಾರಿನಲ್ಲಿ ಸೂಜೆಟ್‌ಳನ್ನು ಬಳಸಿ, ರಸ್ತೆ ಬದಿ ಬಿಸಾಡಿ ಹೋಗಿದ್ದರು. ರಕ್ತಸಿಕ್ತಳಾಗಿದ್ದ ಆಕೆ ಅದಾಗಿ ಮೂರು ದಿನಗಳ ನಂತರ ಎಫ್‌ಐಆರ್ ದಾಖಲಿಸಲು ಪೊಲೀಸ್ ಸ್ಟೇಶನ್‌ಗೆ ಹೋದಳು. ‘ಕತೆ’ ಕೇಳಿದ ಪೊಲೀಸರು ಗಹಗಹಿಸಿ ನಕ್ಕರು, ‘ನಾವೂ ನೈಟ್‌ಕ್ಲಬ್‌ಗೆ ಹೋದರೆ ನಮಗೂ ಅದೃಷ್ಟ ಖುಲಾಯಿಸುತ್ತದೇನೋ, ಇದು ಅತ್ಯಾಚಾರವೇ ಅಂತ ಹೇಗೆ ಹೇಳ್ತೀಯಾ’ ಎಂದು ವ್ಯಂಗ್ಯವಾಡಿದರು. ಇವನ್ನೆಲ್ಲ ನಾವು ಸಿನಿಮಾಗಳಲ್ಲಿ ನೋಡಿರಬಹುದು. ಆದರೆ ಬದುಕು ಸಿನಿಮಾಗಿಂತ ಕ್ರೂರ. ಕೊನೆಗೂ ಎಫ್‌ಐಆರ್ ದಾಖಲಿಸಲು ಐದು ಗಂಟೆಗಳು ಆಕೆ ಪೊಲೀಸರ ‘ಮಾತಿನ ಅತ್ಯಾಚಾರ’ವನ್ನು ತಾಳಬೇಕಾಯಿತು.
ಇದಾಗಿ ೮ ದಿನಗಳ ನಂತರ(ಅಷ್ಟರಲ್ಲಿ ಸಾಕ್ಷ್ಯ ನಾಶವಾಗುವ ಎಲ್ಲ ಸಾಧ್ಯತೆಗಳಿತ್ತು?!) ಮೆಡಿಕಲ್ ಎಕ್ಸಾಮಿನೇಶನ್‌ಗೆ ಕರೆ ಬಂತು. ಇದು ಕಾಟಾಚಾರದ ತನಿಖೆ ಎಂಬುದಕ್ಕೆ ಇಷ್ಟು ಸಾಕಲ್ಲವೇ? ಅಲ್ಲಿ ನಾಲ್ವರು ಮಹಿಳಾ ಪೊಲೀಸರು, ಮೂವರು ವೈದ್ಯರು, ಒಬ್ಬರು ಅಸಿಸ್ಟೆಂಟ್ ಎದುರು ನಗ್ನವಾಗಿ ನಿಲ್ಲಿಸಿ, ಅವಳನ್ನು ಪರೀಕ್ಷೆ ಮಾಡಿ- ಅಂತೂ ‘ಪ್ರೈವೇಟ್ ಅಂಗಗಳಲ್ಲಿ ಗಾಯಗಳಿವೆ’ ಎಂದು ಬರೆದು ಅವಳ ದೂರಿಗೊಂದು ಸಾಕ್ಷ್ಯ ಒದಗಿಸಿದರು. ಆದರೆ ಮಹಿಳೆಯೊಬ್ಬಳನ್ನು ಅಷ್ಟು ಜನರೆದುರು ನಗ್ನ ನಿಲ್ಲಿಸುವಾಗ ಅವಳಿಗಾದ ಮಾನಸಿಕ ಘಾಸಿಗಳು ಅವರ ಪರೀಕ್ಷಾ ಫಲಿತಾಂಶದ ಲೆಕ್ಕಕ್ಕೆ ಸೇರಲಿಲ್ಲ ಬಿಡಿ.
ಅಷ್ಟೇ ಅಲ್ಲ, ನಂತರದ ಸರದಿ ಸರ್ಕಾರದ್ದು. ಮಮತಾ ಬ್ಯಾನರ್ಜಿ ಅವಳನ್ನು ‘ರಾಜ್ಯದ ಶತ್ರು’ ಎಂದು ಕರೆದಿದ್ದಲ್ಲದೆ, ‘ತೃಣಮೂಲ ಕಾಂಗ್ರೆಸ್ ಸರ್ಕಾರದ ಹೆಸರಿಗೆ ಕಳಂಕ ತರಲು ತನ್ನ ಅತ್ಯಾಚಾರದ ಬಗ್ಗೆ ಸುಳ್ಳು ಹೇಳುತ್ತಿದ್ದಾಳೆ. ಅವಳ ಗ್ರಾಹಕ ಸ್ವಲ್ಪ ರೂಡ್ ಆಗಿ ನಡೆದುಕೊಂಡಿದ್ದಾನಷ್ಟೆ’ ಎಂದು ಆರೋಪಿಸುವ ಮೂಲಕ ತನ್ನನ್ನು ‘ದೀದಿ’ ಎಂದು ನಂಬಿ ಬಂದವರಿಗೆ ಸರಿಯಾಗಿಯೇ ಮಾನಹಾನಿ ಮಾಡಿದ್ದರು.
ಇಷ್ಟೆಲ್ಲ ಆದ ಮೇಲೆ ತನ್ನದೂ ಒಂದು ಪಾಲಿರಲಿ ಎಂದು ಕೋರ್ಟ್ ಕೂಡಾ ಅವಳ ಬಗ್ಗೆ ತಿರಸ್ಕಾರ ಭಾವನೆಯಲ್ಲಿ ನಡೆದುಕೊಂಡಿತು. ಮಹಿಳಾ ನ್ಯಾಯಾಧೀಶೆ ಅವಳಿಗೊಂದು ಮನಸ್ಸಿದೆ ಎಂಬುದನ್ನು ಗ್ರಹಿಸಲೇ ಇಲ್ಲ. ಮತ್ತೆ ಮತ್ತೆ ಅತ್ಯಾಚಾರದ ವಿವರಣೆಯನ್ನು ಕೇಳಿ ಹೇಳಿಕೆಯಲ್ಲಿ ವ್ಯತ್ಯಾಸ ಕಾಣುವುದೇ ಎಂದು ಚೆಕ್ ಮಾಡಲಾಯಿತು. ಲಾಯರ್ ಕೋಲಿನ ತುದಿಯಲ್ಲಿ ಆಕೆ ಅತ್ಯಾಚಾರವಾದ ದಿನದಂದು ಧರಿಸಿದ್ದ ಒಳಉಡುಪನ್ನು ಪ್ರದರ್ಶಿಸಿ, ಇದೇನಾ ನೀವು ಅಂದು ಧರಿಸಿದ್ದು ಎಂದು ಕೇಳಿದಾಗ, ದುಃಖ ತಡೆಯಲಾಗದೆ ಬ್ರೇಕ್ ಕೊಡಿ ಎಂದರೂ ನ್ಯಾಯಾಧೀಶರು ನಿಶ್ಕರುಣಿಗಳಂತೆ ವರ್ತಿಸಿದ ಘಟನೆ ಆಕೆಯನ್ನು ಸಂಪೂರ್ಣ ಜರ್ಝರಿತಗೊಳಿಸಿತ್ತು. ಈ ಬಗ್ಗೆ ಅವಳು ನಾನು ಕೋರ್ಟ್‌ನಲ್ಲಿ ಮತ್ತೆ ಮತ್ತೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದೆ ಎಂದು ನೊಂದುಕೊಳ್ಳುತ್ತಿದ್ದಳು.
ಅಲ್ಲಿಗೇ ಮುಗಿಯಲಿಲ್ಲ ಅವಳ ಮೇಲಿನ ಮಾನಸಿಕ ಅತ್ಯಾಚಾರಗಳು, ಅತ್ಯಾಚಾರಕ್ಕೊಳಗಾದವಳು ಎಂಬ ಕಾರಣಕ್ಕೆ ರೆಸ್ಟೋರೆಂಟ್ ಒಳಗೆ ಆಕೆಯನ್ನು ಬಿಡಲಿಲ್ಲ. ದಾರಿಯಲ್ಲಿ ಹೋಗುತ್ತಿದ್ದರೆ ಪಾರ್ಕ್‌ಸ್ಟ್ರೀಟ್, ರೇಪ್ ಎಂಬ ಪದಗಳು ಜನರ ಬಾಯಿಂದ ಪದೇ ಪದೆ ಹೊರಟು, ಅವಳೊಂದು ಪ್ರಾಣಿಯೆಂಬಂತೆ ಜನ ನೋಡತೊಡಗಿದರು. ಪಾರ್ಟಿ ಅಟೆಂಡ್ ಮಾಡಲು ‘ರೇಟ್’ ಕೇಳತೊಡಗಿದರು. ಕೆಲಸ ಕೇಳಲು ಹೋದರೆ ಅತ್ಯಾಚಾರಕ್ಕೊಳಗಾದವಳಿಗೆ ಕೆಲಸ ಸಾಧ್ಯವಿಲ್ಲ ಎಂದಿದ್ದಷ್ಟೇ ಅಲ್ಲ, ಆಕೆಯ ಅಕ್ಕ, ಕುಟುಂಬದ ಸದಸ್ಯರು ಎಲ್ಲರೂ ಕೆಲಸ ವಂಚಿತರಾದರು. ಮೀಡಿಯಾಗಳಲ್ಲಿ ಅತ್ಯಾಚಾರಕ್ಕಿಂತ ಹೆಚ್ಚಾಗಿ ಮತ್ತೆ ಮತ್ತೆ ಅಂದು ರಾತ್ರಿ ಹೊರಗೆ ಹೋದದ್ದು ಅವಳ ತಪ್ಪೋ ಅಲ್ಲವೋ ಎಂಬ ಬಗ್ಗೆ ಚರ್ಚೆ ಆಯಿತು. ಮನೆಯ ದೂರವಾಣಿಗೆ ಅವಿರತ ಬ್ಲ್ಯಾಂಕ್‌ಕಾಲ್‌ಗಳು ಬರತೊಡಗಿದವು.
ತನ್ನ ತಪ್ಪಿಲ್ಲದೆಯೂ ಅತ್ಯಾಚಾರಕ್ಕೊಳಗಾದವಳು ಇಷ್ಟೆಲ್ಲ ದೂಷಣೆಗಳನ್ನು ಕೇಳುವಾಗ ಅತ್ತ ಅತ್ಯಾಚಾರಿಗಳಲ್ಲಿ ಇಬ್ಬರು ರಾಜಾರೋಷವಾಗಿ ಓಡಾಡಿಕೊಂಡು ಹಾಯಾಗಿದ್ದರು. ಇನ್ನು ಜೈಲು ಸೇರಿದ ಉಳಿದವರು, ಅಲ್ಲಿಂದಲೇ(!) ಸ್ಮಾರ್ಟ್‌ಫೋನ್ ಬಳಸಿ ಫೇಸ್‌ಬುಕ್‌ಗೆ ತಮ್ಮ ಬೈಸೆಪ್‌ಗಳ ಫೋಟೋ ಹಾಕಿ ನಾನು ವಿಲ್ಲನ್ ತರಾ ಕಾಣುತ್ತೇನಾ ಎಂದು ಕೇಳಿ ಒಂದಿಷ್ಟು ‘ಲೈಕ್’ಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾದರು!
ಅಬ್ಬಬ್ಬಾ! ೧೬, ೧೮ ವರ್ಷದ ಹೆಣ್ಣುಮಕ್ಕಳ ತಾಯಿಯೊಬ್ಬಳಿಗೆ ಇಷ್ಟೆಲ್ಲವನ್ನು ಕೇಳಿಕೊಂಡೂ ಎದುರಿಸುವ ಧೈರ್ಯ ಬಂದಿದ್ದಾದರೂ ಎಲ್ಲಿಂದ? ಆಕೆ ಮುದುರಿ ಕೂರಲಿಲ್ಲ. ಬದಲಿಗೆ ಕೂಗಿ ಹೇಳಿದಳು, ‘ನನ್ನ ತಪ್ಪಿಲ್ಲದಿರುವಾಗ ನಾನೇಕೆ ನನ್ನ ಐಡೆಂಟಿಟಿ ಮುಚ್ಚಿಡಲಿ? ನಾನು ಮಾಡದ ತಪ್ಪಿಗೆ ನಾನೇಕೆ ನಾಚಿಕೆ ಪಡಲಿ? ನಾನು ಹಿಂಸೆ ಹಾಗೂ ಅತ್ಯಾಚಾರಕ್ಕೊಳಗಾಗಿದ್ದೇನೆ. ಇದರ ವಿರುದ್ಧ ಹೋರಾಡುತ್ತೇನೆ’ ಎಂದು. ನಾನು ‘ಪಾರ್ಕ್ ಸ್ಟ್ರೀಟ್’ ಅಲ್ಲ, ನಾನು ಸೂಜೆಟ್ ಜೊರ್ಡಾನ್ ಎಂದು. ತನ್ನ ಹೆಸರನ್ನು ವಾಪಸ್ ಪಡೆಯುವುದಷ್ಟೇ ಅಲ್ಲ, ತನ್ನಂಥ ಇತರರ ಹೆಸರನ್ನೂ ಗಳಿಸಿಕೊಡಲು ಹೋರಾಡಿದಳು. ಸರಣಿ ಅತ್ಯಾಚಾರ ಹತ್ಯೆಗಳನ್ನು ಖಂಡಿಸಿ ಬೀದಿಗಿಳಿದಳು. ಅಬಲೆಯರಿಗೆ, ಗಂಡಸಿನ ಕೈಯ್ಯಲ್ಲಿ ನುಜ್ಜುಗುಜ್ಜಾದವರಿಗೆ ಸ್ವತಃ ಹೋಗಿ ಸಾಂತ್ವಾನ ಹೇಳಿದಳು. ಅವರಿಗಾಗಿ ಹೆಲ್ಪ್‌ಲೈನ್ ತೆರೆದಳು.
ಭಾರತದಲ್ಲೇ ೨೦೦೬ರಿಂದ ೨೦೧೧ರವರೆಗೆ ಎರಡನೇ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ೨೦೧೨ರಲ್ಲಿ ಈ ವಿಷಯದಲ್ಲಿ ನಂ.೧ ಪಟ್ಟ ತಲುಪಿದ ರಾಜ್ಯವೊಂದರ ಸಾಧನೆಯ ಹಿಂದಿನ ಗುಟ್ಟು ತಿಳಿಯಲು ಈ ಒಬ್ಬ ಹೆಣ್ಣುಮಗಳ ವಿಷಯದಲ್ಲಿ ಅದು ನಡೆದುಕೊಂಡ ರೀತಿಯೇ ಸಾಕಲ್ಲವೇ?
‘ಅವಳು ಹೋರಾಟಗಾರ್ತಿ. ಆದರೆ ಜನ ಅವಳ ಧೈರ್ಯವನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿದರು. ಅವಳಿಗೂ ಅಳಬೇಕಿತ್ತು, ದುಃಖ ತೋಡಿಕೊಳ್ಳಬೇಕಿತ್ತು. ಇನ್ನೊಬ್ಬರಿಗೆ ಮಾದರಿಯಾಗುವುದಕ್ಕಿಂತ ಹೆಚ್ಚಾಗಿ ತನ್ನನ್ನು ಮನುಷ್ಯಳಾಗಿ ಕಾಣಲಿ ಎಂಬ ಆಸೆಯಿತ್ತು. ಆದರೆ ಅವಳು ಕೇವಲ ಅತ್ಯಾಚಾರದ ಬಲಿಪಶುವಾಗದೆ, ಅದನ್ನು ವಿರೋಧಿಸಿದ್ದಕ್ಕಾಗಿ ವ್ಯವಸ್ಥೆಯ ಬಲಿಪಶುವಾದಳು’ ಎನ್ನುತ್ತಾನೆ ಆಕೆಯ ಆಪ್ತ ಗೆಳೆಯ. ಖಿನ್ನತೆಯೇ ಕಾಯಿಲೆಗಳನ್ನು ಆಹ್ವಾನಿಸುತ್ತದೆ. ಹಾಗೆಯೇ ಬಂದದ್ದು ಮೆನಿಂಜೋಸಿಫಲೈಟಿಸ್ ಕೂಡಾ. ಅಟ್‌ಲೀಸ್ಟ್, ನಾವವಳನ್ನು ಸಂತೋಷವಾಗಿ ಸಾಯಲೂ ಬಿಡಲಿಲ್ಲ.
ಅವಳ ಮೇಲೆ ಕೇವಲ ಕೆಲ ಪುಂಡಪೋಕರಿಗಳಲ್ಲ, ಸಮಾಜ, ಕಾನೂನು, ಸರ್ಕಾರ, ಮೀಡಿಯಾ, ಅವಳ ಕತೆಯನ್ನು ನಂಬದವರೆಲ್ಲರೂ ಅತ್ಯಾಚಾರವೆಸಗಿದ್ದಾರೆ. ಭಾರತ ಅತ್ಯಾಚಾರಕ್ಕೊಳಗಾದವರೆಡೆಗಿನ ತನ್ನ ಮನಸ್ಥಿತಿಯಿಂದಾಗಿ ಯಶಸ್ವಿಯಾಗಿ ಹೆಣ್ಣುಮಗಳೊಬ್ಬಳನ್ನೂ, ಅವಳ ಗೌರವವನ್ನೂ ಕೊಂದಿದೆ.

16.3.15

ಸೀರಿಯಲ್‌ಗಳಿಲ್ಲದ ಲೋಕದಲ್ಲಿ


ಭಾಮತ್ತೆಗೆ ಬಿತ್ತು ಬೆಡಗಿನ ಕನಸು



ಭಾಮತ್ತೆಗೆ ಧಾರಾವಾಹಿಗಳೇ ಪ್ರಪಂಚ. ಮಧ್ಯಾಹ್ನ ೧ರಿಂದ ಎರಡೂವರೆವರೆಗೆ ಊಟ ಮಾಡುತ್ತಲೇ ಧಾರಾವಾಹಿ ನೋಡುವ ಭಾಮತ್ತೆ, ನಂತರ ಮಲಗೆದ್ದು ಶಾಲೆಯಿಂದ ಬಂದ ಮಕ್ಕಳಿಗೆ ಕಾಫಿ ಮಾಡಿದರೆ ಮತ್ತೆ ೬ರಿಂದ ೧೦ರವರೆಗೂ ಒಂದರ ಹಿಂದೊಂದು ಬರುವ ಸೀರಿಯಲ್‌ಗಳ ಮುಂದೆ ರಿಮೋಟ್ ಹಿಡಿದು ಸೋಫಾಕ್ಕೆ ಆತುಬಿಡುತ್ತಾಳೆ. ಅದಕ್ಕಾಗೇ ಅವಳ ದೇಹದಲ್ಲಿ ಬೊಜ್ಜು ಅಡ್ಡಡ್ಡವಾಗಿ ಇಣುಕಲು ತೊಡಗಿದೆ.
ಈ ಸೀರಿಯಲ್ ಸಂಭ್ರಮದಲ್ಲಿ ಬಡಪಾಯಿ ಗಂಡ ಯಾವಾಗ ಮನೆಗೆ ಬಂದನೋ, ತಿಂದನೋ ಬಿಟ್ಟನೋ ಅವಳಿಗರಿವಿರುವುದಿಲ್ಲ. ಆತ ಕ್ರಿಕೆಟ್ ಸ್ಕೋರ್‌ಗಳನ್ನು  ಮೊಬೈಲ್‌ಫೋನ್‌ನಲ್ಲೇ ನೋಡಿ ತೃಪ್ತಿ ಹೊಂದುತ್ತಿದ್ದಾನೆ. ಇನ್ನು ಇವಳು ಧಾರಾವಾಹಿ ನೋಡುವಾಗ ಮಕ್ಕಳು ಬಂದರೆ ಬಯ್ಸಿಕೊಳ್ಳುತ್ತಾರೆ, ರೂಂನಲ್ಲಿ ಕುಳಿತು ಓದಿಕೊಳ್ಳಬೇಕೆಂದು. ಒಂದು ವೇಳೆ ಕರೆಂಟ್ ಕೈ ಕೊಟ್ಟರೆ ಅವಳಿಗೆ ಕೈಕಾಲಾಡುವುದಿಲ್ಲ. ಮರುಬೆಳಗ್ಗೆ ಬರುವ ರಿಟೆಲಿಕ್ಯಾಸ್ಟ್ ನೋಡಲು ಚಡಪಡಿಸುತ್ತಾಳೆ. ಅದೂ ತಪ್ಪಿ ಹೋಯಿತೋ ನೆಂಟರಿಷ್ಟರ ಮನೆಗೆ ಫೋನ್ ಮಾಡಿ, ‘ಜಲಸಾಕ್ಷಿ ನೋಡಿದ್ರಾ, ಅರಿಶಿನಭಾಗ್ಯ ನೋಡಿದ್ರಾ, ಏನಾಯ್ತು? ಅವಳ ಗಂಡ ಬಂದ್ನಾ? ಅವಳ್ಯಾವ ಬಣ್ಣದ ಸೀರೆ ಉಟ್ಟಿದ್ಲು’ ಎಂದೆಲ್ಲ ಪ್ರಶ್ನೆಗಳನ್ನು ಹಾಕಿ ಒಂದಿಂಚೂ ಮುಂದಕ್ಕೇ ಹೋಗಿರದ ಧಾರಾವಾಹಿಯ ಅದೇ ಕತೆಯನ್ನು ಕೇಳಿ ಸಮಾಧಾನ ಪಟ್ಟುಕೊಳ್ಳುತ್ತಾಳೆ. ಅಡುಗೆ ಮಾಡುವಾಗ ಇದ್ದಕ್ಕಿದ್ದಂತೆ ಬದುಕು ಧಾರಾವಾಹಿಯ ಕತೆ ನೆನೆಯುತ್ತಾ ಛೇ ಎಂದು ಸ್ವಗತದಲ್ಲಿ ನೊಂದುಕೊಳ್ಳುತ್ತಾಳೆ. ಧಾರಾವಾಹಿ ನೋಡುತ್ತಾ ನೋಡುತ್ತಾ ಕಣ್ಣೀರು ಹಾಕುವ, ಅವಳಿಗೆ ಹಾಗೇ ಆಗಬೇಕೆಂದು ಶಾಪ ಹಾಕುವ, ಇದ್ದಕ್ಕಿದ್ದಂತೆ ಧಾರಾವಾಹಿಯ ಪಾತ್ರವೊಂದರ ಮೇಲೆ ಅಸಾಧ್ಯ ಸಿಟ್ಟು ಹುಟ್ಟಿಸಿಕೊಂಡು ಒಬ್ಬೊಬ್ಬಳೇ ಎದ್ದು ಹೊಡೆಯುವ ಮಟ್ಟಿಗೆ ಬಿಪಿ ಏರಿಸಿಕೊಳ್ಳುವ ಭಾಮತ್ತೆಗೆ ಧಾರಾವಾಹಿ ನೋಡುವ ಸಮಯದಲ್ಲಿ ಮನೆಗೆ ನೆಂಟರೋ, ಅಕ್ಕಪಕ್ಕದವರೋ ಬಂದರೆ ವಿಪರೀತ ಕಿರಿಕಿರಿ. ಅವರನ್ನು ಸಾಗಹಾಕುವ ಎಲ್ಲ ಪ್ರಯತ್ನಗಳನ್ನೂ ಮಾಡಿದ ಮೇಲೆಯೂ ಅವರು ಹೋಗಲಿಲ್ಲವೆಂದಾದರೆ, ಕ್ಷೇಮಸಮಾಚಾರ ಕೇಳುವುದು ಬಿಟ್ಟು ತನ್ನ ಪಾಡಿಗೆ ತಾನು ಧಾರಾವಾಹಿ ನೋಡುತ್ತಾಳೆ. ಒಂದು ಚಾನೆಲ್‌ನಲ್ಲಿ ಜಾಹಿರಾತು ಬಂದರೆ ಮತ್ತೊಂದು ಹಾಕುತ್ತಾಳೆ. ಬಂದವರ ಪುಣ್ಯದ ಅಕೌಂಟ್ ಭರ್ತಿಯಿದ್ದರೆ, ಎರಡರಲ್ಲೂ ಜಾಹಿರಾತು ಬರುತ್ತಿದ್ದರೆ ಎದ್ದು ಹೋಗಿ ಕಾಫಿ ತಿಂಡಿ ತಂದು ಕೊಡುತ್ತಾಳೆ! ಭಾಮತ್ತೆಯ ಬ್ಲೌಸ್‌ಗಳೆಲ್ಲವೂ ಇತ್ತೀಚೆಗೆ ತರತರ ಚಿತ್ತಾರದಲ್ಲಿ ನೋಡುಗರ ಕಣ್ಸೆಳೆಯುತ್ತವೆ. ಆಕೆ ‘ಸೌಭಾಗ್ಯ’ ಧಾರಾವಾಹಿಯನ್ನು ನೋಡುವುದೇ ಅದರಲ್ಲಿ ಸೌಭಾಗ್ಯ ಹಾಕಿಕೊಳ್ಳುವ ಹೊಸ ನಮೂನೆಯ ಸೀರೆ ಬ್ಲೌಸುಗಳಿಗಾಗಿ ಎಂಬುದು ಆಕೆಯ ಟೈಲರ್ ಕಂಡುಕೊಂಡ ಸತ್ಯ.
ಇಂಥ ಭಾಮತ್ತೆಯ ಬದುಕಿನಲ್ಲಿ ಅಂದು ಒಂದು ಮಹತ್ತರ ಘಟನೆ ಕನಸಿನ ಮೂಲಕ ನಡೆಯಿತು. ಭಾಮತ್ತೆಗೆ ಬಿದ್ದದ್ದು ಅಂತಿಂತಾ ಕನಸಲ್ಲ, ಅವಳ ಪಾಲಿಗೆ ದುಸ್ವಪ್ನವಾಗುವಂಥದು. ಅದರಲ್ಲಿ ದಿನ ಬೆಳಗಾಗುವುದರಲ್ಲಿ ಲೋಕದಲ್ಲಿ ಸೀರಿಯಲ್‌ಗಳು ಬ್ಯಾನ್ ಆಗಿದ್ದವು!
ಭಾಮತ್ತೆಯ ಗಾಬರಿ ಹೇಳತೀರದು. ಟಿವಿಯ ಯಾವ ಚಾನೆಲ್‌ನಲ್ಲೂ ಸೀರಿಯಲ್‌ಗಳೇ ಇಲ್ಲ! ಅತ್ತೆಗೆ ಸಮಯವೇ ಹೋಗುತ್ತಿಲ್ಲ. ದಿನವೊಂದು ಯುಗದಂತೆನಿಸುತ್ತಿದೆ. ಏನು ಮಾಡುವುದು ತೋಚದೆ ಮನೆಕೆಲಸಗಳನ್ನೇ ಹೆಚ್ಚು ಸಮಯ ಕೊಟ್ಟು ಆಸಕ್ತಿಯಿಂದ ಮಾಡತೊಡಗಿದಳು. ಮಕ್ಕಳು ಬಂದೊಡನೆ ಅವರ ಶಾಲೆಯ ಕತೆಗಳನ್ನೆಲ್ಲ ಕೇಳುತ್ತಾ ತಿಂಡಿ ಮಾಡಿಕೊಟ್ಟಳು. ನಂತರ ಏನು ಮಾಡುವುದು ತಿಳಿಯಲಿಲ್ಲ. ಹೀಗಾಗಿ ಕುಳಿತು ಹೋಂವರ್ಕ್ ಮಾಡಿಸಿದಳು. ಅಷ್ಟರಲ್ಲಿ ಮನೆಗೆ ಬಂದ ಗಂಡನನ್ನು ನೋಡಿ ಭಾಮತ್ತೆಯ ಮುಖ ಅರಳಿತು. ಬೆಳಗ್ಗೆಯಿಂದ ಮಾತನಾಡಲು ಯಾರೂ ಸಿಕ್ಕಿರಲಿಲ್ಲವಾಗಿ ಗಂಡನೊಡನೆ ಕುಳಿತು ಮಾತನಾಡಿದಳು. ಅವನ ದಿನಚರಿ ಕೇಳಿದಳು. ಆತನಿಗೋ ಹೆಂಡತಿಗೇನಾಗಿ ಹೋಯ್ತಪ್ಪ ಎಂಬ ಆತಂಕ. ಜೊತೆಗೇ ವಿಚಿತ್ರ ಸಂತೋಷ. ಮನೆ ಎಲ್ಲ ಲಕಲಕ ಎನ್ನುತ್ತಿದೆ. ಇದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿರುವಾಗ, ಮನೆಯಲ್ಲಿ ಬೋರಾಗುತ್ತಿದೆ. ವಾಕಿಂಗ್ ಹೋಗೋಣ ಎಂದ ಪತ್ನಿ! ಸೀರಿಯಲ್ ಇಲ್ಲದ ಲೋಕದಲ್ಲಿ ದಿನಚರಿ ಹೀಗೇ ಮುಂದುವರೆಯುತ್ತಿರಲಾಗಿ, ವಾಕಿಂಗ್‌ನಿಂದ ಶಟಲ್ ಬ್ಯಾಡ್ಮಿಂಟನ್ ಇತ್ಯಾದಿ ಆಟಗಳಲ್ಲಿ ಕಳೆವ ಸಂಜೆಗಳು ಭಾಮತ್ತೆ ಬೊಜ್ಜನ್ನೂ ಕರಗಿಸಿ ಸುಂದರವಾಗಿಸಿದವು.
ಈಗ ‘ಇಡೀ ದಿನ ಮನೆಯಲ್ಲೇ ಇರ್ತಿ, ಆದ್ರೂ ಬಟ್ಟೆ ಒಗೆದಿಲ್ಲ, ತಿನ್ನೋಕ್ ಒಂದ್ ಐಟಂ ಇರಲ್ಲ, ನನ್ ಬಟ್ಟೆ ಯಾವ್ದೆ ಇಸ್ತ್ರಿ ಆಗಿಲ್ಲ, ನೀ ನಂಗ್ ಕೇರ್ ಮಾಡೋದೇ ಇಲ್ಲ’ ಎಂದೆಲ್ಲ ಕ್ಯಾತೆ ತೆಗೆದು ಜಗಳವಾಡಲು ಗಂಡನಿಗೆ ವಿಷಯಗಳೇ ಇರಲಿಲ್ಲ. ಜೊತೆಗೆ ಸುಂದರಿಯಾದ ಕಳಕಳಿಯುಳ್ಳ ಪತ್ನಿ. ಅವರಿಬ್ಬರ ಸಂಬಂಧ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಾಯಿತು. ಮಕ್ಕಳಿಗೆ ಹೋಂವರ್ಕ್ ಮಾಡಿಸೋಕೆ ಸಮಯವಾಗದ ಬಗ್ಗೆ ಪಶ್ಚಾತ್ತಾಪ ಕಾಡುತ್ತಿರಲಿಲ್ಲ. ಅವರ ಪ್ರಾಜೆಕ್ಟ್‌ಗಳಲ್ಲೂ ತುಕ್ಕು ಹಿಡಿದಿದ್ದ ತನ್ನ ಸೃಜನಶೀಲತೆಯನ್ನು ಬಳಸತೊಡಗಿದಳು. ಅಮ್ಮನ ನಿಗಾ ಶುರುವಾದ ಮೇಲೆ ಮಕ್ಕಳು ತರಗತಿಗೆ ಮೊದಲು ಬರತೊಡಗಿದವು.
ಸಮಯ ಕಳೆಯಲು ಅಕ್ಕಪಕ್ಕದವರ ಪರಿಚಯವಾಯಿತು. ಅವರ ಕಷ್ಟಸುಖಗಳಲ್ಲಿ ಭಾಗಿಯಾಗುವ ಮಟ್ಟಿಗೆ ಭಾಮತ್ತೆಗೆ ಸಮಯ ಸಿಕ್ಕಿತು. ಅದಕ್ಕಾಗಿ ಸೀರಿಯಲ್ ಕತೆ ಕೇಳಲೆಂದು ಅತ್ತಿಗೆಗೋ, ನಾದಿನಿಗೋ ಫೋನ್ ಮಾಡಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ. ಬದಲಿಗೆ ಕ್ಷೇಮಸಮಾಚಾರ ವಿಚಾರಿಸಲು ಫೋನ್‌ಗಳು ಬಳಕೆಯಾಗುತ್ತಿದ್ದವು. ಸಂತೋಷವೂ ಸಿಕ್ಕಿತು. ತಾನು ಸೀರಿಯಲ್‌ಗಳಲ್ಲಿ ನೋಡುತ್ತಿದ್ದ ಪಾತ್ರಗಳೆಲ್ಲ ತನ್ನ ಸುತ್ತಲೇ ಇರುವಂತೆನಿಸಿ, ತಾನೇ ಕಥಾನಾಯಕಿಯಾದಂತೆ ಭಾಸವಾಗತೊಡಗಿತು. ಹೆಂಡತಿಯ ಸೀರೆ, ಬ್ಲೌಸು, ಮ್ಯಾಚಿಂಗ್ ಆಭರಣಗಳ ಬೇಡಿಕೆ ಕುಗ್ಗಿದ್ದರಿಂದ ಆ ಹಣ ಸೇವಿಂಗ್ಸ್‌ಗೆ ಹೋಗತೊಡಗಿತು.
ಇವೆಲ್ಲ ಭಾಮತ್ತೆಯ ವೈಯಕ್ತಿಕ ಜೀವನ ಮಟ್ಟದಲ್ಲಾದರೆ, ಸಾಮಾಜಿಕ ಮಟ್ಟದಲ್ಲಿ ಬೇರೆಯದೇ ಬದಲಾವಣೆಗಳು ಕಂಡವು. ಈ ಸೀರಿಯಲ್‌ಗಳಿಲ್ಲದ ಲೋಕದಲ್ಲಿ ಯಾರೂ ಹೊಸ ಡಿಸೈನ್ ನೋಡುತ್ತಲೂ ಇರಲಿಲ್ಲ. ಹಾಗಾಗಿ ಕೇಳುತ್ತಿರಲಿಲ್ಲವಾದ್ದರಿಂದ ೧೦೦೦ ರು. ಕೇಳುತ್ತಿದ್ದ ಟೈಲರ್‌ಗಳು ೩೦ ರುಪಾಯಿಗೆಲ್ಲ ಬ್ಲೌಸ್ ಹೊಲೆಯತೊಡಗಿದರು. ಈ ಮೂಲಕ ಅಲ್ಲೊಬ್ಬ ಇಲ್ಲೊಬ್ಬ ಹೆಣ್ಣುಮಗಳ ಸ್ಟೈಲಿನ ಜಂಭಕ್ಕೆ ಕಾರಣವಿಲ್ಲದಂತೆ ಸಮಾನತೆ ತರುತ್ತಿದ್ದರು.
ರಿಸೆಪ್ಶನ್‌ಗಳು ಬಾಲಿವುಡ್ ಫಿಲ್ಮಫೇರ್ ಅವಾರ್ಡ್ ಫಂಕ್ಷನ್‌ಗಳಂತೆ ಕಾಣದೆ ಅದ್ಧೂರಿತನಕ್ಕೆ ಕಡಿವಾಣ ಬಿದ್ದಿತು. ಹೀಗಾಗಿ ಕಾಸ್ಟ್ಲಿ ಬಟ್ಟೆಗಳು ಕೊಳ್ಳುವವರಿಲ್ಲದೆ ಬಟ್ಟೆಬರೆಯ ಬೆಲೆ ಕುಸಿತವಾಯಿತು. ಬ್ರಾಂಡೆಡ್ ವಸ್ತುಗಳು ಸಾಮಾನ್ಯರಿಗಲ್ಲ. ಅದೇನಿದ್ದರೂ ಸೆಲೆಬ್ರಿಟಿಗಳ ಸ್ವತ್ತು ಎನಿಸತೊಡಗಿತು. ಎಷ್ಟೇ ಆದರೂ ಸಿನಿಮಾ ಮಂದಿ ತಾರೆಯರು. ಸೀರಿಯಲ್ ಮಂದಿ ಸಾಮಾನ್ಯರಾಗಿದ್ದರಲ್ಲವೇ?
 ಫೇರ್‌ನೆಸ್ ಕಂಪನಿಗಳು, ಮೇಕಪ್ ತಯಾರಕರು ತೋಪೆದ್ದು ಹೋಗಿ, ಅಮ್ಮಂದಿರ ಕಾಲದಂತೆ ಇನ್ನೂ ಫೇರ್ ಅಂಡ್ ಲೌವ್ಲಿಯ ೫ ರು. ಪ್ಯಾಕ್‌ನೊಂದಿಗೆ ಮನೆ ಮಹಿಳೆಯರು ತೃಪ್ತಕಾಂತಿ ಹೊಂದುತ್ತಿದ್ದರು. ಹೀಗಾಗಿ ಹೆಣ್ಣುಮಕ್ಕಳು ತಮ್ಮ ಅತೃಪ್ತ ಆತ್ಮವನ್ನು ತೊರೆದು, ಅಂದಚೆಂದದ ಬಗೆಗಿನ ಕೀಳರಿಮೆಯಿಂದ ಹೊರಬಂದರು. ಗ್ಲಿಸರಿನ್ ಕಂಪನಿಗಳು ಕೇಳುವವರಿಲ್ಲದೆ ತಾವೇ ಗ್ಲಿಸರಿನ್ ಇಲ್ಲದೆ ಕಣ್ಣೀರು ಹರಿಸುತ್ತಾ ಕುಳಿತುಕೊಳ್ಳಬೇಕಾದ ಸ್ಥಿತಿ ತಲುಪಿದರು. ಪತಿಪರಮೇಶ್ವರರ ಅನೈತಿಕ ಸಂಬಂಧಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿತು. ಮಕ್ಕಳಲ್ಲಿ ಒಂಟಿತನ ಇನ್ನಿತರೆ ಮಾನಸಿಕ ಸಮಸ್ಯೆಗಳು ಕಡಿಮೆಯಾದವು. ಹೀಗಾಗಿ ಬೀದಿಗೊಂದು ಹುಟ್ಟಿಕೊಂಡಿದ್ದ ಕೌನ್ಸೆಲಿಂಗ್ ಸೆಂಟರ್‌ಗಳು ಮರೆಯಾಗತೊಡಗಿದವು. ಲೈಬ್ರರಿಯ ಬಳಕೆ ಹೆಚ್ಚತೊಡಗಿತು. ಸಹಜವಾಗೇ ಜನರ ಚಿಂತನಾ ಸಾಮರ್ಥ್ಯ ಹೆಚ್ಚತೊಡಗಿತು. ಈಗ ಎಲ್ಲೆಡೆ ಸಂಜೆ ಸೂರ್ಯ ಮುಳುಗುವುದು ವಿಷಯವಾಗುತ್ತಿತ್ತು. ಸಂಬಂಧಗಳು ಸುಧಾರಿಸಿದ್ದರಿಂದ ಆರೋಗ್ಯವಂತ ಸಮಾಜ ಸೃಷ್ಟಿಯಾಗತೊಡಗಿತು. ವಿಚಿತ್ರ ನೆಮ್ಮದಿಯಲ್ಲಿ ತೇಲುತ್ತಿದ್ದ ಭಾಮತ್ತೆಗೆ ಎಚ್ಚರವಾಯಿತು. ಅರೆ! ತಾನು ಕಂಡಿದ್ದು ಕನಸೆಂದು ತಿಳಿದು ಚಡಪಡಿಸತೊಡಗಿದಳು. ಆ ದಿನ ಸಂಜೆ ಭಾಮತ್ತೆಯ ಮನೆಯ ಟಿವಿ ಹಾಗೂ ರಿಮೋಟ್ ಎಂದೂ ಕಾಣದ ವಿಶ್ರಾಂತಿ ಅನುಭವಿಸಿದವು. ಕಂಡ ಕನಸನ್ನು ತನ್ನ ಮನೆಯ ಮಟ್ಟಿಗೆ ನನಸಾಗಿಸುವ ಯತ್ನದಲ್ಲಿ ಭಾಮತ್ತೆ ತೊಡಗಿಕೊಂಡಳು.

(ಯುಗಾದಿ ವಿಶೇಷಾಂಕ - ೨೦೧೫)
- ರೇಶ್ಮಾರಾವ್ ಸೊನ್ಲೆ

4.3.15

first time on opped :) rape

ನಮ್ಮ ನಡುವೆ ‘ನಾನು ಮುಖೇಶ್. ತುಂಬಾ ತಂಬಾಕು ಅಗೀತಿದ್ದೆ. ಬಾಯಿ ಕ್ಯಾನ್ಸರ್‌ಗೆ ಬಲಿಯಾದೆ’ ಎಂದು ತಂಬಾಕು ಸೇವನೆಗಾಗಿ ಪಶ್ಚಾತ್ತಾಪ ಪಡುವ ಮುಖೇಶ್ ಒಂದೆಡೆಯಾದರೆ, ‘ನಾನು ಮುಖೇಶ್. ನಿರ್ಭಯಾ ಅತ್ಯಾಚಾರ ಮಾಡಿದ್ದೆ. ಆದರೆ ರಾತ್ರಿ ಹೊತ್ತಿನಲ್ಲಿ ಹಾಗೆ ಕಣ್ಣಿಗೆ ಬಿದ್ದಿದ್ದು ಅವಳದ್ದೇ ತಪ್ಪು. ಅದರಲ್ಲೂ ಅತ್ಯಾಚಾರ ವಿರೋಧಿಸಿದ್ದು ಇನ್ನೂ ತಪ್ಪು. ಅದಕ್ಕಾಗಿಯೇ ಕೊಲೆ ಮಾಡಿದೆವು’ ಎಂದು ಸಮರ್ಥಿಸಿಕೊಳ್ಳುವ ಮುಖೇಶ್ ಇನ್ನೊಂದೆಡೆ.
ಒಬ್ಬನ ಬಾಯಿ ಕ್ಯಾನ್ಸರ್ ಗೆಡ್ಡೆಗಳಿಂದ ಕೊಳೆತಿದ್ದರೆ ಮತ್ತೊಬ್ಬನ ಮನಸ್ಸೇ ಕೊಳೆತು ಬಾಯಿ ಕಸವನ್ನು ಉಗುಳುತ್ತಿದೆ. ಅವನೇನೋ ವಿಕೃತ. ಆತನ ಮನಸ್ಥಿತಿಗೆ ಸರಿಯಾಗಿ ಒದರಿದ್ದಾನೆ. ಅತ್ಯಾಚಾರಿಗಳ ಕುರೂಪವನ್ನು ಜಗತ್ತಿಗೆ ತೋರಿದ್ದಾನೆ. ಆದರೆ ಅದನ್ನು ತೋರಿಸಬಾರದೆಂದು ಮೀಡಿಯಾದೆಡೆಗೆ ಅರಚಿದವರು ಮುಚ್ಚಿಡಲು ಹೋದದ್ದು ಏನನ್ನು? ನಮ್ಮ ದೇಶದ ಘನತೆಯನ್ನೇ? ಹೆಣ್ಮಕ್ಕಳ ಘನತೆಯನ್ನೇ?
ಇಷ್ಟಕ್ಕೂ ಅತ್ಯಾಚಾರಿಗಳು ಯಾವ ದೇಶದವರಾದರೂ ಒಂದೆಯೇ. ಅತ್ಯಾಚಾರವೆಂಬುದು ಭಾರತದ ಸಮಸ್ಯೆಯೊಂದೇ ಅಲ್ಲ, ಇದು ಜಾಗತಿಕ ಸಮಸ್ಯೆ. ವಿವಿಧ ದೇಶಗಳ ಅತ್ಯಾಚಾರಿಗಳ ಮನಸ್ಥಿತಿ ಅಧ್ಯಯನದ ಸಲುವಾಗಿಯೇ ಸಾಕ್ಷ್ಯಚಿತ್ರ ನಿರ್ಮಿಸಿತ್ತು ಬ್ರಿಟಿಷ್ ವಾಹಿನಿ. ಅದರ ಪ್ರಸಾರದಲ್ಲಿ ಕಮರ್ಷಿಯಲ್ ಅಂಶಗಳಿದ್ದರೂ, ಜೊತೆಗೇ ಅರ್ಥ ಮಾಡಿಸುವ, ಎಚ್ಚರಿಸುವ, ಕೆಚ್ಚನ್ನು ಹುಟ್ಟುಹಾಕುವ ಗಂಟೆಯೂ ಬಾರಿಸುತ್ತಿತ್ತು.
ಮಾ.೮, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ‘ಇಂಡಿಯಾಸ್ ಡಾಟರ್’(ಭಾರತದ ಮಗಳು) ಹೆಸರಿನಲ್ಲಿ ಕಾರ್ಯಕ್ರಮ ಭಿತ್ತರವಾಗುವುದೆಂದು ಬಿಬಿಸಿ ಹೇಳಿತ್ತು. ಇದರಲ್ಲಿ ೨೦೧೨ರ ಡಿಸೆಂಬರ್ ೧೬ರಂದು ಭೀಕರವಾಗಿ ನಡೆದ ನಿರ್ಭಯಾ ಅತ್ಯಾಚಾರದ ಕುರಿತು ಅತ್ಯಾಚಾರಿಗಳು, ಅವರ ಪರ ವಕೀಲರು ಹಾಗೂ ನಿರ್ಭಯಾಳ ಹೆತ್ತವರ ಸಂದರ್ಶನಗಳು ಇದ್ದವು. ಇದರಲ್ಲಿ ಅತ್ಯಾಚಾರಕ್ಕೊಳಗಾದವಳನ್ನೇ ದೂರಿದ ಮುಖೇಶನ ಮಾತುಗಳು ಮಹಿಳಾಪರ ಹೋರಾಟಗಾರರನ್ನು ಕೆರಳಿಸಿದ್ದವು. ಆದರೆ ಇದೀಗ ‘ದೇಶದ ಮರ್ಯಾದೆ’ಯ ನೆಪದಲ್ಲಿ ನ್ಯಾಯಾಲಯ ದೇಶದಲ್ಲಿ ಕಾರ್ಯಕ್ರಮ ಪ್ರಸಾರ ಮಾಡದಂತೆ ಆದೇಶಿಸಿದೆ. 
ದೇಶದಲ್ಲಿ ದಿನವೊಂದಕ್ಕೆ ಸಾವಿರಾರು ಹೆಣ್ಣುಮಕ್ಕಳು ಅವಮಾನ, ಮಾನಭಂಗಕ್ಕೊಳಗಾಗುತ್ತಾರೆ. ಅವರನ್ನು ಕಾಪಾಡಲಾಗದವರಿಗೆ ‘ಭಾರತದ ಅತ್ಯಾಚಾರಿ’ಯ ಘನಮಾನವನ್ನು ಕಾಪಾಡುವ ಹುಕಿ ಅದೇಕೋ? ಈ ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಕೂಡಾ, ಭಾರತದ ಈ ವರ್ತನೆ ಅರ್ಥವೇ ಆಗುತ್ತಿಲ್ಲವೆಂದು ಹೇಳಿದ್ದಾರೆ. ಅತ್ಯಾಚಾರಿಯ ಮಾತುಗಳನ್ನು ಕೇಳಿಯೇ ಶಾಕ್‌ಗೆ ಒಳಗಾಗಿದ್ದ ಜಗತ್ತಿಗೆ, ಘನ ಉದ್ದೇಶಕ್ಕೆಂಬಂತೆ ಅದನ್ನು ಮುಚ್ಚಿಟ್ಟುಕೊಳ್ಳುವ ಹಪಹಪಿಗೆ ಬಿದ್ದವರನ್ನು ನೋಡಿ ಭಾರತದ ಮನೋವ್ಯಾಧಿಯ ಅರಿವಾಗದಿದ್ದೀತೇ?
ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಮನೆಯೊಳಗಿನ ಅತ್ತೆಸೊಸೆ ಜಗಳ, ಗಂಡಹೆಂಡತಿ ಚಿಕ್ಕ ವಿಷಯಕ್ಕೆ ಕಿತ್ತಾಡಿದ್ದು ಕೂಡಾ ಪ್ರಸಾರವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಪೋಲಾಗಿ ಹರಿದುಹೋಗುತ್ತಿದ್ದರೂ ನೋಡಿ ಮಜಾ ತೆಗೆದುಕೊಳ್ಳುವ ನಾವು, ಘನಉದ್ದೇಶದಿಂದ ಉತ್ತಮ ಕಾರ್ಯಕ್ರಮವೊಂದನ್ನು ಮಾಡಿದ ವಾಹಿನಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೆ ಪಣ ತೊಡುವುದು ಎಷ್ಟು ಸರಿ? ನಮ್ಮ ಕುರೂಪವನ್ನು ತೋರಿದ ಕನ್ನಡಿಯನ್ನು ದೂರುವುದು ನಮಗೆ ಜನ್ಮಜಾತವಾಗಿದೆ. ಮುಖೇಶ್ ನಿರ್ಭಯಾಳ ಬಗ್ಗೆ ಸಾವಿರ ಅವಮಾನಕರ ಹೇಳಿಕೆ ನೀಡಿದರೂ ಅವನ ಮೇಲೆಯೇ ಜನರಿಗೆ ಅಸಹ್ಯ ಹುಟ್ಟುತ್ತದೆಯೇ ಹೊರತು ನಿರ್ಭಯಾಳ ಘನತೆ ಸಾಸಿವೆಯಷ್ಟೂ ಕುಂದುವುದಿಲ್ಲ.
ಇಷ್ಟಕ್ಕೂ ಇದೇನು ಒಬ್ಬ ಮುಖೇಶನ ಧೋರಣೆಯಲ್ಲ. ಹೆಣ್ಣುಮಕ್ಕಳ ಬಗೆಗೆ ಇಂಥದೇ ಧೋರಣೆಯುಳ್ಳ, ಅವಳ ಬೋಲ್ಡ್‌ನೆಸ್ ನೋಡಿ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವ, ‘ಅವಳು’ ಪುರುಷರ ಸ್ವತ್ತು. ಆತನಿಗೆ ಅವಳನ್ನೇನೂ ಮಾಡುವ ಅಧಿಕಾರವಿದೆ ಎನ್ನುವಂಥ ಹೇಳಿಕೆ ನೀಡುವ ರಾಜಕಾರಣಿಗಳು, ಪುಂಡಪೋಕರಿಗಳು, ಕಡೆಗೆ ಶಿಕ್ಷಿತರೂ ನಮ್ಮ ದೇಶದಲ್ಲಿ ಬೇಕಷ್ಟಿದ್ದಾರೆ. ವರ್ಷಗಟ್ಟಲೆ ಎಲ್‌ಎಲ್‌ಬಿ ಓದಿ ಘನ ಹುದ್ದೆ ಏರಿದ ನಿರ್ಭಯಾ ಅತ್ಯಾಚಾರಿಗಳ ಪರ ವಕೀಲ ಕೂಡಾ ‘ಸ್ವೀಟು ಸ್ಟ್ರೀಟಲ್ಲಿದ್ದರೆ ನಾಯಿ ಬಂದು ತಿನ್ನುವುದಿಲ್ಲವೇ’ ಎನ್ನುವ ಮೂಲಕ ತನ್ನ ವಾಕ್ಚಾತುರ್ಯವನ್ನೂ, ಸ್ಯಾಡಿಸ್ಟ್ ಧೋರಣೆಯನ್ನೂ ಪ್ರದರ್ಶಿಸುತ್ತಾನೆ. ಇವರೆಲ್ಲರ ಕಾಮಾಲೆ ಕಣ್ಣಿನ ಬಗ್ಗೆ ಸರ್ಕಾರಕ್ಕೆ ತಕರಾರಿಲ್ಲ. ಆದರೆ ಅದನ್ನು ವಾಹಿನಿ ಭಿತ್ತರಿಸಿದರೆ ಮಾತ್ರ ದೇಶದ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತದೆ!
ಮುಖೇಶ್‌ನನ್ನು ಅಪರಾಧಿ ಎಂದು ಪರಿಗಣಿಸಿ, ಮರಣದಂಡನೆ ಶಿಕ್ಷೆಗೆ ಗುರಿಯಾಗಿಸಿದ್ದೇವೆ ಎಂಬುದೇ ಸಾಕು ನಮ್ಮ ದೇಶದಲ್ಲಿ ಇಂಥ ವಿಕಾರ ಮನಸ್ಥಿತಿಗೆ ಉಳಿಗಾಲವಿಲ್ಲ ಎನ್ನಲು. ಅಂದ ಮೇಲೆ ಅಂಥವನೊಬ್ಬನ ‘ಹೇಳಿಕೆಗಳು’ ದೇಶಕ್ಕೆ ಅವಮಾನವೆಸಗಲು ಸಾಧ್ಯವಿಲ್ಲ. ನಿಜವಾಗಿಯೂ ಅವಮಾನ ಪಡಬೇಕಾದದ್ದು ಅಂಥ ಅತ್ಯಾಚಾರಿಗಳು ಈ ಮಣ್ಣಿನಲ್ಲಿ ಹುಟ್ಟುತ್ತಿದ್ದಾರೆ ಎಂಬುದಕ್ಕೆ.
ಇಷ್ಟಕ್ಕೂ ಅವಮಾನಕರವೆಂದಾದಲ್ಲಿ ಬಿಬಿಸಿ ವಾಹಿನಿಗೆ ೨೦೧೩ರಲ್ಲಿ ಅತ್ಯಾಚಾರಿಯೊಂದಿಗೆ ಸಂದರ್ಶನಕ್ಕೆ ಗೃಹಮಂತ್ರಿಗಳು ಅನುಮತಿ ನೀಡಿದ್ದೇಕೆ? ಕಾರ್ಯಕ್ರಮದ ವಿಷಯ ಆಕ್ಷೇಪಾರ್ಹವೆಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಆಗಲೇ ಹೊಳೆಯಲಿಲ್ಲವೇಕೆ?
ನಮ್ಮಲ್ಲಿ ಹೆಮ್ಮೆ ಪಡುವ ವಿಷಯಗಳೊಂದಿಗೆ ತಲೆ ತಗ್ಗಿಸುವ ಸಂಗತಿಗಳೂ ಸಾಕಷ್ಟಿವೆ. ಅದನ್ನು ತೋರಿಸಲು ಹೊರಟವರ ಬಾಯಿ ಮುಚ್ಚಿಸುವುದರಿಂದಾಗಿ ತಲೆ ಎತ್ತುವಂಥ ಸಂಗತಿಗಳೇನೂ ಘಟಿಸುವುದಿಲ್ಲ. ಸಮಸ್ಯೆಗಳೂ ಬಗೆಹರಿಯುವುದಿಲ್ಲ. ಇದ್ದುದನ್ನು ಒಪ್ಪಿಕೊಂಡು, ಅದನ್ನು ಬದಲಾಯಿಸುವತ್ತ ಚಿತ್ತ ಹರಿಸೋಣ.

3 tanti



21.2.15

ಕಿಂಡಿಯಲಿ ಕoಡ ಬೆಳಕು

ರೇಶ್ಮಾರಾವ್ ಸೊನ್ಲೆ
ಒಳಗೆ, ದಿಡ್ಡಿ ಬಾಗಿಲು ಮುಚ್ಚಿದ ಕೋಣೆಯೊಳಗೆ ಅದೇನೇನು ನಡೆಯುತ್ತಿದೆಯೋ? ಬಾಗಿಲ ಸಂದಿಯಲಿ, ಬೀಗ ಜಡಿಯುವ ಕಿಂಡಿಯಲಿ ಸಣ್ಣದಾಗಿ ಹಳದಿ ಬೆಳಕು ಹೊಳೆಯುತ್ತಿದೆ. ಮುಚ್ಚಿಡಲಾಗದ ಮಿನುಗು, ಕಣ್ಣ ರೆಪ್ಪೆಯ ಸೋಲಿಸಿ ಅಲ್ಲಿಗೂ ರಾಚಿದೆ. ಹೊರಗಿನಿಂದ ಹೋಗಿ ಒಳಗೇ ಬಂಧಿಯಾದ ಬೆಳಕು. ಇಷ್ಟು ವರ್ಷದ ಕತ್ತಲ ಕೋಣೆಗೆ ದೊಂದಿ ಹಚ್ಚಲಾಗಿದೆ. ಕಪ್ಪನ್ನು ಓಡಿಸಿದ್ದಾಯಿತು. ಆದರೆ ತನ್ನೊಳಗಿನ ದಿಗ್ದರ್ಶನ ಮಾಡಿಸಿದ ಬೆಳಕನ್ನು ಹಿಡಿದಿಡಬೇಡವೇ? ಅದಕ್ಕೇ ಕಾವಲು ಕೂತಿರುವುದು. ಕಾವಲಲ್ಲೇ ಕಾಲಹರಣ. ದಿನದಂತಿದ್ದೇನೆ ಎಂಬ ಪ್ರಯತ್ನಪೂರ್ವಕ ಮುಖಚರ್ಯೆಯಲೂ ಏರುಮುಖದಲಿ ಸಾಗುತ್ತಿರುವ ಸಂಭ್ರಮದ ಸಂಭ್ರಮವನ್ನು ಹಿಡಿಯುವವರಿಲ್ಲ. ಏನಿಲ್ಲ, ಏನಿಲ್ಲ ಎಂಬ ನಾಲಗೆಯ ಸುಳ್ಳಿಗೆ ತುಟಿ ಸಣ್ಣದಾಗಿ ನಗುತ್ತಿದೆ. ಜಗತ್ತು ಕುಗ್ಗುತ್ತಾ ಕುಗ್ಗುತ್ತಾ ಒಂದೇ ಜೀವದ ಸುತ್ತ ಮನಸ್ಸು ಹಿಗ್ಗುತ್ತಿದೆ.
ಮೊದಲಿನಿಂದಲೂ ಮನಸ್ಸಿಗೆ ಮುಖ ಕನ್ನಡಿಯಾಗದಿರಲಿ ಎಂದೇ ಎಚ್ಚರ ವಹಿಸಿ, ಈಗ ಅದರಲ್ಲೇನೋ ನಾಚಿಕೆಯ ಸಡಗರ ಸೇರಿದ ಮೇಲೆ, ಯಾರು ನೋಡಿಬಿಟ್ಟಾರೋ ಎಂಬ ಆತಂಕದಲಿ, ನೋಡಲಿ ಎಂಬ ಒಳಗೊಳಗೇ ಕಂಡೂಕಾಣದ ಸಣ್ಣ ಅಲ್ಲವೆಂಬ ಆಸೆಯಲಿ ಭಾವನೆಗಳನ್ನು ಇನ್ನಷ್ಟು ಭದ್ರಗೊಳಿಸಿ ಇಟ್ಟಾಗಿದೆ. ಬೆಳಕಿನ ಕೈಗೆ ಸಿಕ್ಕ ಒಂದೊಂದೇ ಭಾವನೆಯನ್ನು ತಿರುಗಿಸಿಮುರುಗಿಸಿ ನೋಡುವ ಸುಖ ಈಗ... ಎಲ್ಲವೂ ಹೊಸತರಂತೆ, ತನ್ನೊಳಗಿಲ್ಲದ್ದೇನೋ ಆವಾಹಿಸಿಕೊಂಡಂತೆ ಕಾಣುತ್ತಿವೆ. ಇನ್ನೂ ಬಚ್ಚಿಟ್ಟ ಜೀವದೊಂದಿಗೆ ಮಾತನಾಡಿಲ್ಲ. ಈಗ ಮಾತು ಬೇಕಿಲ್ಲ. ಅಪಹರಣ ಮಾಡಿದ್ದೇನೆಂದುಕೊಂಡೇ ಸಿಕ್ಕಿಬೀಳದಿರಲು ಇಷ್ಟೆಲ್ಲ ಎಚ್ಚರ ವಹಿಸಬೇಕಾಗಿದೆ. ತಪ್ಪಿಸಿಕೊಳ್ಳದಂತೆಯೂ ನೋಡಬೇಕಲ್ಲ...ಆದರೀಗದೇಕೋ ಅಪಹರಣ ಪಡಲ್ಪಟ್ಟ ಸೂಚನೆಗಳು ದಿಗಿಲಿಗೀಡು ಮಾಡಿ, ತಳಮಳ ಹುಟ್ಟಿಸಿವೆ.
ಈ ಅಪಹರಣ ಆಪರೇಶನ್‌ಗಾಗಿ ತೆತ್ತ ಮೊತ್ತವೆಂದರೆ ನಿದ್ರೆ. ಕಣ್ಗಳನ್ನು ಮುಚ್ಚದೇ ಒಳಗನ್ನು ನೋಡುತ್ತಾ, ಕಾಯುತ್ತಾ, ಕನವರಿಸುತ್ತಾ, ಮುಚ್ಚಿಡುತ್ತಾ, ಅವುಗಳ ಮೇಲೆ ತೆವಳುತ್ತಾ ಕೂರಬೇಕಿದೆ. ಇದು ನಿದಿರೆಗಿಂತ ಹೆಚ್ಚು ಮದಿರೆ ಕುಡಿದ ಅಮಲು. ಆಡಿ ಬಿಟ್ಟ ಮಾತುಗಳು ಮರೆತು ಹೋಗದಂತೆ ಹಿಡಿದಿಡುವ ಭರದಲ್ಲಿ ಗೊತ್ತಿಲ್ಲದೆಯೇ ಕಚ್ಚಿಸಿಕೊಳ್ಳುವ ತುಟಿಗಳು. ವರ್ಷಗಳ ಕಹಿಯನ್ನು ಪ್ರವಾಹದಂತೆ ಕೊಚ್ಚಿ ಸಿಹಿನೆನಪುಗಳಾಗುತ್ತಿರುವ ಕ್ಷಣಗಳು. ಜೀವವನ್ನು ಒಳಗೆಳೆದುಕೊಳ್ಳುವ, ಜೀವಕ್ಕೆ ಜೀವವಾಗಿಸಿಕೊಳ್ಳುವ ಪ್ರಕ್ರಿಯೆ ಇದೇ ಏನೋ.
ತೀರಾ ಸಾಮಾನ್ಯವಾದ ಹಲವುಗಳನ್ನು ಅಸಾಮಾನ್ಯವೆಂದು ನೋಡುವ, ವಿಶೇಷವೆನಿಸುವಂತೆ ಮಾಡುವ ಈ ಬೆಳಕಿನ ಚಮತ್ಕಾರ ಸಿದ್ಧಿಗೆ ಅಗೋಚರ, ಅನಿರ್ದಿಷ್ಟ, ಅಸ್ಪಷ್ಟ ಹಾದಿಯಲ್ಲಿ ಇಪ್ಪತ್ನಾಲ್ಕು ವರ್ಷಗಳ ತಪಸ್ಸು ನಡೆದಿದೆ. ಪ್ರಪಂಚದ ಮೂರೂವರೆ ಬಿಲಿಯನ್ ಗಂಡು ಜನ್ಮದಲ್ಲಿ, ವಯಸ್ಸು ಹೊಂದುವಂಥ ಅಂದರೆ ನಲವತ್ತು ಶೇ. ಜನರಲ್ಲಿ ಈ ಜೀವದ ಆತ್ಮಬಂಧುವನ್ನು ಹುಡುಕಿಕೊಳ್ಳುವುದು ಅತಿ ಕ್ಲಿಷ್ಟಕರ ಜಿಗ್‌ಸಾ ಪಜಲ್ ಅಲ್ಲವೇ? ಅದನ್ನೀಗ ಬಿಡಿಸಿದ ತೃಪ್ತಿಗೆ ಗೆದ್ದ ಟ್ರೋಫಿ ಜೀವನದುದ್ದಕ್ಕೂ ಜೊತೆ ಇರುವ, ಬರುವ ಈ ಬೆಳಕು.

17.2.15

ಗಾಂಧೀ ನಗರದಲ್ಲಿ ಗಂಗಾಧರ


ಶಿವರಾತ್ರಿ ಬಂದರೆ ಊರಿನ ರಂಗಮಂದಿರದಲ್ಲಿ ಹಲವು ವರ್ಷಗಳಿಂದ ಶ್ರೀ ಮಂಜುನಾಥ ಫಿಕ್ಸು. ಭಂಗಿ ಕುಡಿದು ಭಂಗಿಭಂಗಿಯಲ್ಲಿ ಕುಣಿಯೋ ಶಿವನನ್ನು ನೋಡಲು ತಾವೂ ಕುಡಿದು ಹೋಗಿ ವಾಲಾಡಿದರೆ ಭಕ್ತಿ ಹೆಚ್ಚಾಗಿ ಶಿವ ಒಲಿಯುವ ಸಂಭಾವ್ಯ ಜಾಸ್ತಿ ಎಂಬ ನಂಬಿಕೆ ಊರ ಗಂಡಸರದು. ಹೀಗಾಗಿ ಹೆಣ್ಣುಮಕ್ಕಳು ಮನೆಯಲ್ಲೇ ಉಳಿಯಬೇಕಾದುದು ಅನಿವಾರ್ಯ. ಚಿಂತೆಯಿಲ್ಲ, ಈಗ ಎಲ್ಲರ ಮನೆಯಲ್ಲೂ ಟಿವಿಯಿದೆ. ಹಬ್ಬವೆಂದರೆ ನಾಲ್ಕು ಚಾನೆಲ್‌ಗಳಲ್ಲಿ ದಿನಕ್ಕೆ ಕನಿಷ್ಠ ನಾಲ್ಕು ಶಿವನ ಚಿತ್ರಗಳನ್ನು ಹಾಕುವಾಗ ಹೊರಾಂಗಣದಲ್ಲಿ ಚಳಿ ಹೊಡೆಸಿಕೊಂಡು ನೋಡುವ ಪಡಿಪಾಟಲೇಕೆ? ಅದೇನೇ ಇರಲಿ, ಶಿವರಾತ್ರಿಯಂದು ಟಿವಿ ನೋಡುವಾಗ ಎನಿಸುತ್ತದೆ, ನೃತ್ಯದಲ್ಲಿ, ಸಿಟ್ಟಿನಲ್ಲಿ ಸೈ ಎನಿಸಿಕೊಂಡಿರುವ ಈ ಶಿವ, ಚಲನಚಿತ್ರಗಳಿಗೂ ಎಂಟ್ರಿ ಕೊಟ್ಟುಬಿಟ್ಟನಲ್ಲಾ... ಕಲೆ ಹಾಗೂ ತಂತ್ರಜ್ಞಾನಗಳಿಗೆ ಎಷ್ಟು ಚೆನ್ನಾಗಿ ಅಪ್‌ಡೇಟ್ ಆಗಿದ್ದಾನೆ. ವೆರಿ ಮಾಡ್ರನ್ ಮೈಂಡೆಡ್ ನೋ?
ಒಮ್ಮೆ ಕಣ್ಣು ಮುಚ್ಚಿ ಭಕ್ತಿಯಿಂದ ಶಿವನ ರೂಪ ಕಲ್ಪಿಸಿಕೊಂಡು ನೋಡಿ, ನಟ ಚಿರಂಜೀವಿಯೋ, ಶ್ರೀಧರ‌್ರೋ, ಸಂಜೈ, ಶ್ರೀನಿವಾಸಮೂರ್ತಿ ಇಲ್ಲವೇ ಅಣ್ಣಾ ರಾಜಣ್ಣರ ರೂಪವೇ ಕಣ್ಮುಂದೆ ಬರುತ್ತದಲ್ಲವೇ? ನಾವು ಶಿವನನ್ನು ನೋಡಿರುವುದೇ ಹಾಗೆ, ಬೇಡರ ಕಣ್ಣಪ್ಪ, ಭೂಕೈಲಾಸ, ಶ್ರೀಮಂಜುನಾಥ, ಶಿವಪಾರ್ವತಿ, ಭಕ್ತ ಮಾರ್ಕಂಡೇಯ, ಭಕ್ತಸಿರಿಯಾಳ, ಶ್ರೀನಂಜುಂಡೇಶ್ವರ ಮಹಿಮೆ, ಶ್ರೀ ಧರ್ಮಸ್ಥಳ ಮಹಾತ್ಮೆಯಂಥ ಸಿನಿಮಾ ಮಹಾತ್ಮೆ ಇದು!
ಕಣ್ಣಿಗೆ ಕಾಣದವನನ್ನು ಹೀಗಿದ್ದಾನೆ ಎಂದು ಯಾರಾದರೂ ತೋರಿಸಿದರೆ, ನೋಡಿಬಂದಂತೆ ಹೇಳಿದರೆ ನಂಬದೇ ವಿಧಿ ಇದೆಯೇ? ನಿರ್ದೇಶಕರು ಕೊಟ್ಟ ರೂಪಕ್ಕೆ, ಈ ನಟರು ವೇಷ ತೊಟ್ಟು ಪರಕಾಯ ಪ್ರವೇಶವನ್ನೇ ಮಾಡಿದ್ದಾರೆ. ನಟ ಶ್ರೀಧರ್ ‘ಶಂಕರ ಶಶಿಧರ ಗಜಚರ್ಮಾಂಬರ’ ಹಾಡಿಗೆ ತ್ರಿಶೂಲ ಹಿಡಿದು, ಬೂದಿ ಬಳಿದುಕೊಂಡು ಹಾರಿ ತಿರುಗಿ ಕುಣಿಯುತ್ತಿದ್ದರೆ, ನಾಟ್ಯಪ್ರವೀಣ ಶಿವ ಹಾಗಿರದೆ ಬೇರೆ ರೂಪದಲ್ಲಿರಲು ಸಾಧ್ಯವೆಂದು ಯೋಚಿಸಲೂ ಮೆದುಳು ತಯಾರಿರುವುದಿಲ್ಲ. ಹಾಗಾಗೇ ಶಿವನ ಚಿತ್ರ ಎಂದರೇ ಶ್ರೀಧರ್ ಪ್ರತ್ಯಕ್ಷನಾಗಲೇಬೇಕಾದ ಜಮಾನವಿತ್ತು.
ಇನ್ನು ‘ಬೇಡರ ಕಣ್ಣಪ್ಪ’ದಲ್ಲಿ ಶಿವ ಪಾತ್ರಧಾರಿ ಎಚ್.ಆರ್. ರಾಮಚಂದ್ರಶಾಸ್ತ್ರಿ  ಪ್ರತ್ಯಕ್ಷನಾಗುತ್ತಿದ್ದಂತೆ ಇಡೀ ಸಿನಿಮಾ ಟೆಂಟಿನಲ್ಲಿ ಕುಳಿತಿದ್ದವರೆಲ್ಲ ಎದ್ದು ನಿಂತು ಕೈ ಮುಗಿದೋ, ಅಡ್ಡ ಬಿದ್ದೋ, ಹರಹರ ಮಹದೇವ ಘೋಷಣೆ ಕೂಗಿಯೋ ಭಕ್ತಿಯ ಪರಾಕಾಷ್ಠೆಯಲ್ಲಿ ಅಕ್ಷರಶಃ ಕಣ್ತುಂಬಿಕೊಳ್ಳುತ್ತಿದ್ದರು. ಬೇಡರ ಕಣ್ಣಪ್ಪನಾಗಿ ಶಿವಭಕ್ತನಾಗಿದ್ದ ರಾಜ್‌ಕುಮಾರ್, ‘ಗಂಗೆಗೌರಿ’, ‘ಪಾರ್ವತಿ ಕಲ್ಯಾಣ’ಗಳಲ್ಲಿ ತಾನೇ ಸ್ವತಃ ಶಿವ ವೇಷ ಹಾಕಿದಾಗ, ಶಿವ ಹೀಗೆಯೇ ಇರುತ್ತಾನೆ ಎಂದು ಅನಿಸಿದುದರಲ್ಲಿ ಪವಾಡವೇನೂ ಇಲ್ಲ. ಎಷ್ಟೇ ಆದರೂ ಪಾತ್ರಧಾರಿ ನಟ ಸಾರ್ವಭೌಮ ತಾನೇ?
ಹೆಚ್ಚು ನೃತ್ಯವಿಲ್ಲದ ಶಿವನ ಪಾತ್ರವೆಂದರೆ ಅಲ್ಲಿ ಶ್ರೀನಿವಾಸಮೂರ್ತಿಯ ಮುಖ ಪ್ರಸನ್ನವದನ ಗಂಗಾಧರನಾಗಲೂ ಸೈ, ಮುನಿಸಿನ ‘ಮೂರ್ತಿ’ಯಾಗಲೂ ಸೈ. ಅವರಲ್ಲದೆ ಒಮ್ಮೆ ‘ವಿಷ್ಣು’ವರ್ಧನ ‘ಶಿವ’ವದನನಾಗಿದ್ದೂ ಉಂಟು. ಇದೆಲ್ಲ ನಮ್ಮ ಅಪ್ಪ ಅಮ್ಮ ಕಂಡ ಶಿವನಾಯಿತು. ಈಗಿನ ಯುವಜನರ ಬಳಿ ಶಿವ ಹೇಗಿರುತ್ತಾನೆಂದರೆ ಚಿರಂಜೀವಿಯ ಹೊರತು ಬೇರೆ ಮುಖ ವರ್ಣನೆ ಮಾಡಲು, ಕಲ್ಪಿಸಿಕೊಳ್ಳಲೂ ಅವರಿಂದ ಸಾಧ್ಯವಿಲ್ಲ. ಏಕೆಂದರೆ ನಾವು ಶಿವನನ್ನು ನೋಡಿರುವುದೇ ‘ಶ್ರೀ ಮಂಜುನಾಥ’ದ ಶಿವನನ್ನು. ಈ ಸ್ಫುರದ್ರೂಪಿ ಶಿವನಿಗೆ ಸಾಟಿ ಬೇರಿಲ್ಲ ಎಂಬ ಮಟ್ಟಿಗೆ ಕಣ್‌ಕಪ್ಪು, ಜಟೆ, ವಿಭೂತಿ, ಗಟ್ಟಿಧ್ವನಿ, ಜೊತೆಗೆ ದೃಢಕಾಯ ಚಿರಂಜೀವಿಯನ್ನು ಕೈಲಾಸವಾಸಿಯಾಗಿಸುತ್ತವೆ.
ಭಕ್ತಿಪ್ರಧಾನ ಚಿತ್ರಗಳು ಮೂಲೆಗುಂಪಾಗಿರುವ ಈ ದಿನಗಳಲ್ಲಿ ಶಿವ, ಲಿಂಗ, ಲಿಂಗೇಶ ಎಂಬ ಹೀರೋಗಳ ಹೆಸರಿಗಷ್ಟೇ ಶಿವ ಸೀಮಿತನಾಗಿದ್ದಾನೆ. ಅಂಥದರಲ್ಲೂ ಯಾರಾದರೂ ಶಿವ ಪಾತ್ರವನ್ನಿಟ್ಟುಕೊಂಡು ಸಿನಿಮಾ ಮಾಡಿ ನಟರನ್ನು ಹುಡುಕ ಹೊರಟರೆ ಗಣಪತಿ, ಸುಬ್ರಹ್ಮಣ್ಯ, ನಾರದ ಎಲ್ಲರ ಪಾತ್ರಕ್ಕೂ ಈಗಿನ ಹೀರೋಗಳ ಚಹರೆ ಮ್ಯಾಚ್ ಆಗಬಹುದು. ಆದರೆ ಶಿವನ ಪಾತ್ರಕ್ಕೆ ಯಾರಿದ್ದಾರೆ?!