ಪುಟಗಳು

29.3.14

ಪೊಲೀಸ್ ಟಿಕ್ಸ್

cop ಆಡಿ cop ಆಡಿ
ಪೊಲೈಟ್ ಎನಿಸಿಕೊಂಡ ಪೊಲೀಸ್ ಆಫೀಸರುಗಳೆಲ್ಲಾ ಪೊಲಿಟಿಕ್ಸ್ನತ್ತ ಮುಖ ಮಾಡಿದರೆ ಪೋಲಿಗಳ ಜುಟ್ಟು ಹಿಡಿಯೋರ್ಯಾರು? ಖಾಕಿ ಹಾಕುತ್ತಿದ್ದವರೆಲ್ಲ ಟೈಡ್ ಪ್ಲಸ್ ಬಳಸುತ್ತಿದ್ದಾರೋ ಎಂಬಂತೆ ಬಿಳಿ ಖಾದಿ ಧರಿಸಿ ರಾಜಕೀಯ ರಂಗಕ್ಕೆ ಇಳಿಯುತ್ತಿದ್ದಾರೆ. ಗನ್ ಹಿಡಿಯುತ್ತಿದ್ದ ಕೈಯನ್ನು ಅಷ್ಟು ಸುಲಭವಾಗಿ ಹಿಡಿಯಲೊಪ್ಪದ ರಾಜಕೀಯರಂಗ, ಎಲ್ಲೋ ಮೂರು ಮತ್ತೊಬ್ಬರಿಗೆ ಮಾತ್ರ ಸಲ್ಯೂಟ್ ಹೊಡೆದಿದೆ. 
ಗಿರೀಶ್ ಮಟ್ಟಣ್ಣನವರ್
ಸದ್ಯ ಕಂಠೀರವ ಸ್ಟುಡಿಯೋದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿದ್ದವರು. ರಾಜಕೀಯದ ಭ್ರಷ್ಟ ವ್ಯವಸ್ಥೆ ನೋಡಿ ಹೇಸಿಗೆಪಟ್ಟು ವಿಧಾನಸೌಧಕ್ಕೇ ಬಾಂಬ್ ಇಡುವ ದುಸ್ಸಾಹಸಕ್ಕೆ ಕೈ ಹಾಕಿ ಸೋತ ಗಿರೀಶ್, ಭ್ರಷ್ಟ ವ್ಯವಸ್ಥೆ ಸರಿಪಡಿಸಲೆಂದೇ ಬಿಜೆಪಿ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.
ಬಿ.ಕೆ. ಶಿವರಾಂ
ಬೆಂಗಳೂರಿನ ಮಲ್ಲೇಶ್ವರಂನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದ ಬಿ.ಕೆ.ಶಿವರಾಂ ಐಪಿಎಸ್ ಅಧಿಕಾರಿಯಾಗಿದ್ದವರು. ವೃತ್ತಿಗೆ ಸ್ವಯಂನಿವೃತ್ತಿ ಘೋಷಿಸಿ ಅಣ್ಣ ಬಿ.ಕೆ.ಹರಿಪ್ರಸಾದ್ ಹಾದಿ ಹಿಡಿದು ರಾಜಕಾರಣಕ್ಕೆ ಧುಮುಕಿದರು. ಮಲ್ಲೇಶ್ವರಂನಲ್ಲಿ ಸೋಲಾಯಿತಾದರೂ ರಾಜಕಾರಣದಲ್ಲಿನ್ನೂ ಸಕ್ರಿಯವಾಗಿದ್ದಾರೆ.
ಶಂಕರ್ ಬಿದರಿ
ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಎಲ್ಟಿಟಿಇ ಮುಖಂಡರಾದ ಶುಭಾ, ಶಿವರಸನ್ ಹಿಡಿವಲ್ಲಿ ಪ್ರಮುಖ ಪಾತ್ರ ವಹಿಸಿ ತಮ್ಮ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ ಬಿದರಿಯವರು ಕಳೆದ ವರ್ಷ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುವ ಮೂಲಕ 30 ವರ್ಷಗಳ ತಮ್ಮ ಪೊಲೀಸ್ ಒಡನಾಟಕ್ಕೆ ಬೈಬೈ ಹೇಳಿದರು.
ಬಿ.ಸಿ.ಪಾಟೀಲ್
1979ರಲ್ಲಿ ಪೊಲೀಸ್ ಟ್ರೈನಿಂಗ್ ಪಡೆದ ಈ 'ಬಿಸಿ' ರಕ್ತದ ಯುವಕ ನಂತರ ಚಿತ್ರೋದ್ಯಮದಲ್ಲಿ ನೆಲೆ ಕಂಡುಕೊಂಡು ಕೌರವನಾಗಿ ರೌರವ ರೂಪದಿಂದಲೇ ಜನಮನ ಗೆದ್ದರು. ಹಲವಾರು ಯಶಸ್ವಿ ಚಿತ್ರಗಳನ್ನು ಕೊಟ್ಟ ಪಾಟೀಲ್, ಹಿರೇಕೆರೂರು ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಸಾಂಗ್ಲಿಯಾನ
ವಿಶೇಷ ಪೊಲೀಸ್ ಆಯುಕ್ತರಾಗಿದ್ದ ಮಿಜೋರಾಂ ಮೂಲದ ಸಾಂಗ್ಲಿಯಾನಾ ಅದೆಷ್ಟು ಖ್ಯಾತಿ ಗಳಿಸದ್ದರೆಂಬುದನ್ನು ಹೇಳಲು ಅವರ ಹೆಸರಿನಲ್ಲಿ ಬಂದ ಎರಡು ಕನ್ನಡ ಚಿತ್ರಗಳೇ ಸಾಕು. ಸಾಂಗ್ಲಿಯಾನಾರನ್ನು ಖ್ಯಾತಿಯೇ ರಾಜಕೀಯಕ್ಕೆ ಎಳೆತಂದಿತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಂಗ್ಲಿಯಾನಾ ಸಂಸದರಾಗಿ ಕಾರ್ಯ ನಿರ್ವಹಿಸಿದರು. ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅಬ್ದುಲ್ ಅಜೀಮ್
ಪ್ರಾಮಾಣಿಕತೆ ಹಾಗೂ ಶಿಸ್ತಿಗೆ ಹೆಸರಾದ, ಸಾಂಗ್ಲಿಯಾನ ಅವರಿಂದ 'ಬೆಂಗಳೂರಿನ ಶೆರ್ಲಾಕ್ ಹೋಮ್ಸ್' ಎಂದೇ ಕರೆಸಿಕೊಂಡಿದ್ದ ಮಾಜಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಅಬ್ದುಲ್ ಅಜೀಮ್, ಹೆಸರು ಕೊಟ್ಟ ಹುದ್ದೆ ಬಿಟ್ಟು 'ಹಸಿರು' ತೆನೆ ಹೊತ್ತದ್ದು 2004ರಲ್ಲಿ. 2006ರಲ್ಲಿ ಶಾಸನಮಂಡಳಿ ಸದಸ್ಯರಾಗಿ ಆಯ್ಕೆಯಾಗಿ 2013ರಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದರು.
ಕೆನಡಿ ಸಿ ಕಿರಿಮ್
ಮ್ಮ ಹೊಸ ಶೈಲಿಯ ಪ್ರಚಾರಗಳಿಂದ ಬಹುಮತ ಗಳಿಸಿ ಅದುವರೆಗೂ ಮೂರು ಬಾರಿ ಗೆದ್ದಿದ್ದ ಆಡಳಿತ ಪಕ್ಷದ ಎದುರಾಳಿಯನ್ನು ಸೋಲಿಸಿದ ಶಿಲ್ಲಾಂಗ್ನ ಮಾಜಿ ಪೊಲೀಸ್ ಅಧಿಕಾರಿ ಕಿರಿಮ್ ಗೆಲುವಿಗೆ ಸ್ವತಃ ಮುಖ್ಯಮಂತ್ರಿಯೇ ಆಶ್ಚರ್ಯಸಹಿತ ಮೆಚ್ಚುಗೆ ವ್ಯಕ್ತಪಡಿಸಿದ್ದರು. 
ಅಫ್ತಾಬ್ ಅಹ್ಮದ್ ಖಾನ್
ಮಹಾರಾಷ್ಟ್ರದ ಲೋಖಂಡ್ವಾಲಾ ಶೂಟ್ಔಟ್ನಿಂದ ಖ್ಯಾತರಾಗಿದ್ದ ದಕ್ಷ ಪೊಲೀಸ್ ಅಧಿಕಾರಿ ಅಫ್ತಾಬ್ ಅಹ್ಮದ್ಖಾನ್ರನ್ನೂ ಕೂಡಾ ರಾಜಕೀಯ ಅಯಸ್ಕಾಂತದಂತೆ ಸೆಳೆದಿದ್ದು 1990ರ ಹೊಸ್ತಿಲಲ್ಲಿ. ಸಮಾಜವಾದಿ ಪಕ್ಷದ ಮೂಲಕ ರಾಜಕೀಯಕ್ಕೆ ಬಂದು ನಂತರ ಜೆಡಿಎಸ್ಗೆ ಹಾರಿಕೊಂಡ ಅಫ್ತಾಬ್ ದಶಕಗಳ ಬಳಿಕ ರಾಜಕೀಯದಿಂದ ಹೊರಬಂದು ಸದ್ಯ ಖಾಸಗಿ ಭದ್ರತಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ.
ಸೋಮ್ ಪ್ರಕಾಶ್ ಸಿಂಗ್
ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಸ್ವಯಂನಿವೃತ್ತಿ ಘೋಷಿಸಿ, ಹಲವು ಧ್ಯೇಯಗಳೊಂದಿಗೆ 2010ರಲ್ಲಿ ಬಿಹಾರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಶಾಸಕರಾದ ಸೋಮ್ಪ್ರಕಾಶ್ ಸಿಂಗ್ ಸದ್ಯ ಭ್ರಮನಿರಸನಗೊಂಡು ಮತ್ತೆ ತಮ್ಮ ಹಿಂದಿನ ಹುದ್ದೆಗೆ ಮರಳುವ ಬಗ್ಗೆ ಯೋಚಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದಾಗ ಕೆಲವಾದರೂ ಭ್ರಷ್ಟರನ್ನು ಒಳತಳ್ಳುವ ಅಧಿಕಾರವಿತ್ತು. ಆದರೆ ಶಾಸಕನಾದ ಮೇಲೆ ಎಲ್ಲ ಭ್ರಷ್ಟಾಚಾರಗಳಿಗೆ ಸಾಕ್ಷಿಯಾಗಿಯೂ ಏನೂ ಮಾಡಲಾಗುತ್ತಿಲ್ಲ ಎಂಬುದು ಅವರ ಅಳಲು.
ಸುಶೀಲ್ ಕುಮಾರ್ ಸಂಭಾಜಿರಾವ್ ಶಿಂಧೆ
ಸದ್ಯ ಯುಪಿಎ ಸರ್ಕಾರದಲ್ಲಿ ಗೃಹಮಂತ್ರಿಯಾಗಿರುವ ಸುಶೀಲ್ಕುಮಾರ್ ಶಿಂಧೆ, ಮಹಾರಾಷ್ಟ್ರ ರಾಜ್ಯ ಪೊಲೀಸ್ ಬಳಗದಲ್ಲಿ ಕಾನ್ಸ್ಟೆಬಲ್ ಆಗಿ, ಸಬ್ಇನ್ಸ್ಪೆಕ್ಟರ್ ಆಗಿ, ಸಿಐಡಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು. ರಾಜಕಾರಣಕ್ಕೆ ಕಾಲಿಟ್ಟ ಪೊಲೀಸ್ ಅಧಿಕಾರಿಗಳಲ್ಲಿ ಉನ್ನತ ಸ್ಥಾನಕ್ಕೇರಿದ ಕೀರ್ತಿ ಇವರದು.
ಆರ್. ಚಕ್ರವರ್ತಿ ರಾಜಗೋಪಾಲಕೃಷ್ಣನ್
ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಗಿದ್ದ ಚಕ್ರವರ್ತಿ ಭ್ರಷ್ಟವಿರೋಧಿ ನೀತಿಗಳಿಂದ ಪ್ರಖ್ಯಾತರಾಗಿದ್ದವರು. ಹಾಗಾಗೇ ಆಮ್ ಆದ್ಮಿ ಪಕ್ಷದ ತತ್ವಗಳಿಗೆ ಮನಸೋತು ಆರು ತಿಂಗಳ ಹಿಂದಷ್ಟೇ ರಾಜಕೀಯಕ್ಕೆ ಬಂದ ಚಕ್ರವರ್ತಿ, ಇದೀಗ ಆಪ್ನ ತಿರುಪುರ ಲೋಕಸಭಾ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಇಣುಕು nota

First Published: 29 Mar 2014 02:00:00 AM IST
ಹಳೇ ವೋಟಾ, ಹೊಸ ನೋಟಾ..?
ಈ ಬಾರಿ ನೀವು ವೋಟ್ ಮಾಡುತ್ತೀರೋ, ನೋಟಾ ಅನ್ನುತ್ತೀರೋ? ಭಾರತದ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮತದಾರನ ಅಮೂಲ್ಯ ಮತದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲು ಮತಪಟ್ಟಿಯಲ್ಲಿ 'ಮೇಲಿನ ಆಯ್ಕೆಗಳಲ್ಲಿ ಯಾವುದೂ ಅಲ್ಲ' (none of the above- NOTA) ಎಂಬ ಆಯ್ಕೆ ನೀಡಿದೆ. ರಾಜಕೀಯ ಪಕ್ಷಗಳ ವಿರೋಧದ ನಡುವೆಯೂ ಸುಪ್ರೀಂ ಕೋರ್ಟ್ ಈ 'ನೋಟಾ' ಆಯ್ಕೆಗೆ ಸಮ್ಮತಿ ನೀಡಿದೆ. ಅಭ್ಯರ್ಥಿಗಳಲ್ಲಿ ಯಾರೂ ನನ್ನ ಮತ ಪಡೆಯುವ ಅರ್ಹತೆ ಹೊಂದಿಲ್ಲ, ನನ್ನ ಪ್ರತಿನಿಧಿಯಾಗಬಲ್ಲವ ಇವರ್ಯಾರೂ ಅಲ್ಲ ಎಂದು ಹೇಳುವ ಹಕ್ಕನ್ನು ಮತದಾರನಿಗೆ ನೀಡುವ ಮೂಲಕ ಪಕ್ಷಗಳಿಗೆ ಸ್ವಚ್ಛ ಅಭ್ಯರ್ಥಿಯನ್ನು ನಿಲ್ಲಿಸುವಲ್ಲಿ ಜವಾಬ್ದಾರಿ ಹೆಚ್ಚಿಸಿದೆ. ಆದರೆ ಭಾರತದಲ್ಲಿ ಈ ಆಯ್ಕೆ ಮೂಲಕ ಅಭ್ಯರ್ಥಿಯನ್ನು ತಿರಸ್ಕರಿಸಲಾಗುವುದಿಲ್ಲ. ಏಕೆಂದರೆ 'ಮೇಲಿನ ಆಯ್ಕೆಗಳಲ್ಲಿ ಯಾವುದೂ ಅಲ್ಲ' ಎಂಬ ನಮ್ಮ ಮತ ಮತದಾರನ ಮನಸ್ಸನ್ನು ತಿಳಿಯಲು ಮಾತ್ರವೇ ಹೊರತು ಎಣಿಕೆಗೊಳಪಡುವುದಿಲ್ಲ.
ಸದ್ಯದ ಸರ್ವೆಯ ಪ್ರಕಾರ, ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಬಹುದಾದ ಆಯ್ಕೆಯನ್ನು 2014ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಶೇ.1 ಮಂದಿ ಮತದಾರರು ಮಾತ್ರ ಬಳಸಿಕೊಳ್ಳಲಿದ್ದಾರೆ. ಇದಕ್ಕೆ ಈ ಆಯ್ಕೆಯ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲದಿರುವುದು ಮೊದಲ ಕಾರಣ. ಇದರಿಂದ ನಮ್ಮ ಒಂದೇ ಒಂದು ಮತ ಎಣಿಕೆಗಿಲ್ಲದೆ ವ್ಯರ್ಥವಾಗುತ್ತದೆ ಎಂಬುದು ಮತ್ತೊಂದು ಕಾರಣ. ಬೇರೆ ದೇಶಗಳಲ್ಲಾದರೆ ಹೆಚ್ಚು ಮಂದಿ ನೋಟಾ ಆಯ್ಕೆ ಬಳಸಿದರೆ ಮರುಚುನಾವಣೆ ನಡೆಯುತ್ತದೆ. ಆದರೆ ಭಾರತದಲ್ಲಿ ಇದು ಕೇವಲ ಅಂಕಿಅಂಶಗಳಿಗೆ ಸೀಮಿತವಾಗಿ ಕುಳಿತುಕೊಳ್ಳುತ್ತದೆ. ನೋಟಾ ಭಾರತದ ಚುನಾವಣೆಯ ಮೇಲೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲವಂತೆ. ಏಕೆಂದರೆ ಸರ್ವೆಗಳಲ್ಲಿ ನೋಟಾ ಬಳಸುತ್ತೇವೆಂದವರು ಒಂದು ವೇಳೆ ಈ ಆಯ್ಕೆಯೇ ಇಲ್ಲದಿದ್ದರೆ ಮತ ನೀಡುತ್ತಿದ್ದುದೇ ಅನುಮಾನ ಎನ್ನುತ್ತಾರೆ ವಿಶ್ಲೇಷಕರು.
ದೆಹಲಿ, ರಾಜಸ್ತಾನ, ಚತ್ತೀಸ್ಘಡ, ಮಧ್ಯಪ್ರದೇಶ ನಾಲ್ಕು ರಾಜ್ಯಗಳಲ್ಲಿ ನಡೆಸಿದ ಸರ್ವೆ ಹೇಳುವಂತೆ 115 ದಶಲಕ್ಷ ಜನರಲ್ಲಿ 1.67 ದಶಲಕ್ಷ ಜನರು ಮಾತ್ರ 'ನೋಟಾ' ಆಯ್ಕೆ ಬಳಸುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿ ಈ ಆಯ್ಕೆಯ ಬಗ್ಗೆ ಒಲವು ತೋರಿದವರ ಸಂಖ್ಯೆ ಶೇ.1ಕ್ಕಿಂತಲೂ ಕಡಿಮೆ. ದೆಹಲಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಹುಟ್ಟಿಕೊಂಡಿರುವ ಪಕ್ಷವೆಂಬಂತೆ ಆಪ್ ಬಿಂಬಿಸಿಕೊಂಡಿರುವುದರಿಂದ, ಆಪ್ಗೆ ನೀಡುವ ಮತವೇ ಉಳಿದ ಪಕ್ಷಗಳೆಡೆ ಮತದಾರರು ತಮ್ಮ ಸಿಟ್ಟನ್ನು ವ್ಯಕ್ತಪಡಿಸುವ ಬಗೆಯಾಗಿದೆ. ಹೀಗಾಗಿ ದೆಹಲಿಯಲ್ಲಿ ನೋಟಾ ಮತದಾರರು ಕಡಿಮೆ ಎನ್ನುವುದು ತಜ್ಞರ ವಿಶ್ಲೇಷಣೆ.
ಈ ನನ್ ಆಫ್ ದಿ ಎಬೌ ಆಯ್ಕೆ ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಜಾರಿಯಲ್ಲಿದ್ದು ಕೆಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ.
ಯುನೈಟೆಡ್ ಕಿಂಗ್ಡಮ್
2000, ನವೆಂಬರ್ನಲ್ಲಿ ಯುಕೆಯಲ್ಲಿ ನೋ ಕ್ಯಾಂಡಿಡೇಟ್ ಡಿಸರ್ವ್ಸ್ ಮೈ ವೋಟ್(ನನ್ನ ಮತ ಪಡೆದುಕೊಳ್ಳುವ ಅರ್ಹತೆ ಯಾವ ಅಭ್ಯರ್ಥಿಗೂ ಇಲ್ಲ) ಎಂಬ ಹೆಸರಿನಲ್ಲೇ ಹೊಸ ಪಕ್ಷವೊಂದು ಅಧಿಕೃತವಾಗಿ ಸೃಷ್ಟಿಯಾಯಿತು! ಈ ಪಕ್ಷದ ಮುಖ್ಯ ಉದ್ದೇಶ ದೇಶದಲ್ಲಿ ಗ್ರಾಮ ಮಟ್ಟದಿಂದ ದೇಶಮಟ್ಟದವರೆಗೆ ನಡೆವ ಪ್ರತೀ ಚುನಾವಣೆಯಲ್ಲೂ 'ನನ್ ಆಫ್ ದಿ ಎಬೌ' ಆಯ್ಕೆ ಅಳವಡಿಸಬೇಕೆಂಬುದಾಗಿತ್ತು! ಇನ್ನೊಂದು ಸ್ವಾರಸ್ಯವೆಂದರೆ 2010ರಲ್ಲಿ ಎರಿಕ್ ಮಚ್ ಎಂಬಾತ ತನ್ನ ಹೆಸರನ್ನು ಬದಲಿಸಿಕೊಂಡು 'ಜೀರೋ, ನನ್ ಆಫ್ ದಿ ಎಬೌ' ಎಂಬ ಹೆಸರಿನಲ್ಲಿ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದ. ಆ ಮೂಲಕವಾದರೂ ತನ್ನ ದೇಶದ ಮತದಾರರಿಗೆ 'ನನ್ ಆಫ್ ದಿ ಎಬೌ' ಆಯ್ಕೆ ನೀಡುವ ಉದ್ದೇಶ ಅವನದಾಗಿತ್ತು!
ಸೋವಿಯತ್ ಯೂನಿಯನ್
1991ರಲ್ಲಿ ಸೋವಿಯತ್ ಸಂಯುಕ್ತ ರಾಷ್ಟ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಜನತೆ ನೋಟಾ ಬಟನ್ ಒತ್ತಿದ್ದರಿಂದ ಕಮ್ಯೂನಿಸ್ಟ್ ಪಕ್ಷದ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಅನರ್ಹರೆಂದು ರಾಜಕೀಯ ಕ್ಷೇತ್ರದಿಂದ ಹೊರಹೋಗಬೇಕಾಯಿತು. ಅಲ್ಲದೆ ಮರುಚುನಾವಣೆ ನಡೆಯಲು ಕಾರಣವಾಯಿತು. ಈ ಮೂಲಕ ಪ್ರಜಾಪ್ರಭುತ್ವದ ಅರ್ಥ ಹೆಚ್ಚು ಕಳೆಗಟ್ಟಿತು.
ಸ್ಪೇನ್
ಇಲ್ಲಿನ ಮತನಿಯಮಗಳ ಪ್ರಕಾರ ಯಾವುದೇ ಅಭ್ಯರ್ಥಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ಖಾಲಿ ಬಾಕ್ಸ್ವೊಂದನ್ನು ಆಯ್ಕೆ ಮಾಡುವ ಅಧಿಕಾರ ಮತದಾರನಿಗಿದೆ. ಇಲ್ಲಿ ಖಾಲಿ ಬಾಕ್ಸ್ಗೆ ಬಿದ್ದ ಮತಗಳ ಸಂಖ್ಯೆ 5 ಶೇಕಡ ದಾಟಿದರೆ ಆ ಪಕ್ಷವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಅಲ್ಲದೆ ಹಾಗೆ ಮತದಾರರಿಂದ ತಿರಸ್ಕರಿಸಲ್ಪಟ್ಟ ಅಭ್ಯರ್ಥಿಗಳ ಸ್ಥಾನವನ್ನು ಮಂತ್ರಿಮಂಡಲದಲ್ಲೂ ಮರುಚುನಾವಣೆ ನಡೆವವರೆಗೆ ಖಾಲಿ ಬಿಡಲಾಗುತ್ತದೆ.
ಯುಎಸ್
ಅಮೆರಿಕ ಸಂಯುಕ್ತ ರಾಷ್ಟ್ರಗಳಲ್ಲಿ ನೆವಾಡ ರಾಜ್ಯದಲ್ಲಿ ಮಾತ್ರ 1978ರಿಂದಲೇ 'ನೋಟಾ' ಆಯ್ಕೆಯ ಅನುಕೂಲವಿದೆ. 1999ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನೋಟಾ ಬೇಕೆಂಬ ಕೂಗು ಕೇಳಿಬಂದು ಅದರ ಪ್ರಚಾರಕ್ಕಾಗಿ 987000 ಡಾಲರ್ಗಳನ್ನು ವ್ಯಯಿಸಲಾಯಿತಾದರೂ 2000ನೇ ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ಅಭ್ಯರ್ಥಿ ಅತ್ಯಧಿಕ ಮತ ಗಳಿಸುವ ಮೂಲಕ ನೋಟಾ ಮತದಾರರಿಂದಲೇ ತಿರಸ್ಕರಿಸಲ್ಪಟ್ಟಿತು.
ಬ್ರಿಟನ್
ಬ್ರಿಟನ್ ಸರ್ಕಾರ ಯಾವುದೇ ಪಕ್ಷಗಳೂ 'ನನ್ ಆಫ್ ದಿ ಎಬೌ' ಎಂಬ ಹೆಸರಿಟ್ಟುಕೊಳ್ಳುವಂತಿಲ್ಲವೆಂದು ಆದೇಶ ಹೊರಡಿಸಿತ್ತು. ಇದರಿಂದ ಕುಪಿತನಾದ ದೊಡ್ಡ ತಲೆಯ ಬ್ರಿಟಿಷ್ ವ್ಯಕ್ತಿಯೊಬ್ಬ 'ನನ್ ಆಫ್ ದಿ ಎಬೌ ಎಕ್ಸ್' ಎಂಬ ಹೆಸರಿನಲ್ಲಿ ಕಣಕ್ಕಿಳಿದಿದ್ದ. ಆ ಹೆಸರಿನಲ್ಲಿ ಪಕ್ಷವಿರಬಾರದೇ ಹೊರತೂ, ಅಭ್ಯರ್ಥಿ ಇರಬಾರದೆದೇನಿಲ್ಲವಲ್ಲ, ನನ್ನ ಹೆಸರಿನ ಆಯ್ಕೆಯ ಸ್ವಾತಂತ್ರ್ಯವನ್ನು ಜಾಹೀರುಗೊಳಿಸಲೋಸುಗವೇ ಹೀಗೆ ಚುನಾವಣೆಗೆ ನಿಂತಿದ್ದೇನೆ ಎಂದು ಸಾರಿದ್ದ. ಒಂದು ವೇಳೆ 'ನನ್ ಆಫ್ ದಿ ಎಬೌ'ಗೆ ಹೆಚ್ಚು ಮತ ಬಂದರೆ ಅವನು ಗೆಲ್ಲುತ್ತಿದ್ದನೋ, ಸೋಲುತ್ತಿದ್ದನೋ!?
ಪೋಲಂಡ್
1989ರ ಚುನಾವಣೆಯಲ್ಲಿ ಪೋಲೆಂಡ್ನಲ್ಲಿ ಕಮ್ಯೂನಿಸ್ಟ್ ಪಕ್ಷದಿಂದ ನಿಂತಿದ್ದ ಏಕೈಕ ಅಭ್ಯರ್ಥಿಯ ಹೆಸರನ್ನು ಮತದಾನದಂದು ಮತದಾರರೆಲ್ಲರೂ ಚಿತ್ತು ಹಾಕುವ ಮೂಲಕ ಅಂದಿನ ಪ್ರಧಾನಮಂತ್ರಿ ಹಾಗೂ ಪ್ರಮುಖ ಕಮ್ಯೂನಿಸ್ಟ್ ನೇತಾರರನ್ನು ಅಧಿಕಾರದಿಂದ ಕೆಳಗಿಳಿಸಿದರು.
-ರೇಶ್ಮಾರಾವ್ ಸೊನ್ಲೆ

27.3.14

ಕಣ್ಕಟ್ ಬಾಯ್ಕಟ್



First Published: 27 Mar 2014 02:00:00 AM IST
ಪವರ್ ಶಿರೋಮಣಿಯರ ಫ್ರೀ ಸ್ಟೈಲ್
ಅಧಿಕಾರದಲ್ಲಿರುವ ಮಹಿಳೆಯರೇಕೆ ಬಾಯ್ಕಟ್ಗೆ ಮೊರೆ ಹೋಗುತ್ತಾರೆ?ಮಹಿಳೆ ಎಂದರೆ ನೀಳ ಕೇಶರಾಶಿ, ಹಣೆಗೆ ಕುಂಕುಮ, ಕೈತುಂಬ ಬಳೆ, ಭೂಮಿಯೆಡೆಗೆ ನೋಟವಿಟ್ಟ ನಡಿಗೆ...ಹೀಗೆ ವರ್ಣಿಸಿ ವರ್ಣಿಸಿಯೇ ಆಕೆಯನ್ನು ಈ ಸ್ಟಿಗ್ಮಾಕ್ಕೆ ಅಂಟಿಸಿರುವುದು ಭಾರತೀಯ ಪುರುಷ ಪ್ರಧಾನ ಸಮಾಜ. ಇದರಲ್ಲಿ ತಮ್ಮ ಕಲ್ಪನೆಯ ಹುಡುಗಿಯನ್ನು ತೆರೆದಿಡುವುದರೊಂದಿಗೆ ಮಹಿಳೆಯರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳಬಾರದೆಂಬ ಧೋರಣೆಯೂ, ತಮ್ಮನ್ನು ಮೀರಿ ಬೆಳೆವ ಭಯವೂ ಪುರುಷರ ಕಳ್ಳ ಮನಸ್ಸಿನಲ್ಲಿ ಹುಳ್ಳಹುಳ್ಳಗೆ ಇರುತ್ತದೆ. ಇಂಥ ಬಹುಸಂಖ್ಯಾತ, ಬಲಾಢ್ಯ ಪುರುಷ ಜಾತಿಯ ಕಟ್ಟುಕಟ್ಟಳೆಗಳನ್ನು ಮೀರಲು ಸಹಜವಾಗಿಯೇ ಭಯವೂ, ಪುರುಷರ ಮೆಚ್ಚುಗೆ ಕಣ್ಗಳಿಂದ ದೂರವಾಗುವ ಆತಂಕವೂ ಮಹಿಳೆಯ ಆತ್ಮಕ್ಕೇ ಬೇಲಿ ಹಾಕಿರುತ್ತದೆ. 
ಇಂಥ ವಾತಾವರಣದಲ್ಲಿ ಈ ಬೇಲಿ ದಾಟುವ ಆಕೆಯ ಯಾವುದೇ ಸಣ್ಣ ಪ್ರಯತ್ನವೂ ಬಹುಶೀಘ್ರವಾಗಿ ಸಮಾಜದ ಗಮನ ಸೆಳೆಯಬಲ್ಲದು. ಹಾಗಾಗಿಯೇ ಅಧಿಕಾರಯುತ ಮಹಿಳೆಯ ಬಾಯ್ಕಟ್ ಆಕೆಯ ವ್ಯಕ್ತಿತ್ವವನ್ನೇ ಬದಲಿಸಬಲ್ಲದು. ಒಬ್ಬಳು ಮಧ್ಯವಯಸ್ಸಿನ ಮಹಿಳೆ ಬಾಯ್ಕಟ್ ಮಾಡಿಕೊಂಡಿದ್ದಾಳೆಂದರೆ ಓದಿದವಳು, ದಿಟ್ಟೆ, ಅಧಿಕಾರಯುತಸ್ಥಾನದಲ್ಲಿರಬೇಕು.. ಇತ್ಯಾದಿ ಊಹೆಗಳು ನೋಡುವವರ ಕಣ್ಗಳಲ್ಲಿ ಆಕೆಯ ತೂಕವನ್ನು ಹೆಚ್ಚಿಸುತ್ತವೆ. (ತೀರ್ಥಕ್ಷೇತ್ರಗಳಲ್ಲಿ ಕಾಣಸಿಗುವವರನ್ನು ಹೊರತುಪಡಿಸಿ) ಆದ್ದರಿಂದಲೇ ಬಹುತೇಕ ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರು ಬಾಯ್ಕಟ್ ಮೊರೆ ಹೋಗುತ್ತಾರೆ. 
ಇಂದಿರಾ ಗಾಂಧಿ
50ರ ದಶಕದಲ್ಲಿ ಮಧ್ಯೆ ಬೈತಲೆ ತೆಗೆದು ಸಣ್ಣ ಜುಟ್ಟು ಕಟ್ಟಿ ಪಾರ್ಲಿಮೆಂಟ್ಗೆ ಹಾಜರಾಗುತ್ತಿದ್ದ ಇಂಧಿರಾ ಗಾಂಧಿ 60ರ ದಶಕಕ್ಕೆ ಕಾಲಿಡುತ್ತಿದ್ದಂತೆ ಬೊಫ್ಯಾಂಟಿಶ್ ಸ್ಟೈಲ್(ಬಾಯ್ಕಟ್)ಗೆ ಮೊರೆ ಹೋದರು. ಮಹಿಳೆಯನ್ನು ಸದಾ ಮನೆಯೊಳಗಡಗಿಸುವ ಸಂಸ್ಕೃತಿ ಹೊತ್ತಿದ್ದ ಭಾರತದ ತೊಟ್ಟಿಲು ತೂಗುವ ಕೈ ತನ್ನ ಹುಡುಗರ ಶೈಲಿಯ ಕೇಶರಾಶಿಯ ಮೇಲೆ ಕೈಯಾಡಿಸುತ್ತಿದ್ದರೆ ಅಧಿಕಾರಯುತ ಪುರುಷ ಪುಂಗವರು ಇವರ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದರು! ತಂದೆಯಿಂದಲೇ ಫ್ಯಾಷನ್ ಪ್ರೀತಿಯನ್ನು ಎರವಲು ಪಡೆದಿದ್ದ ಇಂದಿರಾ ತಲೆ ಸಂಪೂರ್ಣ ಬೆಳ್ಳಗಾಗತೊಡಗಿದಾಗ ಪ್ಯಾರಿಸ್ಗೆ ಹಾರಿ ಒಂದೆಳೆಯನ್ನು ಬಿಳಿಯಾಗಿಯೇ ಬಿಟ್ಟು ಉಳಿದ ಕೂದಲನ್ನು ಕಪ್ಪಾಗಿಸಿಕೊಂಡು ಬಂದಿದ್ದರು. ಮಹಿಳೆಯ ಈ ವಿಶಿಷ್ಟ ಕೇಶಶೈಲಿಗೆ ಭಾರತ ಸಾಕ್ಷಿಯಾದದ್ದು ಅದೇ ಮೊದಲಿರಬೇಕು. ತುರ್ತು ಸಂದರ್ಭದಲ್ಲಿ ಇಂದಿರಾ ತಲೆಯ ಅರ್ಧಬಿಳಿ, ಅರ್ಧ ಕಪ್ಪು ಕೂದಲು ಆಕೆಯ ವಿಕೃತ ಮನಸ್ಸಿನ ಕುರೂಪವೆಂದು ವಿಶೇಷ ಅರ್ಥ ಪಡೆದುಕೊಂಡಿದ್ದು ಸಹ ಗಮನಾರ್ಹ.
ಮಾಯಾವತಿ
ಸಮಾಜವಾದಿ ಪಕ್ಷದ ನೇತಾರೆ, ಭಾರತದ ಮೊದಲ ಮಹಿಳಾ ದಲಿತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯ ಮಾಯಾವತಿ ವ್ಯಕ್ತಿತ್ವಕ್ಕೆ ಕೂಡಾ ಆಕೆಯ ಬಾಯ್ಕಟ್ ಹೇರ್ಸ್ಟೆ ೈಲ್ ವಿಶಿಷ್ಟ ದಿಟ್ಟತನವನ್ನೊದಗಿಸಿಕೊಟ್ಟಿದೆ. 2 ಬಾರಿ ಮುಖ್ಯಮಂತ್ರಿಯಾದಾಗಲೂ ಎಣ್ಣೆ ತೀಡಿ ಜೆಡೆ ಹೆಣೆದುಕೊಂಡು ಬರುತ್ತಿದ್ದ ಮಾಯಾ, 3ನೇ ಬಾರಿಗೆ ಮುಖ್ಯಮಂತ್ರಿಯಾಗುವಾಗ ಅವರ ಜಡೆಯೂ ಮಾಯ! 'ದಲಿತ' ಎಂಬ ಪಟ್ಟದಿಂದ ಹೊರಬಂದು ಮೇಲ್ವರ್ಗದವರೊಂದಿಗೆ ತನ್ನನ್ನು ತಾನು ಸಮೀಕರಿಸಿಕೊಳ್ಳಲು ಮಾಯಾವತಿಗೆ ಈ ಹೇರ್ಸ್ಟೈಲ್ ಮಹತ್ವದ್ದೆಂದೆನಿಸಿರಬಹುದು.
ಪ್ರಿಯಾಂಕ ಗಾಂಧಿ
ರಾಜಕೀಯ ಅಖಾಡಕ್ಕಿಳಿಯದಿದ್ದರೂ ನೆಹರೂ ಕುಟುಂಬದ ಕುಡಿಯಾಗಿದ್ದರಿಂದ ರಾಜಕೀಯವಾಗಿ ಗುರುತಿಸಿಕೊಂಡಿರುವವರು ಪ್ರಿಯಾಂಕ ಗಾಂಧಿ. ಈಕೆ ಮೊದಲಿಂದಲೂ ತನ್ನ ಅಜ್ಜಿಯ ಕೇಶಶೈಲಿಯನ್ನೇ ನೆಚ್ಚಿಕೊಂಡು ಬಂದವರು. ಆದರೂ ಈ ಫ್ಯಾಷನ್'ಪ್ರಿಯೆ'ಯ ಕೇಶಶೈಲಿ ಸದ್ದು ಮಾಡಿದ್ದು 2011ರಲ್ಲಿ. 40ರ ಹೊಸ್ತಿಲಲ್ಲಿದ್ದ ಪ್ರಿಯಾಂಕಳ ಕೇಶಶೈಲಿಯನ್ನು 20-25ರ ಯುವತಿಯರು ಟ್ರೆಂಡ್ ಆಗಿ ಸ್ವೀಕರಿಸಿ ಅನುಕರಿಸತೊಡಗಿದ್ದರು.
ಗೀತಾ ಶಿವರಾಜ್ ಕುಮಾರ್
ದೀಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ, ರಾಜ್ ಕುಟುಂಬದ ಗೀತಾ ಶಿವರಾಜ್ಕುಮಾರ್ ಕೂಡಾ ಬಾಯ್ಕಟ್ನೊಂದಿಗೇ ರಾಜಕೀಯ ಪ್ರವೇಶಿಸಿದ್ದು, ಈ ಹೇರ್ಸ್ಟೈಲ್ ಆಕೆಯ ರಾಜಕೀಯ ಜೀವನದಲ್ಲಿ ಯಾವ ಪಾತ್ರ ವಹಿಸಲಿದೆ ಕಾದು ನೋಡಬೇಕಿದೆ.
ಕಿರಣ್ ಬೇಡಿ
ರಾಜಕೀಯದ ಗಾಳಿಯನ್ನು ಹತ್ತಿರದಿಂದ ಸೇವಿಸಿ ಅದು ಕಾರುವ ವಿಷಕ್ಕೆ ಭಯಗೊಂಡು ದೂರ ಓಡಿದ ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ ಆಫೀಸರ್ ಕಿರಣ್ ಬೇಡಿ ವ್ಯಕ್ತಿತ್ವಕ್ಕೆ ವಿಶೇಷಣಗಳು ಅಂಟಿದ ದಿನದಿಂದಲೂ ಬಾಯ್ಕಟ್ ಆಕೆಯ ಬಾಯ್ಫ್ರೆಂಡ್ನ ಹಾಗೆ ಜೊತೆಗೇ ಇದೆ.
ಪ್ರಿಯಾದತ್
ಸುನೀಲ್ದತ್ ಮತ್ತು ನರ್ಗೀಸ್ ಪುತ್ರಿ ಪ್ರಿಯಾ ದತ್ ರಾಜಕೀಯ ಅಖಾಡಕ್ಕಿಳಿದ ಕೆಲ ಸಮಯ ಬಾಯ್ಕಟ್ಗೆ ಮೊರೆ ಹೋದದ್ದು ಮತ್ತೊಮ್ಮೆ ರಾಜಕೀಯಕ್ಕೂ ಮಹಿಳೆಯ ಬಾಯ್ಕಟ್ಗೂ ಇರುವ ಸಂಬಂಧವನ್ನು ಪುಷ್ಟೀಕರಿಸುತ್ತದೆ.
ಮಾರ್ಗರೆಟ್ ಹಿಲ್ಡಾ ಥ್ಯಾಚರ್
ತಿ ಹೆಚ್ಚು ಕಾಲ ಬ್ರಿಟಿಷ್ ಪ್ರೈಮ್ ಮಿನಿಸ್ಟರ್ ಆಗಿದ್ದ ಮಾರ್ಗರೆಟ್ ಹಿಲ್ಡಾ ಥ್ಯಾಚರ್ ಕೂಡಾ ಕೆಂಪುಕೂದಲನ್ನು ಹೊರತುಪಡಿಸಿದರೆ ನಮ್ಮ ಇಂದಿರಾ ಗಾಂಧಿಯದೇ ಎನಿಸುವ ಹೇರ್ಸ್ಟೈಲ್ ಹೊಂದಿದ್ದರು. ಅದು ಈ ಉಕ್ಕಿನ ಮಹಿಳೆಯ ನಾಯಕತ್ವದ ವರ್ಚಸ್ಸನ್ನು ಹೆಚ್ಚಿಸಿತ್ತು.
ಹಿಲರಿ ಕ್ಲಿಂಟನ್
ಅಮೆರಿಕ ಸಂಯುಕ್ತ ಸಂಸ್ಥಾನದ ಕಾರ್ಯದರ್ಶಿಯಾಗಿ ಉತ್ತಮ ಹೆಸರು ಮಾಡಿರುವ, ಅಮೆರಿಕದ ಅತ್ಯುತ್ಕೃಷ್ಟ ವಕೀಲೆ ಎಂಬ ಖ್ಯಾತಿವೆತ್ತ ಹಿಲರಿ ಕ್ಲಿಂಟನ್ಗೆ ಕೂಡಾ ಬಾಯ್ಕಟ್ ವಿಶಿಷ್ಟ ಮೆರುಗು ನೀಡಿದೆ.
ಮಿಶೆಲ್ ಒಬಾಮ
ಅಮೆರಿಕ ಅಧ್ಯಕ್ಷ ಒಬಾಮ ಪತ್ನಿ ಸ್ವತಃ ವಕೀಲೆ ಮತ್ತು ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಮಿಶೆಲ್ ಬಾಯ್ಕಟ್ಗೆ ಸಮೀಪದ ಎಲ್ಲ ಹೇರ್ಸ್ಟೈಲ್ಗಳನ್ನು ತನ್ನ ಮೇಲೇ ಪ್ರಯೋಗಿಸಿಕೊಂಡು ನೋಡುಗರ ಗಮನ ಸೆಳೆಯುತ್ತಾರೆ.

1.3.14

ಟಿಪಿಕಲ್ ಸಿಂಹ

ಅದು 1992. ಅಪಘಾತದಲ್ಲಿ ಕಾಲಿಗೆ ತೀವ್ರ ಸುಟ್ಟ ಏಟಾಗಿ ಸಿ.ಆರ್.ಸಿಂಹ ಎಂಬ ಚೈತನ್ಯ ಹಾಸಿಗೆಯಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯವಿತ್ತು. ಅಷ್ಟೇ ಅಲ್ಲ, ಅವರು ಮತ್ತೆ ಚೇತರಿಸಿಕೊಳ್ಳುವ ಭರವಸೆ ಕೊಡಲು ವೈದ್ಯರು ಧೈರ್ಯ ಮಾಡಲಿಲ್ಲ. ಹೀಗಾಗಿ ಖಿನ್ನತೆಗೊಳಗಾದ ಸಿಂಹ ಅದರಿಂದ ಹೊರ ಬರುವ ಪ್ರಯತ್ನವಾಗಿ ಕುವೆಂಪು ಸಾಹಿತ್ಯದ ಮೊರೆ ಹೊಕ್ಕರು. ಅಂದಿನಿಂದ ಅವರ ಬದುಕಿನಲ್ಲಿ ಕುವೆಂಪು ಹಾಸುಹೊಕ್ಕಾದರು. 
ಎದ್ದು ಓಡಾಡುವಂತಾದ ಕೂಡಲೇ ಕುವೆಂಪುರನ್ನು ಭೇಟಿಯಾಗಲು ಯತ್ನಿಸಿ ಕೊನೆಗೂ ಸಾಹಿತ್ಯದ ಮೂಲಕವೇ ಅವರನ್ನು ಗ್ರಹಿಸಿ, ಸಿಂಹ ಅವರೇ ಬರೆದು ನಿರ್ದೇಶಿಸಿ ರಂಗದ ಮೇಲೆ 'ರಸಋಷಿ ಕುವೆಂಪು'ವಿನ ಮುಖಕ್ಕೆ ಬೆಳಕು ಹಾಯಿಸೇ ಬಿಟ್ಟರು. ಆ ಬೆಳಕು, ನೋಡಲು ಕುಪ್ಪಳಿಯ ಪುಟ್ಟಪ್ಪನ ದೇಹಾಕಾರಕ್ಕೆ ಹೊಂದುತ್ತಿದ್ದ ಕುವೆಂಪು ಪಾತ್ರಾಧಾರಿ ಸಿಂಹರ ಮುಖದ ಮೇಲೆ 100ಕ್ಕೂ ಹೆಚ್ಚು ಬಾರಿ ಬಿದ್ದು ಅಭೂತಪೂರ್ವ ಯಶಸ್ಸು ತಂದುಕೊಟ್ಟಿತು. ಕುವೆಂಪು ಬದುಕಿದ್ದಾಗಲೇ ಈ ರಂಗಪ್ರಯೋಗವಾಯಿತಾದರೂ ಅನಾರೋಗ್ಯದಿಂದಾಗಿ ಕುವೆಂಪು ನಾಟಕ ನೋಡಲಾಗಲಿಲ್ಲ.
c.r. shima photosತಮ್ಮ ಭಾಷಣಗಳಲ್ಲೆಲ್ಲ ಕುವೆಂಪುವಿನ ಕತೆ, ಕವಿತೆ, ಕಾದಂಬರಿಯ ಸಾಲುಗಳನ್ನು ಅನಾಯಾಸವಾಗಿ ಉದುರಿಸುತ್ತಿದ್ದ ಸಿಂಹ ಈ ಬಹುಮುಖಿ ವ್ಯಕ್ತಿತ್ವದೆಡೆಗೆ ಅದೆಷ್ಟು ಆಕರ್ಷಿತರಾಗಿದ್ದರೆಂದರೆ ತಮ್ಮ ಎಂಟರ್‌ಪ್ರೈಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ರಸಋಷಿ ಕುವೆಂಪು ಎಂಬ ಚಲನಚಿತ್ರವನ್ನೂ ತಂದರು. ತಮ್ಮ ಮಗ ಋತ್ವಿಕ್ ನಿರ್ದೇಶಿಸಿದ ಈ ಚಿತ್ರದಲ್ಲೂ ತಾವೇ ಕುವೆಂಪುವಿನ ಪಾತ್ರಧಾರಿಯಾದರು. ಆದರೆ ಅವರೆಲ್ಲೂ ಅಭಿನಯಿಸಲಿಲ್ಲ. ಅವರೇ  ಹೇಳುವಂತೆ ಕುವೆಂಪುವೇ ಆಗಬೇಕಾದ ಅದಮ್ಯ ಆಸೆ ಹಾಗು ಅನಿವಾರ್ಯತೆ ಇತ್ತು. 
ರಂಗಗಾಥೆ
1942ರಲ್ಲಿ ಹುಟ್ಟಿದ ಸಿಂಹ 12ನೇ ವಯಸ್ಸಿಗೇ ವೇದಿಕೆ ಏರಿದವರು. ಬಸವನಗುಡಿಯ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿ ಹಾಗೂ ಹಳೆ ವಿದ್ಯಾರ್ಥಿಯಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ತಮ್ಮ ಮೂವತ್ತನೇ ವಯಸ್ಸಿನಲ್ಲಿ ಗೆಳೆಯರನ್ನೆಲ್ಲ ಸೇರಿಸಿಕೊಂಡು 'ನಟರಂಗ' ಎಂಬ ರಂಗಸಂಸ್ಥೆಯೊಂದನ್ನು ಹುಟ್ಟುಹಾಕಿದರು. ಕಾಕನಕೋಟೆ, ತಲೆದಂಡ, ತುಘಲಕ್, ಸಂಕ್ರಾಂತಿ ಮುಂತಾದ ನಾಟಕಗಳ ಪ್ರಖ್ಯಾತಿಗೆ ನಿರ್ದೇಶಕ ಮತ್ತು ನಟನಾಗಿ ಓನಾಮ ಹಾಕುತ್ತಲೇ ಸಾಗಿದರು. 30ಕ್ಕೂ ಹೆಚ್ಚು ವರ್ಷ ತುಘಲಕ್ ಆಗಿ ರಂಗದರ್ಬಾರು ಮೆರೆಸಿದ ಹೆಗ್ಗಳಿಕೆ ಸಿಂಹ ಅವರದ್ದು.
ಸಿನಿಮಾರಂಗದಿಂದ ತಮ್ಮನ್ನು ಗುರುತಿಸುವವರ ಸಂಖ್ಯೆ ಹೆಚ್ಚಿದ್ದರೂ ರಂಗಭೂಮಿಯನ್ನೇ ಕರ್ಮಭೂಮಿ, ಧರ್ಮಭೂಮಿ ಎಂದು ಭಾವಿಸಿದ ಸಿಂಹ 1983ರಲ್ಲಿ ಮತ್ತೊಂದು ರಂಗಗುಂಪು 'ವೇದಿಕೆ' ಹುಟ್ಟು ಹಾಕಿದರು. ಏಕವ್ಯಕ್ತಿ ಪ್ರದರ್ಶಕರಾಗಿ 'ಟಿಪಿಕಲ್ ಟಿ.ಪಿ.ಕೈಲಾಸಂ'ನ್ನು ಅಮೆರಿಕ, ಕೆನಡ, ಇಂಗ್ಲೆಂಡ್ ಮತ್ತಿತರೆ ವಿದೇಶಿ ನೆಲಕ್ಕೂ ಕೊಂಡೊಯ್ದದ್ದು ನಮ್ಮ ರಂಗಭೂಮಿಗೆ ದೊಡ್ಡ ಮಟ್ಟದ ಯಶಸ್ಸೇ.
'ವೇದಿಕೆ' ಮೀಸೆ ಬಂದೋರು, ಕರ್ಣ, ಭೈರವಿ, ಕೋಲ್ಮಿಂಚು, ಅಗ್ನಿ ಮತ್ತು ಮಳೆ ಸೇರಿದಂತೆ ಹಲವಾರು ಹೊಸ ನಾಟಕಗಳಿಗೆ ವೇದಿಕೆಯಾಗಿ 'ಸಿಂಹ'ಘರ್ಜನೆ ಜೋರಾಗೇ ಮೊಳಗಿತು.
ಕೊರಗು 
ಸಿ.ಆರ್. ಸಿಂಹ ತಮ್ಮ ಇತ್ತೀಚಿನ ಭಾಷಣಗಳಲ್ಲಿ ರಂಗಭೂಮಿ ಕಲಾವಿದರ ಹರಸಾಹಸದ ಹೊರತಾಗಿಯೂ ಜನ ರಂಗಭೂಮಿಯಿಂದ ದೂರ ಸರಿಯುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು. ಎಪ್ಪತ್ತು ಎಂಬತ್ತರ ದಶಕದಲ್ಲಿ ನಾಟಕ ನೋಡಲು ಬಂದು ರಂಗಭೂಮಿಯ ಸೀಟುಗಳಿಗೆ ತುಂಬಿ 'ತುಳುಕಿ' ಮರುಪ್ರದರ್ಶನಕ್ಕಾಗಿ ಹಾತೊರೆಯುತ್ತಿದ್ದ ಮಂದಿ ತ್ತೊಂಬತ್ತರಿಂದೀಚೆಗೆ ಕಳೆದು ಹೋಗಿರುವ ವಿಷಾದ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕ್ರಮಗಳನ್ನು ಸೂಚಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗದ ಹತಾಶೆ ಬಗ್ಗೆ ಹೇಳಿಕೊಳ್ಳುತ್ತಿದ್ದರು.
ವಯಸ್ಸು ಸಿಂಹದ ಬೇಟೆಯಾಡಿ ಆರ್ಭಟಕ್ಕೆ ಅಂತ್ಯ ಹಾಡಿದೆ. ಆದರೆ ಅಭಿಮಾನಿಗಳ ನೆನಪಿನ ಕಾಡೊಳಗೆ ಸಿಂಹದ ಓಡಾಟ ಗಾಂಭೀರ್ಯದೊಂದಿಗೆ ನಡೆದೇ ಇದೆ.
ರೇಶ್ಮಾ ರಾವ್ ಸೊನ್ಲೆ