ಪುಟಗಳು

20.10.13

ಒಂದ್ ಕಥೆ ಹೇಳಜ್ಜಿ...

ಕಳೆದುಹೋದ ಕಥಾಸಂಕಲನ

ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ಒಬ್ಬಳು ಅಜ್ಜಿ ಇದ್ದಳು. ಸಮಯ ಸಿಕ್ಕಾಗೆಲ್ಲ ಮೊಮ್ಮಕ್ಕಳನ್ನು, ಆಚೀಚೆ ಮನೆ ಮಕ್ಕಳನ್ನು ಸುತ್ತಲೂ ಕೂರಿಸಿಕೊಂಡು, ತನ್ನ ಬೊಚ್ಚು ಬಾಯಿಯಲ್ಲಿ ಎಲೆಅಡಕೆ ಜಗಿಯುತ್ತಾ ಕತೆ ಹೇಳುತ್ತಿದ್ದಳು. ಅವಳ ಕತೆಗಳು ಅದೆಷ್ಟು ರೋಚಕವಾಗಿರುತ್ತಿದ್ದವೆಂದರೆ ಪುಣ್ಯಕೋಟಿ ಹುಲಿರಾಜನ ಬಳಿಗೆ ಹೊರಟಾಗ ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಿದ್ದವು. ಆಗ ಅಜ್ಜಿ ಅವುಗಳಿಗೆ ಸಮಾಧಾನ ಹೇಳಿ, ಸತ್ಯ ಹೇಗೆ ಗೆಲ್ಲುತ್ತದೆ ನೋಡ್ದನೋ ಪೋರ ಎಂದು ಕತೆ ಕೇಳುತ್ತಿದ್ದ ಗುಂಡನ ಬೆನ್ನು ಸವರುವಳು.
ಮಕ್ಕಳ ಮೆಚ್ಚಿನ ಇನ್ನೊಂದು ಕತೆ ಇತ್ತು. ಅದು ಒಂದು ಕೂದಲಿನ ರಾಜಕುಮಾರಿಯದು. ಅದನ್ನು ಹೇಳೆಂದು ಅಜ್ಜಿಯನ್ನು ಮಕ್ಕಳು ಒತ್ತಾಯಿಸುತ್ತಿದ್ದವು. ಅಜ್ಜಿಗೂ ಸ್ವಲ್ಪ ಆಟ ಆಡಿಸುವ ಎನಿಸುವುದು. ಅವಳು ಹುಗ್ಗಿ ಹರಿದು ಊರು ಮುಳುಗುವ ಕತೆ ಶುರು ಹಚ್ಚುವಳು. ಅದು ಮುಗಿಯುವವರೆಗೂ ಬಾಯಿ ಕಳೆದು ಕೇಳುತ್ತಿದ್ದ ಮಕ್ಕಳು ಮತ್ತೆ ರಾಜಕುಮಾರಿ ಕತೆಗೆ ಗೋಗರೆವವು. ಎಲೆ ಅಡಕೆ ತುಪ್ಪಿ ಬಂದ ಅಜ್ಜಿ ಮಾಳಿಗೆಯಲ್ಲಿಟ್ಟ ಡಬ್ಬಿ ತೆಗೆದು ಮಕ್ಕಳಿಗೆಲ್ಲ ಚಕ್ಕುಲಿ ಕೊಡುವಳು. ಮತ್ತೆ ಆ ರಾಜಕುಮಾರಿಗೆ ಒಂದು ಕೂದಲೆಂದು ರಾಜನ ಎರಡು ಕೂದಲಿನ ಎರಡನೇ ಹೆಂಡತಿಯೂ, ರಾಜನೂ ಸೇರಿ ಅವಳನ್ನು ಮನೆಯಿಂದ ಹೊರ ಹಾಕಿದ್ದನ್ನು ಅಜ್ಜಿ ವರ್ಣಿಸುವಳು. ಅವಳ ಒಳ್ಳೆತನ ಮೆಚ್ಚಿ ಮಾಟಗಾತಿ ತಲೆ ತುಂಬಾ ಕೂದಲು ಬರುವಂತೆ ಮಾಡುವಾಗಂತೂ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕೇಕೆ ಹಾಕಿ ಚಪ್ಪಾಳೆ ತಟ್ಟಿ ನಗುವುವು. ಅಜ್ಜಿ ಕತೆ ಹೇಳದ ದಿನ ಮಕ್ಕಳು ನಿದ್ದೆ ಮಾಡುವುದಿಲ್ಲವೆಂದು ರಚ್ಚೆ ಹಿಡಿಯುತ್ತಿದ್ದವು. ಶಾಲೆಗೆ ಹೋಗಿ,
'ಅಜ್ಜಿ ಎಂದರೆ ನಮ್ಮಜ್ಜಿ
ಕತೆಯನು ಹೇಳುವ ನಮ್ಮಜ್ಜಿ
ಉಪ್ಪು ಮೆಣಸು ಜಜ್ಜಿ
ಮಾಡಿದಳೊಂದು ಬಜ್ಜಿ' ಎಂದು ಪ್ರಾಸಬದ್ಧವಾಗಿ ಹಾಡು ಹೇಳುತ್ತಿದ್ದವು. ಇಂತಿಪ್ಪ ಮಕ್ಕಳ ಮೆಚ್ಚಿನ ಈ ಅಜ್ಜಿ ಸೌದೆ ತರಲೆಂದು ಒಂದು ದಿನ ಕಾಡಿಗೆ ಹೋದಳು. ಇಂದಿಗೂ ಸೌದೆಯೂ ಇಲ್ಲ, ಅಜ್ಜಿಯೂ ಇಲ್ಲ! ಬಹುಶಃ ಸೌದೆ ಸಿಗಲಿಲ್ಲವೇನೋ? ಅಕೇಶಿಯಾ, ನೀಲಗಿರಿ, ರಬ್ಬರ್ ಕಾಡಿನಲ್ಲಿ ಸೌದೆ ಎಲ್ಲಿಂದ ಬರಬೇಕು? ಅವೆಲ್ಲ ದುಡ್ಡಿನ ಮರಗಳಲ್ಲವೇ?!ಅಥವಾ 'ಇನ್ನೂ ಒಂದಾನೊಂದು ಕಾಲದಲ್ಲಿರುವ' ಅಜ್ಜಿಗೆ ಗ್ಯಾಸ್ ಸ್ಟೌ, ಕರೆಂಟ್ ಒಲೆಗಳ ಕತೆ ಹೇಳಿ ಮರಗಳೇ ಮೂದಲಿಸಿ ನಕ್ಕಿರಬಹುದು.
ಅಲ್ಲವೇ ಆಕೆ ತಿರುಗಿ ಬಂದೂ ಮೊಮ್ಮಕ್ಕಳಾರೂ ಗುರುತಿಸಿರಲಾರರು. ಅವುಗಳೋ ಒಂದು ದಿನದಲ್ಲಿ ಶತಮಾನದಷ್ಟು ಮುಂದೋಡುವವು. ಬಟನ್ ಒತ್ತಿದಷ್ಟೂ ಮನರಂಜನೆ ಒದಗಿಸುವ ಕಾರ್ಟೂನ್ ನೆಟ್‌ವರ್ಕ್‌ಗಳಿರಲು, 3 ವರ್ಷಕ್ಕೇ 30ರಂತೆ ಟೈ ಧರಿಸಿ ಶಾಲೆಗೆ ಓಡುವ ಧಾವಂತದಲ್ಲಿ ಅಜ್ಜಿ ನೆನಪಾದಾಳು ಹೇಗೆ?
ಒಂದು ವೇಳೆ ಗುರುತು ಸಿಕ್ಕರೂ ಎಲೆಅಡಕೆ ಜಗಿಯುತ್ತಾ, ಮಾಡರ್ನ್ ಕಲ್ಚರ್ ಗೊತ್ತಿಲ್ಲದ 'ದಟ್ ಡರ್ಟಿ ಅಗ್ಲಿ ವುಮನ್‌'ಗೆ ಅಜ್ಜಿ ಎಂದವಾದರೂ ಹೇಗೆ?!
ಹೀಗೆ ಒಂದಾನೊಂದು ಕಾಲದಲ್ಲಿ ಕತೆ ಹೇಳುತ್ತಿದ್ದ ನಮ್ಮ ನಿಮ್ಮೆಲ್ಲರ ಅಜ್ಜಿ ಇಂದು ಕತೆಯಾದಳು.

= ರೇಶ್ಮಾ ರಾವ್ ಸೊನ್ಲ್

(ಕನ್ನಡಪ್ರಭ ದಲ್ಲಿ ಪ್ರಕಟ)

4.10.13

ಕಾಡ ಹೂ

ಸ್ಯಾಕ್ಸೋಫೋನ್ ಸಾಧಕಿ
ಒಂದಷ್ಟು ಜನ ಬದುಕುವುದಕ್ಕಾಗಿ ಉಸಿರನ್ನು ಶ್ವಾಸಕೋಶಕ್ಕೆ ತುಂಬಲೇ ಹೆಣಗುತ್ತಾರೆ. ಆದರೆ ಕೆಲವರಿರುತ್ತಾರೆ, ಉಸಿರನ್ನೇ ಹಾಡಾಗಿ ಪರಿವರ್ತಿಸುವ ಮಾಂತ್ರಿಕರು. ಇಲ್ಲೊಬ್ಬ ಕಿನ್ನರಿ ಇದ್ದಾಳೆ ನಿರ್ಜೀವವಾಗಿ ಕುಳಿತ ಸ್ಯಾಕ್ಸಫೋನ್‌ಗೂ ಉಸಿರು ತುಂಬಿ ಹಾಡು ಕಲಿಸಿ ರಾಗಗಳನ್ನು ಅಲೆಅಲೆಯಾಗಿ ಗಾಳಿಗೆ ಬಿಡುವವಳು. ಹೀಗೆ ಹತ್ತು ವರ್ಷದಿಂದ ಮಲೆನಾಡಿನ ತೀರ್ಥಹಳ್ಳಿ ಬದಿಯ ಮೂಲೆಮೂಲೆಯಲ್ಲೂ ಗಾಳಿಗೆ ಗುಂಗು ಹತ್ತಿಸಿ ಮದುವೆಮನೆ, ಧಾರ್ಮಿಕ ಕಾರ್ಯಕ್ರಮದ ರಂಗು ನೀಡಿ ಸಂಭ್ರಮ ಹೆಚ್ಚಿಸುತ್ತಿರುವುದು ಪ್ರಥಮ ಬಿಕಾಂ ವಿದ್ಯಾರ್ಥಿನಿ ಸೌಮ್ಯ.
ಈ ಭಾಗದ ಯಾವುದೇ ಶುಭಕಾರ್ಯಗಳಿಗೆ ಹೋದರೆ ಗಂಟೆಗಟ್ಟಲೆ ಬಿಡುವಿಲ್ಲದೆ, ಭಕ್ತಿಗೀತೆ, ಚಿತ್ರಗೀತೆ ಸೇರಿದಂತೆ ಸಂದರ್ಭಕ್ಕೆ ತಕ್ಕಂತೆ ವಾದ್ಯದಲ್ಲಿ ಖಾದ್ಯ ಬಡಿಸುತ್ತಾ ಗಾನ ಸರಸ್ವತಿಯಂತೆ ಕುಳಿತಿರುವ ಈಕೆಯನ್ನು ನೋಡಿದರೆ 'ಮುತ್ತಿನಂತ ಹೆಂಡತಿ'ಯಲ್ಲಿ ಸ್ಯಾಕ್ಸಾಫೋನ್ ನುಡಿಸುವ ಮಾಲಾಶ್ರೀ ಕಣ್ಮುಂದೆ ಬರುತ್ತಾಳೆ. ತನ್ನ ತಂದೆ ನಾಗೇಶ್ ಅವರ ಗರಡಿಯಲ್ಲಿ ಪಳಗಿ, ನಂತರ ಶಿವಪ್ರಸಾದ್, ಕರುಣಾಕರ, ಸಾಲಿಗ್ರಾಮ ಸತೀಶ್ ದೇವಾಡಿಗ ಅವರ ಗುರು ಗಾರುಡಿಯಲ್ಲಿ ಮಿಂದೆದ್ದು ಪಕ್ಕಾ ವಾದ್ಯದಲ್ಲಿ ಪರಿಣತಿ ಸಾಧಿಸಿರುವ ಈಕೆ ಇದುವರೆಗೆ 250ಕ್ಕೂ ಹೆಚ್ಚು ಕಡೆ ಕಾರ್ಯಕ್ರಮ ನೀಡಿದ್ದಾಳೆ. 
ಎಸ್ಸೆಸ್ಸೆಲ್ಸಿ ಓದುತ್ತಿರುವ ಈಕೆಯ ತಂಗಿ ರಮ್ಯಾ ಕೂಡ ಹಿರಿಯಕ್ಕನ ಹಾದಿಯಲ್ಲಿ ಸಾಗುತ್ತಿದ್ದಾಳೆ.  ಇಷ್ಟಾದರೂ ಈ ಹಳ್ಳಿ ಹೂವಿನ ಪ್ರತಿಭೆಗೆ ಇದುವರೆಗೆ ಯಾವುದೇ ಪ್ರಶಸ್ತಿ ಫಲಕಗಳು ಲಭಿಸದಿರುವುದು ವಿಪರ್ಯಾಸವೇ ಸೈ. ಈ ಬಗ್ಗೆ ಈಕೆಯ ಪರಿಚಿತರನ್ನು ಕೇಳಿದಾಗ 'ಇಲ್ಲಿ ನಗರದಂತೆ ಇದನ್ನೆಲ್ಲ ಪ್ರತಿಭೆಯೆಂದು ನೋಡುವುದಿಲ್ಲ. ಅವಳು ಸ್ಯಾಕ್ಸಾಫೋನ್ ನುಡಿಸುತ್ತಾಳಂತೆ ಎಂಬುದು ಒಂದು ಸಾಮಾನ್ಯ ವಿಚಾರವೆಂಬಂತೆ ಜನ ನೋಡುತ್ತಾರೆ' ಎಂದು ವಿಷಾದಿಸುತ್ತಾರೆ. ಸೌಮ್ಯಳಿಗೊಂದು ಅಭಿನಂದನೆ ಹೇಳಬೇಕೆನಿಸಿದರೆ 9448106837ಗೆ ಕರೆ ಮಾಡಿ.- 
ರೇಶ್ಮಾ