ಪುಟಗಳು

4.3.15

first time on opped :) rape

ನಮ್ಮ ನಡುವೆ ‘ನಾನು ಮುಖೇಶ್. ತುಂಬಾ ತಂಬಾಕು ಅಗೀತಿದ್ದೆ. ಬಾಯಿ ಕ್ಯಾನ್ಸರ್‌ಗೆ ಬಲಿಯಾದೆ’ ಎಂದು ತಂಬಾಕು ಸೇವನೆಗಾಗಿ ಪಶ್ಚಾತ್ತಾಪ ಪಡುವ ಮುಖೇಶ್ ಒಂದೆಡೆಯಾದರೆ, ‘ನಾನು ಮುಖೇಶ್. ನಿರ್ಭಯಾ ಅತ್ಯಾಚಾರ ಮಾಡಿದ್ದೆ. ಆದರೆ ರಾತ್ರಿ ಹೊತ್ತಿನಲ್ಲಿ ಹಾಗೆ ಕಣ್ಣಿಗೆ ಬಿದ್ದಿದ್ದು ಅವಳದ್ದೇ ತಪ್ಪು. ಅದರಲ್ಲೂ ಅತ್ಯಾಚಾರ ವಿರೋಧಿಸಿದ್ದು ಇನ್ನೂ ತಪ್ಪು. ಅದಕ್ಕಾಗಿಯೇ ಕೊಲೆ ಮಾಡಿದೆವು’ ಎಂದು ಸಮರ್ಥಿಸಿಕೊಳ್ಳುವ ಮುಖೇಶ್ ಇನ್ನೊಂದೆಡೆ.
ಒಬ್ಬನ ಬಾಯಿ ಕ್ಯಾನ್ಸರ್ ಗೆಡ್ಡೆಗಳಿಂದ ಕೊಳೆತಿದ್ದರೆ ಮತ್ತೊಬ್ಬನ ಮನಸ್ಸೇ ಕೊಳೆತು ಬಾಯಿ ಕಸವನ್ನು ಉಗುಳುತ್ತಿದೆ. ಅವನೇನೋ ವಿಕೃತ. ಆತನ ಮನಸ್ಥಿತಿಗೆ ಸರಿಯಾಗಿ ಒದರಿದ್ದಾನೆ. ಅತ್ಯಾಚಾರಿಗಳ ಕುರೂಪವನ್ನು ಜಗತ್ತಿಗೆ ತೋರಿದ್ದಾನೆ. ಆದರೆ ಅದನ್ನು ತೋರಿಸಬಾರದೆಂದು ಮೀಡಿಯಾದೆಡೆಗೆ ಅರಚಿದವರು ಮುಚ್ಚಿಡಲು ಹೋದದ್ದು ಏನನ್ನು? ನಮ್ಮ ದೇಶದ ಘನತೆಯನ್ನೇ? ಹೆಣ್ಮಕ್ಕಳ ಘನತೆಯನ್ನೇ?
ಇಷ್ಟಕ್ಕೂ ಅತ್ಯಾಚಾರಿಗಳು ಯಾವ ದೇಶದವರಾದರೂ ಒಂದೆಯೇ. ಅತ್ಯಾಚಾರವೆಂಬುದು ಭಾರತದ ಸಮಸ್ಯೆಯೊಂದೇ ಅಲ್ಲ, ಇದು ಜಾಗತಿಕ ಸಮಸ್ಯೆ. ವಿವಿಧ ದೇಶಗಳ ಅತ್ಯಾಚಾರಿಗಳ ಮನಸ್ಥಿತಿ ಅಧ್ಯಯನದ ಸಲುವಾಗಿಯೇ ಸಾಕ್ಷ್ಯಚಿತ್ರ ನಿರ್ಮಿಸಿತ್ತು ಬ್ರಿಟಿಷ್ ವಾಹಿನಿ. ಅದರ ಪ್ರಸಾರದಲ್ಲಿ ಕಮರ್ಷಿಯಲ್ ಅಂಶಗಳಿದ್ದರೂ, ಜೊತೆಗೇ ಅರ್ಥ ಮಾಡಿಸುವ, ಎಚ್ಚರಿಸುವ, ಕೆಚ್ಚನ್ನು ಹುಟ್ಟುಹಾಕುವ ಗಂಟೆಯೂ ಬಾರಿಸುತ್ತಿತ್ತು.
ಮಾ.೮, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ‘ಇಂಡಿಯಾಸ್ ಡಾಟರ್’(ಭಾರತದ ಮಗಳು) ಹೆಸರಿನಲ್ಲಿ ಕಾರ್ಯಕ್ರಮ ಭಿತ್ತರವಾಗುವುದೆಂದು ಬಿಬಿಸಿ ಹೇಳಿತ್ತು. ಇದರಲ್ಲಿ ೨೦೧೨ರ ಡಿಸೆಂಬರ್ ೧೬ರಂದು ಭೀಕರವಾಗಿ ನಡೆದ ನಿರ್ಭಯಾ ಅತ್ಯಾಚಾರದ ಕುರಿತು ಅತ್ಯಾಚಾರಿಗಳು, ಅವರ ಪರ ವಕೀಲರು ಹಾಗೂ ನಿರ್ಭಯಾಳ ಹೆತ್ತವರ ಸಂದರ್ಶನಗಳು ಇದ್ದವು. ಇದರಲ್ಲಿ ಅತ್ಯಾಚಾರಕ್ಕೊಳಗಾದವಳನ್ನೇ ದೂರಿದ ಮುಖೇಶನ ಮಾತುಗಳು ಮಹಿಳಾಪರ ಹೋರಾಟಗಾರರನ್ನು ಕೆರಳಿಸಿದ್ದವು. ಆದರೆ ಇದೀಗ ‘ದೇಶದ ಮರ್ಯಾದೆ’ಯ ನೆಪದಲ್ಲಿ ನ್ಯಾಯಾಲಯ ದೇಶದಲ್ಲಿ ಕಾರ್ಯಕ್ರಮ ಪ್ರಸಾರ ಮಾಡದಂತೆ ಆದೇಶಿಸಿದೆ. 
ದೇಶದಲ್ಲಿ ದಿನವೊಂದಕ್ಕೆ ಸಾವಿರಾರು ಹೆಣ್ಣುಮಕ್ಕಳು ಅವಮಾನ, ಮಾನಭಂಗಕ್ಕೊಳಗಾಗುತ್ತಾರೆ. ಅವರನ್ನು ಕಾಪಾಡಲಾಗದವರಿಗೆ ‘ಭಾರತದ ಅತ್ಯಾಚಾರಿ’ಯ ಘನಮಾನವನ್ನು ಕಾಪಾಡುವ ಹುಕಿ ಅದೇಕೋ? ಈ ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಕೂಡಾ, ಭಾರತದ ಈ ವರ್ತನೆ ಅರ್ಥವೇ ಆಗುತ್ತಿಲ್ಲವೆಂದು ಹೇಳಿದ್ದಾರೆ. ಅತ್ಯಾಚಾರಿಯ ಮಾತುಗಳನ್ನು ಕೇಳಿಯೇ ಶಾಕ್‌ಗೆ ಒಳಗಾಗಿದ್ದ ಜಗತ್ತಿಗೆ, ಘನ ಉದ್ದೇಶಕ್ಕೆಂಬಂತೆ ಅದನ್ನು ಮುಚ್ಚಿಟ್ಟುಕೊಳ್ಳುವ ಹಪಹಪಿಗೆ ಬಿದ್ದವರನ್ನು ನೋಡಿ ಭಾರತದ ಮನೋವ್ಯಾಧಿಯ ಅರಿವಾಗದಿದ್ದೀತೇ?
ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಮನೆಯೊಳಗಿನ ಅತ್ತೆಸೊಸೆ ಜಗಳ, ಗಂಡಹೆಂಡತಿ ಚಿಕ್ಕ ವಿಷಯಕ್ಕೆ ಕಿತ್ತಾಡಿದ್ದು ಕೂಡಾ ಪ್ರಸಾರವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಪೋಲಾಗಿ ಹರಿದುಹೋಗುತ್ತಿದ್ದರೂ ನೋಡಿ ಮಜಾ ತೆಗೆದುಕೊಳ್ಳುವ ನಾವು, ಘನಉದ್ದೇಶದಿಂದ ಉತ್ತಮ ಕಾರ್ಯಕ್ರಮವೊಂದನ್ನು ಮಾಡಿದ ವಾಹಿನಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೆ ಪಣ ತೊಡುವುದು ಎಷ್ಟು ಸರಿ? ನಮ್ಮ ಕುರೂಪವನ್ನು ತೋರಿದ ಕನ್ನಡಿಯನ್ನು ದೂರುವುದು ನಮಗೆ ಜನ್ಮಜಾತವಾಗಿದೆ. ಮುಖೇಶ್ ನಿರ್ಭಯಾಳ ಬಗ್ಗೆ ಸಾವಿರ ಅವಮಾನಕರ ಹೇಳಿಕೆ ನೀಡಿದರೂ ಅವನ ಮೇಲೆಯೇ ಜನರಿಗೆ ಅಸಹ್ಯ ಹುಟ್ಟುತ್ತದೆಯೇ ಹೊರತು ನಿರ್ಭಯಾಳ ಘನತೆ ಸಾಸಿವೆಯಷ್ಟೂ ಕುಂದುವುದಿಲ್ಲ.
ಇಷ್ಟಕ್ಕೂ ಇದೇನು ಒಬ್ಬ ಮುಖೇಶನ ಧೋರಣೆಯಲ್ಲ. ಹೆಣ್ಣುಮಕ್ಕಳ ಬಗೆಗೆ ಇಂಥದೇ ಧೋರಣೆಯುಳ್ಳ, ಅವಳ ಬೋಲ್ಡ್‌ನೆಸ್ ನೋಡಿ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವ, ‘ಅವಳು’ ಪುರುಷರ ಸ್ವತ್ತು. ಆತನಿಗೆ ಅವಳನ್ನೇನೂ ಮಾಡುವ ಅಧಿಕಾರವಿದೆ ಎನ್ನುವಂಥ ಹೇಳಿಕೆ ನೀಡುವ ರಾಜಕಾರಣಿಗಳು, ಪುಂಡಪೋಕರಿಗಳು, ಕಡೆಗೆ ಶಿಕ್ಷಿತರೂ ನಮ್ಮ ದೇಶದಲ್ಲಿ ಬೇಕಷ್ಟಿದ್ದಾರೆ. ವರ್ಷಗಟ್ಟಲೆ ಎಲ್‌ಎಲ್‌ಬಿ ಓದಿ ಘನ ಹುದ್ದೆ ಏರಿದ ನಿರ್ಭಯಾ ಅತ್ಯಾಚಾರಿಗಳ ಪರ ವಕೀಲ ಕೂಡಾ ‘ಸ್ವೀಟು ಸ್ಟ್ರೀಟಲ್ಲಿದ್ದರೆ ನಾಯಿ ಬಂದು ತಿನ್ನುವುದಿಲ್ಲವೇ’ ಎನ್ನುವ ಮೂಲಕ ತನ್ನ ವಾಕ್ಚಾತುರ್ಯವನ್ನೂ, ಸ್ಯಾಡಿಸ್ಟ್ ಧೋರಣೆಯನ್ನೂ ಪ್ರದರ್ಶಿಸುತ್ತಾನೆ. ಇವರೆಲ್ಲರ ಕಾಮಾಲೆ ಕಣ್ಣಿನ ಬಗ್ಗೆ ಸರ್ಕಾರಕ್ಕೆ ತಕರಾರಿಲ್ಲ. ಆದರೆ ಅದನ್ನು ವಾಹಿನಿ ಭಿತ್ತರಿಸಿದರೆ ಮಾತ್ರ ದೇಶದ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತದೆ!
ಮುಖೇಶ್‌ನನ್ನು ಅಪರಾಧಿ ಎಂದು ಪರಿಗಣಿಸಿ, ಮರಣದಂಡನೆ ಶಿಕ್ಷೆಗೆ ಗುರಿಯಾಗಿಸಿದ್ದೇವೆ ಎಂಬುದೇ ಸಾಕು ನಮ್ಮ ದೇಶದಲ್ಲಿ ಇಂಥ ವಿಕಾರ ಮನಸ್ಥಿತಿಗೆ ಉಳಿಗಾಲವಿಲ್ಲ ಎನ್ನಲು. ಅಂದ ಮೇಲೆ ಅಂಥವನೊಬ್ಬನ ‘ಹೇಳಿಕೆಗಳು’ ದೇಶಕ್ಕೆ ಅವಮಾನವೆಸಗಲು ಸಾಧ್ಯವಿಲ್ಲ. ನಿಜವಾಗಿಯೂ ಅವಮಾನ ಪಡಬೇಕಾದದ್ದು ಅಂಥ ಅತ್ಯಾಚಾರಿಗಳು ಈ ಮಣ್ಣಿನಲ್ಲಿ ಹುಟ್ಟುತ್ತಿದ್ದಾರೆ ಎಂಬುದಕ್ಕೆ.
ಇಷ್ಟಕ್ಕೂ ಅವಮಾನಕರವೆಂದಾದಲ್ಲಿ ಬಿಬಿಸಿ ವಾಹಿನಿಗೆ ೨೦೧೩ರಲ್ಲಿ ಅತ್ಯಾಚಾರಿಯೊಂದಿಗೆ ಸಂದರ್ಶನಕ್ಕೆ ಗೃಹಮಂತ್ರಿಗಳು ಅನುಮತಿ ನೀಡಿದ್ದೇಕೆ? ಕಾರ್ಯಕ್ರಮದ ವಿಷಯ ಆಕ್ಷೇಪಾರ್ಹವೆಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಆಗಲೇ ಹೊಳೆಯಲಿಲ್ಲವೇಕೆ?
ನಮ್ಮಲ್ಲಿ ಹೆಮ್ಮೆ ಪಡುವ ವಿಷಯಗಳೊಂದಿಗೆ ತಲೆ ತಗ್ಗಿಸುವ ಸಂಗತಿಗಳೂ ಸಾಕಷ್ಟಿವೆ. ಅದನ್ನು ತೋರಿಸಲು ಹೊರಟವರ ಬಾಯಿ ಮುಚ್ಚಿಸುವುದರಿಂದಾಗಿ ತಲೆ ಎತ್ತುವಂಥ ಸಂಗತಿಗಳೇನೂ ಘಟಿಸುವುದಿಲ್ಲ. ಸಮಸ್ಯೆಗಳೂ ಬಗೆಹರಿಯುವುದಿಲ್ಲ. ಇದ್ದುದನ್ನು ಒಪ್ಪಿಕೊಂಡು, ಅದನ್ನು ಬದಲಾಯಿಸುವತ್ತ ಚಿತ್ತ ಹರಿಸೋಣ.

ಕಾಮೆಂಟ್‌ಗಳಿಲ್ಲ: