ಪುಟಗಳು

22.3.15

sujet

ಸೂಜೆಟ್ ಕತ್ರೀನಾ ಜೊರ್ಡಾನ್- ಆಕೆ ಹಾಗೆಂದೇ ಎಲ್ಲರೂ ಅವಳನ್ನು ಗುರುತಿಸಬೇಕೆಂದು ಬಯಸಿದ್ದಳು. ಜೊತೆಗೆ ಒಬ್ಬ ತಾಯಿ, ತಂಗಿ, ಮಗಳಾಗಿ ನನ್ನ ಗುರುತಿಸಿ ಎಂದು ಗೋಗರೆದಿದ್ದಳು. ಆದರೆ ಆ ಗೋಗರೆತಕ್ಕೆ ಗೊರಕೆ ಹೊಡೆದ ಸಮಾಜ, ಕಡೆಗೂ ಅವಳನ್ನು ‘ಪಾರ್ಕ್ ಸ್ಟ್ರೀಟ್’ ಹೆಸರಿನಲ್ಲೇ ಕರೆದು, ಅವಳ ನೋವಿನ ಬೆಂಕಿಗೆ ತುಪ್ಪ ಸುರಿದು ಇಂಚಿಂಚಾಗಿ ಅವಳನ್ನು ಕೊಂದಿತು. ಒಬ್ಬ ಮಹಿಳೆಯ ಗೌರವ, ಮನುಷ್ಯಬದುಕಿನ ಘನತೆ ಗರಿಷ್ಠ ಎಷ್ಟು ಬಾರಿ ಅತ್ಯಾಚಾರಕ್ಕೊಳಗಾಗಬಹುದು ಎಂಬುದಕ್ಕೆ ಸೂಜೆಟ್ ಜೀವನವೇ ಒಂದು ವ್ಯಂಗ್ಯಚಿತ್ರ.
೪೦ ವರ್ಷದ ಸೂಜೆಟ್ ಶುಕ್ರವಾರ ಇಹಲೋಕ ವ್ಯಾಪಾರ ಮುಗಿಸಿದ್ದಾಳೆ. ಮೆನಿಂಜೋಸಿಫಲೈಟಿಸ್‌ಗೆ ಬಲಿಯಾದಳೆಂಬುದು ವೈದ್ಯರು ಬರೆದ ಶರಾ. ಆದರೆ ಆಕೆಯ ಸಾವಿನಲ್ಲಿ ಈ ಅಸ್ವಸ್ಥ ಸಮಾಜದ ಭಾಗವಾದ ನಮ್ಮೆಲ್ಲರ ಪಾಲಿದೆ ಎಂಬ ಸತ್ಯಕ್ಕೆ ತಲೆ ತಗ್ಗಿಸುವಷ್ಟಾದರೂ ಮಾನವೀಯತೆಯನ್ನು ಉಳಿಸಿಕೊಂಡಿದ್ದೇವೆಯೇ?
ದಿಟ್ಟತನಕ್ಕೆ ‘ಕೆಟ್ಟ’ ಪಟ್ಟ ಕಟ್ಟುವ ಸಮಾಜ ನಮ್ಮದು. ಆಕೆ ಪೋಲಿಪುಂಡರಿಗೆ ಹೊಡೆದರೆ ‘ಗಂಡುಬೀರಿ’, ಸಿಂಗಲ್ ಪೇರೆಂಟ್ ಆಗಿ ಅವಳ ಪಾಡಿಗೆ ಅವಳು ಸ್ವಾಭಿಮಾನದಿಂದ ಮಕ್ಕಳನ್ನು ಬೆಳೆಸುತ್ತಿದ್ದರೆ ‘ಗಂಡನ ಬಿಟ್ಟೋಳು, ಹೇಗೆ ಹಣ ಸಂಪಾದಿಸುತ್ತಾಳೋ’, ಅತ್ಯಾಚಾರವಾಗಿದೆ ನ್ಯಾಯ ಕೊಡಿಸಿ ಎಂದರೆ ‘ನೀನೇಕೆ ಅಷ್ಟೊತ್ತಿಗೆ ಕ್ಲಬ್ಬಿಗೆ ಹೋಗಿದ್ದೆ, ನಿನ್ನದೇ ತಪ್ಪು’, ನನ್ನ ತಪ್ಪಿಲ್ಲದ್ದಕ್ಕೆ ನಾನೇಕೆ ಗುರುತು ಮುಚ್ಚಿಟ್ಟುಕೊಂಡು ಓಡಾಡಬೇಕು ಎಂದರೆ ‘ಮಾನಗೆಟ್ಟವಳು’... ಹೆಣ್ಣಿನ ವಿಷಯದಲ್ಲಿ ವಿಷಯ ತಿಳಿಯದೆಯೂ ತೀರ್ಪು ಕೊಡುವ ಸ್ವಾತಂತ್ರ್ಯ ನಮ್ಮ ದೇಶದಲ್ಲಿ!
೨೦೧೨ ಫೆಬ್ರವರಿಯ ಒಂದು ರಾತ್ರಿ ೫ ಜನ ಕಾಮುಕಪಿಶಾಚಿಗಳು ಕಾರಿನಲ್ಲಿ ಸೂಜೆಟ್‌ಳನ್ನು ಬಳಸಿ, ರಸ್ತೆ ಬದಿ ಬಿಸಾಡಿ ಹೋಗಿದ್ದರು. ರಕ್ತಸಿಕ್ತಳಾಗಿದ್ದ ಆಕೆ ಅದಾಗಿ ಮೂರು ದಿನಗಳ ನಂತರ ಎಫ್‌ಐಆರ್ ದಾಖಲಿಸಲು ಪೊಲೀಸ್ ಸ್ಟೇಶನ್‌ಗೆ ಹೋದಳು. ‘ಕತೆ’ ಕೇಳಿದ ಪೊಲೀಸರು ಗಹಗಹಿಸಿ ನಕ್ಕರು, ‘ನಾವೂ ನೈಟ್‌ಕ್ಲಬ್‌ಗೆ ಹೋದರೆ ನಮಗೂ ಅದೃಷ್ಟ ಖುಲಾಯಿಸುತ್ತದೇನೋ, ಇದು ಅತ್ಯಾಚಾರವೇ ಅಂತ ಹೇಗೆ ಹೇಳ್ತೀಯಾ’ ಎಂದು ವ್ಯಂಗ್ಯವಾಡಿದರು. ಇವನ್ನೆಲ್ಲ ನಾವು ಸಿನಿಮಾಗಳಲ್ಲಿ ನೋಡಿರಬಹುದು. ಆದರೆ ಬದುಕು ಸಿನಿಮಾಗಿಂತ ಕ್ರೂರ. ಕೊನೆಗೂ ಎಫ್‌ಐಆರ್ ದಾಖಲಿಸಲು ಐದು ಗಂಟೆಗಳು ಆಕೆ ಪೊಲೀಸರ ‘ಮಾತಿನ ಅತ್ಯಾಚಾರ’ವನ್ನು ತಾಳಬೇಕಾಯಿತು.
ಇದಾಗಿ ೮ ದಿನಗಳ ನಂತರ(ಅಷ್ಟರಲ್ಲಿ ಸಾಕ್ಷ್ಯ ನಾಶವಾಗುವ ಎಲ್ಲ ಸಾಧ್ಯತೆಗಳಿತ್ತು?!) ಮೆಡಿಕಲ್ ಎಕ್ಸಾಮಿನೇಶನ್‌ಗೆ ಕರೆ ಬಂತು. ಇದು ಕಾಟಾಚಾರದ ತನಿಖೆ ಎಂಬುದಕ್ಕೆ ಇಷ್ಟು ಸಾಕಲ್ಲವೇ? ಅಲ್ಲಿ ನಾಲ್ವರು ಮಹಿಳಾ ಪೊಲೀಸರು, ಮೂವರು ವೈದ್ಯರು, ಒಬ್ಬರು ಅಸಿಸ್ಟೆಂಟ್ ಎದುರು ನಗ್ನವಾಗಿ ನಿಲ್ಲಿಸಿ, ಅವಳನ್ನು ಪರೀಕ್ಷೆ ಮಾಡಿ- ಅಂತೂ ‘ಪ್ರೈವೇಟ್ ಅಂಗಗಳಲ್ಲಿ ಗಾಯಗಳಿವೆ’ ಎಂದು ಬರೆದು ಅವಳ ದೂರಿಗೊಂದು ಸಾಕ್ಷ್ಯ ಒದಗಿಸಿದರು. ಆದರೆ ಮಹಿಳೆಯೊಬ್ಬಳನ್ನು ಅಷ್ಟು ಜನರೆದುರು ನಗ್ನ ನಿಲ್ಲಿಸುವಾಗ ಅವಳಿಗಾದ ಮಾನಸಿಕ ಘಾಸಿಗಳು ಅವರ ಪರೀಕ್ಷಾ ಫಲಿತಾಂಶದ ಲೆಕ್ಕಕ್ಕೆ ಸೇರಲಿಲ್ಲ ಬಿಡಿ.
ಅಷ್ಟೇ ಅಲ್ಲ, ನಂತರದ ಸರದಿ ಸರ್ಕಾರದ್ದು. ಮಮತಾ ಬ್ಯಾನರ್ಜಿ ಅವಳನ್ನು ‘ರಾಜ್ಯದ ಶತ್ರು’ ಎಂದು ಕರೆದಿದ್ದಲ್ಲದೆ, ‘ತೃಣಮೂಲ ಕಾಂಗ್ರೆಸ್ ಸರ್ಕಾರದ ಹೆಸರಿಗೆ ಕಳಂಕ ತರಲು ತನ್ನ ಅತ್ಯಾಚಾರದ ಬಗ್ಗೆ ಸುಳ್ಳು ಹೇಳುತ್ತಿದ್ದಾಳೆ. ಅವಳ ಗ್ರಾಹಕ ಸ್ವಲ್ಪ ರೂಡ್ ಆಗಿ ನಡೆದುಕೊಂಡಿದ್ದಾನಷ್ಟೆ’ ಎಂದು ಆರೋಪಿಸುವ ಮೂಲಕ ತನ್ನನ್ನು ‘ದೀದಿ’ ಎಂದು ನಂಬಿ ಬಂದವರಿಗೆ ಸರಿಯಾಗಿಯೇ ಮಾನಹಾನಿ ಮಾಡಿದ್ದರು.
ಇಷ್ಟೆಲ್ಲ ಆದ ಮೇಲೆ ತನ್ನದೂ ಒಂದು ಪಾಲಿರಲಿ ಎಂದು ಕೋರ್ಟ್ ಕೂಡಾ ಅವಳ ಬಗ್ಗೆ ತಿರಸ್ಕಾರ ಭಾವನೆಯಲ್ಲಿ ನಡೆದುಕೊಂಡಿತು. ಮಹಿಳಾ ನ್ಯಾಯಾಧೀಶೆ ಅವಳಿಗೊಂದು ಮನಸ್ಸಿದೆ ಎಂಬುದನ್ನು ಗ್ರಹಿಸಲೇ ಇಲ್ಲ. ಮತ್ತೆ ಮತ್ತೆ ಅತ್ಯಾಚಾರದ ವಿವರಣೆಯನ್ನು ಕೇಳಿ ಹೇಳಿಕೆಯಲ್ಲಿ ವ್ಯತ್ಯಾಸ ಕಾಣುವುದೇ ಎಂದು ಚೆಕ್ ಮಾಡಲಾಯಿತು. ಲಾಯರ್ ಕೋಲಿನ ತುದಿಯಲ್ಲಿ ಆಕೆ ಅತ್ಯಾಚಾರವಾದ ದಿನದಂದು ಧರಿಸಿದ್ದ ಒಳಉಡುಪನ್ನು ಪ್ರದರ್ಶಿಸಿ, ಇದೇನಾ ನೀವು ಅಂದು ಧರಿಸಿದ್ದು ಎಂದು ಕೇಳಿದಾಗ, ದುಃಖ ತಡೆಯಲಾಗದೆ ಬ್ರೇಕ್ ಕೊಡಿ ಎಂದರೂ ನ್ಯಾಯಾಧೀಶರು ನಿಶ್ಕರುಣಿಗಳಂತೆ ವರ್ತಿಸಿದ ಘಟನೆ ಆಕೆಯನ್ನು ಸಂಪೂರ್ಣ ಜರ್ಝರಿತಗೊಳಿಸಿತ್ತು. ಈ ಬಗ್ಗೆ ಅವಳು ನಾನು ಕೋರ್ಟ್‌ನಲ್ಲಿ ಮತ್ತೆ ಮತ್ತೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದೆ ಎಂದು ನೊಂದುಕೊಳ್ಳುತ್ತಿದ್ದಳು.
ಅಲ್ಲಿಗೇ ಮುಗಿಯಲಿಲ್ಲ ಅವಳ ಮೇಲಿನ ಮಾನಸಿಕ ಅತ್ಯಾಚಾರಗಳು, ಅತ್ಯಾಚಾರಕ್ಕೊಳಗಾದವಳು ಎಂಬ ಕಾರಣಕ್ಕೆ ರೆಸ್ಟೋರೆಂಟ್ ಒಳಗೆ ಆಕೆಯನ್ನು ಬಿಡಲಿಲ್ಲ. ದಾರಿಯಲ್ಲಿ ಹೋಗುತ್ತಿದ್ದರೆ ಪಾರ್ಕ್‌ಸ್ಟ್ರೀಟ್, ರೇಪ್ ಎಂಬ ಪದಗಳು ಜನರ ಬಾಯಿಂದ ಪದೇ ಪದೆ ಹೊರಟು, ಅವಳೊಂದು ಪ್ರಾಣಿಯೆಂಬಂತೆ ಜನ ನೋಡತೊಡಗಿದರು. ಪಾರ್ಟಿ ಅಟೆಂಡ್ ಮಾಡಲು ‘ರೇಟ್’ ಕೇಳತೊಡಗಿದರು. ಕೆಲಸ ಕೇಳಲು ಹೋದರೆ ಅತ್ಯಾಚಾರಕ್ಕೊಳಗಾದವಳಿಗೆ ಕೆಲಸ ಸಾಧ್ಯವಿಲ್ಲ ಎಂದಿದ್ದಷ್ಟೇ ಅಲ್ಲ, ಆಕೆಯ ಅಕ್ಕ, ಕುಟುಂಬದ ಸದಸ್ಯರು ಎಲ್ಲರೂ ಕೆಲಸ ವಂಚಿತರಾದರು. ಮೀಡಿಯಾಗಳಲ್ಲಿ ಅತ್ಯಾಚಾರಕ್ಕಿಂತ ಹೆಚ್ಚಾಗಿ ಮತ್ತೆ ಮತ್ತೆ ಅಂದು ರಾತ್ರಿ ಹೊರಗೆ ಹೋದದ್ದು ಅವಳ ತಪ್ಪೋ ಅಲ್ಲವೋ ಎಂಬ ಬಗ್ಗೆ ಚರ್ಚೆ ಆಯಿತು. ಮನೆಯ ದೂರವಾಣಿಗೆ ಅವಿರತ ಬ್ಲ್ಯಾಂಕ್‌ಕಾಲ್‌ಗಳು ಬರತೊಡಗಿದವು.
ತನ್ನ ತಪ್ಪಿಲ್ಲದೆಯೂ ಅತ್ಯಾಚಾರಕ್ಕೊಳಗಾದವಳು ಇಷ್ಟೆಲ್ಲ ದೂಷಣೆಗಳನ್ನು ಕೇಳುವಾಗ ಅತ್ತ ಅತ್ಯಾಚಾರಿಗಳಲ್ಲಿ ಇಬ್ಬರು ರಾಜಾರೋಷವಾಗಿ ಓಡಾಡಿಕೊಂಡು ಹಾಯಾಗಿದ್ದರು. ಇನ್ನು ಜೈಲು ಸೇರಿದ ಉಳಿದವರು, ಅಲ್ಲಿಂದಲೇ(!) ಸ್ಮಾರ್ಟ್‌ಫೋನ್ ಬಳಸಿ ಫೇಸ್‌ಬುಕ್‌ಗೆ ತಮ್ಮ ಬೈಸೆಪ್‌ಗಳ ಫೋಟೋ ಹಾಕಿ ನಾನು ವಿಲ್ಲನ್ ತರಾ ಕಾಣುತ್ತೇನಾ ಎಂದು ಕೇಳಿ ಒಂದಿಷ್ಟು ‘ಲೈಕ್’ಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾದರು!
ಅಬ್ಬಬ್ಬಾ! ೧೬, ೧೮ ವರ್ಷದ ಹೆಣ್ಣುಮಕ್ಕಳ ತಾಯಿಯೊಬ್ಬಳಿಗೆ ಇಷ್ಟೆಲ್ಲವನ್ನು ಕೇಳಿಕೊಂಡೂ ಎದುರಿಸುವ ಧೈರ್ಯ ಬಂದಿದ್ದಾದರೂ ಎಲ್ಲಿಂದ? ಆಕೆ ಮುದುರಿ ಕೂರಲಿಲ್ಲ. ಬದಲಿಗೆ ಕೂಗಿ ಹೇಳಿದಳು, ‘ನನ್ನ ತಪ್ಪಿಲ್ಲದಿರುವಾಗ ನಾನೇಕೆ ನನ್ನ ಐಡೆಂಟಿಟಿ ಮುಚ್ಚಿಡಲಿ? ನಾನು ಮಾಡದ ತಪ್ಪಿಗೆ ನಾನೇಕೆ ನಾಚಿಕೆ ಪಡಲಿ? ನಾನು ಹಿಂಸೆ ಹಾಗೂ ಅತ್ಯಾಚಾರಕ್ಕೊಳಗಾಗಿದ್ದೇನೆ. ಇದರ ವಿರುದ್ಧ ಹೋರಾಡುತ್ತೇನೆ’ ಎಂದು. ನಾನು ‘ಪಾರ್ಕ್ ಸ್ಟ್ರೀಟ್’ ಅಲ್ಲ, ನಾನು ಸೂಜೆಟ್ ಜೊರ್ಡಾನ್ ಎಂದು. ತನ್ನ ಹೆಸರನ್ನು ವಾಪಸ್ ಪಡೆಯುವುದಷ್ಟೇ ಅಲ್ಲ, ತನ್ನಂಥ ಇತರರ ಹೆಸರನ್ನೂ ಗಳಿಸಿಕೊಡಲು ಹೋರಾಡಿದಳು. ಸರಣಿ ಅತ್ಯಾಚಾರ ಹತ್ಯೆಗಳನ್ನು ಖಂಡಿಸಿ ಬೀದಿಗಿಳಿದಳು. ಅಬಲೆಯರಿಗೆ, ಗಂಡಸಿನ ಕೈಯ್ಯಲ್ಲಿ ನುಜ್ಜುಗುಜ್ಜಾದವರಿಗೆ ಸ್ವತಃ ಹೋಗಿ ಸಾಂತ್ವಾನ ಹೇಳಿದಳು. ಅವರಿಗಾಗಿ ಹೆಲ್ಪ್‌ಲೈನ್ ತೆರೆದಳು.
ಭಾರತದಲ್ಲೇ ೨೦೦೬ರಿಂದ ೨೦೧೧ರವರೆಗೆ ಎರಡನೇ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ೨೦೧೨ರಲ್ಲಿ ಈ ವಿಷಯದಲ್ಲಿ ನಂ.೧ ಪಟ್ಟ ತಲುಪಿದ ರಾಜ್ಯವೊಂದರ ಸಾಧನೆಯ ಹಿಂದಿನ ಗುಟ್ಟು ತಿಳಿಯಲು ಈ ಒಬ್ಬ ಹೆಣ್ಣುಮಗಳ ವಿಷಯದಲ್ಲಿ ಅದು ನಡೆದುಕೊಂಡ ರೀತಿಯೇ ಸಾಕಲ್ಲವೇ?
‘ಅವಳು ಹೋರಾಟಗಾರ್ತಿ. ಆದರೆ ಜನ ಅವಳ ಧೈರ್ಯವನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿದರು. ಅವಳಿಗೂ ಅಳಬೇಕಿತ್ತು, ದುಃಖ ತೋಡಿಕೊಳ್ಳಬೇಕಿತ್ತು. ಇನ್ನೊಬ್ಬರಿಗೆ ಮಾದರಿಯಾಗುವುದಕ್ಕಿಂತ ಹೆಚ್ಚಾಗಿ ತನ್ನನ್ನು ಮನುಷ್ಯಳಾಗಿ ಕಾಣಲಿ ಎಂಬ ಆಸೆಯಿತ್ತು. ಆದರೆ ಅವಳು ಕೇವಲ ಅತ್ಯಾಚಾರದ ಬಲಿಪಶುವಾಗದೆ, ಅದನ್ನು ವಿರೋಧಿಸಿದ್ದಕ್ಕಾಗಿ ವ್ಯವಸ್ಥೆಯ ಬಲಿಪಶುವಾದಳು’ ಎನ್ನುತ್ತಾನೆ ಆಕೆಯ ಆಪ್ತ ಗೆಳೆಯ. ಖಿನ್ನತೆಯೇ ಕಾಯಿಲೆಗಳನ್ನು ಆಹ್ವಾನಿಸುತ್ತದೆ. ಹಾಗೆಯೇ ಬಂದದ್ದು ಮೆನಿಂಜೋಸಿಫಲೈಟಿಸ್ ಕೂಡಾ. ಅಟ್‌ಲೀಸ್ಟ್, ನಾವವಳನ್ನು ಸಂತೋಷವಾಗಿ ಸಾಯಲೂ ಬಿಡಲಿಲ್ಲ.
ಅವಳ ಮೇಲೆ ಕೇವಲ ಕೆಲ ಪುಂಡಪೋಕರಿಗಳಲ್ಲ, ಸಮಾಜ, ಕಾನೂನು, ಸರ್ಕಾರ, ಮೀಡಿಯಾ, ಅವಳ ಕತೆಯನ್ನು ನಂಬದವರೆಲ್ಲರೂ ಅತ್ಯಾಚಾರವೆಸಗಿದ್ದಾರೆ. ಭಾರತ ಅತ್ಯಾಚಾರಕ್ಕೊಳಗಾದವರೆಡೆಗಿನ ತನ್ನ ಮನಸ್ಥಿತಿಯಿಂದಾಗಿ ಯಶಸ್ವಿಯಾಗಿ ಹೆಣ್ಣುಮಗಳೊಬ್ಬಳನ್ನೂ, ಅವಳ ಗೌರವವನ್ನೂ ಕೊಂದಿದೆ.

2 ಕಾಮೆಂಟ್‌ಗಳು:

Badarinath Palavalli ಹೇಳಿದರು...

ನಿಜವಾಗಿ ನಾವು ಸಭ್ಯ ಸಮಾಜದಲ್ಲಿದ್ದೇವೆಯೇ ಎಂಬ ಅನುಮಾನ ಪದೇ ಪದೇ ಕಾಡುವ ಅತ್ಯಾಚಾರ ಸುದ್ದಿಗಳು ನಮ್ಮನ್ನು ತಲೆ ತಗ್ಗಿಸುವಂತೆ ಮಾಡುತ್ತಿವೆ.

ಮೌನರಾಗ ಹೇಳಿದರು...

ರೇಶ್ಮಾ.. ತೂಕವುಳ್ಳ ಬರಹ.
ಎಂತಹ ಹೀನ ಮನಸ್ಥಿತಿಯ ಸಮಾಜದಲ್ಲಿ ನಾವಿದ್ದೇವೆ ಎಂದು ನಾಚಿಕೆಪಟ್ಟುಕೊಳ್ಳಬೇಕಿದೆ ನಾವೀಗ...