ಪುಟಗಳು

29.3.14

ಪೊಲೀಸ್ ಟಿಕ್ಸ್

cop ಆಡಿ cop ಆಡಿ
ಪೊಲೈಟ್ ಎನಿಸಿಕೊಂಡ ಪೊಲೀಸ್ ಆಫೀಸರುಗಳೆಲ್ಲಾ ಪೊಲಿಟಿಕ್ಸ್ನತ್ತ ಮುಖ ಮಾಡಿದರೆ ಪೋಲಿಗಳ ಜುಟ್ಟು ಹಿಡಿಯೋರ್ಯಾರು? ಖಾಕಿ ಹಾಕುತ್ತಿದ್ದವರೆಲ್ಲ ಟೈಡ್ ಪ್ಲಸ್ ಬಳಸುತ್ತಿದ್ದಾರೋ ಎಂಬಂತೆ ಬಿಳಿ ಖಾದಿ ಧರಿಸಿ ರಾಜಕೀಯ ರಂಗಕ್ಕೆ ಇಳಿಯುತ್ತಿದ್ದಾರೆ. ಗನ್ ಹಿಡಿಯುತ್ತಿದ್ದ ಕೈಯನ್ನು ಅಷ್ಟು ಸುಲಭವಾಗಿ ಹಿಡಿಯಲೊಪ್ಪದ ರಾಜಕೀಯರಂಗ, ಎಲ್ಲೋ ಮೂರು ಮತ್ತೊಬ್ಬರಿಗೆ ಮಾತ್ರ ಸಲ್ಯೂಟ್ ಹೊಡೆದಿದೆ. 
ಗಿರೀಶ್ ಮಟ್ಟಣ್ಣನವರ್
ಸದ್ಯ ಕಂಠೀರವ ಸ್ಟುಡಿಯೋದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿದ್ದವರು. ರಾಜಕೀಯದ ಭ್ರಷ್ಟ ವ್ಯವಸ್ಥೆ ನೋಡಿ ಹೇಸಿಗೆಪಟ್ಟು ವಿಧಾನಸೌಧಕ್ಕೇ ಬಾಂಬ್ ಇಡುವ ದುಸ್ಸಾಹಸಕ್ಕೆ ಕೈ ಹಾಕಿ ಸೋತ ಗಿರೀಶ್, ಭ್ರಷ್ಟ ವ್ಯವಸ್ಥೆ ಸರಿಪಡಿಸಲೆಂದೇ ಬಿಜೆಪಿ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.
ಬಿ.ಕೆ. ಶಿವರಾಂ
ಬೆಂಗಳೂರಿನ ಮಲ್ಲೇಶ್ವರಂನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದ ಬಿ.ಕೆ.ಶಿವರಾಂ ಐಪಿಎಸ್ ಅಧಿಕಾರಿಯಾಗಿದ್ದವರು. ವೃತ್ತಿಗೆ ಸ್ವಯಂನಿವೃತ್ತಿ ಘೋಷಿಸಿ ಅಣ್ಣ ಬಿ.ಕೆ.ಹರಿಪ್ರಸಾದ್ ಹಾದಿ ಹಿಡಿದು ರಾಜಕಾರಣಕ್ಕೆ ಧುಮುಕಿದರು. ಮಲ್ಲೇಶ್ವರಂನಲ್ಲಿ ಸೋಲಾಯಿತಾದರೂ ರಾಜಕಾರಣದಲ್ಲಿನ್ನೂ ಸಕ್ರಿಯವಾಗಿದ್ದಾರೆ.
ಶಂಕರ್ ಬಿದರಿ
ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಎಲ್ಟಿಟಿಇ ಮುಖಂಡರಾದ ಶುಭಾ, ಶಿವರಸನ್ ಹಿಡಿವಲ್ಲಿ ಪ್ರಮುಖ ಪಾತ್ರ ವಹಿಸಿ ತಮ್ಮ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ ಬಿದರಿಯವರು ಕಳೆದ ವರ್ಷ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುವ ಮೂಲಕ 30 ವರ್ಷಗಳ ತಮ್ಮ ಪೊಲೀಸ್ ಒಡನಾಟಕ್ಕೆ ಬೈಬೈ ಹೇಳಿದರು.
ಬಿ.ಸಿ.ಪಾಟೀಲ್
1979ರಲ್ಲಿ ಪೊಲೀಸ್ ಟ್ರೈನಿಂಗ್ ಪಡೆದ ಈ 'ಬಿಸಿ' ರಕ್ತದ ಯುವಕ ನಂತರ ಚಿತ್ರೋದ್ಯಮದಲ್ಲಿ ನೆಲೆ ಕಂಡುಕೊಂಡು ಕೌರವನಾಗಿ ರೌರವ ರೂಪದಿಂದಲೇ ಜನಮನ ಗೆದ್ದರು. ಹಲವಾರು ಯಶಸ್ವಿ ಚಿತ್ರಗಳನ್ನು ಕೊಟ್ಟ ಪಾಟೀಲ್, ಹಿರೇಕೆರೂರು ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಸಾಂಗ್ಲಿಯಾನ
ವಿಶೇಷ ಪೊಲೀಸ್ ಆಯುಕ್ತರಾಗಿದ್ದ ಮಿಜೋರಾಂ ಮೂಲದ ಸಾಂಗ್ಲಿಯಾನಾ ಅದೆಷ್ಟು ಖ್ಯಾತಿ ಗಳಿಸದ್ದರೆಂಬುದನ್ನು ಹೇಳಲು ಅವರ ಹೆಸರಿನಲ್ಲಿ ಬಂದ ಎರಡು ಕನ್ನಡ ಚಿತ್ರಗಳೇ ಸಾಕು. ಸಾಂಗ್ಲಿಯಾನಾರನ್ನು ಖ್ಯಾತಿಯೇ ರಾಜಕೀಯಕ್ಕೆ ಎಳೆತಂದಿತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಂಗ್ಲಿಯಾನಾ ಸಂಸದರಾಗಿ ಕಾರ್ಯ ನಿರ್ವಹಿಸಿದರು. ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅಬ್ದುಲ್ ಅಜೀಮ್
ಪ್ರಾಮಾಣಿಕತೆ ಹಾಗೂ ಶಿಸ್ತಿಗೆ ಹೆಸರಾದ, ಸಾಂಗ್ಲಿಯಾನ ಅವರಿಂದ 'ಬೆಂಗಳೂರಿನ ಶೆರ್ಲಾಕ್ ಹೋಮ್ಸ್' ಎಂದೇ ಕರೆಸಿಕೊಂಡಿದ್ದ ಮಾಜಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಅಬ್ದುಲ್ ಅಜೀಮ್, ಹೆಸರು ಕೊಟ್ಟ ಹುದ್ದೆ ಬಿಟ್ಟು 'ಹಸಿರು' ತೆನೆ ಹೊತ್ತದ್ದು 2004ರಲ್ಲಿ. 2006ರಲ್ಲಿ ಶಾಸನಮಂಡಳಿ ಸದಸ್ಯರಾಗಿ ಆಯ್ಕೆಯಾಗಿ 2013ರಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದರು.
ಕೆನಡಿ ಸಿ ಕಿರಿಮ್
ಮ್ಮ ಹೊಸ ಶೈಲಿಯ ಪ್ರಚಾರಗಳಿಂದ ಬಹುಮತ ಗಳಿಸಿ ಅದುವರೆಗೂ ಮೂರು ಬಾರಿ ಗೆದ್ದಿದ್ದ ಆಡಳಿತ ಪಕ್ಷದ ಎದುರಾಳಿಯನ್ನು ಸೋಲಿಸಿದ ಶಿಲ್ಲಾಂಗ್ನ ಮಾಜಿ ಪೊಲೀಸ್ ಅಧಿಕಾರಿ ಕಿರಿಮ್ ಗೆಲುವಿಗೆ ಸ್ವತಃ ಮುಖ್ಯಮಂತ್ರಿಯೇ ಆಶ್ಚರ್ಯಸಹಿತ ಮೆಚ್ಚುಗೆ ವ್ಯಕ್ತಪಡಿಸಿದ್ದರು. 
ಅಫ್ತಾಬ್ ಅಹ್ಮದ್ ಖಾನ್
ಮಹಾರಾಷ್ಟ್ರದ ಲೋಖಂಡ್ವಾಲಾ ಶೂಟ್ಔಟ್ನಿಂದ ಖ್ಯಾತರಾಗಿದ್ದ ದಕ್ಷ ಪೊಲೀಸ್ ಅಧಿಕಾರಿ ಅಫ್ತಾಬ್ ಅಹ್ಮದ್ಖಾನ್ರನ್ನೂ ಕೂಡಾ ರಾಜಕೀಯ ಅಯಸ್ಕಾಂತದಂತೆ ಸೆಳೆದಿದ್ದು 1990ರ ಹೊಸ್ತಿಲಲ್ಲಿ. ಸಮಾಜವಾದಿ ಪಕ್ಷದ ಮೂಲಕ ರಾಜಕೀಯಕ್ಕೆ ಬಂದು ನಂತರ ಜೆಡಿಎಸ್ಗೆ ಹಾರಿಕೊಂಡ ಅಫ್ತಾಬ್ ದಶಕಗಳ ಬಳಿಕ ರಾಜಕೀಯದಿಂದ ಹೊರಬಂದು ಸದ್ಯ ಖಾಸಗಿ ಭದ್ರತಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ.
ಸೋಮ್ ಪ್ರಕಾಶ್ ಸಿಂಗ್
ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಸ್ವಯಂನಿವೃತ್ತಿ ಘೋಷಿಸಿ, ಹಲವು ಧ್ಯೇಯಗಳೊಂದಿಗೆ 2010ರಲ್ಲಿ ಬಿಹಾರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಶಾಸಕರಾದ ಸೋಮ್ಪ್ರಕಾಶ್ ಸಿಂಗ್ ಸದ್ಯ ಭ್ರಮನಿರಸನಗೊಂಡು ಮತ್ತೆ ತಮ್ಮ ಹಿಂದಿನ ಹುದ್ದೆಗೆ ಮರಳುವ ಬಗ್ಗೆ ಯೋಚಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದಾಗ ಕೆಲವಾದರೂ ಭ್ರಷ್ಟರನ್ನು ಒಳತಳ್ಳುವ ಅಧಿಕಾರವಿತ್ತು. ಆದರೆ ಶಾಸಕನಾದ ಮೇಲೆ ಎಲ್ಲ ಭ್ರಷ್ಟಾಚಾರಗಳಿಗೆ ಸಾಕ್ಷಿಯಾಗಿಯೂ ಏನೂ ಮಾಡಲಾಗುತ್ತಿಲ್ಲ ಎಂಬುದು ಅವರ ಅಳಲು.
ಸುಶೀಲ್ ಕುಮಾರ್ ಸಂಭಾಜಿರಾವ್ ಶಿಂಧೆ
ಸದ್ಯ ಯುಪಿಎ ಸರ್ಕಾರದಲ್ಲಿ ಗೃಹಮಂತ್ರಿಯಾಗಿರುವ ಸುಶೀಲ್ಕುಮಾರ್ ಶಿಂಧೆ, ಮಹಾರಾಷ್ಟ್ರ ರಾಜ್ಯ ಪೊಲೀಸ್ ಬಳಗದಲ್ಲಿ ಕಾನ್ಸ್ಟೆಬಲ್ ಆಗಿ, ಸಬ್ಇನ್ಸ್ಪೆಕ್ಟರ್ ಆಗಿ, ಸಿಐಡಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು. ರಾಜಕಾರಣಕ್ಕೆ ಕಾಲಿಟ್ಟ ಪೊಲೀಸ್ ಅಧಿಕಾರಿಗಳಲ್ಲಿ ಉನ್ನತ ಸ್ಥಾನಕ್ಕೇರಿದ ಕೀರ್ತಿ ಇವರದು.
ಆರ್. ಚಕ್ರವರ್ತಿ ರಾಜಗೋಪಾಲಕೃಷ್ಣನ್
ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಗಿದ್ದ ಚಕ್ರವರ್ತಿ ಭ್ರಷ್ಟವಿರೋಧಿ ನೀತಿಗಳಿಂದ ಪ್ರಖ್ಯಾತರಾಗಿದ್ದವರು. ಹಾಗಾಗೇ ಆಮ್ ಆದ್ಮಿ ಪಕ್ಷದ ತತ್ವಗಳಿಗೆ ಮನಸೋತು ಆರು ತಿಂಗಳ ಹಿಂದಷ್ಟೇ ರಾಜಕೀಯಕ್ಕೆ ಬಂದ ಚಕ್ರವರ್ತಿ, ಇದೀಗ ಆಪ್ನ ತಿರುಪುರ ಲೋಕಸಭಾ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

1 ಕಾಮೆಂಟ್‌:

Badarinath Palavalli ಹೇಳಿದರು...

ಖಾಕೀ ಲೀಸ್ಟ್ ಉದ್ದವಿದೆ ಅಲ್ಲವೇ!