ಪುಟಗಳು

19.2.14

ಕಾಪಾಡು ಚೊಂಬೇಶ್ವರಾ...

First Published: 15 Feb 2014 02:00:00 AM IST

ಹೇಳಿದ್ದೇ ಹೇಳೋ ಕಿಸ್ಬಾಯ್ದಾಸ ಗೊತ್ತು. ಮಾಡಿದ್ದೇ ಮಾಡೋ ಈ ಅಭ್ಯಾಸದ ಬಗ್ಗೆ ಕೇಳಿದ್ದೀರಾ?ನಮ್ಮೊಳಗೇ ಹಲವರಿರ್ತಾರೆ. ಮುಕ್ಕೋಟಿ ದೇವರುಗಳಿಗೂ ಮುನಿಸಿಕೊಳ್ಳದೆ ಮುನ್ನೂರ್ ಸತಿ ಬೇಕಾದರೂ ನಮಸ್ಕಾರ ಮಾಡೋರು. ನೋಡೋರು ಅವ್ರ್ಗೇ ಒಂದ್ ದೊಡ್ ನಮಸ್ಕಾರ ಹಾಕಬೇಕು, ಆ ರೇಂಜ್‌ಗೆ. ದಾರೀಲಿ, ಬಸ್ಸಲ್ಲಿ ಎಲ್ಲೇ ದೇವರ ಮೂರ್ತಿನೋ, ಫೋಟೋನೋ ಕಂಡರೂ ಕೆನ್ನೆ, ಹಣೆ, ಗದ್ದ ಮುಟ್ಕೊಳೋರು. ಹಾಗಂತ ಇವರೇನು ದೇವದೂತರಲ್ಲ, ಭಕ್ತಸಾಧು ಕನಕದಾಸರಲ್ಲ, ನಮಸ್ಕಾರ ಮಾಡೋದು ಒಂದು ಚಟ ಅಷ್ಟೇ. ಅಲ್ಲಿ ಭಕ್ತಿಗಿಂತ ಭಯ ಜಾಸ್ತಿ ಇರುತ್ತೆ. 
ಇನ್ನು ಕೆಲವರಿಗೆ ಕೈ ತೊಳೆಯೋ ಅಭ್ಯಾಸ. ಒಳ್ಳೇದೇ. ಆದ್ರೆ ಒಂದೆರಡು ಬಾರಿಯಲ್ಲ, ಭಗವಂತ ಇವರಿಗೆ ಎಕ್ಸ್‌ಟ್ರಾ ಟೈಮ್ ಕೊಟ್ಟಂತೆ ದಿನಕ್ಕೆ ನೂರು ಬಾರಿ!ಮತ್ತೊಂದಷ್ಟು ಜನಕ್ಕೆ ಮನೆಯಿಂದ ಹೊರಡುವಾಗ ಎರಡ್‌ಎರಡ್ ಸರ್ತಿ ಚೆಕ್ ಮಾಡಿದ್ರೂ ಅರ್ಧ ಫರ್ಲಾಂಗ್ ಬರ್ತಿದ್ದಂಗೆ ಬೀಗ ಹಾಕಿದ್ನೋ ಇಲ್ವೋ ಅನ್ನೋ ಸಂಶಯ ಬೇತಾಳ ಬೆನ್ನು ಹತ್ತುತ್ತೆ. ಇವುನ್ನೆಲ್ಲಾ ಕಾಯಿಲೆ ಅಂದ್ರೆ ನಂಬಲೇಬೇಕು ನೀವು...
 ಹೌದು, ಬೇಡವೆಂದರೂ ಬಿಡದ, ಸುಳ್ಳೆಂದು ಗೊತ್ತಿದ್ದರೂ ನಂಬಲು ಒತ್ತಾಯಿಸುವ, ಅನವಶ್ಯಕ ಪುನರಾವರ್ತಿತ ಕಾಡುವ ಯೋಚನೆ, ಅನುಮಾನಗಳು ಮನಸ್ಸಿನ ನಿಯಂತ್ರಣ ತಪ್ಪಿಸುತ್ತವೆ. ಇದು ಅತಿಯಾದಾಗ ದಿನನಿತ್ಯದ ಕೆಲಸಕಾರ್ಯಗಳಿಗೆ ಅಡ್ಡಗಾಲಾಗತೊಡಗುತ್ತವೆ. ಆಗಲೇ ಇದು ಕಾಯಿಲೆಯ ರೂಪ ತಾಳುವುದು. ಇದನ್ನು ಮನೋತಜ್ಞರು ಆಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಎನ್ನುತ್ತಾರೆ. 
ಇಂಥಾ ರೋಗಗಳೂ ಇರುತ್ತವಾ? ಇವೂ ರೋಗಗಳಾ ಎಂದು ಆಶ್ಚರ್ಯ ಹುಟ್ಟಿಸುವಂಥ ರೂಪ ಇದರದ್ದು. ಪದೇ ಪದೇ ಅನವಶ್ಯಕ ಕಾಡುವ ಯೋಚನೆಗಳು ಆಬ್ಸೆಶನ್ ಆದರೆ ಆ ಯೋಚನೆಗಳ ಫಲವಾಗಿ ಪದೇ ಪದೇ ಮಾಡುವ ಕ್ರಿಯೆಗಳು ಕಂಪಲ್ಶನ್ ಎನಿಸಿಕೊಳ್ಳುತ್ತವೆ. 
ಗೆಳತಿಯೊಬ್ಬಳಿದ್ದಾಳೆ. ಒಂದೊಳ್ಳೆ ಗಳಿಗೇಲಿ ಮಶಿನಿಷ್ಟ್ ಚಿತ್ರ ನೋಡಿದಳು. ಚಿತ್ರದ ನಾಯಕ ಕ್ರಿಷ್ಟಿನ್ ಬೇಲ್ ಕಾರ್‌ನಲ್ಲಿ ಹೋಗುವಾಗ ಆಕಸ್ಮಿಕವಾಗಿ ಒಂದು ಮಗುವಿಗೆ ಬಡಿಯುತ್ತಾನೆ. ಮತ್ತು ಇನ್ನಲ್ಲಿ ನಿಂತರೆ ಅಪಾಯ ಎಂದು ಅಲ್ಲಿಂದ ಕಾರ್ ಅನ್ನು ವೇಗವಾಗಿ ಓಡಿಸಿಕೊಂಡು ಮನೆ ತಲುಪುತ್ತಾನೆ. ನಂತರ ತನ್ನನ್ನು ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳಲು ಘಟನೆಯನ್ನು ಸ್ಮೃತಿಪಟಲದಿಂದ ತೆಗೆದು ಬಿಡುತ್ತಾನೆ. ಆದರೆ ನಮಗೆ ನಿಮಗೆ ಗೊತ್ತಿರುವಂತೆ ಯಾವುದೇ ಎನರ್ಜಿ ರೂಪಾಂತರ ಹೊಂದಬಹುದೇ ಹೊರತು ಖಾಲಿಯಾಗುವುದಿಲ್ಲ. ಹೀಗಾಗಿ ಆತನ ಆ ಮರೆಯಾದ ಪಾಪಪ್ರಜ್ಞೆ ಅನ್‌ಕಾನ್ಷಿಯಸ್‌ನಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ಹೊರ ಹೋಗಲು ವಾಮಮಾರ್ಗಗಳನ್ನು ಹುಡುಕಿಕೊಳ್ಳುತ್ತದೆ. ಹೀಗಾಗಿ ಆತನನ್ನು ಚಿತ್ರವಿಚಿತ್ರವಾಗಿ ಹಿಂಸಿಸುತ್ತದೆ. ಈ ಚಿತ್ರ ನೋಡಿದ ನಂತರವೇ ನನ್ನ ಕ್ಯಾಥೊಲಿಕ್ ಗೆಳತಿ ಹಾಗಾದದ್ದು. ಅವಳ ದುರ್ಬಲ ಮನಸ್ಸಿನಲ್ಲಿ ಇಲ್ಲವೆಂದು ಎಷ್ಟು ಬಾರಿ ಕಿರುಚಿದರೂ ತಾನೂ ಹೀಗೆ ಅಪಘಾತ ಮಾಡಿ ಯಾರನ್ನಾದರೂ ಸಾಯಿಸಿರಬಹುದೇ ಎಂಬ ಅನುಮಾನ ಶುರುವಾಯ್ತು. ಒಮ್ಮೆ ಅನುಮಾನ ಪಿಶಾಚಿ ಹಿಡಿದುಕೊಂಡರೆ ಅನುಮಾನವೇ  ಬೇಡ, ಅದು ನಮ್ಮನ್ನು ಭಯಂಕರವಾಗಿ ಹಿಂಸಿಸಿ ಬಿಡುತ್ತದೆ. ವರ್ಷದ ಹಿಂದೆ ಹೊಸ ವರ್ಷಕ್ಕೆ ಕುಡಿದು ಕಾರು ಓಡಿಸಿದ್ದೆನಲ್ಲ, ಆಗ ಯಾರಿಗಾದರೂ ಕುಟ್ಟಿರಬಹುದಾ? ಅವಳ ಬಳಿ ಇಲ್ಲವೆನ್ನಲು 100 ಶೇ. ಗ್ಯಾರಂಟಿ ಕೊಡಬಲ್ಲ ಸಾಕ್ಷಿಗಳಿದ್ದವು. ತನ್ನ ನೆನಪು, ಕಾರಿಗೆ ಏನೂ ಆಗದಿದ್ದುದು, ಆದರೂ ಅಂತರ್ಜಾಲದಲ್ಲಿ ಆ ಡೇಟ್‌ನಲ್ಲಿ ತಮ್ಮ ಏರಿಯಾದಲ್ಲಿ ಆದ ಆಕ್ಸಿಡೆಂಟ್‌ಗಳನ್ನು ಹುಡುಕಿದಳು. ಯಾವುದೂ ಇರಲಿಲ್ಲ. ಸಮಾಧಾನವಾಗಲಿಲ್ಲ. ಪ್ರತಿ ದಿನ ಪ್ರತಿ ಕ್ಷಣ ದೇವರನ್ನು ಮನ್ನಿಸೆಂದು ಬೇಡಿದಳು, ತಾನು ಮಾಡದ ಪಾಪಕ್ಕೆ!ಕಡೆಕಡೆಗೆ ಇದೊಂದೇ ಯೋಚನೆಯಾಗತೊಡಗಿತು. ಯು ಟ್ಯೂಬ್‌ನಲ್ಲಿ ಕಾರು ಅಪಘಾತದ ವೀಡಿಯೋ ನೋಡುವುದೊಂದೇ ಕೆಲಸವಾಯಿತು. ಇದರಿಂದಲಾದರೂ ಕ್ರಿಸ್ಟಿನ್ ಬೇಲ್‌ನಂತೆ ತಾನೂ ಮರೆತಿದ್ದರೆ ನೆನಪಾಗುವುದೆಂದು. ಶೇ.99.9 ಭಾಗ ತಾನು ಯಾರನ್ನೂ ಸಾಯಿಸಿಲ್ಲ ಎಂದು ತಿಳಿದಿದ್ದರೂ ಉಳಿದ 0.1 ಪ್ರತಿ ಶತ ಅನುಮಾನ ಸಾಕಿತ್ತು ಅವಳಿಗೆ ಹುಚ್ಚು ಹಿಡಿಸುವ ಮಟ್ಟಿಗೆ ಹಿಂಸೆ ನೀಡಲು. ಮನೋವೈದ್ಯರ ಬಳಿ ಆಪ್ತಸಲಹೆ ಪಡೆದ ಮೇಲೆ ತಿಳಿದದ್ದೆಂದರೆ ಕ್ಯಾಥೊಲಿಕ್ ಆಗಿ ತನಗೆ ನಿಷಿದ್ಧವಾದ ಕುಡಿದು ಕಾರು ಓಡಿಸಿದ ಪಾಪಪ್ರಜ್ಞೆ ಅವಳನ್ನು ಈ ಪರಿ ಕಾಡಿತ್ತು. ಇದು ನಮ್ಮ ಸೂಪರ್ ಇಗೋ ಪವರ್. 
ನಮ್ಮ ನೈತಿಕ ಪ್ರಜ್ಞೆಯನ್ನೇ ಸೂಪರ್ ಇಗೋ ಎನ್ನುವುದು. ಇದರೊಳಗೆ ನಾವು ಚಿಕ್ಕಂದಿನಲ್ಲಿ ಪಡೆದ, ಓದಿದ ಮೌಲ್ಯಗಳು, ಹಿರಿಯರ ಬುದ್ಧಿವಾದಗಳು ಸದ್ದಿಲ್ಲದೇ ಜಾಗ ಮಾಡಿಕೊಂಡು ಕುಳಿತಿರುತ್ತವೆ. ಹಾಗಾಗೇ ನಮ್ಮ ಆದರ್ಶಗಳಿಗೆ ವಿರುದ್ಧವಾಗಿ ನಾವು ನಡೆದಾಗ ಪಾಪಪ್ರಜ್ಞೆಯ ರೂಪದಲ್ಲಿ ಇದು ನಮ್ಮನ್ನು ಶಿಕ್ಷಿಸುತ್ತದೆ. ಅಲ್ಲಿಯೇ ಪ್ರಾಯಶ್ಚಿತ್ತ ಮಾಡಿಕೊಂಡೆವೋ ಸರಿ, ಇಲ್ಲವಾದಲ್ಲಿ ಮನೋರೋಗಗಳಾಗಿ ಕಾಡುತ್ತವೆ. ಕೆಲವೊಮ್ಮೆ ಇಡಿ ದಿನ ಬೇಡವೆಂದರೂ ಹಾಡೊಂದು ಬಾಯಿಗೆ ಬರುತ್ತಲೇ ಇರುತ್ತದೆ. ಕಾಯಿಲೆ ಎಂದು ಗಾಬರಿ ಬೀಳಬೇಕಿಲ್ಲ. ಯಾವಾಗ ನಮ್ಮ ಈ ಚಟ ದೀರ್ಘಕಾಲವಿದ್ದು ದಿನನಿತ್ಯದ ಕೆಲಸಗಳಿಗೆ ಅಡ್ಡಿ ತರಲಾರಂಭಿಸುತ್ತದೋ ಅದು ಚಿಕಿತ್ಸೆಯತ್ತ ಮುಖ ಮಾಡಲು ಸಕಾಲ. 
ನಡೆದಾಡುವಾಗ ಹೆಜ್ಜೆ ಎಣಿಸುವುದು, ತಾನು ಬಲದಲ್ಲೇ ಇರಬೇಕೆಂದು ನೋಡಿಕೊಳ್ಳುವುದು, ಲೈಟ್ ಸ್ವಿಚ್ ಅನ್ನು 10 ಬಾರಿ ಹಾಕಿ ಆರಿಸುವುದು, ಇಷ್ಟು ಬಾರಿಯೇ ಶ್ಲೋಕ ಹೇಳಬೇಕು, ಇಲ್ಲದಿದ್ದಲ್ಲಿ ಏನೋ ಅನಾಹುತ ಸಂಭವಿಸುತ್ತದೆ ಎಂಬ ಆತಂಕ... ಇದರಲ್ಲಿ ನೀವು ಗಮನಿಸಬಹುದಾದದ್ದು ಇಂತಹ ಕ್ರಿಯೆಗಳನ್ನು ಮಾಡದಿದ್ದರೆ ಏನೂ ಆಗುವುದಿಲ್ಲ, ಆದರೆ ಅವರಲ್ಲಿ ಮಾತ್ರ ಮುಂದೆ ಯಾವುದೊ ಅಪಾಯ ತಡೆಯಲು ನಾ ಹೀಗೆ ಮಾಡಲೇಬೇಕು ಎಂಬ ಭಾವ.. 
ಈಗೇನೋ ವಿಜ್ಞಾನ ಮುಂದುವರೆದಿದೆ ಸರಿ. ಆದರೆ ಷೇಕ್ಸ್‌ಪಿಯರ್ ಎಂಬ ನಾಟಕಕಾರನೊಳಗಿದ್ದ ಮನೋವಿಜ್ಞಾನಿ ಅಂದೇ ಈ ಮನೋಕಾಯಿಲೆಯನ್ನು ತನ್ನ ನಾಟಕಗಳಲ್ಲಿ ಪ್ರಸ್ತುತ ಪಡಿಸಿ ನಮ್ಮನ್ನು ಬೆರಗುಗೊಳಿಸುತ್ತಾನೆ. ಮ್ಯಾಕ್ಬೆತ್ ಮತ್ತು ಆತನ ಪತ್ನಿ ಅಧಿಕಾರದ ಆಸೆಯಿಂದ ರಾಜನನ್ನು ಕೊಲೆ ಮಾಡುತ್ತಾರೆ. ಪಟ್ಟವನ್ನೂ ಏರುತ್ತಾರೆ. ಆದರೆ ಈ ಘಟನೆ ನಂತರ ರಾಣಿ ಮ್ಯಾಕ್ಬೆತ್ ಪದೇ ಪದೇ ಕೈ ತೊಳೆಯಲು ಶುರು ಮಾಡುತ್ತಾಳೆ. ಅವಳಿಗೆ ಅವಳ ಕೈಲಿ ರಕ್ತ ಕಾಣಿಸುತ್ತಿರುತ್ತದೆ. ಕೊಲೆ ಅವಳ ನೆಮ್ಮದಿ ಕಿತ್ತು ಕೊಲ್ಲುತ್ತದೆ. ಹಾಗಂತ ಮತ್ತೆ ಮತ್ತೆ ಕೈ ತೊಳೆವವರೆಲ್ಲಾ ಕೊಲೆ ಮಾಡಿದ್ದಾರೆಂದು ಭಾವಿಸೀರಿ..
.-ರೇಶ್ಮಾ ರಾವ್ ಸೊನ್ಲೆ

ಕಾಮೆಂಟ್‌ಗಳಿಲ್ಲ: