ಪುಟಗಳು

24.2.14

ಬಿಂಕದ ಸಿಂಗಾರಿ...

'ಅಜ್ಜೀ...' ಎಂದಿತು ಸರೋಜಳ ಮೂರು ವರ್ಷದ ಎರಡನೇ ಮೊಮ್ಮಗು. ಒಮ್ಮೆ ಅದರ ಕಿವಿ ಹಿಂಡಿದಳು. 
ಎಷ್ಟು ಬಾರಿ ದೊಡ್ಡಮ್ಮ, ಅಮ್ಮಮ್ಮ ಅನ್ನು ಎಂದು ಹೇಳಿಕೊಟ್ಟರೂ ಅದೆಲ್ಲಿ ಅಜ್ಜಿ ಎನ್ನಲು ಕಲಿಯಿತೇನೋ ಸರೋಜಳಿಗಂತೂ ತಿಳಿಯುತ್ತಿಲ್ಲ. 
ಆಸುಪಾಸಿನಲ್ಲಿರುವ ಸರೋಜ ಇಂದಿಗೂ ತನ್ನ ದೇಹಗಾತ್ರವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಂಡು ಬಂದಿದ್ದಾಳೆ. ಸಮಾರಂಭವೊಂದಕ್ಕೆ ಹೋಗಬೇಕೆಂದರೆ 4 ದಿನದ ಮುಂಚಿಂದಲೇ ಬ್ಯೂಟಿಪಾರ್ಲರ್‌ಗೆ ಹೋಗಿ ವ್ಯಾಕ್ಸಿಂಗ್, ಹುಬ್ಬು, ಹೇರ್‌ಡೈ ಎಂದು ಒಂದಿಷ್ಟು ಹಣ ಸುರಿಯುವುದಲ್ಲದೆ ಹೊಸ ಬಟ್ಟೆ, ಮ್ಯಾಚಿಂಗ್ ಬ್ಲೌಸ್, ನೈಲ್ ಪಾಲಿಶ್, ಆಭರಣಗಳ ಬಗ್ಗೆಯೂ ಅಷ್ಟೇ ನಿಗಾ ವಹಿಸುತ್ತಾರೆ. ತನ್ನ ಯಾವ ಹುಟ್ಟುಹಬ್ಬದಲ್ಲೂ ಕೇಳಿದವರಿಗೆ ವಯಸ್ಸನ್ನು ಹೇಳಿದ್ದಿಲ್ಲ, ಹೇಳಿದರೂ ನಿಖರವಾಗಿ ಹೇಳಿದ್ದಿಲ್ಲವೇ ಇಲ್ಲ. ಇನ್ನು ಹೆತ್ತರೆ ಸೌಂದರ್ಯ ಹಾಳಾಗುತ್ತದೆಂದು ಒಂದು ಮಗುವಿಗೇ ಆಪರೇಶನ್ ಮಾಡಿಸಿಕೊಂಡವಳು.
 ಅವಳ ಈ ಸೌಂದರ್ಯಪ್ರಜ್ಞೆಯ ಫಲವಾಗಿ ಆಕೆ ತನ್ನ ವಯಸ್ಸಿಗಿಂತಾ ಎಂಟ್ಹತ್ತು ವರ್ಷ ಚಿಕ್ಕವರಾಗಿ ಕಾಣುವುದಂತೂ ನಿಜವೇ. ಬಿದ್ದು ಹೋದ 4 ದವಡೆ ಹಲ್ಲು, ಮುಂದಿನ ಎರಡು ಹಲ್ಲುಗಳನ್ನು ತೆಗೆಸಿ ಸೆಟ್ ಕಟ್ಟಿಸಿಕೊಂಡಿರುವುದರಿಂದ ಹಲ್ಲುಗಳೂ ಸಮಾನಾಂತರದಲ್ಲಿ ಕುಳಿತು ನಗೆ ಬೀರುತ್ತವೆ. ಬಿಪಿ, ಶುಗರ್ ಇರಬಹುದು. ಮಾತ್ರೆಗಳ ಕಂಟ್ರೋಲ್‌ನಲ್ಲಿವೆ. ಅಲ್ಲದೆ ಅವೇನೂ ಕಾಣುವುದಿಲ್ಲವಲ್ಲ... ಮೈಕೈ ನೋವು, ಕನ್ನಡಕ ಈಗ ಮಕ್ಕಳಿಗೂ ಸಾಮಾನ್ಯ. ಅದೇನು ವಯಸ್ಸಾದ ಸೂಚನೆಯೂ ಅಲ್ಲ. ಹೀಗಾಗಿ ತನಗಿನ್ನೂ ವಯಸ್ಸಾಗಿಲ್ಲವೆಂದೇ ಸರೋಜಳ ತಿಳಿವಳಿಕೆ. ಅಲ್ಲದೆ ಈಗಲೂ ಹೇಮಾಮಾಲಿನಿಯಂತೆ ಎವರ್‌ಗ್ರೀನ್ ಎಂದು ಕೆಲವರು ಕಿಚಾಯಿಸಿ ಹೊಗಳುವುದೂ ಉಂಟು.ಅಂಥದರಲ್ಲಿ ಏನೂ ಅರಿಯದ ತನ್ನ ಮೊಮ್ಮಗು ಮಾತ್ರ ಅಜ್ಜಿ ಅನ್ನುವುದೇಕೆ? ಅವಳಿಗೆ ಆಗುವ ಇರಿಸುಮುರುಸು ಹೇಳತೀರದ್ದಲ್ಲ.  
ಈ ಬಾರಿ ಬಹಳ ವರ್ಷಗಳ ನಂತರ ಸರೋಜಳ 80ರ ಅಜ್ಜಿ ಮನೆಗೆ ಬಂದಿದ್ದರು. ಅವರೆದುರಿಗೇ ಅಜ್ಜಿ ಎಂದ ಮೊಮ್ಮಗಳ ಕಿವಿ ಹಿಂಡಿದಳು ಸರೋಜ. ಅಜ್ಜಿ ಎಂಬುದು ಸಂಬಂಧ ಸೂಚಕವೇ ಹೊರತು ವಯಸ್ಸಿನ ಸೂಚಕವಲ್ಲ, ಮಗುವಿಗೇಕೆ ಗದರುತ್ತೀ ಎಂದು ಬುದ್ದಿಮಾತು ಹೇಳಿ ಸಮಾಧಾನ ಪಡಿಸಿದಳು ಸರೋಜಳ ಅಜ್ಜಿ.
13ರಲ್ಲೇ ಮದುವೆಯಾಗಿ, 14ಕ್ಕೆ ಮಕ್ಕಳ ಕಾರ್ಖಾನೆ ಆರಂಭಿಸಿದಂತೆ ಹೆರಲು ಶುರು ಮಾಡಿದವಳು 29ರಲ್ಲಿ 9ನೇ ಮಗು ಹೆರುವಾಗ ಅವಳ ಮೊದಲ ಮಗಳು, ಚೊಚ್ಚಲ ಮಗು ಹೆತ್ತಾಗಿತ್ತು! ತನ್ನ ಮಗುವಿಗೆ ಅಮ್ಮ ಎಂದು ಹೇಳಲು ಹೇಳಿಕೊಡುತ್ತಿರುವಾಗಲೇ ಮಗಳ ಮಗುವಿಗೆ ಅಜ್ಜಿ ಅನ್ನು ಎಂದು ಹೇಳುತ್ತಿದ್ದಳಂತೆ 29ರ ಅವಳಜ್ಜಿ! ಸದಾ ಕೆಲಸ ಮಾಡುತ್ತಲೇ ಇರುತ್ತಿದ್ದ ಅಜ್ಜಿ ಈಗಲೂ ಗಟ್ಟಿಮುಟ್ಟಾಗಿ ಬರಿಗಣ್ಣಿನಲ್ಲಿ ಅಕ್ಕಿ ಆರಿಸುತ್ತಿದ್ದಳು. ಕೋಡುಬಳೆಯನ್ನು ಸರಾಗವಾಗಿ ತಿನ್ನುತ್ತಿದ್ದಳು. ಹಳ್ಳಿಗಳಲ್ಲಿದ್ದ ಮಕ್ಕಳ ಮನೆಗೆ 3-4 ಕಿಮೀ ಒಳದಾರಿಯಲ್ಲಿ ನಡೆದೇ ಹೋಗುತ್ತಿದ್ದಳು. ಕಾಯಿಲೆಗಳಾವುವೂ ಆಕೆಯನ್ನು ಬಾಧಿಸಿದ್ದಿಲ್ಲ. ಇಷ್ಟೆಲ್ಲ ಯೋಚನೆಗಳು ಸರೋಜಳನ್ನು ಮುತ್ತುವಾಗಲೇ ತನ್ನನ್ನೊಮ್ಮೆ ಬರಿಗಣ್ಣು, ಡೈ ಇಲ್ಲದ ತಲೆಕೂದಲು, ಹಲ್ಲುಸೆಟ್ ಇಲ್ಲದ ಬಾಯಿಯಲ್ಲಿ ಕಲ್ಪಿಸಿಕೊಂಡಳು.
 ತನ್ನಜ್ಜಿಯೇ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಂತೆ ನಕ್ಕಿತು. ಅಜ್ಜಿ ಎನ್ನು ಎಂದು ಹೇಳಿ ಕರೆಸಿಕೊಂಡ ಆಕೆಗೆ ಯಾವತ್ತೂ ವಯಸ್ಸಾಗಿರಲಿಲ್ಲ. ಅಜ್ಜಿ ಎನ್ನಬೇಡ ಎಂದು ಮೊಮ್ಮಗುವಿನ ಕಿವಿ ಹಿಂಡುವ ತಾನು ಹಣ್ಣು ಹಣ್ಣು ಮುದುಕಿಯಾದಂತೆನಿಸಿತು. ಅಷ್ಟರಲ್ಲಿ ಮೊದಲ ಬಾರಿಗೆ ಮೊಮ್ಮಗಳು ದೊಡ್ಡಮ್ಮಾ ಎನ್ನುತ್ತಾ ತನ್ನೆಡೆಗೆ ಓಡಿಬಂದಳು. 'ನಿನ್ನಜ್ಜಿ ನಾನು, ಅಜ್ಜಿ' ಎನ್ನಬಾರದೇ ಎಂದು ಮತ್ತೆ ಕಿವಿ ಹಿಂಡಿದಳು.
-ರೇಶ್ಮಾ ರಾವ್ ಸೊನ್ಲೆ

19.2.14

ಕಾಪಾಡು ಚೊಂಬೇಶ್ವರಾ...

First Published: 15 Feb 2014 02:00:00 AM IST

ಹೇಳಿದ್ದೇ ಹೇಳೋ ಕಿಸ್ಬಾಯ್ದಾಸ ಗೊತ್ತು. ಮಾಡಿದ್ದೇ ಮಾಡೋ ಈ ಅಭ್ಯಾಸದ ಬಗ್ಗೆ ಕೇಳಿದ್ದೀರಾ?ನಮ್ಮೊಳಗೇ ಹಲವರಿರ್ತಾರೆ. ಮುಕ್ಕೋಟಿ ದೇವರುಗಳಿಗೂ ಮುನಿಸಿಕೊಳ್ಳದೆ ಮುನ್ನೂರ್ ಸತಿ ಬೇಕಾದರೂ ನಮಸ್ಕಾರ ಮಾಡೋರು. ನೋಡೋರು ಅವ್ರ್ಗೇ ಒಂದ್ ದೊಡ್ ನಮಸ್ಕಾರ ಹಾಕಬೇಕು, ಆ ರೇಂಜ್‌ಗೆ. ದಾರೀಲಿ, ಬಸ್ಸಲ್ಲಿ ಎಲ್ಲೇ ದೇವರ ಮೂರ್ತಿನೋ, ಫೋಟೋನೋ ಕಂಡರೂ ಕೆನ್ನೆ, ಹಣೆ, ಗದ್ದ ಮುಟ್ಕೊಳೋರು. ಹಾಗಂತ ಇವರೇನು ದೇವದೂತರಲ್ಲ, ಭಕ್ತಸಾಧು ಕನಕದಾಸರಲ್ಲ, ನಮಸ್ಕಾರ ಮಾಡೋದು ಒಂದು ಚಟ ಅಷ್ಟೇ. ಅಲ್ಲಿ ಭಕ್ತಿಗಿಂತ ಭಯ ಜಾಸ್ತಿ ಇರುತ್ತೆ. 
ಇನ್ನು ಕೆಲವರಿಗೆ ಕೈ ತೊಳೆಯೋ ಅಭ್ಯಾಸ. ಒಳ್ಳೇದೇ. ಆದ್ರೆ ಒಂದೆರಡು ಬಾರಿಯಲ್ಲ, ಭಗವಂತ ಇವರಿಗೆ ಎಕ್ಸ್‌ಟ್ರಾ ಟೈಮ್ ಕೊಟ್ಟಂತೆ ದಿನಕ್ಕೆ ನೂರು ಬಾರಿ!ಮತ್ತೊಂದಷ್ಟು ಜನಕ್ಕೆ ಮನೆಯಿಂದ ಹೊರಡುವಾಗ ಎರಡ್‌ಎರಡ್ ಸರ್ತಿ ಚೆಕ್ ಮಾಡಿದ್ರೂ ಅರ್ಧ ಫರ್ಲಾಂಗ್ ಬರ್ತಿದ್ದಂಗೆ ಬೀಗ ಹಾಕಿದ್ನೋ ಇಲ್ವೋ ಅನ್ನೋ ಸಂಶಯ ಬೇತಾಳ ಬೆನ್ನು ಹತ್ತುತ್ತೆ. ಇವುನ್ನೆಲ್ಲಾ ಕಾಯಿಲೆ ಅಂದ್ರೆ ನಂಬಲೇಬೇಕು ನೀವು...
 ಹೌದು, ಬೇಡವೆಂದರೂ ಬಿಡದ, ಸುಳ್ಳೆಂದು ಗೊತ್ತಿದ್ದರೂ ನಂಬಲು ಒತ್ತಾಯಿಸುವ, ಅನವಶ್ಯಕ ಪುನರಾವರ್ತಿತ ಕಾಡುವ ಯೋಚನೆ, ಅನುಮಾನಗಳು ಮನಸ್ಸಿನ ನಿಯಂತ್ರಣ ತಪ್ಪಿಸುತ್ತವೆ. ಇದು ಅತಿಯಾದಾಗ ದಿನನಿತ್ಯದ ಕೆಲಸಕಾರ್ಯಗಳಿಗೆ ಅಡ್ಡಗಾಲಾಗತೊಡಗುತ್ತವೆ. ಆಗಲೇ ಇದು ಕಾಯಿಲೆಯ ರೂಪ ತಾಳುವುದು. ಇದನ್ನು ಮನೋತಜ್ಞರು ಆಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಎನ್ನುತ್ತಾರೆ. 
ಇಂಥಾ ರೋಗಗಳೂ ಇರುತ್ತವಾ? ಇವೂ ರೋಗಗಳಾ ಎಂದು ಆಶ್ಚರ್ಯ ಹುಟ್ಟಿಸುವಂಥ ರೂಪ ಇದರದ್ದು. ಪದೇ ಪದೇ ಅನವಶ್ಯಕ ಕಾಡುವ ಯೋಚನೆಗಳು ಆಬ್ಸೆಶನ್ ಆದರೆ ಆ ಯೋಚನೆಗಳ ಫಲವಾಗಿ ಪದೇ ಪದೇ ಮಾಡುವ ಕ್ರಿಯೆಗಳು ಕಂಪಲ್ಶನ್ ಎನಿಸಿಕೊಳ್ಳುತ್ತವೆ. 
ಗೆಳತಿಯೊಬ್ಬಳಿದ್ದಾಳೆ. ಒಂದೊಳ್ಳೆ ಗಳಿಗೇಲಿ ಮಶಿನಿಷ್ಟ್ ಚಿತ್ರ ನೋಡಿದಳು. ಚಿತ್ರದ ನಾಯಕ ಕ್ರಿಷ್ಟಿನ್ ಬೇಲ್ ಕಾರ್‌ನಲ್ಲಿ ಹೋಗುವಾಗ ಆಕಸ್ಮಿಕವಾಗಿ ಒಂದು ಮಗುವಿಗೆ ಬಡಿಯುತ್ತಾನೆ. ಮತ್ತು ಇನ್ನಲ್ಲಿ ನಿಂತರೆ ಅಪಾಯ ಎಂದು ಅಲ್ಲಿಂದ ಕಾರ್ ಅನ್ನು ವೇಗವಾಗಿ ಓಡಿಸಿಕೊಂಡು ಮನೆ ತಲುಪುತ್ತಾನೆ. ನಂತರ ತನ್ನನ್ನು ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳಲು ಘಟನೆಯನ್ನು ಸ್ಮೃತಿಪಟಲದಿಂದ ತೆಗೆದು ಬಿಡುತ್ತಾನೆ. ಆದರೆ ನಮಗೆ ನಿಮಗೆ ಗೊತ್ತಿರುವಂತೆ ಯಾವುದೇ ಎನರ್ಜಿ ರೂಪಾಂತರ ಹೊಂದಬಹುದೇ ಹೊರತು ಖಾಲಿಯಾಗುವುದಿಲ್ಲ. ಹೀಗಾಗಿ ಆತನ ಆ ಮರೆಯಾದ ಪಾಪಪ್ರಜ್ಞೆ ಅನ್‌ಕಾನ್ಷಿಯಸ್‌ನಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ಹೊರ ಹೋಗಲು ವಾಮಮಾರ್ಗಗಳನ್ನು ಹುಡುಕಿಕೊಳ್ಳುತ್ತದೆ. ಹೀಗಾಗಿ ಆತನನ್ನು ಚಿತ್ರವಿಚಿತ್ರವಾಗಿ ಹಿಂಸಿಸುತ್ತದೆ. ಈ ಚಿತ್ರ ನೋಡಿದ ನಂತರವೇ ನನ್ನ ಕ್ಯಾಥೊಲಿಕ್ ಗೆಳತಿ ಹಾಗಾದದ್ದು. ಅವಳ ದುರ್ಬಲ ಮನಸ್ಸಿನಲ್ಲಿ ಇಲ್ಲವೆಂದು ಎಷ್ಟು ಬಾರಿ ಕಿರುಚಿದರೂ ತಾನೂ ಹೀಗೆ ಅಪಘಾತ ಮಾಡಿ ಯಾರನ್ನಾದರೂ ಸಾಯಿಸಿರಬಹುದೇ ಎಂಬ ಅನುಮಾನ ಶುರುವಾಯ್ತು. ಒಮ್ಮೆ ಅನುಮಾನ ಪಿಶಾಚಿ ಹಿಡಿದುಕೊಂಡರೆ ಅನುಮಾನವೇ  ಬೇಡ, ಅದು ನಮ್ಮನ್ನು ಭಯಂಕರವಾಗಿ ಹಿಂಸಿಸಿ ಬಿಡುತ್ತದೆ. ವರ್ಷದ ಹಿಂದೆ ಹೊಸ ವರ್ಷಕ್ಕೆ ಕುಡಿದು ಕಾರು ಓಡಿಸಿದ್ದೆನಲ್ಲ, ಆಗ ಯಾರಿಗಾದರೂ ಕುಟ್ಟಿರಬಹುದಾ? ಅವಳ ಬಳಿ ಇಲ್ಲವೆನ್ನಲು 100 ಶೇ. ಗ್ಯಾರಂಟಿ ಕೊಡಬಲ್ಲ ಸಾಕ್ಷಿಗಳಿದ್ದವು. ತನ್ನ ನೆನಪು, ಕಾರಿಗೆ ಏನೂ ಆಗದಿದ್ದುದು, ಆದರೂ ಅಂತರ್ಜಾಲದಲ್ಲಿ ಆ ಡೇಟ್‌ನಲ್ಲಿ ತಮ್ಮ ಏರಿಯಾದಲ್ಲಿ ಆದ ಆಕ್ಸಿಡೆಂಟ್‌ಗಳನ್ನು ಹುಡುಕಿದಳು. ಯಾವುದೂ ಇರಲಿಲ್ಲ. ಸಮಾಧಾನವಾಗಲಿಲ್ಲ. ಪ್ರತಿ ದಿನ ಪ್ರತಿ ಕ್ಷಣ ದೇವರನ್ನು ಮನ್ನಿಸೆಂದು ಬೇಡಿದಳು, ತಾನು ಮಾಡದ ಪಾಪಕ್ಕೆ!ಕಡೆಕಡೆಗೆ ಇದೊಂದೇ ಯೋಚನೆಯಾಗತೊಡಗಿತು. ಯು ಟ್ಯೂಬ್‌ನಲ್ಲಿ ಕಾರು ಅಪಘಾತದ ವೀಡಿಯೋ ನೋಡುವುದೊಂದೇ ಕೆಲಸವಾಯಿತು. ಇದರಿಂದಲಾದರೂ ಕ್ರಿಸ್ಟಿನ್ ಬೇಲ್‌ನಂತೆ ತಾನೂ ಮರೆತಿದ್ದರೆ ನೆನಪಾಗುವುದೆಂದು. ಶೇ.99.9 ಭಾಗ ತಾನು ಯಾರನ್ನೂ ಸಾಯಿಸಿಲ್ಲ ಎಂದು ತಿಳಿದಿದ್ದರೂ ಉಳಿದ 0.1 ಪ್ರತಿ ಶತ ಅನುಮಾನ ಸಾಕಿತ್ತು ಅವಳಿಗೆ ಹುಚ್ಚು ಹಿಡಿಸುವ ಮಟ್ಟಿಗೆ ಹಿಂಸೆ ನೀಡಲು. ಮನೋವೈದ್ಯರ ಬಳಿ ಆಪ್ತಸಲಹೆ ಪಡೆದ ಮೇಲೆ ತಿಳಿದದ್ದೆಂದರೆ ಕ್ಯಾಥೊಲಿಕ್ ಆಗಿ ತನಗೆ ನಿಷಿದ್ಧವಾದ ಕುಡಿದು ಕಾರು ಓಡಿಸಿದ ಪಾಪಪ್ರಜ್ಞೆ ಅವಳನ್ನು ಈ ಪರಿ ಕಾಡಿತ್ತು. ಇದು ನಮ್ಮ ಸೂಪರ್ ಇಗೋ ಪವರ್. 
ನಮ್ಮ ನೈತಿಕ ಪ್ರಜ್ಞೆಯನ್ನೇ ಸೂಪರ್ ಇಗೋ ಎನ್ನುವುದು. ಇದರೊಳಗೆ ನಾವು ಚಿಕ್ಕಂದಿನಲ್ಲಿ ಪಡೆದ, ಓದಿದ ಮೌಲ್ಯಗಳು, ಹಿರಿಯರ ಬುದ್ಧಿವಾದಗಳು ಸದ್ದಿಲ್ಲದೇ ಜಾಗ ಮಾಡಿಕೊಂಡು ಕುಳಿತಿರುತ್ತವೆ. ಹಾಗಾಗೇ ನಮ್ಮ ಆದರ್ಶಗಳಿಗೆ ವಿರುದ್ಧವಾಗಿ ನಾವು ನಡೆದಾಗ ಪಾಪಪ್ರಜ್ಞೆಯ ರೂಪದಲ್ಲಿ ಇದು ನಮ್ಮನ್ನು ಶಿಕ್ಷಿಸುತ್ತದೆ. ಅಲ್ಲಿಯೇ ಪ್ರಾಯಶ್ಚಿತ್ತ ಮಾಡಿಕೊಂಡೆವೋ ಸರಿ, ಇಲ್ಲವಾದಲ್ಲಿ ಮನೋರೋಗಗಳಾಗಿ ಕಾಡುತ್ತವೆ. ಕೆಲವೊಮ್ಮೆ ಇಡಿ ದಿನ ಬೇಡವೆಂದರೂ ಹಾಡೊಂದು ಬಾಯಿಗೆ ಬರುತ್ತಲೇ ಇರುತ್ತದೆ. ಕಾಯಿಲೆ ಎಂದು ಗಾಬರಿ ಬೀಳಬೇಕಿಲ್ಲ. ಯಾವಾಗ ನಮ್ಮ ಈ ಚಟ ದೀರ್ಘಕಾಲವಿದ್ದು ದಿನನಿತ್ಯದ ಕೆಲಸಗಳಿಗೆ ಅಡ್ಡಿ ತರಲಾರಂಭಿಸುತ್ತದೋ ಅದು ಚಿಕಿತ್ಸೆಯತ್ತ ಮುಖ ಮಾಡಲು ಸಕಾಲ. 
ನಡೆದಾಡುವಾಗ ಹೆಜ್ಜೆ ಎಣಿಸುವುದು, ತಾನು ಬಲದಲ್ಲೇ ಇರಬೇಕೆಂದು ನೋಡಿಕೊಳ್ಳುವುದು, ಲೈಟ್ ಸ್ವಿಚ್ ಅನ್ನು 10 ಬಾರಿ ಹಾಕಿ ಆರಿಸುವುದು, ಇಷ್ಟು ಬಾರಿಯೇ ಶ್ಲೋಕ ಹೇಳಬೇಕು, ಇಲ್ಲದಿದ್ದಲ್ಲಿ ಏನೋ ಅನಾಹುತ ಸಂಭವಿಸುತ್ತದೆ ಎಂಬ ಆತಂಕ... ಇದರಲ್ಲಿ ನೀವು ಗಮನಿಸಬಹುದಾದದ್ದು ಇಂತಹ ಕ್ರಿಯೆಗಳನ್ನು ಮಾಡದಿದ್ದರೆ ಏನೂ ಆಗುವುದಿಲ್ಲ, ಆದರೆ ಅವರಲ್ಲಿ ಮಾತ್ರ ಮುಂದೆ ಯಾವುದೊ ಅಪಾಯ ತಡೆಯಲು ನಾ ಹೀಗೆ ಮಾಡಲೇಬೇಕು ಎಂಬ ಭಾವ.. 
ಈಗೇನೋ ವಿಜ್ಞಾನ ಮುಂದುವರೆದಿದೆ ಸರಿ. ಆದರೆ ಷೇಕ್ಸ್‌ಪಿಯರ್ ಎಂಬ ನಾಟಕಕಾರನೊಳಗಿದ್ದ ಮನೋವಿಜ್ಞಾನಿ ಅಂದೇ ಈ ಮನೋಕಾಯಿಲೆಯನ್ನು ತನ್ನ ನಾಟಕಗಳಲ್ಲಿ ಪ್ರಸ್ತುತ ಪಡಿಸಿ ನಮ್ಮನ್ನು ಬೆರಗುಗೊಳಿಸುತ್ತಾನೆ. ಮ್ಯಾಕ್ಬೆತ್ ಮತ್ತು ಆತನ ಪತ್ನಿ ಅಧಿಕಾರದ ಆಸೆಯಿಂದ ರಾಜನನ್ನು ಕೊಲೆ ಮಾಡುತ್ತಾರೆ. ಪಟ್ಟವನ್ನೂ ಏರುತ್ತಾರೆ. ಆದರೆ ಈ ಘಟನೆ ನಂತರ ರಾಣಿ ಮ್ಯಾಕ್ಬೆತ್ ಪದೇ ಪದೇ ಕೈ ತೊಳೆಯಲು ಶುರು ಮಾಡುತ್ತಾಳೆ. ಅವಳಿಗೆ ಅವಳ ಕೈಲಿ ರಕ್ತ ಕಾಣಿಸುತ್ತಿರುತ್ತದೆ. ಕೊಲೆ ಅವಳ ನೆಮ್ಮದಿ ಕಿತ್ತು ಕೊಲ್ಲುತ್ತದೆ. ಹಾಗಂತ ಮತ್ತೆ ಮತ್ತೆ ಕೈ ತೊಳೆವವರೆಲ್ಲಾ ಕೊಲೆ ಮಾಡಿದ್ದಾರೆಂದು ಭಾವಿಸೀರಿ..
.-ರೇಶ್ಮಾ ರಾವ್ ಸೊನ್ಲೆ

ಎದೆಯೊಳಗೇ ಉಳಿದ ಮಾತಿಗೆ ಎಷ್ಟು ಅರ್ಥ?

ಲಹರಿ...
ಅವಳು ವಟಸಾವಿತ್ರಿ. ಸದಾ ಮಾತಾಡ್ತಾಳೆ. ಅವನೊಬ್ಬ ಕೇಳ್ತಿದಾನೆ ಅಂತ ಗೊತ್ತಾದ್ರೆ ಸಾಕು, ಸಾವಿರ ಮಾತಾಡ್ತಾಳೆ. ಕೊರೀಬೇಡ್ವೆ ಅಂತ ಅವ ಗೋಗರೆದಿದ್ದೆಷ್ಟು ಸಲವೋ! ಆದರೆ ನಿಜವಾಗಿಯೂ ಹೇಳಬೇಕಾದ ಆ ಮೂರು ಪದಗಳು ಮಾತ್ರ ಅವಳ ನಾಲಿಗೆಗೆ ಸಿಗದೇ ಎಲ್ಲೆಲ್ಲೊ ಅಡ್ಡಾದಿಡ್ಡಿ ಅಲೆಯುತ್ತವೆ. ಬೇರೆ ಪದಗಳದೂ ದಿಕ್ಕು ತಪ್ಪಿಸಿ ಅಲೆದಲೆದು ಅವಿತುಕೊಳ್ಳುತ್ತವೆ. ಅವುಗಳ ಅಡಗುತಾಣವನ್ನು ಅವನೇ ಶೋಧಿಸಲಿ ಎಂಬುದವಳ ಆಸೆ. ಅವನೋ, ಅಡಗುತಾಣ ಕಂಡರೂ ಕಾಣದಂತೆ ನಟಿಸುವ ಚತುರ. ಒಟ್ಟಿನಲ್ಲಿ ಅವಳೆದೆ ಗೂಡಲ್ಲಿ ಆ ಮೂರು ಪದಗಳು ಭದ್ರವಾಗಿ ಬೆಚ್ಚಗೆ ಕುಳಿತಿವೆ. 
ದೇವರಿಗೆ ಕೈ ಮುಗಿಯುವಾಗಲೆಲ್ಲ ಅವನ ಒಳಿತನ್ನು ಬಯಸುತ್ತಾಳೆ. ಆದರೆ ಅವನೆಂದೂ ತನ್ನವನಾಗಬೇಕೆಂದು ಕೇಳಿಕೊಳ್ಳುವುದಿಲ್ಲ. ಏಕೆಂದು ಅವಳೇ ಹಲವು ಬಾರಿ ಪ್ರಶ್ನಿಸಿಕೊಂಡಿದ್ದುಂಟು. ಹೀಗೆ ಹೇಳಲಾಗದೆ ಚಡಪಡಿಸುವ ಮೂರು ಪದಗಳಿಗೂ, ದೇವರಲ್ಲಿ ಕೋರಲಾಗದ ಕೋರಿಕೆಗೂ ಸಂಬಂಧವಿದೆ ಎಂಬ ಬಲವಾದ ನಂಬಿಕೆ ಅವಳದ್ದು. ಆದರೆ ಅದನ್ನು ಬಿಡಿಸಲು ಹೋದರೆಲ್ಲಿ ಪ್ರೀತಿ ಕಳೆದುಕೊಂಡಿದ್ದೇನೆನಿಸುತ್ತೊ ಎಂಬ ಭಯವನ್ನು ಮತ್ತೆ ಅವನ ಕನವರಿಕೆ ಕನಸುಗಳಲ್ಲಿ ಮುಚ್ಚಿ ಹಾಕುತ್ತಾಳೆ. ಪ್ರೀತಿಯಲ್ಲಿರುವ ಭಾವವೇ ಪ್ರೀತಿಸುವವನಿಗಿಂತ ಖುಷಿ ಕೊಡುತ್ತದಾ?
ಕನ್ನಡಿಯ ಮುಂದೆ ನಿಂತಗೆಲ್ಲಾ ಪಕ್ಕದಲ್ಲಿ ಅವನ ಬಿಂಬ ಮೂಡುತ್ತದೆ. ಸುಮ್ಮನೆ ನಾಚಿಕೊಂಡು ನುಲಿಯುತ್ತಾಳೆ. ಬಿಂಬ ಸರಿದು ಅವನೇ ಎದುರು ಬಂದಾಗ ನಾಚಿಕೆಯ ನೆರಳೂ ಅವನಿಗೆ ಕಾಣದಂತೆ ಮುಚ್ಚಿಟ್ಟು ಅವನ ಕಣ್ಣುಗಳನ್ನು ತಡಕುತ್ತಾಳೆ. ಅವು ಸುಮ್ಮನೆ ಬಡಿದರೂ ತನ್ನೊಡನೆ ಮಾತನಾಡಿದವು ಎಂದು ಭ್ರಮಿಸಿ ತೇಲುವ ಸುಖ ಇದೆಯಲ್ಲಾ ... ಖುಷಿಗೆ ಅವನು ಕಾರಣ ಕೇಳಿದರೆ ಮಾತು ತೇಲಿಸುತ್ತಾಳೆ. ತೇಲುವ ಮಾತುಗಳ ನೌಕೆ ಅವನಲ್ಲೂ ಅಲೆ ಎಬ್ಬಿಸುತ್ತವೆಯೇನೋ, ಹಾಗೆನಿಸುತ್ತದೆ ಆಕೆಗೆ. ಪ್ರೀತಿಯಲ್ಲಿರುವುದರಿಂದಲೇ ಈ ಮಾದಕ ಭ್ರಾಮಕ ಲೋಕ ತನ್ನದಾಗಿದೆ ಎಂಬ ಸತ್ಯ ಅವನೂ ಪ್ರೀತಿಸುತ್ತಿದ್ದಾನೆ ಎಂಬ ಸುಳ್ಳೂ ಆಗಿರಬಹುದಾದ ವಿಷಯವನ್ನೇ ಸುಲಭವಾಗಿ ನಂಬುವಂತೆ ಮಾಡುತ್ತದೆ. ಕೇಳಿ ಕ್ರಾಸ್ ಚೆಕ್ ಮಾಡಿದರೆಲ್ಲಿ ಗುಳ್ಳೆಯಂತೆ ತಾನು ಕಟ್ಟಿದ ಲೋಕ ಒಡೆದುಬಿಡುವುದೋ ಎಂಬ ಭಯವೇ ಆ ಮೂರು ಪದಗಳನ್ನು ಅವಳ ನಾಲಿಗೆಯ ನೆನಪಿನಿಂದ ಮರೆಸಿ ಹಾಕಿರುವುದು. 
ಈ ಪ್ರೀತಿಯ ಲೋಕದ ಸೃಷ್ಟಿಯಲ್ಲಿ ಮಳೆ ಬಂದರೆ ಆತ ಕೊಡೆಯಾಗುತ್ತಾನೆ. ಇವಳ ಕಣ್ಣೀರು ನೆಲ ತಾಕುವ ಮೊದಲೇ ಅವನದನ್ನು ಒರೆಸಿ ನಗು ಅರಳಿಸಿರುತ್ತಾನೆ. ಇವಳು ಸು ಎನ್ನುವುದರೊಳಗೆ ಸುಖದ ಸುಪ್ಪತ್ತಿಗೆ ಎದುರು ಬಂದು ಬಿದ್ದಿರುತ್ತದೆ. ಕಣ್ಣಿನಲ್ಲಿ ಅಂದಿದ್ದನ್ನು ಓದಿ ಬಿಡುವ ಚತುರ, ಸದಾ ಇವಳ ಸಂಗ ಬಯಸುವ ಕೃಷ್ಣನಷ್ಟು ರಸಿಕನಾದ ರಾಮ, ಇವಳ ಮುಂದೆ ಪರ ಹುಡುಗಿಯರು ನೀರಸ ಎಂದು ಭರವಸೆಯ ಮಾತುಗಳನ್ನಾಡುವ ಹುಡುಗ...ಹೇಳಿಬಿಟ್ಟರೆ ತಾನು ಪ್ರೀತಿಸುವ ಜೊತೆಗೆ ಈ ಪ್ರೀತಿಸಲ್ಪಡುವ ಸುಖ ಇಷ್ಟು ಆಳವಾಗಿ, ತಾ ಬಯಸಿದಂತೆ ಸಿಗುವುದೇ? ಒಂದು ವೇಳೆ ತನ್ನ ಪ್ರೀತಿ ಏಕ ಮುಖ ಪ್ರವಾಹ ಎಂದಾದರೆ ತಾನದನ್ನು ಸಹಿಸಬಲ್ಲೆನೇ?
ಆತ ಮತ್ತೆ ಮತ್ತೆ ಸಿಗುತ್ತಾನೆ ... ಇವಳು ಹರಟುತ್ತಾಳೆ ...  ಅವನು ಕೇಳಿಸಿಕೊಳ್ಳುತ್ತಾನೆ.. ಅವಳು ಹೇಳದ್ದು?
- ರೇಶ್ಮಾ ರಾವ್ ಸೊನ್ಲೆ

5.2.14

ಶಾಲೆಗೆ ಹಾಜರ್ ರಿಸಲ್ಟ್ ಬಂಪರ್



ಲೆಕ್ಕದಿ ದಾಖಲೆ ಬರೆದ ಸೊನ್ಲೆ


'ನಿಮ್ಗೆ ಯಾವೂರಾಯ್ತು?'
'ಸೊನ್ಲೆ'
'ಸೊನ್ಲೆನಾ? ಏನ್ರೀ ನಿಮ್ಮೂರ್ ಹೈಸ್ಕೂಲು?! ಈ ವರ್ಷದ್ ಬ್ಯಾಚ್ ಹೆಂಗಿದೆಯಂತೆ?'
'ಬ್ಯಾಚ್ ಹೆಂಗಿದ್ರೂ ತಯಾರ್ ಮಾಡ್‌ಬಿಡ್ತಾರೆ ಸಾರ್ ನಮ್ ಮೇಷ್ಟ್ರುಗಳು. ಈ ವರ್ಷನೂ 100ರ್ ಗ್ಯಾರಂಟಿ.'
- ಹೌದು, ಹೀಗೆ ಸರ್ಕಾರಿ ಶಾಲೆಯೊಂದರಿಂದ ಊರೊಂದು ಗುರುತಿಸಿಕೊಂಡು ಊರಿನವರಿಗೆ ಹೆಮ್ಮೆ ತರುತ್ತಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆಯಲ್ಲಿ. ಈ ಭಾಗದಲ್ಲಿ ಯಾರ ಬಳಿಯೇ ಸೊನಲೆ ಹೆಸರೆತ್ತಿದರೂ ಶಾಲೆಯ ಪ್ರಸ್ತಾಪವಿಲ್ಲದೆ ಮಾತು ಮುಗಿಯುವುದೇ ಇಲ್ಲ. ಇಲ್ಲಿನ ಸರ್ಕಾರಿ ಪ್ರೌಢಶಾಲೆ 5 ಬಾರಿ ಸತತವಾಗಿ ಸೇರಿದಂತೆ ಕಳೆದ 9 ವರ್ಷಗಳಲ್ಲಿ 7 ಬಾರಿ 100 ಶೇ. ಫಲಿತಾಂಶ ಕೊಟ್ಟಿದ್ದು ರಾಜ್ಯದ ಮಟ್ಟಿಗೆ ಒಂದು ದಾಖಲೆಯೇ ಸರಿ. ಎರಡು ಬಾರಿ ತಪ್ಪಿದಾಗಲೂ 90ರಿಂದ ನೂರು ವಿದ್ಯಾರ್ಥಿಗಳಿರುವ ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಒಬ್ಬರೋ ಇಬ್ಬರೋ ಒಂದು ವಿಷಯದಲ್ಲಿ ನಪಾಸಾಗಿದ್ದು ಇಲ್ಲಿನ ಶಿಕ್ಷಕರ ಮನಸ್ಸಿನಲ್ಲಿ ಸದಾ ಕೊರೆವ ವಿಷಾದ.
ಸೊನಲೆ ಒಂದು ಪುಟ್ಟ ಗ್ರಾಮ. ಬಹುತೇಕ ರೈತರೇ ವಾಸವಾಗಿರುವ ಈ ಭಾಗದಲ್ಲಿ ಮಕ್ಕಳನ್ನು ಶಿಕ್ಷಣದತ್ತ ಪ್ರೇರೇಪಿಸುವ ಕೆಲಸ ಒಂದು ಸವಾಲೇ ಸರಿ. ಅಂಥ ಸವಾಲಿಗೆ ಎದೆಯೊಡ್ಡಿದವರು ಸೊನಲೆ ಪ್ರೌಢಶಾಲೆಯ ಶಿಕ್ಷಕರು. ಹೌದು, ಇವರೆಲ್ಲರಲ್ಲೂ ಕನಸಿದೆ. ಇವರ ಪ್ರತಿ ಮಾತಿನಲ್ಲೂ ಅದು ಇಣುಕುತ್ತದೆ. ಆ ಕನಸಿನಲ್ಲಿ ಮಕ್ಕಳ ಉನ್ನತ ಭವಿಷ್ಯವಿದೆ. ಇಂಥಹ ಉತ್ಸಾಹಿ ಸಮಾನ ಮನಸ್ಕ ಶಿಕ್ಷಕರು ಒಂದೆಡೆಯೇ ಒಟ್ಟಾದ ಮೇಲೆ ಅದರ ಫಲ ಮಕ್ಕಳು ಹಾಗೂ ಸಮುದಾಯಕ್ಕೆ ಸಿಕ್ಕೇಸಿಗುತ್ತದೆ.
ಸರ್ಕಾರಿ ಕೆಲಸ, ಏನೋ 10ರಿಂದ 5ರವರೆಗೆ ಪಾಠ ಮಾಡಿ ಮನೆಗೆ ಹೋದರಾಯಿತು ಎಂಬ ಉದಾಸೀನ ಧೋರಣೆ ಹುಡುಕಿದರೂ ಸಿಗುವುದಿಲ್ಲ. ಸುತ್ತಲ ಹತ್ತಾರು ಹಳ್ಳಿಗಳ ಮನೆಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ತಿಳಿವಳಿಕೆ ನೀಡುತ್ತಾರೆ. ಮನೆಯಲ್ಲಿ ಕರೆಂಟ್ ಇಲ್ಲ, ಅಪ್ಪ ಕೆಲಸ ಹೇಳಿದರು ಎಂಬ ನೆಪ ನಡೆಯುವುದಿಲ್ಲ. ಏಕೆಂದರೆ ಪಾಠ ಮುಗಿದ ಮೇಲೆ ಪ್ರತಿ ರಾತ್ರಿ ಊರಿನ ಹುಡುಗರು ಶಾಲೆಯಲ್ಲೇ ಇದ್ದು ಓದಬೇಕು. ಶಿಕ್ಷಕರು ಮೇಲ್ವಿಚಾರಣೆ ನಡೆಸುತ್ತಾರೆ. ಈ ನಿಯಮ ಹುಡುಗಿಯರಿಗಿಲ್ಲ. ಆದರೆ ಅವರು ಪ್ರತಿ ರಾತ್ರಿ ತಾವು ಮಲಗುವ ಮೊದಲು (ಕನಿಷ್ಠ ಪಕ್ಷ10.30ಕ್ಕೆ) ಶಿಕ್ಷಕರಿಗೆ ಮಿಸ್‌ಕಾಲ್ ಕೊಟ್ಟು ತಾವು ಇನ್ನೂ ಓದುತ್ತಿರುವುದನ್ನು ಸೂಚಿಸಬೇಕು. ಬೆಳಿಗ್ಗೆ 5 ಗಂಟೆಗೆ ಮತ್ತೊಮ್ಮೆ ಮಿಸ್‌ಕಾಲ್ ಕೊಡಬೇಕು. ಮಿಸ್‌ಕಾಲ್ ಕೊಟ್ಟು ಮತ್ತೆ ಮಲಗುವಂತಿಲ್ಲ. ಯಾವುದೇ ಸಮಯದಲ್ಲಿ ಬೇಕಾದರೂ ಶಿಕ್ಷಕರು ಕರೆ ಮಾಡಿ ಏನು ಓದಿದರೆಂದು ವಿಚಾರಿಸಬಹುದು. ರಜಾ ದಿನಗಳಲ್ಲಿ ಮಕ್ಕಳ ಮನೆಗಳಿಗೆ ಸರ್ಪ್ರೈಸ್ ಭೇಟಿ ನೀಡುತ್ತಾರೆ. ಶಾಲೆಯಲ್ಲಿ ಹಿಂದಿನ ದಿನ ಓದಿದ ಪಠ್ಯದ ಪ್ರಶ್ನೋತ್ತರ ಸಮಯವೂ ಇರುತ್ತದೆ.ಹಳೆಯ ವಿದ್ಯಾರ್ಥಿಯೊಬ್ಬ ತಾನು ಶಾಲೆಯಲ್ಲಿ ಪಡೆದ ಗಟ್ಟಿ ತಳಪಾಯದಿಂದ ವಾಲಿಬಾಲ್‌ನಲ್ಲಿ ರಾಷ್ಟ್ರೀಯ ಕ್ರೀಡಾ ಶಾಲೆಗೂ ಆಯ್ಕೆಯಾಗಿದ್ದಾನೆ. ಶಾಲೆಯ ಸುತ್ತಲೂ ಮಕ್ಕಳ ಶ್ರಮದಾನದ ಫಲವಾಗಿ ತರಕಾರಿ, ಹೂವಿನ ತೋಟ ಉದ್ಯಾನವನವಾಗಿ ಅರಳಿ ನಿಂತು ಪರಿಸರವನ್ನು ಹಸಿರಾಗಿಸಿದೆ.
 ಸಭಾಭವನ ಬೇಕಿದೆ...ಇದುವರೆಗೂ ಶಾಲೆಗೆ ಜಿಪಂ, ತಾಪಂ, ಗ್ರಾಪಂನಿಂದ ಬಂದ ಅನುದಾನ ಹಾಗೂ ದಾನಿಗಳ ನೆರವಿನಿಂದ ಬಂದ ಒಂದೊಂದು ಪೈಸೆಯೂ ಶಾಲೆಗೆ ಉತ್ತಮ ಕಟ್ಟಡ, ಕಾಂಪೌಂಡ್, ಆಟದ ಮೈದಾನ, ಕುಡಿವ ನೀರಿನ ಟ್ಯಾಂಕ್ ಹಾಗೂ ಶೌಚಾಲಯ ನಿರ್ಮಾಣಕ್ಕೆ ಸದ್ವಿನಿಯೋಗವಾಗಿದೆ. ಇಲ್ಲಿನ ಗ್ರಾಮ ಪಂಚಾಯ್ತಿಯಂತೂ ಶಾಲೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದಿಲ್ಲ. ಹಾಗಂತ ಅನವಶ್ಯಕ ಹಸ್ತಕ್ಷೇಪವೂ ಇಲ್ಲ. ಎಸ್‌ಡಿಎಂಸಿ ಸದಸ್ಯರು ಕೂಡಾ ವಿಶೇಷ ಆಸಕ್ತಿಯಿಂದ ಶಾಲೆಗೆ ವಿದ್ಯಾರ್ಥಿಗಳಷ್ಟೇ ಹಾಜರಿ ನೀಡುತ್ತಾರೆ. ಆದರೆ ಶಿಕ್ಷಕರ ಒಂದೇ ಕೊರಗೆಂದರೆ 280 ಮಕ್ಕಳಿರುವ ಶಾಲೆಯಲ್ಲಿ ಬಿಸಿಯೂಟ ಬಡಿಸಲು ಸರಿಯಾದ ಸ್ಥಳಾವಕಾಶವಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ರಂಗ ಮಂದಿರವಿಲ್ಲ. ಮಳೆಗಾಲದಲ್ಲಂತೂ ಮಕ್ಕಳು ಪ್ರಾರ್ಥನೆಗೆ ನಿಲ್ಲಲು, ಊಟ ಮಾಡಲು ಒಂದು ಸಭಾಭವನದ ಕೊರತೆ ಕಾಡುತ್ತಿದೆ. ಈಗಾಗಲೇ ಜಿಪಂನಿಂದ ಬಂದ ಅನುದಾನ ಹಾಗೂ ಉತ್ತಮ ಶಾಲೆ ಎಂದು ಗೋವಿಂದೇಗೌಡ ಪ್ರಶಸ್ತಿ ಲಭಿಸಿದ್ದಾಗಿ ಸಿಕ್ಕ ಹಣವನ್ನೂ ಸೇರಿಸಿ ಸಭಾಭವನಕ್ಕೆ ತಳಪಾಯ ಹಾಕಲಾಗಿದೆ. ಆದರೆ 500 ಮಂದಿ ಕೂರುವಂಥ ಸಭಾಭವನದ ಅಂದಾಜು ವೆಚ್ಚ ಸುಮಾರು 20 ಲಕ್ಷಗಳು. ಉನ್ನತ ಸ್ಥಾನ ತಲುಪಿರುವ ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೋತ್ಸಾಹಕರು, ದಾನಿಗಳು ಮನಸ್ಸು ಮಾಡಿದರೆ ಇದೇನು ದೊಡ್ಡ ಮೊತ್ತವಲ್ಲ. ಉತ್ಸಾಹಿ ಶಿಕ್ಷಕರ ನಿಸ್ವಾರ್ಥ ಕನಸು ಹಳ್ಳಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ಭವಿಷ್ಯಕ್ಕೆ ನಾಂದಿ ಹಾಡುವುದಾದರೆ ಅದಕ್ಕೆ ಕೈ ಜೋಡಿಸುವಷ್ಟು ಹೊಣೆ ನಮ್ಮದೂ ಆಗಲಿ ಅಲ್ಲವೇ?
 ದೇಣಿಗೆ ನೀಡುವವರು ನೇರವಾಗಿ ಶಾಲೆಯ ಖಾತೆ ಸಂಖ್ಯೆ 10826100003057(ಐಎಫ್‌ಎಸ್‌ಸಿ ಕೋಡ್- ಸಿಎನ್‌ಆರ್‌ಬಿ000ಪಿಜಿಬಿ1) ಪ್ರಗತಿ ಗ್ರಾಮೀಣ ಬ್ಯಾಂಕ್, ಸೊನಲೆ, ಹೊಸನಗರ ತಾಲೂಕು ಇಲ್ಲಿಗೆ ಜಮಾ ಮಾಡಬಹುದು. ರಶೀದಿಯನ್ನು ತಮ್ಮ ವಿಳಾಸಕ್ಕೆ ಕಳಿಸಕೊಡಲಾಗುವುದು. ಮಾಹಿತಿಗೆ ಸೋಮಶೇಖರ್ ಬಿ.ಪಿ. (9448885142) ಸಂಪರ್ಕಿಸಬಹುದು.
ನಮ್ಮದೊಂದು ಕನಸಿದೆ, ಶಾಲೆಯನ್ನು ನವೋದಯ ಮಾದರಿ ಮಾಡಬೇಕೆಂದು. ಸದ್ಯ ಸಭಾಭವನವೊಂದು ನಿರ್ಮಾಣವಾದರೆ ಮಕ್ಕಳಿಗೆ ಬಿಸಿಯೂಟ ಮಾಡಲು, ಮಳೆಗಾಲದಲ್ಲಿ ಪ್ರಾರ್ಥನೆಗೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು, ಪರೀಕ್ಷೆ ಸಮಯದಲ್ಲಿ ರಾತ್ರಿವರೆಗೂ ಕುಳಿತು ಓದಲು ಅನುಕೂಲವಾಗುತ್ತದೆ. ಇದಕ್ಕಾಗಿ ದೇಣಿಗೆ ಎತ್ತುವ ಚಿಂತನೆ ನಡೆಸಿದ್ದೇವೆ.
- ಪ್ರವೀಣ್‌ಕುಮಾರ್, ಮುಖ್ಯಶಿಕ್ಷಕ.
-ರೇಶ್ಮಾ ರಾವ್ ಸೊನ್ಲೆ