ಪುಟಗಳು

31.12.13

ಖಾಲಿ ಮನದಲ್ಲಿ ಮಗುಚಿದ ಕ್ಯಾಲೆಂಡರ್


ನನ್ನ ಆತ್ಮಸಾಕ್ಷಿ ನನ್ನ ತಲೆಗೆರಡು ಮೊಟಕಿ ಅವರಿದ್ದಲ್ಲಿಗೆ ನಡೆದೇ ಬಿಟ್ಟಿತ್ತು. ತಗ್ಗಿಸಿದ ತಲೆ ಎತ್ತಲಾಗಲಿಲ್ಲ. ಯಾವಾಗಲೂ ಹೀಗೆ. ಅವರು ಕಂಡರೆ ಸಾಕು, ನನ್ನಾತ್ಮಸಾಕ್ಷಿಯೇ ರೂಪವೆತ್ತಿ ಬಂದಂತೆ. ಪಾಪಪ್ರಜ್ಞೆ ಕಾಲು ನೀವಿಕೊಳ್ಳುತ್ತಾ ಎದುರು ಬಂದು ಕುಳಿತುಬಿಡುತ್ತದೆ. ತಪ್ಪಿತಸ್ಥ ಕಂಗಳು ದೃಷ್ಟಿ ತಪ್ಪಿಸುತ್ತವೆ. 
ಆಗಬೇಕಾದ್ದೇ. ಅವರ ನಿರೀಕ್ಷೆಗಳಿಗೆ ತಣ್ಣೀರೆರಚಿ ನನ್ನ ಮುಖಕ್ಕೆ ಮಸಿ ಬಳಿದು ಕುಳಿತುಕೊಂಡಿದ್ದು ತಪ್ಪಲ್ಲವೇ? ಆದರೆ ಅವರ ಆ ಬೆಟ್ಟದಷ್ಟು ಪ್ರೀತಿಯನ್ನೂ, ಅದರ ಮೈದಡವಿಕೊಂಡು ಭೋರ್ಗರೆವ ನಿರೀಕ್ಷೆಯ ಭಾರವನ್ನೂ ಹೊರುವ ಶಕ್ತಿ ನನ್ನಲ್ಲಿತ್ತೇ? ಬರೆಯಲಾಗದ ನೋವು ಬದುಕು ಬರಡಾಗಿಸಿದೆ. 
ಖಿನ್ನತೆಯ ಮೆಟ್ಟಿಲುಗಳು ಇವತ್ತು ಹತ್ತಿಸಿದರೆ ನಾಳೆ ಇಳಿಸುತ್ತವೆ. ಜೀವಕ್ಕೆ ಅಂಟಿಕೊಂಡೇ ಸಾಗುವ ಈ ವಿಚಿತ್ರ ಬರಡುಭಾವ ಎಂಥ ಬಿಸಿಲಿಗೂ, ಹೊಡೆದು ಬೀಸುವ ಗಾಳಿಗೂ ಬತ್ತುತ್ತಿಲ್ಲವೇಕೆ? ಪ್ರೀತಿಯ ಗೊಂದಲ, ಮನಸ್ಸು ಸದಾ ಚಂಚಲ, ಈ ನಡುವೆ ಸುಖಾಸುಮ್ಮನೆ ಭೀತಿಯೂ ಆವರಿಸಿಕೊಂಡಿದೆ. ಮನದ ಹಿಡಿತ ನನ್ನ ಬಿಗಿತದಿಂದ ನುಣುಚಿಕೊಂಡಿದೆ. ಆತ್ಮವಿಲ್ಲದ ದೇಹ, ಮನಸ್ಸಿಲ್ಲದ ಹೃದಯ ಇನ್ನೇನ ಬರೆದೀತು? ಚೈತನ್ಯದೊರತೆ ಎಲ್ಲಿದೆ ಎಂಬುದನ್ನೂ ಸಿಕ್ಕಸಿಕ್ಕಲ್ಲಿ ಹುಡುಕಿ ಸೋತು, ಅಂತರ್ಜಾಲದಲ್ಲಿ ತಡಕಾಡುವ ಹೀನಾಯ ಸ್ಥಿತಿ ಅವರಿಗೆ ಅರ್ಥವಾದೀತೇ?
ಅಕ್ಷರಗಳ ಒತ್ತು ಇಳಿ ಸೂತ್ರಗಳೆಲ್ಲ ಒಡಲು ಬಿರಿದುಕೊಂಡು ಬಿದ್ದಿವೆ. ಇನ್ನವುಗಳನ್ನು ಹೊಲಿದು ಕವನವಾಗಿಸುವ ಕಸುವು ಅದಾವ ನರನಾಡಿಯಲ್ಲಿ ಅಡಗಿ ಕುಳಿತಿದೆಯೋ?! ಇದೆಲ್ಲ ನನ್ನಾತ್ಮಸಾಕ್ಷಿಗೆ ತಿಳಿಯದ್ದೇನಲ್ಲ. ಇದೆಲ್ಲ ಯೋಚಿಸುವಾಗ ಈ ಆತ್ಮಸಾಕ್ಷಿಯನ್ನೇ ಬಡಿದು ಬಗ್ಗಿಸಬೇಕು ಇಲ್ಲವೇ ಸಾಯಿಸಬೇಕೆಂಬಷ್ಟು ಸಿಟ್ಟು ಬರುತ್ತದೆ. 
ಆದರೆ ಅದೇ ನನ್ನ ಸಾವೆಂಬ ಪ್ರಜ್ಞೆ ಚೂರೂ ಸಾಂತ್ವನ ಹೇಳದೆ ಅಮಾನವೀಯವಾಗಿ ವರ್ತಿಸುತ್ತದೆ. ಇಷ್ಟಾದರೂ ತಿಳಿಯದವರಂತೆ ಹುಡುಕುತ್ತಾರೆ ನನ್ನ ಅವರು. ಕಸಿವಿಸಿಗೊಂಡು ನಾನೂ ಹುಡುಕುತ್ತೇನೆ ಕಳೆದುಕೊಂಡಿರುವ ನನ್ನನ್ನು. ಸಂಜೆಗಳಿಲ್ಲದ ಊರು ನುಂಗಿಬಿಟ್ಟಿತೇ? ಅಥವಾ ಅವನ ನಿರಾಕರಣೆಯ ಕಹಿಸತ್ಯದೊಂದಿಗೆ ನಾನೂ ಕರಗಿಹೋದೆನೇ? ಜೀವದ ಗೆಳತಿ ಹಾದಿ ಬದಲಿಸುವಾಗ ನನ್ನ ದಾರಿ ತಪ್ಪಿತೇ? ಪ್ರಶ್ನೆಗಳು ಮತ್ತಷ್ಟು ಕೆಣಕುತ್ತವೆ. ನಾನು ಮತ್ತಷ್ಟು ಸೊರಗುತ್ತೇನೆ. ಬೇಡವೆಂದರೂ ಕ್ಯಾಲೆಂಡರ್ ಬದಲಾಗುತ್ತದೆ.-ರೇಶ್ಮಾ ರಾವ್ ಸೊನ್ಲೆ

3.11.13

ಇಳಿ ಪಾಠ!

ತಿದ್ದಿಕೊಳ್ಳೋಣ ನಾವೂ
ಸಾವು ಅದೆಷ್ಟೊಂದನ್ನು ಕಲಿಸುತ್ತದೆ, ಬದುಕು ಕಲಿಸಲಾಗದಿದ್ದನ್ನೂ! ಆದರೆ ಆ ಕಲಿಕೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಮಯ ನೀಡದೆ ತನ್ನ ಸುಳಿಗೆ ಸೆಳೆದುಕೊಂಡು ಬಿಡುತ್ತದೆ. ಹೀಗೆ ಜ್ಞಾನೋದಯ ಹೊಂದಿದ ಬಿಳಿತಲೆಗಳ ಅನುಭವವನ್ನು ನಾವು ಕಿರಿಯರು ಅನುಭಾವವಾಗಿ ಪರಿಗಣಿಸಿದರೆ ಹಿರಿಯರ ಹಾದಿಯ ಮುಳ್ಳುಗಳು ನಮ್ಮ ದಾರಿಗೆ ಅಡ್ಡ ಬರದಂತೆ ಜತನ ಮಾಡಬಹುದು. ನನಗೂ ಸಾವಿಗೂ ಒಡನಾಟ ಬಹಳ ವರ್ಷಗಳದ್ದು. ಆದರೆ ಅದೂ ಅನುಭಾವವಷ್ಟೇ. ಏಕೆಂದರೆ ನಾನೊಬ್ಬಳು ಜೀವವನ್ನು ಕೈಲಿಡಿದು ಕೊನೆ ದಿನಗಳನ್ನು ಎಣಿಸುವಂಥ ರೋಗಿಗಳನ್ನು ನೋಡಿಕೊಳ್ಳುವ ದಾದಿ. ಅದೆಷ್ಟೋ ಹಿರಿಜೀವಗಳ ಬದುಕಿನ ಕೊನೆ ದಿನಗಳಲ್ಲಿ ಅವರೊಂದಿಗಿದ್ದ ಸಮಾಧಾನವೂ, ಚೇತನಗಳು ಕ್ಷಣಮಾತ್ರದಲ್ಲಿ ನಿಸ್ತೇಜವಾಗುವುದನ್ನು ದಿನಂಪ್ರತಿ ನೋಡಬೇಕಾದ ಅಸಮಾಧಾನವೂ ನನ್ನದು.ಇವರೆಲ್ಲರನ್ನೂ ನೋಡಿದಾಗ ನನಗೆ ನನ್ನ ಪ್ರತಿ ಉಸಿರಿನಲ್ಲೂ ಸಾವಿರುವುದು ಗೋಚರವಾಗುತ್ತದೆ. ಅದು ಯಾವಾಗ ಬೇಕಾದರೂ ನಿಲ್ಲಬಹುದು. ಹಾಗಾಗೇ ನಮ್ಮ ಆಸ್ಪತ್ರೆಯಲ್ಲಿ ಸೇರುವ ಪ್ರತಿ ಹಿರಿಜೀವಕ್ಕೂ ಪ್ರಶ್ನಿಸುತ್ತೇನೆ, ನಿಮ್ಮ ಜೀವನವನ್ನು ಪುನಾರಂಭಿಸುವ ವರ ಸಿಕ್ಕಿದರೆ ಏನು ಬದಲಾವಣೆ ಮಾಡಿಕೊಳ್ಳಬಯಸುತ್ತೀರೆಂದು. ನನ್ನ ಈ ಪ್ರಶ್ನೆಗೆ ಉತ್ತರ ತಡಕುವಾಗ ಜೀವನದಲ್ಲಿ ತಾವು ಮಾಡಿದ ತಪ್ಪುಗಳು ಪಶ್ಚಾತ್ತಾಪಗಳಾಗಿ, ಸಾಧಿಸಲಾರದ ಗುರಿಗಳು ಅತೃಪ್ತವಾಗಿ ಅವರನ್ನು ಕಾಡುತ್ತವೆ. ಮತ್ತು ಅವು ನನಗೆ ಬದುಕಿನ ಪಾಠ ಹೇಳುತ್ತವೆ. ಹೀಗೆ ನನ್ನ ಪ್ರಶ್ನೆಗೆ ಬಂದ ನೂರಾರು ಉತ್ತರಗಳಲ್ಲಿ ಅತ್ಯಂತ ಸಾಮಾನ್ಯವಾಗಿರುವುದನ್ನು ಭಟ್ಟಿ ಇಳಿಸಿದಾಗ ನನ್ನಲ್ಲಿ ಉಳಿದಿದ್ದಿಷ್ಟು;
ಅವರಿವರ ನಿರೀಕ್ಷೆಯನ್ನು ಪೂರೈಸಲು ಹೆಣಗದೆ ನಾನು ನಾನಾಗಿ, ನನಗನ್ನಿಸಿದಂತೆ ಬದುಕಬೇಕಿತ್ತು.    ಇದು ಅತ್ಯಂತ ಸಾಮಾನ್ಯ ಪಶ್ಚಾತ್ತಾಪವಾಗಿತ್ತು. ನಮ್ಮ ಬದುಕು ಮುಗಿಯುತ್ತಿದೆ ಎಂದಾಗ ಹಿಂದಿರುಗಿ ನೋಡಿದ ಶೇ.80ರಷ್ಟು ಮಂದಿಯ 50 ಪ್ರತಿಶತ ಕನಸುಗಳೂ ಸಾಕಾರವಾಗಿರಲಿಲ್ಲ. ಮತ್ತು ಇದು ಅವರೇ ಮಾಡಿಕೊಂಡ ಕೆಲವು ಆಯ್ಕೆಗಳು ಇಲ್ಲವೇ ಮಾಡಿಕೊಳ್ಳದ ಆಯ್ಕೆಗಳ ಫಲವಾಗಿತ್ತು. ಅವರಿವರ ನಿರೀಕ್ಷೆಯ ಭಾರಕ್ಕೆ ತಮ್ಮ ಕನಸುಗಳು ಅಪ್ಪಚ್ಚಿಯಾಗಿ ಬಿಟ್ಟಿದ್ದವು.    ನಮ್ಮ ಕನಸುಗಳನ್ನು ನಾವು ಪ್ರೀತಿಸದಿದ್ದರೆ, ಅವಕ್ಕೆ ಕನಿಷ್ಠ ಗೌರವ ನೀಡದಿದ್ದರೆ ಇನ್ನಾರು ನೀಡಬೇಕು?
ನಾನು ಅಷ್ಟೊಂದು ಕಷ್ಟ ಪಡುವ ಅವಶ್ಯಕತೆ ಇರಲಿಲ್ಲ. ಹೆಚ್ಚಾಗಿ ಕೆಲಸಕ್ಕೆ ಹೋಗುವ ಎಲ್ಲ ರೋಗಿಗಳದೂ ಇದೇ ಕೊರಗಾಗಿತ್ತು. ಏಕೆಂದರೆ ಅವರು ತಮ್ಮ ಮಗುವಿಗೆ ದಿನಕ್ಕೊಂದು ಐಷಾರಾಮಿ ಬಟ್ಟೆ ತೊಡಿಸುವ ಹುರುಪಿನಲ್ಲಿ ಆ ಮಗುವಿನ ಚೇಷ್ಟೆ, ಅಂಬೆಗಾಲಿಕ್ಕಿ ಬರುವ ಚೆಂದ, ಅದು ಹೇಗೆ ಬೆಳೆದು ದೊಡ್ಡವಾಯಿತೋ ಆ ಸಂತಸವನ್ನು ಕಣ್ತುಂಬಿಕೊಂಡಿರಲಿಲ್ಲ. ಪ್ರತಿ ವಾರ ತಮ್ಮ ಹೆಂಡತಿ ಬಂದು ರಾಗ ಎಳೆದು ಸಿನಿಮಾಗೆ ಹೋಗೋಣವೇ ಎಂದು ಕೇಳಿದಾಗೆಲ್ಲ ಕೆಲಸವಿದೆ, ಮುಂದಿನ ವಾರ ನೋಡೋಣ ಎಂದೇ ಸಾಗ ಹಾಕಿದ್ದರು. ಹೆಂಡತಿಯೊಂದಿಗೆ ಒಂದು ಸಿನಿಮಾವನ್ನೂ ನೋಡಲಾಗದಷ್ಟು ಬ್ಯುಸಿಯಾಗಿ ತಾನು ಹಗಲೂ ರಾತ್ರಿ ದುಡಿದು ಸಾಧಿಸಿದ್ದೇನು ಎಂಬ ಕೊರಗು ಅವರನ್ನು ಕಾಡುತ್ತಿತ್ತು.     ಬದುಕನ್ನು ಸರಳಗೊಳಿಸಿಕೊಂಡಿದ್ದರೆ, ಆಯ್ಕೆಗಳನ್ನು ಪ್ರಜ್ಞಾಪೂರ್ವಕವಾಗಿ ಮಾಡಿದ್ದರೆ ಆತ್ಮೀಯರೊಂದಿಗಿನ ಸುಂದರ ಕ್ಷಣಗಳು ಅವರದಾಗುತ್ತಿತ್ತಲ್ಲವೇ?!
ನನಗನ್ನಿಸಿದ್ದನ್ನೆಲ್ಲ ಹೇಳುವ ಧೈರ್ಯ ತೋರಬೇಕಿತ್ತು.    ಇನ್ನೊಬ್ಬರೊಂದಿಗೆ ಹೊಂದಿಕೊಳ್ಳುವ ಭರದಲ್ಲಿ ನಮ್ಮ ಹಲವು ಆಕಾಂಕ್ಷೆಗಳನ್ನು, ನಮಗನ್ನಿಸಿದ್ದನ್ನು ಹೇಳದೇ ಒಳಗೊಳಗೆ ತಳ್ಳುತ್ತಾ ಹೋಗುತ್ತೇವೆ. ಮತ್ತೆ ಆ ಅನಿಸಿಕೆ ಹುಟ್ಟದಂತೆ ಹೆಡೆ ಮೆಟ್ಟಿ ನಿಲ್ಲುತ್ತೇವೆ. ಇದರಿಂದ ನಾವು ಏನಾಗಲು ಸಾಧ್ಯವಿತ್ತೋ ಅದು ಸಾಧ್ಯವಿಲ್ಲದೆ ಮುಖವಾಡದ ಬದುಕೊಂದನ್ನು ನಮಗೆ ಗೊತ್ತಿಲ್ಲದೆಯೇ ಬದುಕಿಬಿಟ್ಟಿರುತ್ತೇವೆ. ಅಲ್ಲದೆ ಇದು ಹಲವು ಮಾನಸಿಕ ಅಸಮತೋಲನಕ್ಕೂ ಕಾರಣವಾಗಿರುತ್ತದೆ.    ಜೀವನದಲ್ಲಿ ಇನ್ನೊಬ್ಬರ ಪ್ರತಿಕ್ರಿಯೆಯನ್ನು ನಿಯಂತ್ರಿಸಲು, ಎಲ್ಲರನ್ನು ಮೆಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕಾಗಿ ತಲೆಕೆಡಿಸಿಕೊಳ್ಳದೆ ನಮಗನ್ನಿಸಿದಂತೆ ಪ್ರಾಮಾಣಿಕವಾಗಿ ಬದುಕೋಣ
ನನ್ನ ಗೆಳೆಯರೆಲ್ಲರನ್ನೂ ಕೊನೆಯವರೆಗೂ ಕಾಪಾಡಿಕೊಳ್ಳಬೇಕಿತ್ತು.    ಜೀವನದ ಕೊನೆಕ್ಷಣಗಳಲ್ಲಿ ನಾವು ಗಳಿಸಿದ ದುಡ್ಡಿಗಿಂತಾ ನಮಗಾಗಿ ಅಳುವ, ಹಿತ ಬಯಸುವ ಆತ್ಮೀಯರು ಎಷ್ಟಿದ್ದಾರೆಂಬುದೇ ಗಣನೆಗೆ ಬರುವುದು. ಹೆಚ್ಚಿನ ಮಂದಿ ತಮ್ಮದೇ ಬದುಕಿನ ಜಂಜಡದಲ್ಲಿ ಎಷ್ಟು ಮುಳುಗಿ ಹೋಗಿರುತ್ತಾರೆಂದರೆ ಒಂದು ಕಾಲದಲ್ಲಿ ತಮ್ಮ ಜೀವದ ಗೆಳೆಯರೆಂದುಕೊಂಡು ಹೆಗಲಿಗೆ ಹೆಗಲು ಕೂಡಿಸಿ ನಡೆದ ಆ ಗೆಳೆಯರು ಅದು ಯಾವಾಗ ಕಳೆದು ಹೋದರೆಂಬುದು ಕೊನೆಯ ಕ್ಷಣದವರೆಗೂ ಗಮನಕ್ಕೇ ಬಂದಿರುವುದಿಲ್ಲ!    ನಮ್ಮ ಆಸ್ತಿ ಅಂತಸ್ತು ಏನೇ ಇದ್ದರೂ ಕೊನೆಗೂ ಮುಖ್ಯವಾಗುವುದು ಪ್ರೀತಿ ಮತ್ತು ನಾವು ಉಳಿಸಿಕೊಂಡು ಬಂದ ಸಂಬಂಧಗಳು. ಅದಕ್ಕಾಗಿ ಯಾವ ಖರ್ಚೂ ಅಗತ್ಯವಿರುವುದಿಲ್ಲ, ನಮ್ಮ ಒಂದಿಷ್ಟು ಸಮಯ ಮತ್ತು ಕಾಳಜಿಯ ಹೊರತಾಗಿ.- 
ರೇಶ್ಮಾ ರಾವ್ ಸೊನ್ಲೆ

20.10.13

ಒಂದ್ ಕಥೆ ಹೇಳಜ್ಜಿ...

ಕಳೆದುಹೋದ ಕಥಾಸಂಕಲನ

ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ಒಬ್ಬಳು ಅಜ್ಜಿ ಇದ್ದಳು. ಸಮಯ ಸಿಕ್ಕಾಗೆಲ್ಲ ಮೊಮ್ಮಕ್ಕಳನ್ನು, ಆಚೀಚೆ ಮನೆ ಮಕ್ಕಳನ್ನು ಸುತ್ತಲೂ ಕೂರಿಸಿಕೊಂಡು, ತನ್ನ ಬೊಚ್ಚು ಬಾಯಿಯಲ್ಲಿ ಎಲೆಅಡಕೆ ಜಗಿಯುತ್ತಾ ಕತೆ ಹೇಳುತ್ತಿದ್ದಳು. ಅವಳ ಕತೆಗಳು ಅದೆಷ್ಟು ರೋಚಕವಾಗಿರುತ್ತಿದ್ದವೆಂದರೆ ಪುಣ್ಯಕೋಟಿ ಹುಲಿರಾಜನ ಬಳಿಗೆ ಹೊರಟಾಗ ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಿದ್ದವು. ಆಗ ಅಜ್ಜಿ ಅವುಗಳಿಗೆ ಸಮಾಧಾನ ಹೇಳಿ, ಸತ್ಯ ಹೇಗೆ ಗೆಲ್ಲುತ್ತದೆ ನೋಡ್ದನೋ ಪೋರ ಎಂದು ಕತೆ ಕೇಳುತ್ತಿದ್ದ ಗುಂಡನ ಬೆನ್ನು ಸವರುವಳು.
ಮಕ್ಕಳ ಮೆಚ್ಚಿನ ಇನ್ನೊಂದು ಕತೆ ಇತ್ತು. ಅದು ಒಂದು ಕೂದಲಿನ ರಾಜಕುಮಾರಿಯದು. ಅದನ್ನು ಹೇಳೆಂದು ಅಜ್ಜಿಯನ್ನು ಮಕ್ಕಳು ಒತ್ತಾಯಿಸುತ್ತಿದ್ದವು. ಅಜ್ಜಿಗೂ ಸ್ವಲ್ಪ ಆಟ ಆಡಿಸುವ ಎನಿಸುವುದು. ಅವಳು ಹುಗ್ಗಿ ಹರಿದು ಊರು ಮುಳುಗುವ ಕತೆ ಶುರು ಹಚ್ಚುವಳು. ಅದು ಮುಗಿಯುವವರೆಗೂ ಬಾಯಿ ಕಳೆದು ಕೇಳುತ್ತಿದ್ದ ಮಕ್ಕಳು ಮತ್ತೆ ರಾಜಕುಮಾರಿ ಕತೆಗೆ ಗೋಗರೆವವು. ಎಲೆ ಅಡಕೆ ತುಪ್ಪಿ ಬಂದ ಅಜ್ಜಿ ಮಾಳಿಗೆಯಲ್ಲಿಟ್ಟ ಡಬ್ಬಿ ತೆಗೆದು ಮಕ್ಕಳಿಗೆಲ್ಲ ಚಕ್ಕುಲಿ ಕೊಡುವಳು. ಮತ್ತೆ ಆ ರಾಜಕುಮಾರಿಗೆ ಒಂದು ಕೂದಲೆಂದು ರಾಜನ ಎರಡು ಕೂದಲಿನ ಎರಡನೇ ಹೆಂಡತಿಯೂ, ರಾಜನೂ ಸೇರಿ ಅವಳನ್ನು ಮನೆಯಿಂದ ಹೊರ ಹಾಕಿದ್ದನ್ನು ಅಜ್ಜಿ ವರ್ಣಿಸುವಳು. ಅವಳ ಒಳ್ಳೆತನ ಮೆಚ್ಚಿ ಮಾಟಗಾತಿ ತಲೆ ತುಂಬಾ ಕೂದಲು ಬರುವಂತೆ ಮಾಡುವಾಗಂತೂ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕೇಕೆ ಹಾಕಿ ಚಪ್ಪಾಳೆ ತಟ್ಟಿ ನಗುವುವು. ಅಜ್ಜಿ ಕತೆ ಹೇಳದ ದಿನ ಮಕ್ಕಳು ನಿದ್ದೆ ಮಾಡುವುದಿಲ್ಲವೆಂದು ರಚ್ಚೆ ಹಿಡಿಯುತ್ತಿದ್ದವು. ಶಾಲೆಗೆ ಹೋಗಿ,
'ಅಜ್ಜಿ ಎಂದರೆ ನಮ್ಮಜ್ಜಿ
ಕತೆಯನು ಹೇಳುವ ನಮ್ಮಜ್ಜಿ
ಉಪ್ಪು ಮೆಣಸು ಜಜ್ಜಿ
ಮಾಡಿದಳೊಂದು ಬಜ್ಜಿ' ಎಂದು ಪ್ರಾಸಬದ್ಧವಾಗಿ ಹಾಡು ಹೇಳುತ್ತಿದ್ದವು. ಇಂತಿಪ್ಪ ಮಕ್ಕಳ ಮೆಚ್ಚಿನ ಈ ಅಜ್ಜಿ ಸೌದೆ ತರಲೆಂದು ಒಂದು ದಿನ ಕಾಡಿಗೆ ಹೋದಳು. ಇಂದಿಗೂ ಸೌದೆಯೂ ಇಲ್ಲ, ಅಜ್ಜಿಯೂ ಇಲ್ಲ! ಬಹುಶಃ ಸೌದೆ ಸಿಗಲಿಲ್ಲವೇನೋ? ಅಕೇಶಿಯಾ, ನೀಲಗಿರಿ, ರಬ್ಬರ್ ಕಾಡಿನಲ್ಲಿ ಸೌದೆ ಎಲ್ಲಿಂದ ಬರಬೇಕು? ಅವೆಲ್ಲ ದುಡ್ಡಿನ ಮರಗಳಲ್ಲವೇ?!ಅಥವಾ 'ಇನ್ನೂ ಒಂದಾನೊಂದು ಕಾಲದಲ್ಲಿರುವ' ಅಜ್ಜಿಗೆ ಗ್ಯಾಸ್ ಸ್ಟೌ, ಕರೆಂಟ್ ಒಲೆಗಳ ಕತೆ ಹೇಳಿ ಮರಗಳೇ ಮೂದಲಿಸಿ ನಕ್ಕಿರಬಹುದು.
ಅಲ್ಲವೇ ಆಕೆ ತಿರುಗಿ ಬಂದೂ ಮೊಮ್ಮಕ್ಕಳಾರೂ ಗುರುತಿಸಿರಲಾರರು. ಅವುಗಳೋ ಒಂದು ದಿನದಲ್ಲಿ ಶತಮಾನದಷ್ಟು ಮುಂದೋಡುವವು. ಬಟನ್ ಒತ್ತಿದಷ್ಟೂ ಮನರಂಜನೆ ಒದಗಿಸುವ ಕಾರ್ಟೂನ್ ನೆಟ್‌ವರ್ಕ್‌ಗಳಿರಲು, 3 ವರ್ಷಕ್ಕೇ 30ರಂತೆ ಟೈ ಧರಿಸಿ ಶಾಲೆಗೆ ಓಡುವ ಧಾವಂತದಲ್ಲಿ ಅಜ್ಜಿ ನೆನಪಾದಾಳು ಹೇಗೆ?
ಒಂದು ವೇಳೆ ಗುರುತು ಸಿಕ್ಕರೂ ಎಲೆಅಡಕೆ ಜಗಿಯುತ್ತಾ, ಮಾಡರ್ನ್ ಕಲ್ಚರ್ ಗೊತ್ತಿಲ್ಲದ 'ದಟ್ ಡರ್ಟಿ ಅಗ್ಲಿ ವುಮನ್‌'ಗೆ ಅಜ್ಜಿ ಎಂದವಾದರೂ ಹೇಗೆ?!
ಹೀಗೆ ಒಂದಾನೊಂದು ಕಾಲದಲ್ಲಿ ಕತೆ ಹೇಳುತ್ತಿದ್ದ ನಮ್ಮ ನಿಮ್ಮೆಲ್ಲರ ಅಜ್ಜಿ ಇಂದು ಕತೆಯಾದಳು.

= ರೇಶ್ಮಾ ರಾವ್ ಸೊನ್ಲ್

(ಕನ್ನಡಪ್ರಭ ದಲ್ಲಿ ಪ್ರಕಟ)

4.10.13

ಕಾಡ ಹೂ

ಸ್ಯಾಕ್ಸೋಫೋನ್ ಸಾಧಕಿ
ಒಂದಷ್ಟು ಜನ ಬದುಕುವುದಕ್ಕಾಗಿ ಉಸಿರನ್ನು ಶ್ವಾಸಕೋಶಕ್ಕೆ ತುಂಬಲೇ ಹೆಣಗುತ್ತಾರೆ. ಆದರೆ ಕೆಲವರಿರುತ್ತಾರೆ, ಉಸಿರನ್ನೇ ಹಾಡಾಗಿ ಪರಿವರ್ತಿಸುವ ಮಾಂತ್ರಿಕರು. ಇಲ್ಲೊಬ್ಬ ಕಿನ್ನರಿ ಇದ್ದಾಳೆ ನಿರ್ಜೀವವಾಗಿ ಕುಳಿತ ಸ್ಯಾಕ್ಸಫೋನ್‌ಗೂ ಉಸಿರು ತುಂಬಿ ಹಾಡು ಕಲಿಸಿ ರಾಗಗಳನ್ನು ಅಲೆಅಲೆಯಾಗಿ ಗಾಳಿಗೆ ಬಿಡುವವಳು. ಹೀಗೆ ಹತ್ತು ವರ್ಷದಿಂದ ಮಲೆನಾಡಿನ ತೀರ್ಥಹಳ್ಳಿ ಬದಿಯ ಮೂಲೆಮೂಲೆಯಲ್ಲೂ ಗಾಳಿಗೆ ಗುಂಗು ಹತ್ತಿಸಿ ಮದುವೆಮನೆ, ಧಾರ್ಮಿಕ ಕಾರ್ಯಕ್ರಮದ ರಂಗು ನೀಡಿ ಸಂಭ್ರಮ ಹೆಚ್ಚಿಸುತ್ತಿರುವುದು ಪ್ರಥಮ ಬಿಕಾಂ ವಿದ್ಯಾರ್ಥಿನಿ ಸೌಮ್ಯ.
ಈ ಭಾಗದ ಯಾವುದೇ ಶುಭಕಾರ್ಯಗಳಿಗೆ ಹೋದರೆ ಗಂಟೆಗಟ್ಟಲೆ ಬಿಡುವಿಲ್ಲದೆ, ಭಕ್ತಿಗೀತೆ, ಚಿತ್ರಗೀತೆ ಸೇರಿದಂತೆ ಸಂದರ್ಭಕ್ಕೆ ತಕ್ಕಂತೆ ವಾದ್ಯದಲ್ಲಿ ಖಾದ್ಯ ಬಡಿಸುತ್ತಾ ಗಾನ ಸರಸ್ವತಿಯಂತೆ ಕುಳಿತಿರುವ ಈಕೆಯನ್ನು ನೋಡಿದರೆ 'ಮುತ್ತಿನಂತ ಹೆಂಡತಿ'ಯಲ್ಲಿ ಸ್ಯಾಕ್ಸಾಫೋನ್ ನುಡಿಸುವ ಮಾಲಾಶ್ರೀ ಕಣ್ಮುಂದೆ ಬರುತ್ತಾಳೆ. ತನ್ನ ತಂದೆ ನಾಗೇಶ್ ಅವರ ಗರಡಿಯಲ್ಲಿ ಪಳಗಿ, ನಂತರ ಶಿವಪ್ರಸಾದ್, ಕರುಣಾಕರ, ಸಾಲಿಗ್ರಾಮ ಸತೀಶ್ ದೇವಾಡಿಗ ಅವರ ಗುರು ಗಾರುಡಿಯಲ್ಲಿ ಮಿಂದೆದ್ದು ಪಕ್ಕಾ ವಾದ್ಯದಲ್ಲಿ ಪರಿಣತಿ ಸಾಧಿಸಿರುವ ಈಕೆ ಇದುವರೆಗೆ 250ಕ್ಕೂ ಹೆಚ್ಚು ಕಡೆ ಕಾರ್ಯಕ್ರಮ ನೀಡಿದ್ದಾಳೆ. 
ಎಸ್ಸೆಸ್ಸೆಲ್ಸಿ ಓದುತ್ತಿರುವ ಈಕೆಯ ತಂಗಿ ರಮ್ಯಾ ಕೂಡ ಹಿರಿಯಕ್ಕನ ಹಾದಿಯಲ್ಲಿ ಸಾಗುತ್ತಿದ್ದಾಳೆ.  ಇಷ್ಟಾದರೂ ಈ ಹಳ್ಳಿ ಹೂವಿನ ಪ್ರತಿಭೆಗೆ ಇದುವರೆಗೆ ಯಾವುದೇ ಪ್ರಶಸ್ತಿ ಫಲಕಗಳು ಲಭಿಸದಿರುವುದು ವಿಪರ್ಯಾಸವೇ ಸೈ. ಈ ಬಗ್ಗೆ ಈಕೆಯ ಪರಿಚಿತರನ್ನು ಕೇಳಿದಾಗ 'ಇಲ್ಲಿ ನಗರದಂತೆ ಇದನ್ನೆಲ್ಲ ಪ್ರತಿಭೆಯೆಂದು ನೋಡುವುದಿಲ್ಲ. ಅವಳು ಸ್ಯಾಕ್ಸಾಫೋನ್ ನುಡಿಸುತ್ತಾಳಂತೆ ಎಂಬುದು ಒಂದು ಸಾಮಾನ್ಯ ವಿಚಾರವೆಂಬಂತೆ ಜನ ನೋಡುತ್ತಾರೆ' ಎಂದು ವಿಷಾದಿಸುತ್ತಾರೆ. ಸೌಮ್ಯಳಿಗೊಂದು ಅಭಿನಂದನೆ ಹೇಳಬೇಕೆನಿಸಿದರೆ 9448106837ಗೆ ಕರೆ ಮಾಡಿ.- 
ರೇಶ್ಮಾ

9.8.13

ಭ್ರಾಂತು

ಹಾಗಾದ್ರೆ, ನೋಡಿದ್ದು ಸುಳ್ಳಾ?
'ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು...'- ಭ್ರಾಂತಿ (ಇಲ್ಯೂಷನ್), ಕಣ್ಕಟ್ಟನ್ನು ಹೀಗೆ ವಿವರಿಸಬಹುದು.ಎಲ್ಲ ಇಂದ್ರಿಯಗಳೂ ಮೋಸ ಹೋಗುತ್ತವೆ. ಆದರೆ ಕಣ್ಣು ಪ್ರಧಾನ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ದೃಷ್ಟಿಭ್ರಾಂತಿ ಎಲ್ಲರಿಗೂ ಆಗುತ್ತದೆ. ಮೈಮ್‌ಗಳನ್ನು ನೋಡುವಾಗ ಅಲ್ಲಿ ವಸ್ತುಗಳೇನೂ ಇರದಿದ್ದರೂ ವ್ಯಕ್ತಿ ಏಣಿ ಹತ್ತುವುದನ್ನು, ಈಜುವುದನ್ನು ಎಲ್ಲವನ್ನು ಗ್ರಹಿಸುತ್ತೇವೆ.
ವೆಂಟ್ರಿಲೋಕ್ವಿಸ್ಟ್ (ಮಾತಾಡುವ ಗೊಂಬೆ ಆಡಿಸುವವರು) ಗಳನ್ನು ನೋಡುವಾಗ ಗೊಂಬೆ ಮಾತಾಡಲು ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಗೊಂಬೆಯೇ ಮಾತನಾಡುತ್ತಿದೆ ಎಂದು ನಂಬುತ್ತೇವೆ. ಏಕೆಂದರೆ ನಮ್ಮ ಕಣ್ಣಿಗೆ ಗೊಂಬೆ ಬಾಯಿ ಆಡಿಸುವುದು ಕಾಣುತ್ತದೆ. ನಾವೇನನ್ನು ನೋಡುತ್ತೇವೆಯೋ ಅದು ಶೇ.10 ಭಾಗ ಆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಉಳಿದ ಶೇ.90ನ್ನು ಮೆದುಳು ಯೋಚನಾಸರಣಿಗೆ ಹಚ್ಚಿ ನಿರ್ಧರಿಸುತ್ತದೆ. ಆದ್ದರಿಂದ ವಿಜ್ಞಾನಿಗಳು ಭ್ರಾಂತಿಯನ್ನು ನಮ್ಮ ಇಂದ್ರಿಯಗಳ ಕೆಲಸದ ಬಗ್ಗೆ ಅಧ್ಯಯನ ಮಾಡಲು ಉಪಯೋಗಿಸುತ್ತಾರೆ. ಭ್ರಾಂತಿ ನಮ್ಮ ಕಣ್ಕಟ್ಟುವುದಕ್ಕಿಂತ ಹೆಚ್ಚಾಗಿ ನಾವು ಹೇಗೆ ಒಂದು ವಸ್ತುವನ್ನು ಇಲ್ಲವೆ ಪರಿಸ್ಥಿತಿಯನ್ನು ಅವಲೋಕಿಸುತ್ತೇವೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. 
ನಾನೀಗ ನಿಮ್ಮೆದುರಿನಲ್ಲಿ ಕುಳಿತಿದ್ದೇನೆಂದುಕೊಳ್ಳಿ. ನಿಮ್ಮ ಕಣ್ಣು 6 ಅಡಿಯ ವ್ಯಕ್ತಿ ನನಗಿಂತ 4 ಅಡಿ ದೂರದಲ್ಲಿ ಕುಳಿತಿದ್ದಾನೆ ಎಂದು ಹೇಳುತ್ತದೆ. ನಿಮಗಿಂತ 8 ಅಡಿ ದೂರದಲ್ಲಿ ಮತ್ತೊಬ್ಬ ಕುಳಿತಿದ್ದು, ಅವನು 3 ಅಡಿ ಇದ್ದಾನೆಂದು ಕಣ್ಣು ಹೇಳುತ್ತದೆ. ಆದರೆ ಮೆದುಳು ಅವನಿರುವ ದೂರವನ್ನು ಪರಿಗಣಿಸಿ ಅವನೂ 6 ಅಡಿ ಇದ್ದಿರಬಹುದೆಂದು ಗ್ರಹಿಸುತ್ತದೆ.  ಇಷ್ಟೆಲ್ಲ ಆದರೂ ಭ್ರಾಂತಿ ಏಕಾಗುತ್ತದೆಂಬ ಪ್ರಶ್ನೆಗೆ ನಿಖರ ಉತ್ತರವಿನ್ನೂ ಸಿಕ್ಕಿಲ್ಲ. ಆದರೆ ಇಂಥ ಕಣ್ಕಟ್ಟನ್ನು ಬಳಸಿಯೇ ಅಲ್ಲವೇ ಮಾಂತ್ರಿಕರು ಮುಗ್ಧರನ್ನು ಮೋಸಗೊಳಿಸುತ್ತಿದ್ದುದು.
ಚಂದ್ರನ ಭ್ರಾಂತಿ
ಗುಡ್ಡದ ಬದಿಯಲ್ಲಿ ನೋಡುವಾಗ ಚಂದ್ರ ಕಾಣುವಷ್ಟು ದೊಡ್ಡದಾಗಿ ಮೇಲಿದ್ದಾಗ ಕಾಣುವುದಿಲ್ಲ. ಹಾಗೆಂದು ಚಂದ್ರನ ಗಾತ್ರ ಬದಲಾಗುವುದಿಲ್ಲ. ಇದೊಂದು ಇಲ್ಯೂಷನ್ ಅಷ್ಟೇ. ನಾವು ಗ್ರಹಿಸುವುದೇ ಹಾಗೆ... ದೂರದ ಬೆಟ್ಟವನ್ನು ತೋರಿಸುವಾಗ 'ಓಓ....ಲ್ಲಿ.... ದೂರದಲ್ಲಿ' ಎನ್ನುತ್ತೇವೆ. ಅದೇ ಆಕಾಶದಲ್ಲಿರುವ ನಕ್ಷತ್ರವನ್ನು ತೋರಿಸುವಾಗ, 'ಇದೋ ಇಲ್ಲಿ' ಎನ್ನುತ್ತೇವೆ. ಆದರೆ ನಿಜವಾಗಿ ನಕ್ಷತ್ರದ ದೂರ ಹೆಚ್ಚಿನದಾಗಿರುತ್ತದೆ. ಲಂಬವಾದ ದೂರ ಹತ್ತಿರವೆನಿಸುತ್ತದೆ, ಅಡ್ಡಡ್ಡದ ದೂರ ದೂ...ರವೆನಿಸುತ್ತದೆ. ಹಾಗಾಗೇ ಚಂದ್ರ ಮೇಲಿದ್ದಾಗ ಇಷ್ಟು ಹತ್ತಿರದಲ್ಲಿದ್ದರೂ ಚಿಕ್ಕದಾಗಿ ಕಾಣುತ್ತಿದ್ದಾನೆ. ಅದೇ ಗುಡ್ಡದ ಬದಿಯ ಚಂದ್ರ ಅಷ್ಟು ದೂರದಲ್ಲಿದ್ದರೂ ದೊಡ್ಡದಾಗಿ ಕಾಣುತ್ತಿದ್ದಾನೆ ಎಂದರೆ ಆತ ಕೆಳಗೆ ಬಂದಿರುವುದರಿಂದ ದೊಡ್ಡದಾಗಿ ಕಾಣಿಸುತ್ತಿದ್ದಾನೆ ಎಂದು ಭಾವಿಸುತ್ತೇವೆ.
ಆಸಕ್ತಿಯೂ ಕಾರಣ
ಐನ್‌ಸ್ಟೀನ್ 'ಸಾಪೇಕ್ಷತಾ ಸಿದ್ಧಾಂತ' ವಿವರಿಸುವಾಗ ಒಂದು ಉದಾಹರಣೆ ನೀಡುತ್ತಾನೆ. ಉರಿಯುತ್ತಿರುವ ಒಲೆ ಮೇಲೆ ಒಂದು ನಿಮಿಷ ಕುಳಿತರೆ ಒಂದು ಗಂಟೆ ಎನಿಸುತ್ತದೆ. ಅದೇ ಪ್ರೇಯಸಿಯೊಂದಿಗೆ ಪಾರ್ಕಿನಲ್ಲಿ ಒಂದು ಗಂಟೆ ಕುಳಿತರೂ ಒಂದು ನಿಮಿಷವೆನಿಸುತ್ತದೆ. ಭಾರವಾದ 5 ಕೆಜಿಯ ಸಿಲಿಂಡರ್ ಎತ್ತಲು ಒದ್ದಾಡುವ ಹುಡುಗ 45 ಕೆಜಿಯ ತನ್ನ ಹುಡುಗಿಯನ್ನು ಸರಾಗವಾಗಿ ಹೊತ್ತು ತಿರುಗುವುದಿಲ್ಲವೇ? ಅಂದ ಮೇಲೆ ಈ ಅನಿಸುವಿಕೆಗಳು ನಮ್ಮ ಆಸಕ್ತಿಯನ್ನವಲಂಬಿಸುತ್ತವೆ. 
ಮೋಸ ಹೋಗುವ ಫ್ಯಾಸಿನೇಶನ್ 
ನ್ನೋಡಿದ್ದನ್ನೆಲ್ಲ ನಂಬಬೇಕಾಗಿಲ್ಲ. ನನ್ ಕಣ್ಣೇ ನಂಗೆ ಮೋಸ ಮಾಡ್ತು ಎಂದು ಅದೆಷ್ಟೋ ಬಾರಿ ಹೇಳುತ್ತೇವೆ. ಆದ್ರೆ ಹಾಗೆ ಮೋಸ ಹೋಗುವುದರಲ್ಲೂ ನಾವು ಮನುಷ್ಯರಿಗೊಂಥರಾ ಫ್ಯಾಸಿನೇಶನ್. ಹಾಗಾಗಿಯೇ ಸುಳ್ಳೆಂದು ಗೊತ್ತಿದ್ದರೂ ಮ್ಯಾಜಿಕ್‌ಗಳನ್ನು ಚೆನ್ನಾಗಿ ಎಂಜಾಯ್ ಮಾಡುತ್ತೇವೆ. 
ಕಾಲವೆಂಬ ಭ್ರಾಂತಿ
ಹಲವು ವಿಜ್ಞಾನಿ, ತತ್ವಜ್ಞಾನಿಗಳ ಪ್ರಕಾರ ಕಾಲವೆಂಬುದೇ ದೊಡ್ಡ ಭ್ರಾಂತು. ನಾವು ನಮ್ಮ ಅನುಕೂಲಕ್ಕಾಗಿ ಭೂತ, ವರ್ತಮಾನ, ಭವಿಷ್ಯ ಎಂದು 3 ವಿಭಾಗವನ್ನಾಗಿ ಮಾಡಿಕೊಂಡಿದ್ದೇವೆ. ಆದರೆ ಇರುವುದು ವರ್ತಮಾನವೊಂದೇ. ಅದೂ ಸದಾ ಕಾಲ ಬದಲಾಗುತ್ತಲೇ ಇರುವ ವರ್ತಮಾನ. ನಿನ್ನೆಯೂ ಆ ಕ್ಷಣಕ್ಕೆ ವರ್ತಮಾನವಾಗಿತ್ತು. ಮತ್ತು ಅದು ಆಗ ಮಾತ್ರ ಸತ್ಯವಾಗಿತ್ತು. ನಾಳೆಯೂ ವರ್ತಮಾನದಲ್ಲಷ್ಟೇ ಅನುಭವಕ್ಕೆ ಬರುತ್ತದೆ. ಅಂದ ಮೇಲೆ ನಿನ್ನೆ, ಇಂದು, ನಾಳೆಗಳೆಲ್ಲ ಭ್ರಾಂತಿ ಅಷ್ಟೇ ಆಗಲು ಸಾಧ್ಯವಲ್ಲವೇ?
 -ರೇಷ್ಮಾರಾವ್ ಸೊನ್ಲೆ

25.7.13

ಒಂದು ಫಾಲ್ಸ್ ರಿರ್ಪೋಟ್

ಈಗ ಜಲಪಾತ ನೋಡಲು ಸೂಕ್ತ ಸಮಯ
ಅದೊಂದು ಗೊಂಡಾರಣ್ಯ. ಪ್ರಾಣಿ ಪಕ್ಷಿಗಳ ಇಂಚರ ಅಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಅಲ್ಲೊಬ್ಬಳು ರಾಜಕುಮಾರಿ. ಅನುರೂಪ ಸುಂದರಿ. ಪ್ರತಿದಿನ ಪುಟ್ಟ ಕೊಳವೊಂದರಲ್ಲಿ ಸ್ನಾನ ಮಾಡಿ ಸಿಹಿ ಹಾಲು ಸ್ವೀಕರಿಸುವುದು ಅವಳ ದಿನಚರಿ. ಅದೊಂದು ದಿನ ಆಕೆ ಸ್ನಾನ ಮಾಡಿ ಹಾಲು ಸೇವಿಸಲು ಬಂಗಾರದ ಚೊಂಬನ್ನು ಎತ್ತುತ್ತಿರುವಾಗ ರಾಜಕುಮಾರನೊಬ್ಬ ಎವೆಯಿಕ್ಕದೆ ತನ್ನನ್ನೇ ನೋಡುತ್ತಿರುವುದನ್ನು ನೋಡುತ್ತಾಳೆ. ನಾಚಿಕೆಯಿಂದ ತನ್ನ ನಗ್ನ ದೇಹ ಮುಚ್ಚಿಕೊಳ್ಳಲು ಹಾಲನ್ನು ಅಗಲವಾಗಿ ಚೆಲ್ಲುತ್ತಾಳೆ. ಅಷ್ಟರಲ್ಲಿ ಸಖಿಯರು ಬಟ್ಟೆ ತಂದು ಹೊದಿಸುತ್ತಾರೆ. ಹಾಗೆ ಚೆಲ್ಲಿದ ಹಾಲು ರಾಜಕುಮಾರಿಯ ಗೌರವ ಹಾಗೂ ಮರ್ಯಾದೆಯ ಪ್ರತೀಕವಾಗಿ ಸಾಗರದಂತೆ ಹರಿಯಲಾರಂಭಿಸುತ್ತದೆ. ಇಂದಿಗೂ ಆ ದೂದ್‌ಸಾಗರ(ಹಾಲಿನ ಹೊಳೆ) ಕಾಡಿನ ಮಧ್ಯೆ ಧುಮ್ಮಿಕ್ಕಿ ಹರಿಯುತ್ತಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಹಾಗೆನ್ನುತ್ತದೆ ಕತೆ.
ಈ ಮಾಡರ್ನ್ ಸರ್ವಜ್ಞನ ಪದಗಳನ್ನು ಮನಸಿನಾಳಕ್ಕೆ ತೆಗೆದುಕೊಂಡು ದೂದ್‌ಸಾಗರ ನೋಡಲು ಹೊರಟವರು ನಾವು ಹತ್ತು ಮಂದಿ. ಅದಾಗಲೇ ಯೂಟ್ಯೂಬ್‌ನಲ್ಲಿ ಕೇಳಿದ ಜಲಪಾತದ ಸದ್ದು ಕಿವಿಯೊಳಗೆ ಮನೆ ಮಾಡಿ ಕುಳಿತಾಗಿತ್ತು. ರಾತ್ರಿಯಿಡಿ ಬೆಂಗಳೂರನ್ನು ದೂರ ತಳ್ಳುತ್ತಾ ರೈಲು ಲೋಂಡಾ ತಲುಪಿತು. ಅಲ್ಲಿಂದ ಕ್ಯಾಸಲ್ ರಾಕ್ ಅರ್ಧ ಗಂಟೆಯ ದಾರಿ. ಮತ್ತೊಂದು ರೈಲನ್ನು ಹತ್ತಿದೆವು. ರೈಲು ದೂದ್‌ಸಾಗರ್ ಬಳಿಯೇ ನಿಲ್ಲುತ್ತಿತ್ತು. ಆದರೆ ಕ್ಯಾಸಲ್ ರಾಕ್‌ನಲ್ಲಿಳಿದು 14 ಕಿಮೀ ಟ್ರ್ಯಾಕ್ ಟ್ರೆಕ್ಕಿಂಗ್ ಮಾಡಿ ಗುರಿ ತಲುಪುವುದು ನಮ್ಮ ಯೋಜನೆ. ಏಕೆಂದರೆ ಕಷ್ಟ ಜೀವಿಗಳು ನಾವು! ಜಲಪಾತದ ಬಳಿ ಊಟ, ವಸತಿಗೆ ಏನೂ ವ್ಯವಸ್ಥೆ ಇಲ್ಲ. ಹಾಗಾಗಿ ಟೆಂಟು, ಸ್ಲೀಪಿಂಗ್ ಬ್ಯಾಗ್, ಎರಡು ದಿನದ ಲಗೇಜು, ಜೊತೆಗೆ 6 ಹೊತ್ತಿಗಾಗುವಷ್ಟು ಚಪಾತಿ, ಪರೋಟ, ಬ್ರೆಡ್ ಜ್ಯಾಮ್‌ನ್ನು ಕೈ, ಭುಜ, ಬೆನ್ನುಗಳಲ್ಲಿ ನೇತಾಡಿಸಿಕೊಂಡು ರೈನ್ ಕೋಟ್ ಮುಚ್ಚಿ ನಡೆಯತೊಡಗಿದೆವು. 
ಒಂದು ಕಿಮೀ ನಡೆವಷ್ಟರಲ್ಲಿ ಬ್ಯಾಗಿನಿಂದ ಡ್ರೈ ಫ್ರೂಟ್ಸ್, ಗ್ಲೂಕೋಸ್ ಹೊರಬರಲಾರಂಭಿಸಿತು. ಹಳಿಯ ಒಂದು ಭಾಗ ಪ್ರಪಾತ, ಇನ್ನೊಂದು ಬದಿಗೆ ಎತ್ತರದ ಕಲ್ಲಿನ ಗೋಡೆಯಂತಾ ರಚನೆ. ಇದೇನು ಮುಗಿಯದಾ ಪಯಣವೇನೋ ಎಂಬಂತೆ ಕಣ್ಣು ಕೀಲಿಸಿದಷ್ಟೂ, ದಾರಿ ಸವೆಸಿದಷ್ಟೂ ಕಂಬಿಯೇ. 'ಕಂಬಿ ಎಣಿಸೋದು' ಸುಲಭವಲ್ಲ ಅಂತ ಸ್ವಲ್ಪ ಸಮಯಕ್ಕೇ ಗೊತ್ತಾಗಿ ಹೋಯ್ತು. ಕರ್ನಾಟಕಕ್ಕೆ ಬೆನ್ನು ಹಾಕಿ ಗೋವಾದೊಳಕ್ಕೆ ಬಲಗಾಲಿಟ್ಟು ಪ್ರವೇಶಿಸಿದೆವು. 'ಕಾಡು'ಹರಟೆಯಲ್ಲಿ ನಡೆವಾಗ ಇದ್ದಕ್ಕಿದ್ದಂತೆ ನಿಂತ ನೆಲ ಕಪ್ಪಾಯಿತು. ಸುರಂಗದೊಳಕ್ಕೆ ಪ್ರವೇಶಿಸಿದ್ದೆವು. ಲಾಟೀನು ತೆಗೆದೆ. ಕಾಲು ನೆಲದ ಮೇಲೇ ಇದೆ ಎಂದು ಖಾತ್ರಿಯಾಗುವಷ್ಟರ ಮಟ್ಟಿಗೆ ಲಾಟೀನು ಬೆಳಕು ಧೈರ್ಯ ನೀಡಿತ್ತು. ಅನಾಯಾಸವಾಗಿ 'ಜುಗಾರಿ ಕ್ರಾಸ್‌'ನ ಸುರೇಶ ಮತ್ತು ಗೌರಿ ನಮ್ಮ ಪಕ್ಕದಲ್ಲೇ ನಡೆಯತೊಡಗಿದ್ದರು. ಅಷ್ಟರಲ್ಲೇ ರೈಲು ಕೂ ಎನ್ನುತ್ತಾ ಸುರಂಗದೊಳಗೆ ದಾಳಿಯಿಟ್ಟಿತು. ಕಿವಿಯ ತಮಟೆ ಉಳಿಸಿಕೊಳ್ಳುವ ಹೋರಾಟಕ್ಕೆ ಸಜ್ಜಾಗಿ ಎರಡೂ ಕೈಗಳೂ ಅಡ್ಡ ನಿಂತವು. ಸುರಂಗದ ಗೋಡೆಗೆ ಆತು ನಿಂತೆವು. ಅಬ್ಬ! ರೈಲೆಷ್ಟು 'ಊ'ದ್ದ ಇರುತ್ತದೆಂದು ಜ್ಞಾನೋದಯವಾಯ್ತು! 'ಕತ್ತಲಿಂದ ಬೆಳಕಿನೆಡೆಗೆ' ಹೆಜ್ಜೆ ಇಟ್ಟ ಆ ಕ್ಷಣ, ಯಪ್ಪಾ! ರೈನ್ ಕೋಟ್ ತುಂಬಾ ಪಾಚಿ, ಅಲ್ಲಲ್ಲಿ ಡಿಸೈನ್‌ನಂತೆ ಹತ್ತಿಕೊಂಡ ಇಂಬಳಗಳು. ರೈಲೇನಾದರೂ ಬರುತ್ತಿದ್ದರೆ ಹೆದರಿ ರಿವರ್ಸ್ ಗೇರ್‌ನಲ್ಲಿ ಓಡಬೇಕು, ಹಾಗೆ ಕಿರುಚಿಕೊಳ್ಳುತ್ತಲೇ ಕಲ್ಲಿನಿಂದ ಉಜ್ಜಿ ತೆಗೆದೆವು. ಹೀಗೆ ನಾಲ್ಕೈದು ಸುರಂಗ ಹಾದೆವು. 
ಅಷ್ಟರಲ್ಲಿ ನಮ್ಮ ಗುಂಪಿನ ನಾಲ್ಕೈದು ಮಂದಿ ಗುಂಪು ಚದುರಿ ಮುಂದೆ ಹೋಗಿದ್ದರು. ಏಳೆಂಟು ಕಿಮೀ ಕ್ರಮಿಸಿರಬಹುದು, ನೆಟ್‌ವರ್ಕ್ ಇಲ್ಲದೆ ಸತ್ತಂತೆ ತೆಪ್ಪಗೆ ಬಿದ್ದಿದ್ದ ನಮ್ಮ ಜಂಗಮವಾಣಿಗಳ ಮಧ್ಯೆ ಯಾವುದೋ ಒಂದು ಶಾಪವಿಮೋಚನೆಯಾದಂತೆ ಹಾಡತೊಡಗಿತು. ನಮ್ಮಿಂದ ತಪ್ಪಿ ಹೋದ ಗುಂಪು ನಡೆಯಲಾರದೆ ರೈಲು ಹತ್ತಿತ್ತು. ನಾವೂ ರೈಲಿನೆಡೆಗೆ ಓಡಿದೆವು. ಹೇಗೋ ಸಿಕ್ಕಿದ ಬೋಗಿ ಹತ್ತಿಕೊಂಡು ಕುಳಿತ ಸ್ವಲ್ಪ ಹೊತ್ತಿಗೆ ರೈಲು ನಿಂತಿತು. ಯಾವ ಸ್ಟಾಪ್ ಎಂದು ನೋಡೋಣವೆಂದರೆ ಬಾಗಿಲಲ್ಲಿ ಫೋಟೋಗ್ರಫಿ ಮಾಡುತ್ತಿದ್ದ ಪಂಜಾಬಿಗಳು ಅಲ್ಲಾಡುತ್ತಿಲ್ಲ. ಕೊನೆಗೂ ಕಂಡಿಯಲ್ಲಿ ಹಣಕಿ ಅದೇ ದೂದ್‌ಸಾಗರ ಎಂದು ತಿಳಿಯುವಷ್ಟರಲ್ಲಿ ರೈಲು ಓಡತೊಡಗಿತ್ತು!ಎರಡು ಸೆಕೆಂಡಿನಲ್ಲಿ ಜಲಪಾತದ ಅದಮ್ಯ ಸೌಂದರ್ಯ ಮಿಂಚಿ ಮರೆಯಾಯ್ತು. (ಸ್ವರ್ಗ ರಪ್ಪಂತ ಪಾಸಾಗೋದು ಅಂದ್ರೆ ಅದೇ ಏನೋ!) ಇನ್ನೇನು ಮಾಡಲು ಸಾಧ್ಯ? ತಲೆ ಕೆಡಿಸಿಕೊಳ್ಳದೆ ಗೋವಾ ಬೀಚಿನಲ್ಲಿ ಆಟವಾಡಿ ಹಿಂತಿರುಗೋಣ ಎಂದುಕೊಂಡೆವು. ಆದರೂ ಜಲಪಾತದ ಸದ್ದು 'ಬನ್ನಿ ಬನ್ನಿ' ಎಂದಂತಾಗುತ್ತಿತ್ತು. ಮಳೆಗಾಲದಲ್ಲಿ ಆ ಹಾದಿಯುದ್ದಕ್ಕೂ ಸಣ್ಣಪುಟ್ಟ ಜಲಪಾತಗಳ ಜಾತ್ರೆಯೇ ನೆರೆದಿರುತ್ತದೆ. ಹೀಗಾಗಿ ಧೋ ಎಂಬ ಸದ್ದು ಬೆಂಬಿಡುವುದೇ ಇಲ್ಲ. ಅಷ್ಟರಲ್ಲಿ ರೈಲು ನಿಂತಿತು. ಹಾರಿಕೊಂಡೆವು. 6 ಕಿಮೀ ಮುಂದೆ ಹೋಗಿದ್ದೆವು. ಚಾರಣದ ದಿಕ್ಕು ಬದಲಾಗಿತ್ತು. ಮಳೆ ಸುರಿಯುತ್ತಲೇ ಇತ್ತು.ಬೆಳಗ್ಗೆ 9ಕ್ಕೆ ನಡೆಯತೊಡಗಿದವರು ಸಂಜೆ 4ಕ್ಕೆ ಜಲಪಾತದೆದುರು ನಿಂತಿದ್ದೆವು. 
ಅಬ್ಬಾ, ಏನದರ ಭೋರ್ಗರೆತ! ರುದ್ರ ರಮಣೀಯವೆಂಬ ಉಪಮೆ ಜೀವಮಾನದಲ್ಲೊಮ್ಮೆ ಉಪಯೋಗಕ್ಕೆ ಬಂದಿತು. ಮಾಂಡೋವಿ ನದಿ ಸಮುದ್ರ ಸೇರುವ ಕನಸಿನ ಹಾದಿಯಲ್ಲಿ ಬಿಳಿ ನೊರೆಯಾಗಿ 1017 ಅಡಿ ಎತ್ತರದಿಂದ 100 ಅಡಿ ಅಗಲವಾಗಿ ಸೆರಗು ಹರಡಿಕೊಂಡು ಧುಮ್ಮಿಕ್ಕುತ್ತಿದ್ದಳು. ಜಲಪಾತದ ಎದುರು ನಿಂತರೆ ಕಣ್ಣು ಬಿಡಲಾಗದಂತೆ ಜಡಿಮಳೆಯ ರೀತಿ ನೀರು ಚಿಮ್ಮುತ್ತಿತ್ತು. ಭಾರತದ 5ನೇ ಎತ್ತರದ ಜಲಪಾತದ ಸಿಂಚನ ಪುಳಕ ತಂದಿತು. ಈ ಸೌಂದರ್ಯ ರಾಶಿ ಕಂಡು ಬದುಕು ಸಾರ್ಥಕವಾಯಿತೆಂದು ಇದುವರೆಗೆ ಯಾರಾದರೂ ಅದರಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನ ಕಾಡಿತು.ಜಲಪಾತದ ಪಕ್ಕದಲ್ಲೊಂದು ಬಸ್ ಸ್ಟ್ಯಾಂಡ್‌ನಂಥ ಜಾಗ, ಬಿಟ್ಟರೆ ಎದುರಿಗೆ ಹಳಿಯ ಇನ್ನೊಂದು ಬದಿ ಟೀ ಅಂಗಡಿ ಮತ್ತು ಒತ್ತೊತ್ತಾಗಿ ಹಾಕಿದರೆ 30 ಟೆಂಟ್ ಹಾಕಬಹುದಾದಷ್ಟು ಜಾಗ. ಅದಿಷ್ಟೇ ಪ್ರವಾಸಿಗರಿಗಾಗಿ ಅಲ್ಲಿರುವ ಸೌಲಭ್ಯಗಳು. ಒಂದು ತರಾ ಒಳ್ಳೆಯದೇ. ಇಲ್ಲಿ ಉಸಿರು ಕಟ್ಟಬಹುದಾದಷ್ಟು ಆಮ್ಲಜನಕ ಶ್ವಾಸಕೋಶವನ್ನೆಲ್ಲ ತುಂಬುತ್ತದೆ. ಅದನ್ನು ಸ್ಟೋರ್ ಮಾಡಿಕೊಳ್ಳಲು ದೇವರು ಇನ್ನೊಂದು ಅಂಗ ಕೊಡಬಹುದಿತ್ತೆನಿಸಿತು. ಆದರೆ ನಮ್ಮ ಭಾರತದ ಸುಸಂಸ್ಕೃತ ಧೀರಪುತ್ರರು ತಾವು ತಿಂದ ನಂತರ ಪ್ಲಾಸ್ಟಿಕ್, ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆದು ಭಾರ ಕಳೆದುಕೊಂಡಂತೆ ನಿರಾಳರಾಗುತ್ತಾರೆ. ಅಷ್ಟೇ ಅಲ್ಲ, ಟೀ ಅಂಗಡಿಯೊಳಗೆ ಅಡಗಿ ಕುಳಿತ ಬಿಯರ್, ವಿಸ್ಕಿ ಬಾಟಲ್‌ಗಳು ಹಗಲಿರುಳೆನ್ನದೆ ಸದ್ದು ಮಾಡುತ್ತವೆ. 
ಮಳೆಗಾಲದಲ್ಲಿ ವಾರಾಂತ್ಯದಲ್ಲಂತೂ ಸಾವಿರಾರು ಯುವ ಪ್ರವಾಸಿಗರು ಬರುತ್ತಾರೆ, ವಾಲುತ್ತಾರೆ, ಕೂಗುತ್ತಾರೆ, ಸಿಗರೇಟು ಹೊಗೆ ಬಿಟ್ಟು ಮರಗಳಿಗೆ ಕೆಲಸ ಕೊಡುತ್ತಾರೆ.ಈ ದೃಶ್ಯಾವಳಿ ನೋಡಿ ಬೆದರಿದ್ದ ಮುಂಚೆಯೇ ತಲುಪಿದ್ದ ನಮ್ಮ ಅರ್ಧ ತಂಡ ಸುರಂಗದ ಮೇಲ್ಭಾಗದಲ್ಲಿ 3 ಟೆಂಟು ಹಾಕಿ ಕುಳಿತಿದ್ದರು. ಆ ದೃಶ್ಯಾವಳಿ ನೋಡಿ ಬೆದರುವ ಸರದಿ ನಮ್ಮದಾಗಿತ್ತು. ಮನುಷ್ಯ ಮಾತ್ರರಾದವರಿಗೆ ಹುಡುಕಲಸಾಧ್ಯವಾದ ಸ್ಥಳವದು. ಒಂದು ಜಲಪಾತವನ್ನು ದಾಟಿ(ಹಾರಿ), ಬಂಡೆ ಹತ್ತಿ ಇಳಿದು, ಇಂಬಳ ತುಂಬಿದ ಹುಲ್ಲು ಹಾಸಿನ ಮೇಲೆ ಹಂಸತೂಲಿಕಾತಲ್ಪದಂತೆ ನಮ್ಮ ಟೆಂಟುಗಳು! ಟೆಂಟಿನಾಚೆಗೆ ಒಂದು ಹೆಜ್ಜೆ ಇಟ್ಟರೆ ಮೂಳೆಯೂ ಸಿಗದಂತೆ ಪ್ರಪಾತದ ಮಡಿಲಲ್ಲಿ ಮಡಿಯಬೇಕಿತ್ತು. ನಮ್ಮ ನಡುವೆಯೇ ಇದ್ದ ಈ ನಾಲ್ವರು ಟೆಂಟು ಹಾಕಿದ ಮಹಾನುಭಾವರನ್ನು ಕಂಡು ಮೂಕವಿಸ್ಮಿತರಾದೆವು. ಯಾವುದೇ ಕ್ಷಣದಲ್ಲಿ ನಮ್ಮ ಭವಿಷ್ಯದ ಗೆರೆಗಳು ಅಳಿಸಬಹುದೆಂದು ಯೋಚಿಸಿ ಹೆಜ್ಜೆ ಎತ್ತಿಡಲಾರದಷ್ಟು ಸುಸ್ತಾಗಿದ್ದರೂ ಮತ್ತೆ ಟೆಂಟ್‌ಗಳನ್ನು ಕಿತ್ತು ಕುಡುಕರ ಕುಟೀರಗಳ ಬಳಿ ತಂದೆವು. 
ಕಾಲು ಮುರಿದುಕೊಂಡು ಬಿದ್ದಿದ್ದ ಸೃಷ್ಟಿಯ ಅಪರಿಮಿತ ಸೌಂದರ್ಯದೆದುರು ಟೆಂಟ್‌ನೊಳಗೆ ಕಾಲು ಚಾಚಿ ಮಲಗಿದ ಸುಖ ರೋಮಾಂಚನ ನೀಡಿತ್ತು. ಸುರಿದಷ್ಟೂ ಮುಗಿಯದ ಜಲಪಾತ ನಮ್ಮ ರಾಗ ಕಳೆದುಕೊಂಡ ಕನ್ನಡದ ಹಾಡುಗಳಿಗೂ ಲಯ ತಪ್ಪದೆ ಸಂಗೀತ ನೀಡುತ್ತಿತ್ತು. ಎಲ್ಲರ ಪ್ರಾತಃವಿಧಿಗಳೂ ಏರುಪೇರಾಗಿ ಕತ್ತಲೆಯಲ್ಲಿ ತೆಪ್ಪಗೆ ಹಾಸಿ ಬಿದ್ದಿದ್ದ ರೈಲುಕಂಬಿಗಳು ಪಾವನವಾದವು. ಬೆಳಗಾಗುವಾಗ ಎಡೆಬಿಡದೆ ಸುರಿಯುತ್ತಿದ್ದ ಜಡಿಮಳೆಗೆ ನಮ್ಮ ಒದ್ದೆಯಾದ ಸ್ಲೀಪಿಂಗ್ ಬ್ಯಾಗ್, ಬಚ್ಚಲುಮನೆಯಂತಾದ ಟೆಂಟು, ಒದ್ದೆಮುದ್ದೆಯಾಗಿ ನಡುಗುತ್ತಿದ್ದ ನಮ್ಮನ್ನು ನೋಡಿ ಕನಿಕರವೇನು ಹುಟ್ಟಲಿಲ್ಲ. ಬೆಳಗ್ಗೆ 8.30ರ ರೈಲಿಗೆ ಓಡಲು ಗಂಟುಮೂಟೆ ಕಟ್ಟಿದೆವು.
ಬೆಂಗಳೂರಿಗೆ ಬಂದು ಎಷ್ಟು ದಿನವಾದರೂ ಇನ್ನೂ ಭೋರ್ಗರೆಯುತ್ತಿದೆ ಜಲಪಾತ, ರಿಂಗಣಿಸುತ್ತಿದೆ ಹಳಿಯ ಮೇಲಿನ ಹೆಜ್ಜೆಮಾತಿನ ಸಪ್ಪಳ, ಅಣಕಿಸುತ್ತಿದೆ ಹರಿದ ರೈನ್‌ಕೋಟ್, ಒದ್ದೆ ಬ್ಯಾಗಿನೊಳಗೆ ಮುದ್ದೆ ಬಿಸ್ಕೆಟ್. ನೆನಪುಗಳ ರೈಲು ಓಡುತ್ತಲೇ ಇದೆ, ಕೊನೆಯಿಲ್ಲದೆ ಹಳಿ ಉದ್ದಕ್ಕೆ ಮಲಗಿದೆ.
ಹೋಗುವುದು ಹೇಗೆ?
ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಜಲಪಾತ ಹೆಚ್ಚು ಮೈ ತುಂಬಿಕೊಂಡಿರುತ್ತದೆ. ಆದರೆ ಈ ಸಮಯದಲ್ಲಿ ರೈಲನ್ನೇ ನಂಬಿಕೊಳ್ಳಬೇಕು. ನದಿಯ ಹರಿವಿಗೆ ಜೀಪ್ ರೂಟ್ ಬಂದ್ ಆಗಿರುತ್ತದೆ. ಬೆಂಗಳೂರಿನಿಂದಾದರೆ ಬೆಳಗಾಂ ರೈಲನ್ನು ಹಿಡಿದು ಲೋಂಡಾದಲ್ಲಿ ಇಳಿಯಬೇಕು. ಅಲ್ಲಿಂದ ಗೋವಾ ರೈಲು ಹತ್ತಿದರೆ ದೂದ್‌ಸಾಗರ್ ಸ್ಟಾಪ್‌ನಲ್ಲೇ ರೈಲು ಒಂದು ನಿಮಿಷ ನಿಲ್ಲುತ್ತದೆ. ಚಾರಣ ಮಾಡುವವರು ಲೋಂಡಾದಿಂದ ರೈಲಿನಲ್ಲಿ ಕ್ಯಾಸಲ್ ರಾಕ್ ಇಲ್ಲವೇ ಕುಲೇಮ್ ಹೋಗಿ ಅಲ್ಲಿಂದ ನಡೆಯಬಹುದು. ಊಟ, ವಸತಿ, ಟಾಯ್ಲೆಟ್ ಯಾವುದೇ ಸೌಲಭ್ಯಗಳಿಲ್ಲದ ಕಾರಣ ಎಲ್ಲವನ್ನೂ ಹೊತ್ತೊಯ್ಯುವುದು ಒಳ್ಳೆಯದು. ಸುರಂಗ ಮಾರ್ಗಗಳಿರುವುದರಿಂದ ಒಂದು ಟಾರ್ಚ್ ಜೊತೆಯಲ್ಲಿರಲಿ. ಆಗಾಗ ರೈಲುಗಳು ಬರುವುದರಿಂದ (ಎಲ್ಲವೂ ದೂದ್‌ಸಾಗರ್‌ನಲ್ಲಿ ನಿಲ್ಲುವುದಿಲ್ಲ) ಚಾರಣ ಮಾಡುವವರು ಎಚ್ಚರಿಕೆ ವಹಿಸುವುದು ಅಗತ್ಯ.
 -ಕನ್ನಡಪ್ರಭದಲ್ಲಿ ಪ್ರಕಟ 

20.6.13

ಹೌದು ಸ್ವಾಮಿ...



ಹುಟ್ಟಿದ ಎರಡೂವರೆ ತಿಂಗಳಲ್ಲಿ ಬಹುತೇಕ ಕನ್ನಡಿಗರ ದಿನಚರಿಯಲ್ಲೊಂದಾದ ಬಿಗ್‌ಬಾಸ್ ಜೂ.29ರಂದು ತನ್ನ ಮನೆಯೊಳಗಿನ ಸದಸ್ಯರೊಬ್ಬರ ತೆಕ್ಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡದ ಮೇರು ತಾರೆಗಳ ಸಮ್ಮುಖದಲ್ಲಿ 50 ಲಕ್ಷ ನೀಡಿ ಅಂತರ್ಧಾನವಾಗಲಿದೆ. 
ಅಯ್ಯೋ ಮುಗಿಯಿತೇ.. ಎಂದು ಬೇಸರಿಸಿಕೊಳ್ಳಬೇಕಿಲ್ಲ. ಬಿಗ್‌ಬಾಸ್2 ತಯಾರಿಸುವ ಯೋಜನೆಗಳು ಚಾಲ್ತಿಯಲ್ಲಿವೆ. ಆದರೆ ಅದಕ್ಕಾಗಿ ಒಂದು ವರ್ಷ ಕಾಯಬೇಕಷ್ಟೇ. ಯಾಕೆಂದರೆ ಈಗಾಗಲೇ ಬಾಂಗ್ಲಾದಲ್ಲಿ ಶೋ ತಯಾರಿ ನಡೆದಿದೆ. ನಂತರ ಹಿಂದಿ, ಮತ್ತೆ ಕನ್ನಡ. ಇವೆಲ್ಲಕ್ಕೂ ಇರುವುದೊಂದೇ ಮನೆ. ಹಾಗಾಗಿ ಕಾಯಬೇಕಷ್ಟೇ.
ಪುಣೆ ಸಮೀಪದ ಲೋನಾವಾಲಾದ ಹಳೆಯ ಕಾರ್ಖಾನೆಯೊಂದರಲ್ಲಿ ಬಿಗ್‌ಬಾಸ್ ಮನೆಯನ್ನು ಏಳು ಸುತ್ತಿನ ಕೋಟೆಯಂತೆ ಒಳಗಿನವರಿಗೆ ಹೊರ ಜಗತ್ತಿನ ಸಂಪರ್ಕವಿಲ್ಲದಂತೆ ನಿರ್ಮಿಸಲಾಗಿದೆ. ಯೋಗರಾಜ್ ಭಟ್ ಬರೆದಂತೆ ಹೊರಗಡೆಯಿಂದ ಅರಮನೆ, ಒಳಗಡೆ ಹೋದರೆ ಸೆರೆಮನೆಯೇ ಸೈ. ಮನೆಯಲ್ಲಿರುವ ಸೆಲೆಬ್ರಿಟಿ ಸದಸ್ಯರ ಪ್ರತಿ ಉಸಿರಾಟವನ್ನು 55 ಕ್ಯಾಮೆರಾಗಳು ಕೇಳುತ್ತವೆ, ರಾಜ್ಯದ ಜನತೆ ನೋಡುತ್ತಾರೆ. ಇಲ್ಲಿ ವ್ಯಕ್ತಿತ್ವದ ಪೊಳ್ಳುತನ, ಗಟ್ಟಿತನವನ್ನು ಪರೀಕ್ಷೆಗೊಡ್ಡಲಾಗುತ್ತದೆ. ಎಲ್ಲ ಪರೀಕ್ಷೆಗಳಲ್ಲಿ ಜನಮನವನ್ನು ಗೆಲ್ಲುವವನೇ 50 ಲಕ್ಷಗಳ ಒಡೆಯ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಾನೆಲ್‌ಗಳಲ್ಲಿ ಜನಪ್ರಿಯವಾಗಿ ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯೊಂದರಲ್ಲಿ ತಯಾರಾಗುವಾಗ ಈ ರಿಯಾಲಿಟಿ ಶೋ ಹೆಗಲಿನ ಮೇಲೆ ಇತ್ತೀಚೆಗೆ ಈಟಿವಿ ಕಳೆದುಕೊಂಡ ಕೆಲವು ವೀಕ್ಷಕರನ್ನು ಮರಳಿ ತಂದುಕೊಡುವ ಹಾಗೂ ಬೇರೆ ಚಾನೆಲ್ ರಿಯಾಲಿಟಿ ಶೋಗಳಿಂದ ಕೆಲವು ವೀಕ್ಷಕರನ್ನು ಸೆಳೆದುಕೊಳ್ಳುವ ಜವಾಬ್ದಾರಿ ಇತ್ತು. ಮತ್ತು ಆ ಕೆಲಸವನ್ನು ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಿದೆ ಎನ್ನುತ್ತಿದೆ ಟಿಆರ್‌ಪಿ.
ಆರಂಭದ ದಿನವೇ 4.5 ಟಿಆರ್‌ಪಿಯೊಂದಿಗೆ ಭರವಸೆ ಮೂಡಿಸಿದ ಬಿಗ್‌ಬಾಸ್ ವಾರದ ಕೊನೆಯಲ್ಲಿ 6.8ರ ದಾಖಲೆ ಟಿಆರ್‌ಪಿ ಕಂಡು ಅಚ್ಚರಿ ಮೂಡಿಸಿದೆ. ಜೊತೆಗೆ 5.8 ಆವ್‌ರೇಜ್ ಟಿಆರ್‌ಪಿಯನ್ನು ಕಾಯ್ದುಕೊಂಡು ಬಂದಿದೆ.ಎಲ್ಲದರಲ್ಲೂ ಒಳ್ಳೆಯದು, ಕೆಟ್ಟದ್ದು ಇದ್ದೇ ಇರುತ್ತದೆ. ಒಳ್ಳೆಯದಕ್ಕೆ ಮಾತ್ರ ಪಂಚೇಂದ್ರಿಯಗಳನ್ನು ತೆರೆದಿಟ್ಟು ನೋಡಿದರೆ ಹುಚ್ಚು ಮನಸ್ಸಿನ ಹತ್ತು ಹಲವು ಮುಖಗಳ ಅನಾವರಣಕ್ಕೆ ವೇದಿಕೆಯಾಗಿರುವ ಬಿಗ್‌ಬಾಸ್ ಮನುಷ್ಯನ ವರ್ತನೆ ಬಗ್ಗೆ ತಿಳಿಯಬಯಸುವವರಿಗೆ ಸಹಾಯಕ. ಜೊತೆಗೆ ನಮ್ಮೊಳಗಿನ ಮಂಕೀ ಮ್ಯಾನ್‌ಗೆ ಹಿಡಿದ ಕನ್ನಡಿಯಾಗಿಯೂ ಕಾರ್ಯಕ್ರಮವನ್ನು ಸ್ವೀಕರಿಸಿದ್ದಾರೆ ಕನ್ನಡದ ಜನ.
ರಾಷ್ಟ್ರೀಯ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿದ್ದ ಹಿಂದಿಯ ಬಿಗ್‌ಬಾಸ್‌ನ ವೋಟಿಂಗ್ ಸಮಯದಲ್ಲಿ ಸದಸ್ಯರಿಗೆ ಬೀಳುತ್ತಿದ್ದ ಮತಗಳು ಹೆಚ್ಚೆಂದರೆ 35,000. ಆದರೆ ಕನ್ನಡದ ಮಣ್ಣಿಗೆ ಸೀಮಿತವಾಗಿರುವ ಕನ್ನಡದ ಬಿಗ್‌ಬಾಸ್‌ನ ಸದಸ್ಯರು ಗಳಿಸುತ್ತಿರುವ ಮತಗಳು ತಲಾ 46,000ಕ್ಕೂ ಹೆಚ್ಚು. ಇದು ಕನ್ನಡದ ಪ್ರೇಕ್ಷಕ ತನ್ನನ್ನು ತಾನು ಕಾರ್ಯಕ್ರಮದ ಒಂದು ಭಾಗವಾಗಿ ಗುರುತಿಸಿಕೊಂಡಿರುವುದನ್ನು ಸೂಚಿಸುತ್ತದೆ.
- ರಾಘವ್ ಹುಣಸೂರು, ಈಟಿವಿ ಕಾರ್ಯಕ್ರಮ ಮುಖ್ಯಸ್ಥ
 
(ಚಿತ್ರ ಪ್ರಭದಲ್ಲಿ ಪ್ರಕಟ - ೧4 -6 - 2 0 1 3 )

ಬಿಗ್‌ಬಾಸ್ ಮನೆಯಂಗಳದಲ್ಲಿ




ಎಸ್, ಐ ಆ್ಯಮ್ ಅಲೂಫ್. ನಂಗೆ ಒಬ್ನೇ ಇರೋಕೆ ಇಷ್ಟ. ನನ್ನ ಫ್ಯಾಮಿಲಿ, ಚಿಕ್ಕ ಗೆಳೆಯರ ಬಳಗ ಇಷ್ಟರ ಮಧ್ಯೆ ಮಾತ್ರ ನಾ ತೆರೆದುಕೊಳ್ಳಬಲ್ಲೆ ಎನ್ನುತ್ತಾ ಆ್ಯಟಿಟ್ಯೂಡ್ ಪದಕ್ಕೆ ತದ್ಭವದಂತೆ ಕುಳಿತ ಕಿಚ್ಚನ ಖದರೇ ಅಂಥದು. ಯಾರನ್ನೂ ಓಲೈಸುವ ಸೋಗಿಲ್ಲದೆ, ಸ್ವಲ್ಪ ಸಿಡುಕುತ್ತಾ, ಪತ್ರಕರ್ತರಿಗೆ ತಿರುಗಿ ಕಾಲೆಳೆಯುತ್ತಲೇ ಕಾಫಿ ಕುಡೀರಿ ಎಂದು ಉಪಚರಿಸುತ್ತಾ ಬಿಗ್‌ಬಾಸ್, ಸಿನಿಮಾ, ಮನೆ, ನೆನಪು ಎಂದೆಲ್ಲ ಮನಬಿಚ್ಚಿ ಕುಳಿತದ್ದು ನಟ, ನಿರ್ದೇಶಕ, ಹಾಡುಗಾರ, ನಿರ್ಮಾಪಕ, ಮತ್ತು ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್.
ಸಿನಿಮಾ ಮಾಡಿದಾಗ ಜನರನ್ನು ಚಿತ್ರಮಂದಿರಕ್ಕೆ ಎಳೆದು ತರ್ಬೇಕು. ಆದರೆ ಬಿಗ್‌ಬಾಸ್‌ನಲ್ಲಿ ಹಾಗಲ್ಲ, ನಾವೇ ಜನರ ಮನೆಗೆ ಹೋಗ್ತೀವಿ. ಇದರಿಂದ ಜನ ನಮ್ಮೊಂದಿಗೆ ಹೆಚ್ಚು ನಿಕಟ ಸಂಬಂಧ ಗುರುತಿಸಿಕೊಳ್ಳುತ್ತಾರೆ. ಇದು ನನಗೆಷ್ಟು ಖುಷಿ ಕೊಡ್ತಿದೆ ಎಂದರೆ ಬೇರೆಲ್ಲ ಶೂಟಿಂಗ್‌ಗಳನ್ನೂ ಜುಲೈಗೆ ಮುಂದೆ ಹಾಕಿಕೊಂಡು ಕುಳಿತಿದ್ದೇನೆ. ಅದೂ ಅಲ್ಲದೆ ಹೊಸ ಅನುಭವಗಳಿಗೆ ತೆರೆದುಕೊಂಡಾಗಲೇ ಏಕತಾನತೆ ಹೋಗುವುದಲ್ಲವೇ? ಕಲೀಬೇಕು ಅನ್ನೋ ಮನಸ್ಸಿದ್ರೆ ಎಲ್ಲದರಲ್ಲೂ ಕಲಿಯೋಕಿರತ್ತೆ. ಈ ರಿಯಾಲಿಟಿ ಶೋ ಕೂಡಾ ಏನೇನೋ ಕಲಿಸುತ್ತದೆ.ಸಾಮಾಜಿಕ ಜಾಲತಾಣಗಳಲ್ಲಿ ಜನ ಅವ್ರು ಹೀಗ್ಮಾಡ್ಬಾರ್ದಿತ್ತು, ಇವ್ರು ಹೀಗ್ಮಾಡ್ಬೇಕಿತ್ತು ಎಂದೆಲ್ಲ ಸ್ಪಂದಿಸುವಾಗ ಖುಷಿಕೊಡತ್ತೆ. ಏಕೆಂದರೆ ಜನ ಅಷ್ಟರ ಮಟ್ಟಿಗೆ ಕಾರ್ಯಕ್ರಮದೊಳಕ್ಕೆ ಇಳಿದಿದ್ದಾರೆ ಎನ್ನುತ್ತಾರೆ 'ಬಚ್ಚನ್‌'. 
ಬಿಗ್‌ಬಾಸ್‌ಗೆ ಬಂದು ಚಂದ್ರಿಕಾರ ಮಗ ವಯಸ್ಸಿಗೆ ಮೀರಿದ ಮಾತನಾಡಿದ ದಿನ ತಮಗೇ ಗೊತ್ತಿಲ್ಲದಂತೆ ಮಗಳು ಸಾನ್ವಿಯೊಡನೆ ಎಂದಿಗಿಂತ ಒಂದು ಗಂಟೆ ಹೆಚ್ಚು ಕಳೆದರಂತೆ ಸುದೀಪ್. ಆದರೂ ಮಗಳಿಗಾಗಿ ಸಿಗರೇಟು ಬಿಡುವುದಾಗಿ ಹೇಳಿಕೊಂಡಿದ್ದ ಸುದೀಪ್ ಕೈಲಿ ಸಿಗರೇಟ್ ಕಿಡಿ ನರಳುತ್ತಿತ್ತು. ಈ ಪ್ರೆಶರ್‌ನಲ್ಲಿ ಅಷ್ಟು ಕಂಟ್ರೋಲ್ ಮಾಡಲಾಗುತ್ತಿಲ್ಲ. ಆದರೆ ಸಿಗರೇಟ್‌ಗೆ ಡೈವೋರ್ಸ್ ನೀಡುವುದಂತೂ ಖಂಡಿತ. ಕೊಂಚ ಸಮಯ ಬೇಕಷ್ಟೇ ಎಂದು ಮತ್ತೊಮ್ಮೆ ವಾಗ್ದಾನ ನೀಡುವುದನ್ನು ಮಾತ್ರ ಮರೆಯಲಿಲ್ಲ. 
ಸೆರೆಮನೆಯೊಳಗಿರುವ ಎಲ್ಲ ಸದಸ್ಯರಿಗೆ ಹೊರಜಗತ್ತಿನೊಂದಿಗೆ ಏಕಮಾತ್ರಕೊಂಡಿಯಾಗಿರುವ ತಾನು ಯಾರ ವರ್ತನೆ ಬಗ್ಗೆಯೂ ಜಡ್ಜ್‌ಮೆಂಟಲ್ ಆಗಿರಕೂಡದು ಹಾಗೂ ಆಗಿಲ್ಲ ಎಂಬುದು ಕಿಚ್ಚನ ಖಡಕ್ ನುಡಿ. ಜಿಮ್‌ಗೆ ಹೋಗಿ ಗಂಟೆಗಟ್ಟಲೆ ಕಳೆಯುವುದು ಅದೇಕೋ ಸುದೀಪ್‌ಗೆ ಆಗಿಬರಲ್ಲಂತೆ. ಬದಲಿಗೆ ಸೈಕ್ಲಿಂಗ್,  ಬ್ಯಾಡ್‌ಮಿಂಟನ್ ಆಡಿ ದೇಹ ದಂಡಿಸುತ್ತಾರೆ. ಪ್ರತಿದಿನ ಒಂದಾದರೂ ಸಿನಿಮಾ ನೋಡದೇ ಮಲಗಿದರೆ ನಿದ್ದೆ ಬರುವುದಿಲ್ಲ. ಅದೇ ಪುಸ್ತಕ ಹಿಡಿದುಕೊಂಡರೆ ಮಾತ್ರ ನಾಲ್ಕು ಪುಟಗಳನ್ನು ಮೀರಿ ಮುಂದೆ ಹೋಗುವುದಿಲ್ಲ. ವಿಷ್ಣುವರ್ಧನ್ ಅಂದರೆ ಅಚ್ಚುಮೆಚ್ಚು. ಕಾಲೇಜು ದಿನಗಳಲ್ಲಿ ನಾಟಕಗಳಿಗೆ ಸ್ಕ್ರಿಪ್ಟ್ ತಯಾರಿಸುತ್ತಿದ್ದ ತನಗೆ ಯಾರೂ ಮುಂದೆ ಹೋಗಲೇ ಬಿಡುತ್ತಿರಲಿಲ್ಲ. ಆಗೆಲ್ಲ ನಂಗೊಂದ್ ಸಣ್ಣ ಪಾತ್ರ ಸಿಕ್ಕಿದ್ರೆ ಅಂತ ಆಸೆಕಂಗಳಿಂದ ನೋಡ್ತಾ ಕನಸು ಕಾಣ್ತಿದ್ದೆ. ಆ ದಿನಗಳು ನಿಜಕ್ಕೂ ಚೆನ್ನಾಗಿತ್ತು ಎಂದು ನೆನಪಿಗೆ ಹೊರಳಿದ ಸುದೀಪ್ ಆಗಲೇ ಹಾಡು ಮತ್ತು ಗಿಟಾರ್‌ನಲ್ಲಿ ತೊಡಗಿಸಿಕೊಂಡಿದ್ದರಂತೆ.
- ರೇಶ್ಮಾ ರಾವ್

19.6.13

ಅಪ್ಪನಿಗೇನೂ ಗೊತ್ತಿಲ್ಲ!

ಮೊನ್ನೆ (ಜೂ.16) ಅಪ್ಪಂದಿರ ದಿನ. ಈ ಹಿನ್ನೆಲೆಯಲ್ಲಿ ಇದೊಂದು ಲಹರಿ...
ಹುಟ್ಟಿ ಎರಡು ದಶಕಗಳಲ್ಲಿ ಐದೂವರೆ ಅಡಿ ಬೆಳೆದಿದ್ದೇನೆ. ಭುಜಕ್ಕೆ ಭುಜ ತಾಗಿಸಿ ನಿಂತರೂ ಅಪ್ಪ ಮಾತ್ರ ಹೆಗಲಲ್ಲಿದ್ದೇನೋ ಎಂಬಂತೆ ಜಾಗರೂಕತೆ ವಹಿಸುತ್ತಾರೆ. ಊಟಕ್ಕೆ ಕುಳಿತಾಗೆಲ್ಲ ಹೇಗೆ ಊಟ ಮಾಡಬೇಕೆಂದು ಹೇಳುವ ಅಪ್ಪನ ಪರಿಪಾಠ ನನಗೀಗ ಬಾಯಿಪಾಠವೇ ಆಗಿಹೋಗಿದೆ. ಅಪ್ಪನಿಗೆ ಮಗಳು ಬೆಳೆದಿದ್ದಾಳೆಂಬುದೇ ಗೊತ್ತಿಲ್ಲ.
ಚೂರು ಎಡವಿದರೂ ಕಿರುಚುವುದು ಅಭ್ಯಾಸವೆಂಬಷ್ಟು ಸಹಜವಾಗಿದ್ದರೂ, ಕಿರುಚಿದ ಸದ್ದಿಗಿಂತಾ ಜೋರಾಗಿ ಹೆಜ್ಜೆ ಸಪ್ಪಳ ಮಾಡಿಕೊಂಡು ಓಡಿ ಬರುವ ಅಪ್ಪ ಹತ್ತಿರ ಬಂದ ಮೇಲೆ ಅದೇನಾಗಿ ಹೋಗಿದೆಯೋ ಎಂಬ ಭಯಕ್ಕೆ ನನ್ನೆಡೆಗೆ ನೋಡುವುದೇ ಇಲ್ಲ. ಆಗೆಲ್ಲ ಇಷ್ಟು ಸಣ್ಣದಕ್ಕೆ ಅಷ್ಟು ದೊಡ್ಡದಾಗಿ ಕಿರುಚಿದೆನೆಂಬ ಪಾಪಪ್ರಜ್ಞೆ, ಅದಕ್ಕಾಗಿ ಅತಿಯಾಗಿ ಪ್ರತಿಕ್ರಿಯಿಸಿದ ಅಪ್ಪನ ಬಗ್ಗೆ ಕೋಪ ಮತ್ತು ಅವರ ಕಾಳಜಿಯ ಬಗ್ಗೆ ಹೆಮ್ಮೆ ಎಲ್ಲವೂ ಒಟ್ಟೊಟ್ಟಿಗೇ ಆಗುತ್ತದೆ. ಆದರೂ ತಾವು ಬರಲೆಂದೇ ಮಗಳು ಕಡ್ಡಿ ಗುಡ್ಡ ಮಾಡುತ್ತಾಳೆಂದು ಅಪ್ಪನಿಗೆ ಗೊತ್ತಿಲ್ಲ.
ನನಗೆ ಸಣ್ಣದಾಗಿ ತರಚಿದರೂ ಎಣ್ಣೆ, ಆಯಿಂಟ್‌ಮೆಂಟ್ ತಂದು ನಿಲ್ಲುವ ಅಪ್ಪನ ಅಂಗಾಲು ಮಾತ್ರ ಐನೂರು ಬಿರುಕು ಬಿಟ್ಟು ತಮಗಿಲ್ಲದ ಎಣ್ಣೆ, ವ್ಯಾಸಲೀನ್ ಭಾಗ್ಯಕ್ಕೆ ಕರುಬುತ್ತಾ ಬಾಯಿ ಬಾಯಿ ಬಿಡುತ್ತಿರುತ್ತವೆ. ಆದರೂ ಅಪ್ಪನಿಗೆ ಔಷಧ ಬೇಕಾಗಿರುವುದು ಅವರಿಗೇ ಎಂದು ಗೊತ್ತಿಲ್ಲ.
ದೂರದ ಊರಲ್ಲಿರುವ ಮಗಳು ಕುಳಿತರೂ ನಿಂತರೂ ಊರಿನಲ್ಲೆಲ್ಲ ಸುದ್ದಿ ಹರಡುವುದು ಹೇಗೆಂದು ಅಮ್ಮ ಕೇಳುವಾಗೆಲ್ಲ ಅಪ್ಪನ ಕರಿಮೀಸೆಯ ಮಧ್ಯ ಮಧ್ಯ ಅಡಗಿ ಕುಳಿತ ಬಿಳಿಕೂದಲು ಕಿಸಕ್ ಎಂದು ಶಬ್ದ ಮಾಡದೆ ನಕ್ಕ ವಿಷಯ ಫೋನಿನಲ್ಲಿ ನನಗೆ ಕೇಳುತ್ತದೆ. ಆದರೂ ಅಪ್ಪನಿಗೂ ಅದು ಹೇಗೆ ವಿಷಯ ಹಬ್ಬಿತೆಂದು ಗೊತ್ತಿಲ್ಲ! 
ಮಕ್ಕಳು ಮನೆಗೆ ಬರುತ್ತಿದ್ದಾರೆ ಎಂಬ ವಿಷಯ ತಿಳಿಯುವುದರೊಳಗೆ ಕೆಜಿಗಟ್ಟಲೆ ಹಣ್ಣು, ತರಕಾರಿ, ತಿಂಡಿ ಮಾಡಲು ಸಾಮಾನು ತಂದು ಮನೆಯ ತುಂಬಾ ರಾಶಿ ಹಾಕುವ ಅಪ್ಪನಿಗೆ ಮಕ್ಕಳ ಹೊಟ್ಟೆಯ ಗಾತ್ರ ಸಣ್ಣದೆಂದು ಇನ್ನೂ ಗೊತ್ತಿಲ್ಲ.
ಒಂದು ತಿಂಗಳು ಡ್ರೈವಿಂಗ್ ಕ್ಲಾಸ್‌ಗೆ ಹೋದ ಮಗಳು ಕಾರು ಓಡಿಸಬಲ್ಲಳೆಂದು ಗೊತ್ತಿಲ್ಲ. ನಲ್ವತ್ತಕ್ಕಿಂತ ಜೋರಾಗಿ ಸ್ಕೂಟಿ ಓಡಿಸಬೇಡ ಎನ್ನುವ ಅಪ್ಪನಿಗೆ ಟ್ರಾಫಿಕ್ ಸಿಗ್ನಲ್ ಹಾರಿಸುತ್ತೇನೆಂದು ಗೊತ್ತಿಲ್ಲ, ಅನ್ನ ಸಾಂಬಾರ್ ತಿಂದೆನೆಂದು ಹೇಳಿ ಸ್ಯಾಂಡ್‌ವಿಚ್ ತಿಂದು ಮಲಗುವುದು ಗೊತ್ತಿಲ್ಲ. ಇಷ್ಟೆಲ್ಲ ಆದ್ಮೇಲೂ ಅಪ್ಪ ನನಗೇ ಬೈತಾರೆ, ಎಂಥ ಗೊತ್ತಿಲ್ಲದಿದ್ದರೂ 'ಎಲ್ಲ ಗೊತ್ತಿದೆ' ಅನ್ನೋಕ್ಕೊಂದು ಗೊತ್ತು ಅಂತ!- 
 (ಕನ್ನಡಪ್ರಭದ ರಂಗೋಲಿಯಲ್ಲಿ ಪ್ರಕಟ)
ರೇಶ್ಮಾ ರಾವ್ ಸೊನ್ಲೆ

21.5.13



ಆಂಟಿ ವೈರಸ್

ಬೇಕು ಅನ್ನುವರುಂಟೆ ನಿನ್ನ...
'ಆಂಟೀ..'ಸುತ್ತಲೂ ನೋಡಿದೆ. ಯಾವ ಆಂಟಿಯೂ ಉತ್ತರಿಸಲಿಲ್ಲ. ನಿಮಿಷವೂ ಆಗಿರಲಿಲ್ಲ. ಆ 11ರ ಹುಡುಗಿ ಮತ್ತೆ ಆಂಟೀ ಅಂದಿತು. ಯಾಕೋ ಬಸ್‌ನಲ್ಲಿರುವ ಹುಡುಗರೆಲ್ಲ ನನ್ನನ್ನೇ ನೋಡುತ್ತಿದ್ದಾರೆನಿಸಿತು. ನಿಧಾನವಾಗಿ ಹುಡುಗಿಯೆಡೆ ತಿರುಗಿದೆ. ಅರೆ! ನನ್ನೇ ನೋಡುತ್ತಿದ್ದಾಳೆ. 'ಆಂಟೀ ನಂಗೆ ವಿಂಡೋ ಸೀಟ್ ಕೊಡ್ತೀರಾ?' ಎವೆ ಇಕ್ಕದೆ ನೋಡುತ್ತಾ ಕೇಳಿದಳು. 
ಅಯ್ಯೋ ನಾನಾ ಆಂಟೀ?! ಕೊಡುತ್ತಿದ್ದೆನೇನೋ ಅಕ್ಕ ಅಂದಿದ್ದರೆ. ಹಿಂದಿದ್ದ ಆ ಚೆಂದದ ಹುಡುಗ ಬೇರೆ ಕಿಸಕ್ ಅಂದ. 'ನನ್ಗೆ ವಾಮಿಟಿಂಗ್ ಸೆನ್ಸೇಷನ್. ಸೋ ಹಿಂದೆ ಕುಳಿತಿರೋ ಅಂಕಲ್‌ಗೆ ಕೇಳು, ಬಿಟ್‌ಕೊಡ್ತಾರೆ' ಅಂದೆ ಮುಯ್ಯಿ ತೀರಿಸುವಂತೆ. ಅವಳು ಹೋಗಿ ಕೇಳಿದಳು. 'ಆಂಟಿ ಬರ್ತಾರಂದ್ರೆ ಬಿಟ್ ಕೊಡ್ತೀನಿ. ನೀ ಅಲ್ಲಿ ಕೂತ್ಕೋ ಪುಟ್ಟಿ' ಅಂದ!
ಈಗಿನ ಕತೆ ಹಾಳಾಗಿ ಹೋಗ್ಲಿ, ಆರನೇ ತರಗತಿಯಲ್ಲಿದ್ದಾಗ ಎದುರು ಮನೆಯ ಆಗ ತಾನೇ ಮಾತು ಕಲಿತ ಹುಡುಗನನ್ನು ಪ್ರಿ ಕೆಜಿಗೆ ನಮ್ಮ ಶಾಲೆಗೇ ಸೇರಿಸಿದರು. ಬಸ್ಸಿನಲ್ಲಿ ಶಾಲೆಗೆ ಅರ್ಧ ಗಂಟೆಯ ಪ್ರಯಾಣ. ಹೀಗಾಗಿ ಆತನನ್ನು ನನ್ನ ಸುಪರ್ದಿಯಲ್ಲಿ ಬಿಟ್ಟು, 'ಆಂಟಿ ಕೈ ಹಿಡ್ಕೊಂಡೇ ರೋಡ್ ದಾಟ್ಬೇಕು ಆಯ್ತಾ?' ಎಂದು ಗಿಣಿಗೆ ಹೇಳಿದಂಗೆ ಹೇಳಿಕೊಟ್ಟರು. ಆ ಹುಡುಗನೂ ಅದನ್ನು ಗಿಣಿಯಂತೇ ಕಲಿತೂ ಬಾಯಿ ಬಿಟ್ಟರೆ ಆಂಟಿ ಎನ್ನತೊಡಗಿದ. ಅದೆಂಥ ಅವಮಾನವೆನಿಸುತ್ತಿತ್ತೆಂದರೆ ಒಬ್ಬಳೇ ಸಿಕ್ಕಾಗೆಲ್ಲ 'ಅಕ್ಕಾ' ಎನ್ನಬೇಕೆಂದು ಮುದ್ದಿನಿಂದ, ಗುದ್ದಿನಿಂದ ಸಾವಿರ ಬಾರಿ ಹೇಳಿಯಾಯಿತು. ಊಹ್ಞೂಂ, ಹುಡುಗ ಮಾತೃವಾಕ್ಯ ಪರಿಪಾಲಕನ ರೀತಿ ಆಂಟಿ ಎನ್ನುವುದನ್ನು ಬಿಡಲಿಲ್ಲ. ಹುಡುಗನ ದೂರಾಲೋಚನೆ ಗಮನಿಸಿದಿರಾ? ದೊಡ್ಡ ಆದ ಮೇಲೆ 'ಆಂಟಿ ಪ್ರೀತ್ಸೆ' ಎನ್ನಬಹುದು. 'ಅಕ್ಕಾ ಪ್ರೀತ್ಸೆ' ಎನ್ನಲಾದೀತೇ? ಈ ಹುಡುಗರ ಬುದ್ಧಿಯೇ ಹೀಗೆ!
ವರ್ಷದ ಹಿಂದೆ ಓದು ಮುಗಿದು ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ ಸೇರಿಕೊಂಡೆ. ಸೀರೆ ಉಡುವುದು ಕಡ್ಡಾಯವಾಗಿತ್ತು. ಆಗ ತಾನೇ ಸೀರೆ ಉಟ್ಟು ನಡೆಯಲು ಕಲಿಯುತ್ತಿದ್ದ ನನ್ನದೇ ವಯಸ್ಸಿನ ನಾಲ್ವರು ಹೆಣ್ಣುಮಕ್ಕಳು (?) ಜ್ಯೂಸ್ ಕುಡಿಯಲೆಂದು ಹೋಟೆಲ್‌ಗೆ ಹೋದೆವು. 20ರ ಹರೆಯದ ಸರ್ವರ್ ಬಂದು 'ಏನ್ ಬೇಕು ಆಂಟಿ?' ಎಂದು ಗೆಳತಿಯ ಮುಖ ನೋಡುತ್ತಾ ಕೇಳಿದ. ಎಲ್ಲರಿಗೂ ಇರಿಸುಮುರಿಸು. 'ನಾಲ್ಕು ಮೂಸಂಬಿ ಜ್ಯೂಸ್ ತಗೊಂಬಾ ಮರೀ' ಎಂದಳು. ಅವನು ತಿರುಗಿ ಬಂದ ಬಾಣಕ್ಕೆ ಹೆದರಿ ಒಳಹೋದ ನಂತರ ಮತ್ತೆ ನಾಲ್ಕು ಬಾರಿ 'ಮರೀ ಜ್ಯೂಸ್ ಇನ್ನೂ ಆಗಿಲ್ವಾ?' ಎಂದು ಬೇಕೆಂದೇ ಕೇಳಿದೆವು. ಮತ್ತಾತ ಎದುರಿಗೆ ಬರಲೇ ಇಲ್ಲ. ಬೇರೊಬ್ಬ ಸರ್ವರ್ ಜ್ಯೂಸ್ ತಂದಿಟ್ಟ. ತಕ್ಕ ಶಾಸ್ತಿ ಮಾಡಿದ ಸಂಭ್ರಮದೊಂದಿಗೆ ಹೊರ ಬಂದೆವು. ಅಲ್ಲಾ, ಈ ಹುಡುಗ್ರು ನಾಟೀ ಅನ್ನಲಿ, ತುಂಟಿ, ಪಂಟಿ, ಬಂಟಿ ಅನ್ನಲಿ, ಹೋಗ್ಲಿ ಘಾಟಿ ಅಂತನೇ ಅನ್ಲಿ- ಒಳಗೊಳಗೇ ಬೀಗಿಬಿಡುತ್ತೇವೆ. ಆದರೆ ಈ ಆಂಟಿ ಅಂತಾರಲ್ಲಾ ಮೈ ಎಲ್ಲ ಪರಚಿಕೊಳ್ಳುವ ಹಾಗಾಗುತ್ತೆ. ಹೀಗಾಗಿ ಈ ಹುಡುಗರೆಂಬ ಅಂಕಲ್‌ಗಳು ನಮ್ಮ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕಾಗಿ ಈ ಮೂಲಕ ವಿನಂತಿ.ನಮ್ಮಮ್ಮನೇ ಇನ್ನೂ ಆಂಟೀ ಪಟ್ಟದಿಂದ ಪ್ರಮೋಶನ್ ಪಡೆದಿಲ್ಲ. ಅಂಥದ್ದರಲ್ಲಿ ಪ್ರತಿ ವರ್ಷವೂ ಸ್ವೀಟ್ ಸಿಕ್ಸ್‌ಟೀನ್‌ನ ಬರ್ತ್‌ಡೇ ಆಚರಿಸಿಕೊಳ್ಳುವ ನಮಗೆ ಆಂಟೀ ಅಂದ್ರೆ ಹೇಗೆ ಸಹಿಸೋಣ ಹೇಳಿ?!
- ರೇಶ್ಮಾ ರಾವ್ ಸೊನ್ಲೆ (ಕನ್ನಡಪ್ರಭದಲ್ಲಿ ಮೇ 21, 2013 ರಂದು ಪ್ರಕಟ )

12.5.13

ಮರಳಿ ಮರೆಯಾಗಿ..

ಅವನ ಪ್ರೀತಿನೇ ಹಾಗೆ.. ಬೆಂಗಳೂರಿನ ಮಳೆ ತರಾ. ಸುರಿದಿದ್ದು ಮಳೆನೋ, ಪ್ರೀತಿನೋ ಅಂತ ತಲೆಗೆ ಹೋಗೋದ್ರೊಳಗೆ ಗುರುತೇ ಸಿಗದಂತೆ ನೆಲದ ಪಸೆ ಆರಿರತ್ತೆ... ಆಗಸದ ಒಡಲು ತೀರಿರತ್ತೆ .
ಪ್ರೀತಿ! ಅದೇಕೆ ಅಷ್ಟು ಆಟವಾಡಿಸುತ್ತೆ ಅಂತಾನೆ ಗೊತ್ತಾಗಲ್ಲ.. ಬೇಡವೆಂದು  ದೂರವಿದ್ದಾಗ  ಭೋರ್ಗರೆದು ಸುರಿಯುತ್ತೆ... ಪ್ರವಾಹೋಪಾದಿಯಲ್ಲಿ ಹರಿಯುತ್ತೆ.. ಪ್ರವಾಹ ಪರಿಪರಿಯಾಗಿ ಕಾಡಿ, ಅದರೊಳಗೇ ಮುಳುಗುವ ಬಯಕೆಯಲ್ಲಿ ತೇಲುವಾಗಾಗಲೇ ಅದರ ಒಡಲು ಬತ್ತಿ ಬರಗಾಲದ ಬರಡು ಭೂಮಿ ಧುತ್ತೆಂದು ಎದುರಾಗುತ್ತೆ..
ಮತ್ತೆ ಹೇಳಿಕೊಳ್ಳಲಾಗದ ಅವ್ಯಕ್ತ ಭಯ, ಮಣ್ಣೊಳಗೆ ಮುದುಡಿ ಕೂರುವ ಅಗೋಚರ ಬಯಕೆಗಳು. ಬಲಹೀನ ಮನಸ್ಸಿಗೆ ಬೆಂಬಲವಾಗಿ ನಿಲ್ಲುವ ಪ್ರೀತಿಯೇ ಮತ್ತೊಮ್ಮೆ ದುರ್ಬಲಗೊಳಿಸಿ ದಿಗಿಲುಗೊಲಿಸುತ್ತೆ.
ಪ್ರೀತಿಸಲೇಬೇಕೆಂಬ ಹುಚ್ಚಿತ್ತು. ಹುಚ್ಚು ಹೆಚ್ಚಾಗಿ ಹುಚ್ಚುಚ್ಚಾಗಿ ಹಚ್ಚಿಕೊಂಡು ಹಚೀ ಎಂದರೂ ನಿಲ್ಲಲಾರದ ಒರತೆ. ಆ ಕಡೆ ಚಿಮ್ಮಲಾರದ ಚಿಲುಮೆ. ಬ್ರೇಕ್ ಫೇಲ್ ಆದಂತೆ ಓಡುತ್ತಿರುವ ಪ್ರೀತಿಯನ್ನು ನಿಲ್ಲಿಸದೆ ವಿಧಿಯಿಲ್ಲ. ನಿಲ್ಲಿಸಿದರೆ ಅಪಘಾತ ಗ್ಯಾರಂಟೀ!
ಬದುಕಿನಲಿ ಎಲ್ಲವೂ ಹೊಸತೆನಿಸುವ ಹೊತ್ತಿಗಾಗಲೇ ಹಲಸಿ ಹೋದ ಸಂಬಂಧಗಳು ..ತುಯ್ದಾಟ , ಮತ್ತೊಂದು ಘಳಿಗೆ ಹೊಯ್ದಾಟ, ಕಾದಾಟದ ಕಾಟವಂತೂ ತಪ್ಪಿದ್ದೇ ಇಲ್ಲ.
ಸಣ್ಣ ತೊರೆಯೊಂದ ನೋಡಿ ನದಿಯೆಂದು ಬಗೆದೆ. ಕಲ್ಪನೆಯ ಹುಚ್ಚು ಮೋಡ ಸುರಿದೇ ಸುರಿಯಿತು .. ನದಿ ಕಡಲಾಯಿತು. ಕಡಲ ಒಡಲಿನಲಿ ಈಜಾಡಿ ಹಲವು ದ್ವೀಪಗಳಲ್ಲಿ ಸುತ್ತಾಡಿ, ಮುತ್ತುರತ್ನಹವಳಗಳನ್ನು ಬಾಚಿಕೊಳ್ಳುತ್ತಿದ್ದ ಆ ಸಂಭ್ರಮದ ತುತ್ತತುದಿಯಲ್ಲಿದ್ದಾಗಲೇ ತಳ್ಳಿದಂತಾಯಿತು. ತೊರೆಯ ಬುಡದಲ್ಲಿ ನಿಂತಿದ್ದೆ .. ನನ್ನ ಕಲ್ಪನೆಯಿಂದ ತೊರೆ ಕದಲಾಯಿತೆ ಹೊರತು  ಆತ ಅಲುಗಿರಲಿಲ್ಲ.. ನೈಜತೆಯ ಅರಿವಾದರೂ ಛಿದ್ರ ಛಿದ್ರಗೊಂಡ ಕಲ್ಪನೆಯ ಲಹರಿ ಸುತ್ತಲೂ ಮುಳ್ಳಿನಂತೆ ಚುಚ್ಚತೊಡಗಿತು. ಮುಳ್ಳುಗಳನ್ನೇ ಬಿಟ್ಟೂಬಿಡದೆ ಸುರಿವ ಕಂಬನಿಗೆ ಬೇಲಿಯಾಗಿಸ ಹೊರಟೆ. ಯಾರಿಗೂ ಕಣ್ಣ ಪಸೆ ಕಾಣದಂತೆ ಮುಚ್ಚುವ ಹಂಬಲ. ಮುಳ್ಳಿನ ಬೇಲಿಗೆ ಕಣ್ ಕಡಲೇನು ಭೋರ್ಗರೆವುದ ಬಿಡಲಿಲ್ಲ .. ಕಣ್ಣ ಮಿಂಚು ಕೂಡಾ ಹರಿದು ಹೋದ ಅಶ್ರು ಧಾರೆಯಲ್ಲೆಲ್ಲೋ ಅದೃಶ್ಯವಾಗಿತ್ತು.
ಆಗಮನದ ಬೆನ್ನಲ್ಲೇ ನಿರ್ಗಮಿಸಿದ ಸೂರ್ಯನ ಆಟ ಗ್ರಹಣದಂತೆ ತೋರಿತ್ತು..ಕಿರಣವಿಲ್ಲದ ಅರುಣ ಕತ್ತಲ ಕೂಪಕ್ಕೆ ನೂಕಿಯಾಗಿತ್ತು.. ಬಯಕೆಗಳ ಬಣವೆಗೆ ಬೆಂಕಿ ತಗುಲಿ ಹೊತ್ತಿ ಉರಿಯತೊಡಗಿತು.
ಆದರೆ ಪ್ರೀತಿಯ ಪರಿಯೇ ಹಾಗೆ. ಪರಿಪರಿಯಾಗಿ ಬಂದು ಅಚ್ಚರಿ ಹುಟ್ಟಿಸುತ್ತೆ. ಅದೆಲ್ಲಿತ್ತೋ ಮುಳುಗುವ ಮನದಲ್ಲಿ ಚೈತನ್ಯ! ಅದು ಸ್ವ ಪ್ರೀತಿ. ಫೀನಿಕ್ಸ್ನಂತೆ ಎದ್ದು ನಿಲ್ಲುವ ಅದಮ್ಯ ಆಸೆಯೊಂದನ್ನು ಹುಟ್ಟು ಹಾಕಿತ್ತು. ಅಷ್ಟೇ ಸಾಕಿತ್ತು. ಕಳೆದುಕೊಂಡ ಆತ್ಮಗೌರವವನ್ನು ಮರಳಿ ಪಡೆಯಲು.. ಎದೆಯೋಳಗೊಂದು ದೀಪ ಹೊತ್ತಿತು. ಆತನಿಗಾಗಿ  ಆತ್ಮಗೌರವವನ್ನು ಮಾತ್ರವಲ್ಲ, ಎಲ್ಲವನ್ನೂ ಪ್ರೀತಿಗಾಗಿ ಕಳೆದುಕೊಳ್ಳಬಲ್ಲ ನನ್ನ ಮನಸ್ಸಿನ ತಾಕತ್ತೇ ಆತ್ಮಾಭಿಮಾನವನ್ನು ಮೂಡಿಸಿತು. ಮತ್ತೆ ಕವಿತೆಗಳು ಹುಟ್ಟತೊಡಗಿದವು, ಭಾವಗೀತೆಗಳು ಹತ್ತಿರಾದವು, ಕತೆ ಕನಸನ್ನು ಹುಟ್ಟಿಸತೊಡಗಿತು, ಅವನ ಹೊರತಾಗಿಯೂ....
ಅವನೊಬ್ಬ ಪಾತ್ರಧಾರಿ 
ಬಂದು ಹೋದ ಲಹರಿ 
ಕನಸಿನೋಟಕ್ಕೊಂದು ಗುರಿ 
ನಿಲುವುಗನ್ನಡಿಯಲ್ಲಿ ಕಂಡ ಮುಖ 
ಛಾಯಾಚಿತ್ರವೆಂಬ ಭ್ರಮೆ  ಹುಟ್ಟಿಸಿದ್ಯಾಕೆ?


ಚಿತ್ರವೇ  ಆದರೂ ಇನ್ನೇನ ಉಳಿಸೀತು 
ಸಿಹಿಯೋ, ಕಹಿಯೋ, ನೆನಪುಗಳ ಹೊರತು?

-ರೇಶ್ಮಾ  ರಾವ್ (ಕನ್ನಡಪ್ರಭದಲ್ಲಿ ಪ್ರಕಟ)

11.5.13

ಬಾಟಲ್ ಮನೆ ಕಟ್ಟಲ್!

ಸ್ವಂತದ್ದೊಂದು ಸೂರು ಬೇಕೆಂಬ ಕನಸು ಯಾರಿಗಿರುವುದಿಲ್ಲ ಹೇಳಿ? ಹಾಗೆಯೇ ಆಕೆಗೂ ಇತ್ತು. ವಯಸ್ಸು 73 ಆಗಿತ್ತು. ಪತಿಗೆ ಆಗಲೇ 95. ಕೇವಲ ಹತ್ತು ಡಾಲರಿನಲ್ಲಿ ವಾರ ಕಳೆಯುತ್ತಿದ್ದವರು ಬ್ರೆಜಿಲ್‌ನ ಈ ಜೋಡಿ. ಅದೂ ಇರುವ ಅಲ್ಪ ಜಮೀನಿನಲ್ಲಿ ಜೋಳ ಬೆಳೆದು.    
ಇಂಥ ಸಮಯದಲ್ಲಿ ಇನ್ನ್ಯಾರೇ ಆಗಿದ್ದರೂ ದುಬಾರಿ ಕನಸು ಈ ವಯಸ್ಸಿಗಲ್ಲ ಎಂದು ಸುಮ್ಮನೆ ಕುಳಿತುಬಿಡುತ್ತಿದ್ದರೇನೋ..? ಆದರೆ ಆಕೆ ಕುಳಿತುಕೊಳ್ಳಲಿಲ್ಲ. ಅದು 2005ನೇ ಇಸವಿ. ಬೀದಿಗಿಳಿದ ಅಜ್ಜಿ ಅಲ್ಲಿ ಇಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸತೊಡಗಿದಳು. ಮೂರೇ ತಿಂಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನೇ ಗೋಡೆ, ಬಾಗಿಲು, ಕಿಟಕಿಯಾಗಿಸಿಕೊಂಡ ಆಕೆಯ ಕನಸಿನ ಅತಿ ಕಡಿಮೆ ವೆಚ್ಚದ ಮನೆ ನೋಡುಗರ ಕಣ್ ಕುಕ್ಕುವಂತೆ ಎದ್ದು ನಿಂತಿತು. ಈಗ ಆಕೆ
ಗೆ 80 ವಯಸ್ಸು, ಗಂಡನಿಗೆ 104. ತಮ್ಮದೇ ಮನೆಯ ಎದುರು ನಿಂತು ಪ್ರವಾಸಿಗರಿಗೆ ಕೈ ಬೀಸುತ್ತಾರೆ. ಅವರು ಕೊಡುವ ಪುಡಿಗಾಸಿನಲ್ಲಿ ಜೀವನ ನಿರ್ವಹಣೆ ಮಾಡುತ್ತಾರೆ. ಸ್ವಂತ ಸೂರನ್ನು ದಿಟ್ಟಿಸುತ್ತಾ ಜೀವನದ ಕಡೆಕ್ಷಣಗಳನ್ನು ಎಣಿಸುವುದು ಅದೆಷ್ಟು ನೆಮ್ಮದಿ ಎನಿಸುತ್ತದೆ! ಕನಸಿಗೆ ವಯಸ್ಸು, ಬಡತನ ಯಾವುದೂ ಮಿತಿ ಅಲ್ಲ ಅಲ್ಲವೇ? - (ಕೃಪೆ - ಅಂತರ್ಜಾಲ)
 
ರೇಶ್ಮಾ ರಾವ್ ಸೊನ್ಲೆ

28.4.13

ಅವನಿದ್ದಾನೆ!

 

ಅವನಿದ್ದಾನೆ!

 

ಅಲ್ಲೊಂದು ಕಣಿವೆಯಿದೆ. ಅದೇ ಆ ಕಪ್ಪುಗಡಲಿನ ಮಧ್ಯೆ ಇರುವ ದ್ವೀಪದಲ್ಲಿ. ಕಡಲಿಗಿಂತ ಆಳ, ಆಗಸಕ್ಕಿಂತ ಅಗಾಧ. ಅಲ್ಲಿ ಪ್ರತಿದಿನ ಕನಸು ಮಾರುವವರು ಸಾವಿರಗಟ್ಟಲೆ ಜನ. ಸಂತೆ ನಡೆಸಲು ಹಾಸಿ ಕೂರುತ್ತಾರೆ ಬೃಹತ್ ಬಿಳಿ ಬಟ್ಟೆ. ಅದರ ಮೇಲೆ ಹರಡುತ್ತಾರೆ ವಿವಿಧ ಕನಸು. ಕಂತೆಗಟ್ಟಲೆ ಕನಸು, ಬಣ್ಣಬಣ್ಣದ ಕನಸು. ಅಲ್ಲೊಬ್ಬ ಇದ್ದಾನೆ ನೀಲಿಕಂಗಳ ಹುಡುಗ. ಅವನು ಮಾರುವ ಕನಸು ಥೇಟ್ ನಕ್ಷತ್ರಗಳನ್ನೇ ಕಿತ್ತು ತಂದಂತೆ. ಅವನ ಕಣ್ಣುಗಳು ಪ್ರತಿಫಲಿಸಿದಂತೆ ಫಳಫಳನೆ ಹೊಳೆಯುತ್ತವೆ... ಅವಳು ಹೇಳುತ್ತಲೇ ಹೋದಳು... ಕಣಿವೆ ಇರುವ ದ್ವೀಪದ ಸುತ್ತಲೂ ಹೂವಿನ ಗಿಡಗಳದ್ದೇ ಬೇಲಿ. ದ್ವೀಪದ ಮಧ್ಯದ ದೊಡ್ಡ ಆಲದ ಮರದ ರೆಂಬೆಗಳ ಮೇಲೆ ಕಾಮನಬಿಲ್ಲು ಕಾಲು ಚಾಚಿ ಮಲಗಿದೆ. ಎಷ್ಟು ಚೆನ್ನಾಗಿದೆ ಎಂದರೆ.. ಮರದ ಬುಡದಲ್ಲೊಂದು ನದಿ. ಕಾಮನಬಿಲ್ಲಿನ ಪ್ರತಿಬಿಂಬವನ್ನು ಅರೆದು ಕುಡಿದು ತರಹೇವಾರಿ ಬಣ್ಣಗಳಲ್ಲಿ ತರಂಗತರಂಗವಾಗಿ ಮೆಲ್ಲನೆ ಸರಿದಾಡುವ ನೀರು. ಹಕ್ಕಿಗಳ ಚಿಲಿಪಿಲಿಯಂತೂ ಕಿವಿ ತುಂಬುತ್ತದೆ. ದೇವಲೋಕವೇ ತುಂಡಾಗಿ ಭೂಮಿಗೆ ಬಿದ್ದಂತಿದೆ...ಅವಳು ಹೇಳುತ್ತಲೇ ಇದ್ದಳು. ನಾ ಮಾತ್ರ ನೀಲಿ ಕಣ್ಣಿನ ಹುಡುಗ, ನಕ್ಷತ್ರಗಳಂಥ ಕನಸು ಮಾರುವ ಹುಡುಗನ ಗುಂಗಿಗೆ ವಶಳಾಗಿದ್ದೆ. ಮುಂದಿನದೇನೂ ಕೇಳಲೇ ಇಲ್ಲ. ಗೆಳತಿ ಹೋದದ್ದೂ ತಿಳಿಯಲಿಲ್ಲ.ಈ ಹುಡುಗನಿಗೊಂದು ರೂಪ ಒಡಮೂಡತೊಡಗಿತು. 

ಗುಂಗುರು ಕೂದಲು, ಕಪ್ಪು ಎನ್ನಬಹುದಾದ ಕಪ್ಪಲ್ಲದ ಬಣ್ಣ, ಕೋಲು ಮುಖ, ಎಲ್ಲಕ್ಕಿಂತಾ ಹೆಚ್ಚಾಗಿ ಮಿನುಗುವ ಕಣ್ಗಳು! ಅವನು ಅತ್ಯಂತ ಸುಂದರನಾಗಿದ್ದ. ಅವ ಆಕಾಶದಿಂದಲೇ ಹೆಕ್ಕಿ ತರುತ್ತಾನೆಯೇ ನೀಲಿ ನಕ್ಷತ್ರಗಳಂಥ ಕನಸುಗಳನ್ನು? ಅವನೊಬ್ಬ ಮಾರು ವೇಶದಲ್ಲಿರುವ ಕಿನ್ನರಿಯೇ? ಅಲ್ಲದಿದ್ದರೆ ಅವನ ಕಣ್ಗಳೇಕೆ ಹಾಗೆ ಮಿನುಗುತ್ತಿದ್ದವು? ಅಯ್ಯೋ ನನಗೇನಾಗಿದೆ? ಗೆಳತಿ ಹೇಳಿದ ಕಟ್ಟುಕತೆಯ ಪಾತ್ರವೊಂದು ನನ್ನನ್ನು ಹೀಗೆ ಆವರಿಸುತ್ತಿರುವುದೇಕೆ? ಗೆಳೆಯ ಇಂದ್ರ ಕಾರಣ ಹೇಳದೇ ದೂರಾದಾಗಿನಿಂದ ಕನಸುಗಳೇ ಹುಟ್ಟಿಲ್ಲ. ಶೂನ್ಯಳಾಗಿ ವರ್ಷದ ಮೇಲೆ ಆರು ತಿಂಗಳಾಗುತ್ತಾ ಬಂತು. ಈಗ, ಈ ಕ್ಷಣದಲ್ಲಿ ಮನಸ್ಸಿನೊಳಗೇನೋ ಬದಲಾವಣೆ. ಸದ್ದಿಲ್ಲದೆ ಯಾರೋ ಬಂದು ಕುಳಿತಂತೆ. ಹೌದು, ಇಂದ್ರನೇಕೆ ನನ್ನ ಬಿಟ್ಟು ಹೋದ??ಮಾತ್ರೆಗಳ ಹೊರತು ನಿದ್ದೆ ಸುಳಿಯದೇ ಯಾವುದೋ ಕಾಲವಾಗಿದ್ದ ನನಗೆ ಇಂದೇಕೋ ನಿದ್ದೆ ಒತ್ತರಿಸಿಕೊಂಡು ಬರುತ್ತಿದೆ. 
ಮಲಗುತ್ತೇನೆ.ಯಾರೋ ಕರೆದಂತಾಗಿ ಎಚ್ಚರವಾಯಿತು. ಅರೆ! ಇದು..ಇದು.. ಅವನೇ!! ಆ ನೀಲಿ.. ಈತ ನಿಜವಾಗಿಯೂ ಇರುವನೇ? ನಾನಂದುಕೊಂಡಂತೇ ಇರುವನಲ್ಲಾ...ಗಲ್ಲದಲ್ಲೊಂದು ಮಚ್ಚೆ ಬೇರೆ. ಇದೇನು ಪೂರ್ವಜನ್ಮದ ಸ್ಮರಣೆಯಲ್ಲವಷ್ಟೇ. ಎಂಥಾ ನಗು ಮುಖ.'ನೀನು.. ಇಲ್ಲಿ?' ಪ್ರಶ್ನಿಸಿದೆ. ಮುಖದಲ್ಲಿ ನಗು ಮಾಸದೇ ಉತ್ತರಿಸಿದ, 'ನೀ ಕರೆದೆ, ನಾ ಬಂದೆ'. ಅವನ ಕಣ್ಣಿಗೆ ದೃಷ್ಟಿ ತಾಕಿಸಿದೆ. ನನ್ನ ಕಣ್ಣಿನಲ್ಲೂ ನೀಲಿ ಕಿರಣಗಳು ಮಿಂಚಿ ರೋಮಾಂಚನವಾಯಿತು. 'ಹೇಳು ಏಕೆ ಕರೆದೆ? ಏನು ಬೇಕು?' ಗೊತ್ತಿದ್ದೂ ಕೇಳುತ್ತಿರುವವನೇನೋ..'ಕನಸು ಮಾರುತ್ತೀಯಂತೆ. ನಾನು ಬರಿದಾಗಿರುವೆ. ನನಗೆ ಕನಸುಗಳು ಬೇಕು' 'ಎಂಥ ಕನಸುಗಳು ಬೇಕು ನಿನಗೆ? ನೀನು ರಾಣಿಯಾಗುವ ಕನಸು, ಇಡಿ ಪ್ರಪಂಚ ಸುತ್ತುವ ಕನಸು, ಶತ್ರುಗಳಿಗೆ ಶಾಸ್ತಿ ಮಾಡಿಸುವ ಕನಸು, ಸಮಾರಂಭವೊಂದರ ಕೇಂದ್ರಬಿಂದುವಾಗುವ ಕನಸು... ನನ್ನ ಬತ್ತಳಿಕೆಯಲ್ಲಿ ಕೋಟಿಗಟ್ಟಲೆ ಕನಸಿದೆ. ನಿನ್ನ ಬರಿದಾದ ಮನಸ್ಸನ್ನು ನಾ ತುಂಬುತ್ತೇನೆ. ಕೇಳು ಯಾವ ಕನಸು ಬೇಕು ನಿನಗೆ?'ಚೂರೂ ತಡವರಿಸದೆ ಹೇಳಿದೆ, 'ಅದೇ.. ನನ್ನ ಬರಿದಾದ ಮನಸ್ಸನ್ನು ನೀ ತುಂಬುವ ಕನಸು'. ಅವನ ಹುಬ್ಬು ಕಿರಿದಾಯಿತು. ಸ್ಪಷ್ಟವಾಗಲಿಲ್ಲವೆಂಬಂತೆ. ಅದೇ ದೃಢದನಿಯಲ್ಲೆಂದೆ, 'ಕನಸು ಮಾರುವ ಹುಡುಗ ನನ್ನವನಾಗಬೇಕು'. ನಸುನಕ್ಕು ತಿದ್ದಿದ, 'ನಿನ್ನವನಾಗುವ ಕನಸು'.ಹೌದಲ್ಲಾ... ಕನಸು ಮಾತ್ರ! ನಿಟ್ಟುಸಿರಿಟ್ಟು ತಲೆಯಾಡಿಸಿದೆ. 'ಇದರ ಬದಲಿಗೆ ಪ್ರಪಂಚದ ಸುಂದರ, ಶಕ್ತ, ಶ್ರೀಮಂತ, ಸರ್ವವಿದ್ಯಾಪಾರಂಗತ ನಿನ್ನವನಾಗಿ ನಿನ್ನನ್ನು ಜೀವನ ಪೂರ್ತಿ ಪ್ರೀತಿಯಲ್ಲಿ ಮುಳುಗಿಸುವ ಕನಸು ಕೊಡಲೇ?' ವ್ಯಾಪಾರಿಯಂತೆ ಕೇಳಿದ. ಅರೆ, ಇವ ವ್ಯಾಪಾರಿಯೇ ತಾನೇ... 'ನನ್ನ ಬಳಿ ಬಂದವರಾರೂ ನಿರಾಶೆಯಿಂದ ಹಿಂದಿರುಗಿಲ್ಲ. ಆದರೆ ಏಕೆ ನಿನಗೆ ಇದೇ ಕನಸು ಬೇಕೆಂದು ಕೇಳಬಹುದೇ?, ಕುತೂಹಲಕ್ಕಷ್ಟೇ'.'ವರ್ಷಗಳುರುಳಿವೆ ಕನಸುಗಳಿಲ್ಲದೆ. ಅವ, ಇಂದ್ರ, ನನ್ನ ಹೇಳದೇ ಕೇಳದೇ ಬಿಟ್ಟು ಹೋದ. ಕನಸುಗಳಿಲ್ಲದ ಬದುಕು ಬದುಕೇ ಅಲ್ಲ. ಜೀವತ್‌ಶವವಾಗಿದ್ದೇನೆ. ಆದರೆ ಇದೀಗ ನೀ ಸಿಕ್ಕಿದ್ದಿ. ಕನಸು ಮಾರುವ ಹುಡುಗ. ನೀ ನನ್ನವನಾದರೆ ನಿನ್ನೆಲ್ಲ ಕನಸುಗಳೂ ನನ್ನವೇ ತಾನೇ?''ಹಮ್...ಜಾಣೆ. ಆದರೆ ಇದೂ ಕನಸೆಂಬುದನ್ನು ಮರೆಯದಿರು. ಕನಸಿಗೂ ಭ್ರಮೆಗೂ ಅಂತರ ಬಹಳ ಕಡಿಮೆ.' ಎಚ್ಚರಿಸಿಯೇ ಕೊಟ್ಟ.ಅಂದಿನಿಂದ ನನ್ನ ಬದುಕೇ ಬದಲಾಯಿತು. ಒಂದೇ ಕಡೆ ಜಡ್ಡುಗಟ್ಟಿದಂತೆ ಕುಳಿತಿರುತ್ತಿದ್ದ ನಾನು ಚಿಗರೆಯಂತೆ ಓಡಾಡತೊಡಗಿದೆ. ಅವ ಪ್ರತಿದಿನ ಬರುತ್ತಿದ್ದ ನನ್ನೊಡನೆ ಮಾತಾಡಲು. ಅವನ ನೀಲಿ ಕಂಗಳಲ್ಲಿ ಕಳೆದು ಹೋಗುತ್ತಿದ್ದೆ. ಕಣ್ಣಲ್ಲಿ ನೀರು ಜಿನುಗುವಷ್ಟು ನಗಿಸುತ್ತಿದ್ದ. ಅವನ ಪ್ರೀತಿಯಂತೂ ಹುಚ್ಚುಕೋಡಿಯಾಗಿ ಹರಿಯುತ್ತಿತ್ತು. ಹಳೆಯದೆಲ್ಲವನ್ನೂ ಮರೆತೆ. ನನ್ನೇ ನಾನು ಮರೆತೆ. ತಿಂಗಳಾಗಿರಬಹುದು. 
ಒಂದು ದಿನ ಆತ ನನ್ನನ್ನು ಅವನ ಕಣಿವೆಯಿರುವ ದ್ವೀಪಕ್ಕೆ ಕರೆದೊಯ್ಯುವುದಾಗಿ ಹೇಳಿದ. ನನ್ನ ಖುಷಿಗೆ ಪಾರವೇ ಇರಲಿಲ್ಲ. 'ನಿಮ್ಮೂರಲ್ಲಿ ಕಾಮನಬಿಲ್ಲು ಮರದ ಮೇಲೆ ಕಾಲು ಚಾಚಿ ಮಲಗಿರುವುದಂತೆ. ಎಲ್ಲೆಲ್ಲೂ ಹೂವಿನ ಬೇಲಿಯಂತೆ.. ಹೌದೇ? ಮತ್ತೆ... ಕನಸು ಮಾರುವವರ ಸಂತೆಗೆ ಕರೆದೊಯ್ಯುತ್ತೀಯಲ್ಲಾ? ಹ್ಞಾಂ, ಹಾಗೇ ನೀನು ಮಾರುವ ನಕ್ಷತ್ರಗಳಂತಾ ಕನಸುಗಳನ್ನೆಲ್ಲಾ ತೋರಿಸಬೇಕು.'ನನ್ನ ಕಾತರತೆ ನೋಡಿ ಪ್ರೀತಿಯಿಂದ ಮೈ ಸವರಿದ. ಅದಾವ ಮಾಯದಲ್ಲಿ ಕರೆದೊಯ್ದನೋ ಗೊತ್ತಿಲ್ಲ. ನಾನಲ್ಲಿ, ನನ್ನ ಹುಡುಗನ ಊರಲ್ಲಿ ನಿಂತಿದ್ದೆ. ಅಬ್ಬಾ! ಅದೊಂತೂ ದೇವನಗರಿಯೇ ಸೈ. ಗೆಳತಿಯ ಮಾತುಗಳಿಗೆ ಸಂಪೂರ್ಣ ನಿಲುಕಿರದ ಸೌಂದರ್ಯ. ಅದಾವುದೋ ಪರಿಮಳ, ಸಣ್ಣದಾಗಿ ಹರಿದು ಬರುವ ಸಂಗೀತ, ಅಸಾಧಾರಣ ಪ್ರಾಕೃತಿಕ ಚೆಲುವು, ಎಲ್ಲೆಲ್ಲೂ ಹೂಹಣ್ಣುಗಳನ್ನು ಹೊತ್ತ ಗಿಡಮರಬಳ್ಳಿ, ಜೊತೆಗೆ ನನ್ನಿನಿಯನ ಸಾಂಗತ್ಯ. ಇನ್ನೇನು ಬೇಕು ನನಗೆ?ಆ ದಿನವಿಡೀ ಅವನೂರಿನಲ್ಲಿ ಅಲೆದೆ. ಕನಸಿನ ಸಂತೆಗೆ ಹೋದೆ. ಪುಟ್ಟ ಮಗುವೊಂದು ಅಪ್ಪ- ಅಮ್ಮ ಕೆಲಸ ಕಳೆದುಕೊಳ್ಳುವ ಕನಸು ಖರೀದಿಸುತ್ತಿತ್ತು. ತಾತ ಒಬ್ಬರು ಮೊಮ್ಮಕ್ಕಳೊಂದಿಗೆ ಸಮಯ ಕಳೆವ ಕನಸಿಗಾಗಿ ಬಾರ್ಗೇನ್ ಮಾಡುತ್ತಿದ್ದರು. 30ರ ಹರೆಯದವನೊಬ್ಬ ತನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ತನ್ನ ಆಫೀಸಿನ 18ರ ಚೆಲುವೆಯೊಂದಿಗೆ ಬದುಕುವ ಕನಸಿಗಾಗಿ ಅಂಗಡಿ ಅಂಗಡಿ ಅಲೆಯುತ್ತಿದ್ದ, ಹುಡುಗಿಯೊಬ್ಬಳು ತನ್ನ ಗಂಡನೊಡನೆ ವಿದೇಶಕ್ಕೆ ಹಾರುವ ಕನಸನ್ನು ಕೊಂಡು ತೇಲಾಡುತ್ತಿದ್ದಳು. ಜನವೋ ಜನ. ಯುವಕ ಯುವತಿಯರಂತೂ ನಶೆಯಲ್ಲಿದ್ದಂತೆ ಸಂತೆಬೀದಿಯಲ್ಲಿ ಅಲೆದಾಡುತ್ತಿದ್ದರು.'ನೀನು ಈ ದಿನ ಅಂಗಡಿ ತೆರೆಯುವುದಿಲ್ಲವೇ?' ಕೇಳಿದೆ. 'ಹೇಗೆ ತೆರೆಯಲಿ? ನನ್ನ ಕನಸುಗಳನ್ನೆಲ್ಲ ನಿನಗೇ ಕಾದಿರಿಸಿದ್ದೇನಲ್ಲಾ...'ಮೋಡಿ ಮಾತಿನಲ್ಲಿ ಚತುರ. ಆ ರಾತ್ರಿ ಅವನ ಸ್ವಚ್ಛ ಬಿಳಿ ಬಣ್ಣದ ಹತ್ತಿಯಿಂದ ಮಾಡಿದಂತಾ ಮನೆಯೊಳಗೆ ಮಲಗಿದೆ. ಬೆಳಗ್ಗೆ ನನ್ನ ಮನೆಯಲ್ಲಿದ್ದೆ. ಇತ್ತೀಚೆಗಂತೂ ನನ್ನನ್ನು ಒಂದು ಕ್ಷಣವೂ ಬಿಟ್ಟಿರಲಾರ. ನಾ ಯಾವಾಗ ಅವನೂರಿನಲ್ಲಿರುತ್ತೇನೋ, ನನ್ನ ಮನೆಯಲ್ಲಿರುತ್ತೇನೋ ನನಗಂತೂ ತಿಳಿಯುವುದೇ ಇಲ್ಲ. ಆ ದಿನ ಹಾಗೇ ಮಾತನಾಡುತ್ತಾ ಕುಳಿತಿದ್ದೆವು. ಮನೆಯ ಕರೆಗಂಟೆ ಬಾರಿಸಿತು. ನೋಡುವಾಗ ಗೆಳತಿ. ಖುಷಿಯಾಯಿತು. ಎಷ್ಟೇ ಆದರೂ ನೀಲಿ ಕಂಗಳ ಹುಡುಗನ ಬಗ್ಗೆ ನನಗೆ ಮೊದಲು ಹೇಳಿದವಳಲ್ಲವೇ?!'ಯಾರೊಂದಿಗೋ ಮಾತಾಡುತ್ತಿದ್ದೆಯಲ್ಲಾ? ಯಾರಿದ್ದಾರೆ ಮನೆಯಲ್ಲಿ?' ಕೇಳಿದಳು. ಆ ಪ್ರಶ್ನೆಗೇ ಉತ್ತರಿಸಲು ಕಾತರಿಸುತ್ತಿದ್ದೆ.'ನಿನಗೊಂದು ಆಶ್ಚರ್ಯ ಕಾದಿದೆ. ನೀ ಆ ದಿನ ಕನಸು ಮಾರುವ ಹುಡುಗನ ಬಗ್ಗೆ ಹೇಳಿದೆಯಲ್ಲ, ಅವನಿದ್ದಾನೆ.ಅವನೀಗ ನನ್ನ ಪ್ರೇಮಿ' ನಾಚಿದೆ.'ತಲೆ ಕೆಟ್ಟಿದೆಯೆನೇ? ನಾನೇನೋ ಕಟ್ಟುಕತೆಯೊಂದನ್ನು ನಿನಗೆ ಹೇಳಿದರೆ ಆ ಪಾತ್ರದೊಂದಿಗಿದ್ದೀನಿ ಎನ್ನುವೆಯಲ್ಲಾ'.'ಇಲ್ಲವೇ ಅವನಿದ್ದಾನೆ. ಬಾ ಪರಿಚಯ ಮಾಡಿಸುತ್ತೇನೆ. ಆಮೇಲೆ ನಂಬುತ್ತಿ' ಎಂದು ಎಳೆದೊಯ್ದೆ. ಸೋಫಾ ಮೇಲೆ ಸುಮ್ಮನೆ ಕುಳಿತಿದ್ದ ಹುಡುಗ ನಕ್ಕ. 'ನೋಡು ಇಲ್ಲಿದ್ದಾನೆ. ಇವನೇ ಅವನು. ಗುರುತು ಸಿಗುತ್ತಿಲ್ಲವೇ?' ಎಂದೆ.'ಇಲ್ಲಾರೂ ಇಲ್ಲವಲ್ಲೇ...ಏನಾಗಿದೆ ನಿನಗೆ? ಮನಸ್ಸಿಗೇನೋ ಹಚ್ಚಿಕೊಂಡು ಮನೆಯಲ್ಲಿ ಒಬ್ಬಳೇ ಇರುತ್ತಿ. ಎಂಥ ಕೇಳಿದರೂ ಹೇಳಿಕೊಳ್ಳುವುದಿಲ್ಲ... ನಿನ್ನ ಸಂತೋಷವಾಗಿಡಬೇಕೆಂದೇ ಅಲ್ಲವೇನೇ ನಾ ಕತೆ ಹೇಳುತ್ತಿದ್ದುದು?..'ಬೆದರುಗಣ್ಣುಗಳಲ್ಲಿ ಬಯ್ಯತೊಡಗಿದಳು.'ನಿನ್ನ ಕಣ್ಣುಗಳಿಗೇನಾಗಿದೆ? ನೋಡು ನಿನಗೆ ಹಾಯ್ ಎನ್ನುತ್ತಿದ್ದಾನೆ'. ಒಂದೆರಡು ನಿಮಿಷ ಸುಮ್ಮನಿದ್ದ ಗೆಳತಿ 'ಹೇಗೆ ಸಿಕ್ಕ' ಎಂದಳು. ನಡೆದ ಕತೆಯೆಲ್ಲ ಹೇಳಿದೆ. ಆ ದ್ವೀಪ ನೀನು ಹೇಳಿದುದಕ್ಕಿಂತ ಸುಂದರವಾಗಿದೆ ಎಂದು ವರ್ಣಿಸಿದೆ. ಅವಳೇಕೋ ಭಯಗೊಂಡಂತೆ ಕಂಡಳು. ಅಥವಾ ಹೊಟ್ಟೆಕಿಚ್ಚಿರಬಹುದೇ ನನ್ನ ಸಂತೋಷ ನೋಡಿ. 'ಬಾ ಹೊರ ಹೋಗಿ ಬರೋಣ' ಎಂದಳು. 'ಇವನನ್ನು ಬಿಟ್ಟು ಎಲ್ಲಿಗೂ ಬರಲ್ಲ' ಎಂದೆ. 'ಅವನೂ ಬರಲಿ' ಎಂದಳು. ಸೀದಾ ಹೋಗಿದ್ದು ಆಸ್ಪತ್ರೆಗೆ. ಎಲ್ಲಿಲ್ಲದ ಕೋಪ ಬಂತು. ಚೀರಿದೆ, 'ನಾನು ಸರಿಯಾಗಿಯೇ ಇದ್ದೇನೆ'ಡಾಕ್ಟರ್ ಮಾತನಾಡಿದರು, 'ಅದು ನಮಗೆ ಗೊತ್ತಮ್ಮ, ಇವಳು ನನ್ನ ಗೆಳತಿ. ಆಗಾಗ ಮಾತಾಡಿಸಲು ಬರುತ್ತಿರುತ್ತಾಳೆ. ಹಾಗೆ ಇವತ್ತು ನಿನ್ನೊಂದಿಗೆ ಬಂದಿದ್ದಾಳೆ ಅಷ್ಟೇ.' ಸಮಾಧಾನವಾಯಿತು. ನನ್ನ ಹುಡುಗನನ್ನು ಪರಿಚಯಿಸಿದೆ. ಹಾಯ್ ಎಂದರು. ನಾ ಇಲ್ಲೇ 4 ದಿನ ಇರಲು ಹೇಳಿದರು. ನಾನೇಕೆ ಇಲ್ಲಿರಬೇಕು? ಮನೆಗೆ ಹೋಗುತ್ತೇನೆಂದೆ. ಇಬ್ಬರು ಸಿಸ್ಟರ್ಸ್ ಬಂದು ಎಳೆದೊಯ್ದರು. ಎಲ್ಲ ಮೋಸ. ನನ್ನ ಸಂತೋಷ ನೋಡಲಾರದ ಗೆಳತಿಯ ಪಿತೂರಿ. ಈ ಬಗ್ಗೆ ನನ್ನ ಹುಡುಗನಿಗೆ ಹೇಳುತ್ತಿದ್ದೆ. ಅಷ್ಟರಲ್ಲಿ ಡಾಕ್ಟರ್ ಬಂದರು. 'ಯಾರ ಬಳಿ ಮಾತಾಡುತ್ತಿದ್ದೀಯಮ್ಮಾ?' ಎಂದರು. 'ಕಣ್ಣು ಕಾಣುವುದಿಲ್ಲವೇ? ನನ್ನ ಹುಡುಗನ ಬಳಿ'. ಅವನ ಬಗ್ಗೆ ಒಂದಿಷ್ಟು ಪ್ರಶ್ನೆ ಕೇಳಿದರು. 
ಉತ್ತರಿಸಿದೆ. ಕೊನೆಯಲ್ಲಿ ನನಗಾರೂ ಕಾಣುತ್ತಿಲ್ಲವಲ್ಲಮ್ಮಾ ಎಂದರು. ಇವರಿಗೇನು ಲೂಸಾ? ಎಂದುಕೊಳ್ಳುವಷ್ಟರಲ್ಲೇ ಇಂಜೆಕ್ಷನ್ ಕೊಟ್ಟರು. ಕರೆಂಟ್ ಶಾಕ್ ಕೊಟ್ಟರು. ನಾ ರಗಳೆ ಮಾಡಿಕೊಂಡಿದ್ದನ್ನು ನೋಡಿದ ಗೆಳೆಯ ಅವನೂರಿಗೆ ಕರೆದೊಯ್ದ. ಆ ಸಂತೋಷದಲ್ಲಿದ್ದಾಗಲೇ ಕಟುಕ ಡಾಕ್ಟರ್ ಅಲ್ಲಿಗೂ ಬಂದ. 'ನಾ ಹೇಳಿದರೆ ನಂಬಲಿಲ್ಲವಲ್ಲ, ಈಗ ನೋಡಿ ನನ್ನ ಹುಡುಗನ ಊರು' ಎಂದೆ. ಆದರೆ ಆ ಕ್ರೂರಿ ಮತ್ತೆ ಆಸ್ಪತ್ರೆಗೆ ಎಳೆದೊಯ್ದ. ಗೆಳತಿ ಬಂದಳು. ಡಾಕ್ಟರ್ ಅವಳಿಗೆ ಹೇಳಿದರು, 'ಅವಳಿಗೇನೋ ಮಾನಸಿಕ ಆಘಾತವಾಗಿದೆ. ಈಗ ಆಕೆ ಸ್ಕೀಜೋಫ್ರೀನಿಯಾದಿಂದ ಬಳಲುತ್ತಿದ್ದಾಳೆ. ಅದನ್ನೇ ಜನಸಾಮಾನ್ಯರು ಹುಚ್ಚು ಎನ್ನುವುದು. ಈಗಾಗಲೇ ಸೀವಿಯರ್ ಸ್ಟೇಜ್ ತಲುಪಿಬಿಟ್ಟಿದ್ದಾಳೆ. ಈಗವಳದ್ದು ಅವಳದೇ ಲೋಕ. ಅಲ್ಲಿನ ಕಾಲ್ಪನಿಕ ಪಾತ್ರಗಳನ್ನೇ ನಿಜವೆಂದು ಭ್ರಮಿಸಿ ಅವರೊಂದಿಗೇ ಬದುಕುತ್ತಿರುತ್ತಾರೆ. ಈ ರೋಗದಲ್ಲಿ ರೋಗಿಗೆ ಇಲ್ಲದ ವಾಸನೆ ಬರುವುದು, ಯಾವುದೋ ಶಬ್ದ ಕೇಳುವುದು, ಏನೋ ಕಣ್ಣಿಗೆ ಕಾಣುವುದು ಸಾಮಾನ್ಯ. ಅದನ್ನೇ ಹ್ಯಾಲೂಸಿನೇಶನ್ ಎನ್ನುತ್ತೇವೆ....ಅನುಮಾನ ಪಡುವುದೂ...ಅರ್ಧದಲ್ಲೇ ಕಿರುಚಿದೆ, 
'ಯಾವಳಿಗೋ ಹುಚ್ಚು? ನನ್ನ ಹುಡುಗ ಇಲ್ಲೇ ಇದ್ದಾನೆ ಪಕ್ಕದಲ್ಲಿ. ಕಲ್ಪನೆ ಅನ್ನುತ್ತೀಯಾ? ನೀವಿಬ್ಬರೂ ಸೇರಿ ನನ್ನ ವಿರುದ್ಧ ಸಂಚು ಮಾಡುತ್ತಿದ್ದೀರಿ. ನಿನಗೇ ಹುಚ್ಚು' ಕೋಪ ನೆತ್ತಿಗೇರಿತ್ತು. ಚಪ್ಪಲಿ ತೆಗೆದು ಅವನತ್ತ ಎಸೆದೆ. ಥೂ, ಈ ದರಿದ್ರ ಜಗತ್ತಿನಲ್ಲಿ ನಮ್ಮ ಪಾಡಿಗೆ ನಾವು ಕನಸು ಕಾಣಲೂ ಅವಕಾಶವಿಲ್ಲವೇ?! ಹುಡುಗನತ್ತ ತಿರುಗಿದೆ, 'ನೀನಿಲ್ಲವಂತೆ. ನೀನಿಲ್ಲದಿದ್ದರೆ ನಾನೂ ಇರುತ್ತಿರಲಿಲ್ಲ. ನಿನ್ನ ಪ್ರೀತಿಯೊಂದೇ ಉಳಿಸಿರುವುದು ನನ್ನನ್ನು. ಇವರು ಸಾವಿರ ಹೇಳಲಿ. ನೀ ಮಾತ್ರ ನನ್ನ ಬಿಟ್ಟು ಹೋಗಬೇಡ, ಇಂದ್ರನಂತೆ' ಎಂದೆ. ಅವ ಸಮಾಧಾನಗೊಳಿಸುವಂತೆ ನಕ್ಕ. ಅವನ ಭುಜಕ್ಕೊರಗಿದೆ. 
(  10-3 -1 3  ಸಾಪ್ತಾಹಿಕ ಪ್ರಭದಲ್ಲಿ ಪ್ರಕಟ)
 ಬೆಂಗಳೂರೆಂಬ ಬಯಲಾಟ
ಹೇಳೀ ಕೇಳೀ ಇದು ಬೆಂದಕಾಳೂರು. ಅಂದ ಮೇಲೆ ಯಾರೂ ತಮ್ಮ ಬೇಳೆಯನ್ನು ಇಲ್ಲಿ ಬೇಯಿಸಿಕೊಳ್ಳಬಹುದು!    ವಲಸಿಗರು ಬಂದು ಸೇರುತ್ತಲೇ ಇದ್ದಾರೆ. ಹೀಗಾಗಿ ಜಿಮ್ಗೆ ಹೋಗುವ ಯುವಕನಂತೆ ಬೆಂಗಳೂರು ತನ್ನ ತೆಕ್ಕೆಗೆ ಪಾಳ್ಯ, ದೊಡ್ಡಿ, ಹಳ್ಳಿಗಳನ್ನೆಲ್ಲ ಎಳೆದುಕೊಳ್ಳುತ್ತಾ ಮಾಂಸಖಂಡಗಳನ್ನು ಹುರಿಗೊಳಿಸಿಕೊಳ್ಳುತ್ತಲೇ ಇದೆ. ಅಷ್ಟದಿಕ್ಕುಗಳಲ್ಲೂ ಅಷ್ಟಾವಕ್ರನಾಗಿ ಹರಡಿ ಬೆರಳೆಣಿಕೆಯಷ್ಟು ಮೂಲಬೆಂಗಳೂರಿಗರನ್ನು ಹೊತ್ತು ಕನ್ನಡ, ಎಕ್ಕಡ, ಎನ್ನಡಗಳಿಗೆ ಇಂಗ್ಲಿಷ್ ಹೊದಿಕೆ ಹಾಸಿದೆ. ನಮನಮೂನೆಯ ವೇಷಭಾಷೆ ಬದುಕನ್ನು ತನ್ನೊಡಲಿಗೆ ಹಾಕಿಕೊಂಡು ಕಳೆದುಕೊಂಡ ಸ್ವಂತಿಗೆಗಾಗಿ ಪರಿತಪಿಸುತ್ತಿದೆ. ಸ್ವಂತಿಕೆಯೇ ಇಲ್ಲದ ಊರಲ್ಲಿ ಸ್ವಂತಕ್ಕೆಂದು ಸಾವಿರ ಮಾಡಿಕೊಂಡರೂ ಸುಖ ಮರೀಚಿಕೆಯೇ! ಸಣ್ಣ ಹಳ್ಳಿಯಲ್ಲೆಲ್ಲೋ ಹುಟ್ಟಿದ ಕೂಸು ಪಟ್ಟಣದಲ್ಲಿ ಶಾಲೆ ಕಲಿತು, ನಗರದಲ್ಲಿ ಎಂಜಿನಿಯರಿಂಗ್ ಮಾಡಿ ಶುಭದಿನ ನೋಡಿ ಮಹಾನಗರಕ್ಕೆ ಪದಾರ್ಪಣೆ ಮಾಡಿ ಎಂಎನ್ಸಿಗಳ ಎಸಿ ಕೊಠಡಿಯಲ್ಲಿ ಕುಳಿತು ಅಮೆರಿಕ, ಆಸ್ಟ್ರೇಲಿಯಾ ಎಂದು ಕುಳಿತಲ್ಲೇ ವ್ಯವಹರಿಸಿ ಕ್ಷಣಮಾತ್ರದಲ್ಲಿ ವಿಶ್ವಮಾನವನಾಗಿ ಬಿಡುತ್ತದೆ! ತಿಂಗಳು ತಿಂಗಳು ಲಕ್ಷಗಟ್ಟಲೆ ಎಣಿಸಿಯೂ ಮನೆಯನೆಂದೂ ಕಟ್ಟಲಾಗದೇ, ಕೊನೆಯನೆಂದೂ ಮುಟ್ಟಲಾಗದೇ ಅನಂತವಾಗಿ ಬಿಡುವ ಜನಜೀವನ!- ಇದು ಬೆಂಗಳೂರು. ಅಜ್ಜಿ ಬರುತ್ತಾಳೆ ಮೊಮ್ಮಗಳು ಬಸುರಿ ಎಂದು. ಮೊಮ್ಮಗಳ ಬಾಣಂತನ ಮಾಡುವಾಗಾಗಲೇ ಶತಶತಮಾನಗಳಿಂದ ವಂಶವಾಹಿನಿಯಲ್ಲಿ ಹರಿದು ಬಂದ ಸಂಪ್ರದಾಯ, ತಿಂಡಿತೀರ್ಥಗಳನ್ನು ಕಚ್ಚೆಸೀರೆಯಲ್ಲಿ ಹೊತ್ತು ತಂದಿದ್ದ ಅಜ್ಜಿಯ ವಯಸ್ಸು, ಅನುಭವ ತಾನು ಧರಿಸಿದ ನೈಟಿಯೊಳಗೆ ಅವಿತಿರುತ್ತದೆ! (ಇದು ಬೆಂಗಳೂರಿನ ನೀರು.) ಯಾರ ಬಾಣಂತನ ಯಾರು ಮಾಡುತ್ತಿದ್ದಾರೆಂಬ ಅನುಮಾನ ಬರಬಹುದೇನೋ ನೆರೆಮನೆಯವನು ನೋಡಿದರೆ! ಆದರೆ ಆತ ನೋಡುವುದಿಲ್ಲ. ಅವನಿಗೆ ತಿಂಗಳಿಗೊಮ್ಮೆ ಬದ   ಚಯ ಬೇಕಾಗಿಲ್ಲ. ಕಂಪ್ಯೂಟರ್, ಟಿವಿ, ಸೋಷಿಯಲ್ ನೆಟ್ವರ್ಕ್ಗಳು ಮನೆಯೊಳಗೇ ವಿಶ್ವದ ಕಾಲು ಮುರಿದು ತಂದೆಸೆದಿರುವಾಗ ಹೆಂಡತಿಮಕ್ಕಳ ಮುಖವೇ ಕಾಣುವುದಕ್ಕೆ ಸಮಯವಿಲ್ಲ. ಅಂಥದರಲ್ಲಿ ಪಕ್ಕದ ಮನೆಯವರ ಗೊಡವೆಯೇಕೇ?(ಬೆಂಗಳೂರಿನ ಮನೋಧರ್ಮ) ಬೆಳದಿಂಗಳಿರುಳುಗಳನ್ನೂ, ಅಮಾವಾಸ್ಯೆಯ ಕಾರ್ಮುಗಿಲನ್ನೂ ನುಂಗಿ ಕುಳಿತ ನಿಯಾನ್ ಲೈಟ್ಗಳಲ್ಲಿ ಕವಿತ್ವ ಜಡವಾಗುತ್ತದೆ. ಕಪಿತ್ವ ಮಾತ್ರ ಆಧುನಿಕ ಬಟ್ಟೆ ಧರಿಸಿ ಹೆಂಡ ಕುಡಿದಂತೆ ಪಬ್ಗಳಲ್ಲಿ, ಹಾದಿಬೀದಿಗಳಲ್ಲಿ ತೂರಾಡುತ್ತದೆ, ಹಾರಾಡುತ್ತದೆ. ಅದಕ್ಕೆ ಯಾವ ಅರ್ಥವೂ ಇಲ್ಲ. ರಾತ್ರಿಗಳಲ್ಲೂ ಕಪ್ಪಗಾಗದ ಬೆಂಗಳೂರಿನ ಆಕಾಶ ಕುರುಡು. ಅದಕ್ಕೆ ತನ್ನ ಬುಡದಲ್ಲೇ ನಡೆಯುವ ಕಾಳದಂಧೆಗಳು ಕಾಣುವುದೇ ಇಲ್ಲ!- (ಇದು ಬೆಂಗಳೂರಿನ ಆಕಾಶ.) ಕಾವಿ ಬಟ್ಟೆ ಕಂಡರೆ ಸಾಕು, ಕಲಿತ ವಿದ್ಯೆಯನ್ನೆಲ್ಲ ಮರೆತು ಪರಮದೈವಿಕರಾಗುವ ಜನತೆ! ಸ್ವಾಮಿ ನಿತ್ಯಾನಂದ, ಸತ್ಯಾನಂದ, ಭೋಗಾನಂದ- ಯಾವುದೇ ಆನಂದ ಎಂಬ ಹೆಸರು ಕೇಳಿದರೂ ತಮ್ಮ ಜೀವನದ ಆನಂದದ ಕೀಲಿಕೈ ಸಿಕ್ಕಿತೆಂಬಂತೆ ಸತ್ಸಂಗ ಮಾಡುತ್ತಾ ಕುಳಿತುಬಿಡುವ ಭಕ್ತಾನಂದರು! (ಇದು ಬೆಂಗಳೂರಿನ ಅಧ್ಯಾತ್ಮ)  ಶಾಲೆಯಲ್ಲಿದ್ದಾಗ ಬೆಂಗಳೂರಿಗೆ ಟೂರ್ ಬಂದು ಊರಗಲ ಕಣ್ಣು ಹೊರಳಿಸಿ ತುಂಬಿಕೊಂಡು ಊರಿಗೆ ಮರಳಿ 'ನಾ ವಿಧಾನಸೌಧದ ಬಾಗಿಲು ಮುಟ್ಟಿ ಬಂದೆ' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ ಕುವರ 'ದೊಡ'್ಡವನಾಗಿ ಇಲ್ಲೇ ಬಂದು ನೆಲೆ ನಿಂತ ಮೇಲೆ ಮಾಲ್ಗಳು, ಥಿಯೇಟರ್ ಹಾಲ್ಗಳಲ್ಲಿ ಕಾಲ ಕಳೆಯುತ್ತಾ ವಿಧಾನಸೌಧದೊಳಗೇನಾದರೆ ತನಗೇನಾಗಬೇಕು? ಭ್ರಷ್ಟ ರಾಜಕಾರಣಿಗಳಿಗೂ ತನಗೂ ಸಂಬಂಧವಿಲ್ಲವೆಂದು ಘೋಷಿಸಿ ನಿರಾಳ ನಿರ್ಲಿಪ್ತನಾಗುತ್ತಾನೆ. ಕೈಲಿ ದುಡ್ಡು, ಬಾಯಲ್ಲಿ ಬ್ರಿಟಿಷರ ಭಾಷೆ, ತುರುಸಿಕೊಳ್ಳಲೂ ಪುರುಸೊತ್ತಿಲ್ಲದಂತೆ ಪಾಶ್ಚಾತ್ಯ ಕಂಪನಿಗಳ ಉದ್ಧಾರಕ್ಕೆ ದುಡಿಯುವ ಅವನಿಗೆ ದೇಶದ ಬೆಳವಣಿಗೆಯಿಂದೇನಾಗಬೇಕಿದೆ? ಆದ್ಯತೆ ಬಾದ್ಯತೆಗಳನ್ನೇ ಬದಲಾಯಿಸಿಬಿಡುವುದು ಬೆಂಗಳೂರು (ಇದು ಬೆಂಗಳೂರಿಗರ ಪಾಲಿಟಿಕ್ಸ್). ವಾರಕ್ಕೆರಡು ಬರ್ತ್ಡೇ ಪಾರ್ಟಿ, ಆಗಾಗ್ಗೆ ಉದರದ ಒಳಗಿನ ಸೌಂದರ್ಯವನ್ನು ವೃದ್ಧಿಸುವ ಪಿಜ್ಜಾಬರ್ಗರ್, ದಿನಂಪ್ರತಿ ಉಪಹಾರ ದರ್ಶಿನಿಗಳಲ್ಲಿ ಊಟತಿಂಡಿ, ಗೂಡಂಗಡಿಗಳ ಬೈಟೂ ಟೀ. ವೀಕೆಂಡ್ಗಳಲ್ಲಿ ದೊಡ್ಡ ದೊಡ್ಡ ಹೋಟೆಲ್ಗಳೆದುರು ಕ್ಯೂನಲ್ಲಿ ನಿಲ್ಲುವ ಜನರ ಮನೆಯ ಅಡುಗೆಕೋಣೆಯೆಂಬ ಶೋಕೇಸಿನಲ್ಲಿ ತೆಪ್ಪಗೆ ಕುಳಿತ ಎಂದೂ ಹೊತ್ತದ ಗ್ಯಾಸ್ ಒಲೆ! (ಬೆಂಗಳೂರಿಗರ ಆಹಾರಶೈಲಿ). ಬೆಳಗ್ಗೆ ಎಂಟು ಗಂಟೆಗೆ ಬಾಗಿಲು ತೆರೆದು ಮೈ ಮುರಿಯುವ ಮನೆಗಳೆದುರು ರಾತ್ರಿ 11ಕ್ಕೇ ಹರಡಿ ನಿಂತ ರಂಗೋಲಿ. ಕೋಟಿ ಬೆಲೆ ಬಾಳುವ ಅಂಗಳವಿಲ್ಲದ ಮನೆಯ ನೆತ್ತಿ, ಬಗಲಲ್ಲಿ ಹತ್ತಿ ಕುಳಿತ ಪಾಟ್ಗಳಲ್ಲಿ ಅರಳುವ ದಿನಕ್ಕೊಂದು ಕೆಂಪು ಗುಲಾಬಿ! ಇಬ್ಬರೂ ಕೆಲಸಕ್ಕೆ ಹೋಗುವ ಗಡಿಯಾರದ ಒಂದು ನಿಮಿಷವೂ ವ್ಯರ್ಥವಾಗದ ಮನೆಗಳಲ್ಲಿ ಪ್ಲೇಹೋಂ ಒಡತಿಯ ಜೇಬು ತುಂಬಲೆಂದೇ ಯಾವುದೋ ಮಾಯದಲ್ಲಿ ಹುಟ್ಟುವ ಕೂಸು. ನೈತಿಕತೆಯ ತೇಗನ್ನು ಗ್ಯಾಸ್ಟ್ರಿಕ್ ಮಾತ್ರೆ ನುಂಗಿ ಶಮನಗೊಳಿಸುವ ಮಂದಿಗೆ ಸ್ವಾರ್ಥದ ಬೊಜ್ಜನ್ನು ಕರಗಿಸಲು ಅಶಕ್ತವಾಗುವ ಬೆಳಗಿನ ವಾಕಿಂಗ್, ಜಿಮ್ಮಿಂಗ್, ಸ್ವಿಮ್ಮಿಂಗ್. ಇರುವ ಮಚ್ಚೆ, ಮೊಡವೆ, ಕಲೆಗಳನ್ನು ಮುಚ್ಚಲು ಹಾದಿಗೆ ನಾಲ್ಕರಂತೆ ಹಬ್ಬಿ ನಿಂತ ಬ್ಯೂಟಿಪಾರ್ಲರ್ಗಳು! ಬೆಂಗಳೂರು ಬೆಳೆದಿದೆ, ಬದುಕು ಬದಲಾಗಿದೆ. 
(ಕನ್ನಡಪ್ರಭದ ಸಾಪ್ತಾಹಿಕದಲ್ಲಿ 21- 4 - 2013 ರಂದು ಪ್ರಕಟ)