ಪುಟಗಳು

9.4.14

ಮತವೇ ಮಾಧ್ಯಮ

ವೋಟ್ ಫಾರ್ ಮೀಡಿಯಾ
ರಾಜಕಾರಣವೆಂಬುದು ಹಿಂದೂ ಇಂದೂ ಮುಂದೂ ಹೀಗೇ, ಈ ದೇಶ ಬದಲಾಗೋಲ್ಲ...ಎಂಬ ತಾತ್ಸಾರ ಮನೋಭಾವ ಎಲ್ಲರಲ್ಲೂ ಬೆಳೆದಿದ್ದ ಕಾಲಕ್ಕೇ ಬದಲಾವಣೆಯ ಬೆಳಕೊಂದು ಸಣ್ಣಗೆ ಮಿಂಚುತ್ತಿದೆ. ಇದು ಭ್ರಷ್ಟಾಚಾರ ನಿರ್ಮೂಲನೆ ಹೋರಾಟದಿಂದಲೇ ಹುಟ್ಟಿಕೊಂಡು ದೇಶದಲ್ಲಿ ಸಂಚಲನ ಮೂಡಿಸಿದ ಆಮ್ ಆದ್ಮಿ ಪಕ್ಷ ಹಾಗೂ ಗುಜರಾತ್‌ನ ಅಭಿವೃದ್ಧಿಯ ಹರಿಕಾರರಾಗಿ ಸಾಧಿಸಿ ತೋರಿಸಿದ ನರೇಂದ್ರ ಮೋದಿಯವರ ಗಟ್ಟಿ ವ್ಯಕ್ತಿತ್ವ ತಂದ ಬೆಳಕು. ಹೀಗಾಗಿ ಬದಲಾವಣೆಗಾಗಿ ಹಾತೊರೆಯುತ್ತಿದ್ದ ಹಲವು ಮನಸುಗಳು ಮಿಂಚುಹುಳುಗಳಂತೆ ಈ ಬೆಳಕಿನೆಡೆಗೆ ಆಕರ್ಷಿತವಾಗುತ್ತಿವೆ. ಇದರಲ್ಲಿ ತಮ್ಮ ಕೊಡುಗೆಯೂ ಇರಲಿ ಎಂಬ ಸದಾಶಯ ಎಲ್ಲರದ್ದು. ಆದ್ದರಿಂದಲೇ ಇದುವರೆಗೂ ರಾಜಕೀಯದ ಕೆಸರನ್ನು ಕಲಕಿ ಅದರಲ್ಲಿ ಸೇರಿರುವ ಎಲ್ಲ ಕಲ್ಮಶಗಳನ್ನೂ ಎತ್ತಿ ತೋರಿಸುತ್ತಿದ್ದ ಪತ್ರಕರ್ತರು ಈ ಬಾರಿ ಕೆಸರಲ್ಲಿ ಕಮಲವೂ ಇದೆ ಎಂದು ಕಂಡುಕೊಂಡಿದ್ದಾರೆ. ಅಲ್ಲದೆ ಕಸ ಇದೆ ಎಂದು ತೋರಿಸಿದರೆ ಯಾರೂ ಸ್ವಚ್ಛಗೊಳಿಸುವುದಿಲ್ಲ. ನಮ್ಮ ಮನೆಯ ಕಸ ನಾವೇ ಎತ್ತಿ ಹಾಕಬೇಕು ಎಂದು ಸಾರಿ ಕೆಲವರು ಪೊರಕೆಯನ್ನೂ ಹಿಡಿದಿದ್ದಾರೆ.
ಈ ಹಿಂದೆಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕರಾಗಿದ್ದಅರುಣ್ ಶೌರಿ, ಶಿವಸೇನೆಯ ಮುಖ್ಯಸ್ಥ, ವ್ಯಂಗ್ಯಚಿತ್ರಕಾರ ಬಾಳಾ ಠಾಕ್ರೆಯಂಥ ನಾಯಕರು ಮೀಡಿಯಾದಿಂದ ರಾಜಕಾರಣಕ್ಕಿಳಿದು ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಆದರೆ ಈ ಬಾರಿ 20ಕ್ಕಿಂತಲೂ ಅಧಿಕ ಪತ್ರಕರ್ತರು ಈ ಬಾರಿ ಲೇಖನಿ ಬದಿಗಿಟ್ಟು ರಾಜಕೀಯ ಅಖಾಡಕ್ಕಿಳಿದಿದ್ದಾರೆ. ಹೋದಹೋದಲ್ಲಿ ಮೈಕ್ ಹಿಡಿದು ಓದುಗರನ್ನು ತಮ್ಮ ಮತದಾರರನ್ನಾಗಿ ಬದಲಾಯಿಸಿಕೊಳ್ಳಲು ಹೆಣಗುತ್ತಿದ್ದಾರೆ. ಈ ಎಲ್ಲ ಪತ್ರಕರ್ತರನ್ನೂ ರಾಜಕೀಯದೆಡೆ ಅಸಹ್ಯ ಹಾಗೂ ಬದಲಾವಣೆಯ ಹಸಿವೇ ರಾಜಕೀಯಕ್ಕೆಳೆ ತಂದಿದೆ.
ತೆಹಲ್ಕಾದಲ್ಲಿ ತನಿಖಾ ಪತ್ರಕರ್ತರಾಗಿದ್ದ ಆಶಿಶ್ ಕೇತನ್ ಮೂರು ಭಯೋತ್ಪಾದಕ ಬ್ಲಾಸ್ಟ್‌ಗಳ ಕುರಿತು ತನಿಖೆ ನಡೆಸಿ ಮಹತ್ತರ ಸತ್ಯಗಳನ್ನು ಬಯಲಿಗೆಳೆದಿದ್ದರು. ನಿರ್ಭೀತ ಪತ್ರಕರ್ತರೆಂದೇ ಹೆಸರಾದ ಆಶಿಶ್ ಈ ಬಾರಿ ಆಪ್‌ನಿಂದ ದೆಹಲಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಭಾರತೀಯ ಮಾಧ್ಯಮದಲ್ಲಿ ನಿಷ್ಠುರ ಹಾಗೂ ಸ್ವತಂತ್ರ ಬರಹಗಳಿಗೆ ಜಾಗವಿಲ್ಲದ್ದರಿಂದ ಪತ್ರಿಕೋದ್ಯಮ ತ್ಯಜಿಸಿದ್ದಾಗಿ ಘೋಷಿಸಿದ ಅವರು, ನೇರವಾಗಿಯಾದರೂ ಸರಿ, ಹಿನ್ನೆಲೆಯಲ್ಲಿದ್ದರೂ ಸರಿ, ರಾಜಕೀಯಕ್ಕೆ ಮಹತ್ವಾಕಾಂಕ್ಷೆ ಹಾಗೂ ದೂರದೃಷ್ಟಿ ಹೊಂದಿರುವವರು ಬರಲು ಇದು ಸಕಾಲವಾಗಿದೆ ಎನ್ನುತ್ತಾರೆ.
ಕೃತಿಕಾರ, ಇಂಗ್ಲಿಷ್‌ನ ದಿ ಟೆಲಿಗ್ರಾಫ್, ಸಂಡೆ ಪತ್ರಿಕೆಗಳನ್ನು ಬೆಳೆಸಿದ ಮಾಜಿ ಸಂಪಾದಕ, ಸಂಡೆ ಗಾರ್ಡಿಯನ್ ಪತ್ರಿಕೆಯ ಮಾಜಿ ಸಂಪಾದಕೀಯ ನಿರ್ದೇಶಕ, ಹೆಸರಾಂತ ಪತ್ರಕರ್ತ ಎಂ.ಜೆ.ಅಕ್ಬರ್ ತಮ್ಮ ಯಾವತ್ತೂ ನಿಲುವಲ್ಲಿ ಕಾಂಗ್ರೆಸ್‌ನತ್ತ ವಾಲಿದವರು. 1989ರಲ್ಲಿ ಕಾಂಗ್ರೆಸ್ ಸೇರಿ ಗೆದ್ದು ಲೋಕಸಭಾ ಪ್ರವೇಶಿಸಿದ್ದರು. 1991ರಲ್ಲಿ ರಾಜಕಾರಣಕ್ಕೆ ಬೈಬೈ ಹೇಳಿ ಪತ್ರಿಕೋದ್ಯಮಕ್ಕೆ ಮರಳಿದ್ದರು. ಆದರೆ ಈ ಬಾರಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಲ್ಲದೆ ರಾಷ್ಟ್ರೀಯ ಬಿಜೆಪಿ ವಕ್ತಾರರಾಗಿ ಸ್ಥಾನ ಪಡೆದಿದ್ದಾರೆ.
ಉತ್ತರ ಪ್ರದೇಶದ ಪತ್ರಿಕೆಯೊಂದರಲ್ಲಿ ವರದಿಗಾರರಾಗಿ ಕೆಲಸ ಆರಂಭಿಸಿ, ಟಿವಿ ಆ್ಯಂಕರ್ ಆಗಿ, ಪತ್ರಿಕಾ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ರಾಜೀವ್ ಶುಕ್ಲಾ 2000ದಲ್ಲಿ ಕಾಂಗ್ರೆಸ್‌ನಿಂದ ರಾಜ್ಯಸಭೆ ಪ್ರವೇಶಿಸಿದ್ದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಮಂತ್ರಿಯಾಗಿ, ಐಪಿಎಲ್ ಮುಖ್ಯಸ್ಥರಾಗಿದ್ದ ಅವರು, ಕಳೆದ ವರ್ಷ ಸ್ಪಾಟ್ ಫಿಕ್ಸಿಂಗ್ ಇನ್ನಿತರೆ ಐಪಿಎಲ್ ಹಗರಣಗಳು ಬಯಲಿಗೆ ಬಂದಾಗ ರಾಜಿನಾಮೆ ನೀಡಿದ್ದರು. ಅವರ ಪ್ರಕಾರ ರಾಜಕಾರಣಕ್ಕೆ ಬರುತ್ತಿರುವ ಬಹುತೇಕ ಪತ್ರಕರ್ತರು ರಾಜಕೀಯ ವರದಿಗಾರರು. ಅವರ ಒಡನಾಟ ಹೆಚ್ಚಾಗಿ ರಾಜಕಾರಣಿಗಳೊಂದಿಗಿರುತ್ತದೆ. ಹೀಗಾಗಿ ರಾಜಕಾರಣದತ್ತ ಸುಲಭ ಒಲವು ಬೆಳೆದುಬರುತ್ತದೆ.
ಪಯೋನೀರ್ ದಿನಪತ್ರಿಕೆಯ ದೆಹಲಿ ಕೇಂದ್ರದ ಸಂಪಾದಕರಾಗಿರುವ ಚಂದನ್ ಮಿತ್ರ ಈ ಬಾರಿ ಪಶ್ಚಿಮ ಬಂಗಾಳದ ತಮ್ಮ ಸ್ವಕ್ಷೇತ್ರ ಹೂಗ್ಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮೋದಿ ನಾಯಕತ್ವದಲ್ಲಿ ಪ.ಬಂಗಾಳದ ಚಿತ್ರಣವೇ ಬದಲಾಗುವುದಾಗಿ ಹೇಳುತ್ತಿರುವ ಅವರು, 2003ರಿಂದ 2009ರವರೆಗೆ ರಾಜ್ಯಸಭಾ ಸದಸ್ಯರಾಗಿ, 2010ರಲ್ಲಿ ಮಧ್ಯಪ್ರದೇಶದಿಂದ ಸಂಸದರಾಗಿ ಕಾರ್ಯ ನಿರ್ವಹಿಸಿದ್ದಾರೆ. 
15 ವರ್ಷಗಳ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಅಂಕಣ ಬರಹಗಾರರಾಗಿ ಪ್ರಖ್ಯಾತರಾಗಿದ್ದ ಪ್ರತಾಪ್‌ಸಿಂಹ ತಮ್ಮ ರಾಷ್ಟ್ರೀಯ ನಿಲುವುಗಳಿಂದ ಜನಮನ ಗೆದ್ದಿದ್ದರು. ಈ ಬಾರಿ ಮೈಸೂರು- ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರತಾಪ್ 'ಪತ್ರಿಕೋದ್ಯಮದಲ್ಲಿ ಜಾಗೃತಿ ಮೂಡಿಸಬಹುದು. ಆದರೆ ವಾಸ್ತವದಲ್ಲಿ ಬದಲಾವಣೆ ತರಬೇಕಾದ್ದು ರಾಜಕೀಯ ಕ್ಷೇತ್ರ. ಯಾರನ್ನೋ ದೂರುವ ಬದಲು ನಾವೇ ಏಕೆ ಜನರ ನೋವಿಗೆ, ಸ್ಪಂದಿಸಬಾರದು?' ಎನ್ನುತ್ತಾರೆ. 
ಸ್ಟಾರ್ ನ್ಯೂಸ್‌ನ ಮಾಜಿ ನಿರೂಪಕಿ, ಕಾರ್ಯಕ್ರಮ ನಿರ್ಮಾಪಕಿ ಶಾಜಿಯಾ ಅಣ್ಣಾ ಚಳುವಳಿಯ ಮಾಧ್ಯಮ ವಕ್ತಾರೆಯಾಗಿದ್ದರು. ಈಗ ಆಪ್‌ನಿಂದ ಉತ್ತರಪ್ರದೇಶದ ಘಜಿಯಾಬಾದ್‌ನ ಅಭ್ಯರ್ಥಿಯಾಗಿ, ಸೈನ್ಯದ ಮಾಜಿ  ಮುಖ್ಯಸ್ಥ, ಬಿಜೆಪಿ ಅಭ್ಯರ್ಥಿ ವಿ.ಕೆ.ಸಿಂಗ್ ಹಾಗೂ ಮಾಜಿ ಸಂಸದ, ಹೆಸರಾಂತ ನಟ, ಕಾಂಗ್ರೆಸ್ ಅಭ್ಯರ್ಥಿ ರಾಜ್ ಬಬ್ಬರ್ ಎದುರಾಳಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಹಿಂದಿ ನ್ಯೂಸ್ ಚಾನಲ್‌ಗಳ ಪರಿಚಿತ ಮುಖ, ಆಶುತೋಷ್ ಆಪ್‌ನ ಟಿಕೆಟ್ ಪಡೆದು ಚಾಂದಿನಿ ಚೌಕ್‌ನಿಂದ ಕಾನೂನು ಸಚಿವ ಕಣಕ್ಕಿಳಿದಿದ್ದಾರೆ. 23 ವರ್ಷಗಳ ಮಾಧ್ಯಮದ ಒಡನಾಟ ನಿಲ್ಲಿಸಿ ಅಖಾಡಕ್ಕಿಳಿದಿರುವ ಅವರು 'ಅಣ್ಣಾ: ದೇಶವನ್ನೆಬ್ಬಿಸಿದ ಆ 13 ದಿನಗಳು' ಎಂಬ ಪುಸ್ತಕ ಬರೆದಿದ್ದಾರೆ. ರಾಜಕೀಯವನ್ನು ಯಾವತ್ತೂ ದ್ವೇಷಿಸುತ್ತಿದ್ದ ನನಗೆ ಅಣ್ಣಾ ಚಳುವಳಿ ಮೂಲಕ ಹುಟ್ಟಿಕೊಂಡ ಆಪ್ ಹೆಚ್ಚು ಆಪ್ಯಾಯಮಾನವಾಗಿ ಕಂಡಿತು. ಅದಕ್ಕಾಗಿಯೇ ಸೇರಿದ್ದೇನೆ ಎನ್ನುತ್ತಾರೆ.
2009ರಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಸರ್ಕಾರದ ಕಾರ್ಯನಿರ್ವಹಣೆಗೆ ಅಸಮಾಧಾನಗೊಂಡು ಹಣಕಾಸು ಮಂತ್ರಿ ಚಿದಂಬರಂ ಮುಖದತ್ತ ಚಪ್ಪಲಿ ಎಸೆದ ಜರ್ನೈಲ್ ಸಿಂಗ್ ಕೂಡಾ ಮೊದಲು ಪತ್ರಕರ್ತರಾಗಿದ್ದವರು. ನಾನು ಮಾಡಿದ್ದು ತಪ್ಪೇ ಆಗಿದ್ದರೂ ನನ್ನ ರೋಷ ನಿಜವಾದುದಾಗಿತ್ತು ಎನ್ನುವ ಜರ್ನೈಲ್ ಸಿಂಗ್ ಈಗ ಆಪ್‌ನ ಅಭ್ಯರ್ಥಿ.
ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದ ಮಲೆಯಾಳಿ ಪತ್ರಕರ್ತೆ ಅನಿತಾ ಪ್ರತಾಪ್ ಆಪ್ ಅಭ್ಯರ್ಥಿಯಾಗಿ ಕೇರಳದ ಎರ್ನಾಕುಳಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರು ಇಂಡಿಯನ್ ಎಕ್ಸ್‌ಪ್ರೆಸ್, ಇಂಡಿಯಾ ಟುಡೆಗಳಲ್ಲಿ ಪತ್ರಕರ್ತೆಯಾಗಿ ಹೆಸರು ಮಾಡಿ, ಸಿಎನ್‌ಎನ್ ನ್ಯೂಸ್ ಚಾನೆಲ್‌ನ ಸೌತ್ ಏಶಿಯಾ ಬ್ಯೂರೋ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ್ದರು.
- ರೇಶ್ಮಾರಾವ್ ಸೊನ್ಲೆ

ಒಬಾಮ ತಂತ್ರ

First Published: 09 Apr 2014 02:00:00 AM IST
ಭಾರತದ ಚುನಾವಣೆಯಲ್ಲಿ ಅಮೆರಿಕದ ಸೂತ್ರ
2014ರ ಭಾರತದ ಚುನಾವಣಾ ಪ್ರಚಾರ ಕಾರ್ಯಕ್ಕೆ ಅಮೆರಿಕ ಅಧ್ಯಕ್ಷ ಒಬಾಮಾ ಸದ್ದಿಲ್ಲದೆ ಕೈಜೋಡಿಸಿದ್ದಾರೆ. ಅರೆರೆ ಇದೇನಿದು ಹಾಟ್ ನ್ಯೂಸ್ ಅಂತ ಕಣ್ಣರಳಿಸುತ್ತಿದ್ದೀರಾ? ಅಲ್ಲಾರೀ, ಇದು ವೋಟ್ ನ್ಯೂಸ್. 
ಅಮೆರಿಕದಲ್ಲಿ ನಡೆದ 2008ರ ಅಧ್ಯಕ್ಷೀಯ ಚುನಾವಣೆ ಸಂದರ್ಭ ಮತಗಳಿಕೆಯ ಪ್ರಚಾರ ಕಲೆಯಲ್ಲಿ ಬರಾಕ್ ಒಬಾಮ ತೋರಿದ್ದ ಬಹುಪರಾಕ್ರಮಗಳಿಗೆ ಬಹುಪರಾಕ್ ಎನ್ನುತ್ತಿವೆ ಭಾರತದ ರಾಜಕೀಯ ಪಕ್ಷಗಳು. ಮಂತ್ರಕ್ಕೆ ಮಾವಿನಕಾಯಿ ಉದುರದಿದ್ದರೂ ಒಬಾಮಾ ತಂತ್ರಕ್ಕೆ ಭಾರತೀಯ ಮತಯಂತ್ರಗಳಲ್ಲಿ ಮತಗಳಂತೂ ಉದುರಲಿವೆ ಎನ್ನುತ್ತಿವೆ ಸಮೀಕ್ಷೆಗಳು. ಹೀಗೆ ಅಮೆರಿಕದ ಪ್ರಚಾರತಂತ್ರಗಳನ್ನು ಆಮದು ಮಾಡಿಕೊಂಡು ಅವುಗಳಿಗೆ ದೇಸೀಭಾಷೆ, ಸಂಸ್ಕೃತಿ, ನಂಬಿಕೆಯ ಸ್ಪರ್ಶ ನೀಡಿ ಇಲ್ಲಿನ ಮಣ್ಣಿಗೆ ಒಗ್ಗಿಸಿಕೊಳ್ಳುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಅದರಲ್ಲೂ ಈ ಒಬಾಮಾಫಿಕೇಶನ್‌ಗೆ ದೇಶೀಯ ಸ್ಪರ್ಶ ನೀಡಿ 'ಮೋಡಿ'ಫಿಕೇಶನ್ ಮಾಡುವಲ್ಲಿ ಮುಂಚೂಣಿಯಲ್ಲಿರುವ ನಾಯಕರು, ಇದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಕಂಡು ಖುಷಿಯಾಗಿ ಬರಾಕ್ ಒಬಾಮಾಗೆ 'ನಮೋ' ನಮಃ ಎನ್ನುತ್ತಿದ್ದಾರೆ. 
 -     2008ರಲ್ಲಿ ಒಬಾಮ ಬಳಸಿದ 'ಎಸ್, ವಿ ಕ್ಯಾನ್‌' (ನಾವು ಸಾಧಿಸಬಲ್ಲೆವು) ಎಂಬ ಮಂತ್ರವನ್ನು 2013ರ ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ಗೆ ಭೇಟಿ ನೀಡಿದಾಗ ಮೋದಿ ಪ್ರಥಮ ಬಾರಿಗೆ ಪ್ರತಿಧ್ವನಿಸಿದ್ದರು. ತದನಂತರ ತಮ್ಮ ಭಾಷಣಗಳಲ್ಲೆಲ್ಲ ಮೋದಿ 'ಎಸ್ ವಿ ಕ್ಯಾನ್‌' ಬಳಸೀ ಬಳಸಿ ಜನಗಮನ ಸೆಳೆದು ಸಾಧಿಸಿದರು! 
-     ಒಬಾಮಾ ಪ್ರಚಾರ ಕಾರ್ಯತಂತ್ರದ ಸದಸ್ಯರು ಅಂದು 'ಮೈಬೋ' ಎಂಬ ಬ್ರ್ಯಾಂಡ್ ಹುಟ್ಟುಹಾಕಿ 'ಕೀಪ್ ಇಟ್ ರಿಯಲ್, ಕೀಪ್ ಇಟ್ ಲೋಕಲ್‌' ಎಂಬ ಅಡಿಬರಹ ನೀಡಿ ಒಬಾಮ ಹೆಸರಿನಲ್ಲಿ ಹಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದರು. ಇದು ಬಹಳ ಜನಪ್ರಿಯತೆ ಪಡೆದಿತ್ತು. ಅಂತೆಯೇ ಮೋದಿ ಆನ್‌ಲೈನ್‌ನಲ್ಲಿ 'ನಮೋ' ಸ್ಟೋರ್ ತೆಗೆದಿದ್ದಾರೆ. ಅಲ್ಲಿ ಮೋದಿ ಚಿತ್ರ, ತತ್ವಗಳನ್ನೊಳಗೊಂಡ ಟಿ ಶರ್ಟ್‌ಗಳು, ಕಾಫಿ ಮಗ್‌ಗಳು, ಪುಸ್ತಕ, ಪೆನ್‌ಡ್ರೈವ್ ಇತ್ಯಾದಿ ವಸ್ತುಗಳು ರಿಯಾಯಿತಿ ದರದಲ್ಲಿ ಸಿಗುತ್ತವೆ. ಅಲ್ಲದೆ ಇದರಲ್ಲಿ ಯುವಜನತೆಯನ್ನು ತೊಡಗಿಸಲು ನಮೋ ಸ್ಲೋಗನ್ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಇದರಿಂದ ಪ್ರಚಾರವೂ ಆಯ್ತು, ವ್ಯಾಪಾರವೂ ಆಯ್ತು.
-     2012ರ ಮರು ಚುನಾವಣಾ ಪ್ರಚಾರದಲ್ಲಿ ಪಕ್ಷದ ಪರ ಸ್ವಯಂಸೇವಕರನ್ನು ಒಗ್ಗೂಡಿಸಲು ದಿ ಬರಾಕ್ ಒಬಾಮ ಡ್ಯಾಶ್‌ಬೋರ್ಡ್ ಎಂಬ ರಾಷ್ಟ್ರ ಮಟ್ಟದ ಆನ್‌ಲೈನ್ ವೇದಿಕೆ ಸಿದ್ಧಪಡಿಸಲಾಗಿತ್ತು. ಇಲ್ಲಿ ಸಕ್ರಿಯವಾಗಿ ತೊಡಗಿಕೊಂಡವರನ್ನು ಅಂಕ ನೀಡಿ ಆಯ್ಕೆ ಮಾಡಿ ತಳಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಿಕೊಂಡಿತು. ಇಲ್ಲಿ ಆಯ್ಕೆಯಾದ ಸ್ವಯಂಸೇವಕರಿಗೆ ಒಬಾಮಾ ಜೊತೆ ನೇರ ಮಾತುಕತೆಗೆ ಅವಕಾಶ ನೀಡಲಾಗಿತ್ತು. ಅಂತೆಯೇ 2013ರಲ್ಲಿ ಮೋದಿ ಆರಂಭಿಸಿದ 'ಇಂಡಿಯಾ 272೤ ' ಕೂಡಾ ಒಬಾಮಾ ಡ್ಯಾಶ್‌ಬೋರ್ಡನ್ನೇ ಹೋಲುತ್ತಿತ್ತು. ಇಲ್ಲೂ ಕೂಡಾ ಪಾಯಿಂಟ್ಸ್ ಆಧಾರದ ಮೇಲೆ ಮತಗಳನ್ನು ತಳಮಟ್ಟದಿಂದ ಬಿಜೆಪಿಗೆ ತಿರುಗಿಸಬಲ್ಲ ಸ್ವಯಂಸೇವಕರಿಗೆ ಮೋದಿಯೊಂದಿಗೆ ನೇರ ಮಾತುಕತೆಗೆ ಅವಕಾಶ ನೀಡಲಾಗಿತ್ತು.
-     ಮರುಚುನಾವಣೆಯ ಸಮಯದಲ್ಲಿ ಒಬಾಮಾ ಗೂಗಲ್ ಪ್ಲಸ್ ಹ್ಯಾಂಗ್‌ಔಟ್‌ನಲ್ಲಿ ಭಾಗವಹಿಸಿ 'ಏನು ಬೇಕಾದರೂ ಕೇಳಿ' ಎಂಬ ನೇರ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿದ್ದರು. 2 ಲಕ್ಷ ಅಮೆರಿಕನ್ ಪ್ರಜೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಾಗಿನ್ ಆಗಿದ್ದರು. ಇದರಿಂದ ಪ್ರೇರಿತರಾದ ನರೇಂದ್ರ ಮೋದಿ ಕೂಡಾ 2012 ಸೆಪ್ಟೆಂಬರ್‌ನಲ್ಲಿ ಗೂಗಲ್ ಪ್ಲಸ್ ಹ್ಯಾಂಗ್‌ಔಟ್‌ನಲ್ಲಿ ಭಾಗವಹಿಸಿದ್ದರು. ಈ ಆನ್‌ಲೈನ್ ಸಮಾವೇಶ 20,000 ಪ್ರಶ್ನೆಗಳಿಗೆ ಸಾಕ್ಷಿಯಾಯಿತಲ್ಲದೆ ಸುಮಾರು 40 ಲಕ್ಷ ಜನ ಇದನ್ನು ವೆಬ್‌ಸೈಟ್ ಹಾಗೂ ಟಿವಿಗಳಲ್ಲಿ ವೀಕ್ಷಿಸಿದರು.
 -     ವಿವಿಧೆಡೆಯ ಮತದಾರರನ್ನು ಓಲೈಸಲು ಒಬಾಮಾ ಟೀಂ ಟ್ವಿಟ್ಟರ್‌ನಲ್ಲಿ ರಾಜ್ಯಕ್ಕೊಂದರಂತೆ ಬೇರೆ ಬೇರೆ ಟ್ವಿಟ್ಟರ್ ಖಾತೆ ತೆರೆದಿದ್ದರು. ಈ ವಿಷಯವನ್ನೂ ಪಕ್ಕನೆ ಹಿಡಿದುಕೊಂಡ ಟೀಂ ಮೋದಿ ಕೂಡಾ ಅಸ್ಸಾಮೀಸ್, ಕನ್ನಡ, ಮಣಿಪುರಿ, ತೆಲುಗು, ಮಲೆಯಾಳಂ, ಒರಿಯಾ, ಮರಾಠಿ ಸೇರಿದಂತೆ ಭಾರತದ ವಿವಿಧ ಭಾಷೆಗಳಲ್ಲಿ ಆಯಾ ರಾಜ್ಯದಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಈ ಟ್ವಿಟ್ಟರ್‌ನಲ್ಲಿ ಬೇರೆ ಬೇರೆ ರಾಜ್ಯದ ಬೆಂಬಲಿಗರ ಅಭಿಪ್ರಾಯ ಸೂಚನೆಗಳನ್ನು ಚೆನ್ನಾಗಿ ಬಳಸಿಕೊಳ್ಳುವ ಮೋದಿ, ಅಲ್ಲಿನ ಮತದಾರರ ಬೇಕುಬೇಡಗಳ, ಇಷ್ಟಕಷ್ಟಗಳ ಬಗ್ಗೆ ಇದರಿಂದ ತಿಳಿದುಕೊಳ್ಳುತ್ತಾರೆ. ಆಯಾ ರಾಜ್ಯಕ್ಕೆ ಹೋದಾಗ ಆ ವಿಷಯಗಳ ಬಗ್ಗೆ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಾರೆ.
ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಕೂಡಾ ಒಬಾಮಾಫಿಕೇಶನ್ ಮೋಡಿಗೆ ಒಳಗಾದವರು. ಅವರು 'ಮಾದರಿ ಬೆಂಗಳೂರು' ನಿರ್ಮಿಸಲು ಟ್ವಿಟ್ಟರ್‌ನಲ್ಲಿ ಬೆಂಗಳೂರಿಗರಿಂದ ಸಲಹೆ ಆಹ್ವಾನಿಸಿದರು. ಈ ಮೂಲಕ ಅಂಥ ಬೆಂಗಳೂರು ಕಲ್ಪನೆ ಬಗೆಗೆ ತಮಗಿರುವ ಕಾಳಜಿ ವ್ಯಕ್ತಪಡಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವನ್ನು ಒಬಾಮಾ ಮೈಕ್ರೋ ಲಿಸ್‌ನಿಂಗ್ ಅಪ್ರೋಚ್ ಎಂಬ ಹೆಸರಿನಲ್ಲಿ ಮಾಡಿದ್ದರು.  
ಇದೇ ತಂತ್ರವನ್ನು ರಾಹುಲ್‌ಗಾಂಧಿಯೂ ಆಫ್‌ಲೈನ್‌ನಲ್ಲಿ ಬಳಸಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಕೇಳಿ ಸಲಹೆಗಳನ್ನೂ ಆಹ್ವಾನಿಸಿದ್ದರು.ಈ ಎಲ್ಲ ಅಮೇರಿಕರಣವೂ ಭಾರತದಲ್ಲಿ ಸೀಮಿತ ಉಪಯೋಗವನ್ನಷ್ಟೇ ಹೊಂದಿವೆ. ಏಕೆಂದರೆ ಭಾರತದಲ್ಲಿ ಆನ್‌ಲೈನ್ ಬಳಕೆದಾರರ ಸಂಖ್ಯೆ ತುಂಬ ಕಡಿಮೆಯಿದೆ. ಆದರೆ ಶಿಕ್ಷಿತ ಯುವಮತದಾರರನ್ನು, ಈಗ ತಾನೇ 18 ತುಂಬಿದ ಹೊಸ ಮತದಾರರನ್ನು ಸೆಳೆಯುವಲ್ಲಿ ಈ ಆನ್‌ಲೈನ್ ಪ್ರಚಾರ ಚೆನ್ನಾಗಿಯೇ ಕಾರ್ಯನಿರ್ವಹಿಸಿದೆ.
- ರೇಶ್ಮಾರಾವ್ ಸೊನ್ಲೆ

5.4.14

ಗೇಮ್ ಟೈಮ್

st Published: 05 Apr 2014 02:00:00 AM IST
ಆಡೂ ಆಟ ಆಡೂ
ಎಲೆಕ್ಷನ್‌ಗಿನ್ನೇನು 15 ದಿನಗಳು ಬಾಕಿ ಉಳಿದಿವೆ. ದೇಶಾದ್ಯಂತ ರಾಜಕೀಯಕ್ಕೆ ಸಂಬಂಧಪಟ್ಟ ಪ್ರತಿಯೊಂದೂ ಜನರ ಆಸಕ್ತಿ ಕೆರಳಿಸುತ್ತಿದೆ. ಮಾಧ್ಯಮಗಳು ರಾಜಕೀಯ ರಸದೌತಣವನ್ನೇ ಉಣಬಡಿಸುತ್ತಿವೆ. ಫೇಸ್ಬುಕ್, ಟ್ವಿಟ್ಟರ್‌ಗಳಲ್ಲೂ ರಾಜಕೀಯ ಮಿತಿ ಮೀರಿದೆ. ವಾಟ್ಸ್‌ಆಪ್ ವಿಡಿಯೋಗಳೂ ಮೋದಿ, ಮನಮೋಹನ್, ರಾಹುಲ್‌ರನ್ನು ಕುಣಿಸಿ ಮಜಾ ತೆಗೆದುಕೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಮೊಬೈಲ್ ಹಾಗೂ ವೆಬ್‌ಗೇಮ್‌ಗಳು ಹಿಂದುಳಿದರೆ ಎಲ್ಲ ಶೇಮ್ ಶೇಮ್ ಅನ್ನೋಲ್ಲವೇ?ಗೇಮ್ಸ್ ಟು ವಿನ್‌ನಂಥ ಗೇಮ್ ಡೆವಲಪರ್ಸ್ ಭಾರತದ ರಾಜಕಾರಣಿಗಳನ್ನು ತಮ್ಮ ಗೇಮ್‌ಗಳ ಹೀರೋ ಮಾಡಿ 'ಗ್ರೇಟ್ ಇಂಡಿಯನ್ ಕಾಮಿಡಿ ಸರ್ಕಸ್‌' ನಡೆಸುತ್ತಾ ಜನಮನ ರಂಜಿಸುತ್ತಿವೆ. ಈ ಮೂಲಕ ನಮ್ಮನ್ನಾಡಿಸುವ ಕೈಗಳನ್ನು ನಾವೂ ಆಡಿಸಬಹುದು. ಹೀಗೆ ಸಿದ್ಧವಾಗಿ ಪ್ರಸಿದ್ಧವಾದ ಕೆಲವು ರಾಜಕೀಯ ಸಂಬಂಧಿ ಆಟಗಳು ಇಲ್ಲಿವೆ.
ಆಮ್ ಆದ್ಮಿ ರನ್ನರ್
ಗ್ರೀಡೀಗೇಮ್ ಸಂಸ್ಥೆಯ ಇಬ್ಬರು ಐಐಟಿ ವಿದ್ಯಾರ್ಥಿಗಳು 'ಆಪ್‌' ಒಪ್ಪಿಗೆಯೊಂದಿಗೆ ಅಭಿವೃದ್ಧಿಪಡಿಸಿರುವ ಈ ಗೇಮ್‌ನಲ್ಲಿ ಕೇಜ್ರಿವಾಲ್ ಕ್ಯಾರೆಕ್ಟರ್ ಅನ್ನು ಆಡುವವನು ಕಂಟ್ರೋಲ್ ಮಾಡುತ್ತಾನೆ. ಇದರ ಮೊದಲನೇ ಲೆವೆಲ್‌ನಲ್ಲಿ ಕೇಜ್ರಿ ಸಾಹೇಬ್ರು ಪೊರಕೆ ಹಿಡಿದು ಓಡುತ್ತಾರೆ. ದಾರಿ ಮಧ್ಯೆ ನೀರಿನ ಗುಂಡಿ ಹಾಗೂ ಭ್ರಷ್ಟ ರಾಜಕಾರಣಿಗಳು ಸಿಕ್ಕಾಗ ಹಾರಿ ಮುಂದೋಡಬೇಕು. ಎರಡನೇ ಲೆವೆಲ್‌ನಲ್ಲಿ ಮತ ಕಲೆ ಹಾಕುತ್ತಾ ಓಡಬೇಕು. ಹೆಚ್ಚು ಮತ ಸಿಕ್ಕಷ್ಟೂ ಸ್ಕೋರ್ ಹೆಚ್ಚುತ್ತದೆ. ಆ್ಯಂಡ್ರಾಯ್ಡ್ ಮೊಬೈಲ್‌ಗಳು ಈ ಗೇಮ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಮೋದಿ ರನ್
ಳೆದ ವರ್ಷದ ಜುಲೈನಲ್ಲಿ ಹೊರಬಂದ ಮೋದಿ ರನ್ ಮತ್ತೊಂದು ಉಚಿತ ಆ್ಯಂಡ್ರಾಯ್ಡ್ ಗೇಮ್. ಇದರಲ್ಲಿ ಮೋದಿ ಭಾರತದ ಎಲ್ಲ ರಾಜ್ಯಗಳಲ್ಲೂ ಸಪೋರ್ಟ್ ಬೇಡುತ್ತಾ ಓಡುತ್ತಾರೆ. ಎಲ್ಲೆಡೆಯಿಂದ ಸಪೋರ್ಟ್ ಸಿಕ್ಕಿದ ಮೇಲೆ ಪ್ರಧಾನಮಂತ್ರಿ ಆಗುತ್ತಾರೆ. ಅಮೆರಿಕ ಮೂಲದ ಡೆಟಾಕ್ಸಿ ಸಂಸ್ಥೆ ಈ ಗೇಮನ್ನು ಅಭಿವೃದ್ಧಿಪಡಿಸಿದ್ದು, ಇದುವರೆಗೂ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್ ಆಗಿದೆ.
ಆ್ಯಂಗ್ರಿ ಅಣ್ಣಾ
ಅಣ್ಣಾ ಹಜಾರೆ ರಾಮಲೀಲಾ ಮೈದಾನದಲ್ಲಿ ಬೃಹತ್ ಭ್ರಷ್ಟಾಚಾರ ವಿರೋಧಿ ರ್ಯಾಲಿಗಳನ್ನು ಹಮ್ಮಿಕೊಂಡ ಸಮಯದಲ್ಲಿ ಹೊರಬಂದ ಆಟ ಆ್ಯಂಗ್ರಿ ಅಣ್ಣಾ. ಪ್ರಖ್ಯಾತ ಆ್ಯಂಗ್ರಿ ಬರ್ಡ್ಸ್ ಆಟದ ಮಾದರಿಯಲ್ಲೇ ಸಾಗುವ ಈ ಗೇಮ್‌ನಲ್ಲಿ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್ ಹಾಗೂ ಕಿರಣ್ ಬೇಡಿ ಆ್ಯಂಗ್ರಿ ಬರ್ಡ್ಸ್‌ನಂತೆ ಭ್ರಷ್ಟ ರಾಜಕಾರಣಿಗಳ ಮೇಲೆರಗುತ್ತಾರೆ. ಇದು ಕೂಡಾ ಉಚಿತ ಅಪ್ಲಿಕೇಶನ್ ಆಗಿದೆ.
ದಿ ಶೇಮ್ ಗೇಮ್
ಈ ಆಟದಲ್ಲಿ ಆಟಗಾರ ಡಯಾಸ್‌ನ ಹಿಂದೆ ಅಡಗಿಕೊಳ್ಳಲೆತ್ನಿಸುವ ರಾಜಕಾರಣಿಯೆಡೆಗೆ ಚಪ್ಪಲಿ ಎಸೆಯುತ್ತಾನೆ. ಇದು ಕೇವಲ ಅಂತರ್ಜಾಲದಲ್ಲಿ ಲಭ್ಯವಿದ್ದು, ಸ್ವಲ್ಪ ಒರಟಾಗಿದೆ ಹಾಗೂ ಕಷ್ಟವಾಗಿದೆ. ಆದರೂ ಆಟಗಾರರು 30 ಸೆಕೆಂಡ್‌ಗಳಲ್ಲಿ 229 ಎಸೆತ ಮಾಡುವಲ್ಲಿ ಸಫಲರಾಗಿದ್ದಾರೆ.
ಮೇರಾ ಪಿಎಂ ಕೌನ್?
ಪುಣೆ ಮೂಲದ ನೀತಿ ಸಲ್ಯೂಷನ್ಸ್ ಅಭಿವೃದ್ಧಿಪಡಿಸಿರುವ ಉಚಿತ ಗೇಮ್ ಅಪ್ಲಿಕೇಶನ್ ಇದಾಗಿದ್ದು, ಇಲ್ಲಿ ಪ್ರಧಾನಿ ಕುರ್ಚಿಯ ಅಕ್ಕಪಕ್ಕದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಕ್ಯಾರೆಕ್ಟರ್ ನಿಂತಿರುತ್ತಾರೆ. ಮಮತಾ ಬ್ಯಾನರ್ಜಿ, ಜಯಲಲಿತಾ, ಅರವಿಂದ ಕೇಜ್ರಿವಾಲ್ ಕುರ್ಚಿಯ ಕೆಳಗಿರುತ್ತಾರೆ. ಇದರಲ್ಲಿ ಆಟಗಾರ ಉರಿಯುವ ಕಲ್ಲಿದ್ದಲಿನಂತಾ ವಸ್ತುವನ್ನು ಇಷ್ಟು ಮಂದಿಯಲ್ಲಿ ಯಾರೆಡೆಗೆ ಬೇಕಾದರೂ ತಿರುಗಿಸಬಹುದು. ಅವರು ಆ ಪರಿಸ್ಥಿತಿಯನ್ನು ಎಷ್ಟು ಚೆನ್ನಾಗಿ ನಿಭಾಯಿಸಬಲ್ಲರೆಂಬುದು ಆಟ. ಆಟಕ್ಕಿಂತಾ ಹೆಚ್ಚಾಗಿ ಕ್ವಿಜ್ ಮಾದರಿಯಲ್ಲಿ ಸಾಗುವ ಮೇರಾ ಪಿಎಂ ಕೌನ್?ನಲ್ಲಿ ಮತದಾರರ ಒಲವು ಯಾರೆಡೆ ಇದೆ ಎಂಬುದೂ ತಿಳಿಯುತ್ತದೆ. ಇದುವರೆಗೂ ಆಡಿರುವ ಮಂದಿ ಎಷ್ಟು, ಯಾರಿಗೆ ಎಷ್ಟು ಮತಗಳು ಬಿದ್ದಿದ್ದಾವೆಂಬುದನ್ನು ಸಹ ನೋಡಬಹುದು. 

ರೇಶ್ಮಾ ರಾವ್

ವೋಟ್ ಆ್ಯಪ್!

ಮತ ಹಾಕುವವರಿಗೆ ಆಪ್ತವಾಗುವು ಆ್ಯಪ್‌ಗಳು
ಹಿಂದಿನೆಲ್ಲ ಬಾರಿಗಿಂತ ಈ ಬಾರಿ ಯುವಜನತೆ ಚುನಾವಣಾ ಪ್ರಕ್ರಿಯೆಯ ಮೇಲೆ ವಿಶೇಷ ಅಸ್ಥೆ ತಾಳಿದ್ದಾರೆ. ಪ್ರತಿಕ್ಷಣದ ಆಗುಹೋಗುಗಳನ್ನು ಗಮನಿಸಿ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಪ್ರತಿದಿನ ಹರಿಬಿಡುತ್ತಿದ್ದಾರೆ. ಅದಕ್ಕೆ ಬರುವ ಪ್ರತಿಕ್ರಿಯೆಗಳಿಗೆ ಉತ್ತರಿಸುತ್ತ ಚರ್ಚೆಗೆ ವೇದಿಕೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ ರಾಜಕೀಯ ನೇತಾರರನ್ನು ಫಾಲೋ ಮಾಡುತ್ತಾ ಅವರ ಎಲ್ಲ ಚಾಟು ಚಟಾಕಿಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದಾರೆ. ಇಲ್ಲೆಲ್ಲ ಒಬ್ಬರ ಅಭಿಪ್ರಾಯಗಳು ಇನ್ನೊಬ್ಬರದೊಂದಿಗೆ ಸೇರಿ ಕಲಸುಮೇಲೋಗರವಾಗುತ್ತಿವೆ. ಹೀಗಾಗಿ ಹೆಚ್ಚು ನಿಖರವಾಗಿ ನಿಮ್ಮನ್ನೊಬ್ಬರನ್ನು ಮಾತ್ರ ತಲುಪಿ, ಚುನಾವಣೆ ವಿಷಯಗಳಲ್ಲಿ ಸದಾಕಾಲ ಅಪ್‌ಡೇಟ್ ಇಡುವ ಹಲವಾರು ಆ್ಯಪ್‌ಗಳು ನಿಮ್ಮ ಕೈಬೆರಳ ತುದಿಯಲ್ಲಿವೆ. ಆ್ಯಂಡ್ರಾಯ್ಡ್ ಫೋನ್ ನಿಮ್ಮದಾಗಿರಬೇಕಷ್ಟೆ.
ಈ ಬಾರಿಯ ಚುನಾವಣಾ ವಿಶೇಷವನ್ನೊಳಗೊಂಡ ಟಾಪ್ 7 ಅಪ್ಲಿಕೇಶನ್‌ಗಳನ್ನು ಕೆಳಗೆ ನೀಡಲಾಗಿದೆ.
ಇಂಡಿಯನ್ ಎಲೆಕ್ಷನ್
ಚುನಾವಣಾ ಆಯೋಗದ ಅಧಿಕೃತ ಅಪ್ಲಿಕೇಶನ್ ಇದಾಗಿದ್ದು, ನಿಮ್ಮ ಮನೆಗೆ ಅತಿ ಸಮೀಪವಿರುವ ಮತಗಟ್ಟೆ ಹುಡುಕಲು ಸಹಾಯಕವಾಗಿದೆ. ಅಲ್ಲದೆ ಮತಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು. ಅಷ್ಟೇ ಅಲ್ಲ, ತಪ್ಪಿದ್ದರೆ ಇಲ್ಲವೇ ಹೊಸತೇನಾದರೂ ಸೇರಿಸಬೇಕಿದ್ದರೆ ಕೂಡಾ ಈ ಅಪ್ಲಿಕೇಶನ್ ಮುಖಾಂತರ ಮನೆಯಲ್ಲೇ ಕುಳಿತು ಬದಲಾಯಿಸಬಹುದು.
ಎಲೆಕ್ಷನ್ ವಾಚ್ ರಿಪೋರ್ಟರ್
ಯಾವುದಾದರೂ ಪಕ್ಷದ ಇಲ್ಲವೇ ಅಭ್ಯರ್ಥಿಯ ವಿರುದ್ಧ ಸಮರ್ಥ ಕಾರಣಗಳುಳ್ಳ ದೂರುಗಳಿದ್ದರೆ ಈ ಆ್ಯಪ್ ಮುಖಾಂತರ ನೋಂದಣಿ ಮಾಡಬಹುದು. ಆದರೆ ಪ್ರತಿ ದೂರಿನ ಜೊತೆಗೆ ಸಂಬಂಧಿತ ಫೋಟೋ, ಮ್ಯಾಪ್ ಲೊಕೇಶನ್, ಮತ್ತು ವಿವರಣೆ ಇರಲೇಬೇಕು.
ಎಲೆಕ್ಷನ್ ಇಂಡಿಯಾ
ವಿವಿಧ ಪಕ್ಷಗಳ ಇತಿಹಾಸ, ಅಭ್ಯರ್ಥಿಗಳ ವಿವರ, ಇತ್ತೀಚಿನ ವಿದ್ಯಮಾನಗಳ ಬಗ್ಗೆ ನಿಖರವಾಗಿ ತಿಳಿಯಲು ಈ ಅಪ್ಲಿಕೇಶನ್ ಸಹಾಯಕವಾಗಿದೆ.ವೋಟರ್ ರಿಜಿಸ್ಟ್ರೇಶನ್ ಇಂಡಿಯಾನಿಮ್ಮಲ್ಲಿ ಚುನಾವಣಾ ಕಾರ್ಡ್ ಇಲ್ಲದಿದ್ದರೆ ಚಿಂತಿಸಬೇಕಿಲ್ಲ, ವೋಟರ್ ರಿಜಿಸ್ಟ್ರೇಶನ್ ಇಂಡಿಯಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ. ಅಲ್ಲಿ ನೀಡುವ ಅರ್ಜಿ ನಮೂನೆಯನ್ನು ತುಂಬಿಸಿ, ನಿಮ್ಮದೊಂದು ಫೋಟೋ ಅಪ್‌ಲೋಡ್ ಮಾಡಿ. ತಿಂಗಳೊಳಗೆ ನಿಮ್ಮ ಚುನಾವಣಾ ಗುರುತಿನ ಚೀಟಿ ರೆಡಿಯಾಗುತ್ತದೆ.
ಇಂಡಿಯನ್ ಎಲೆಕ್ಷನ್
 20141947ರಿಂದ 2014ರವರೆಗಿನ ಪ್ರಜಾಪ್ರಭುತ್ವ ಭಾರತದ ಸಂಪೂರ್ಣ ಇತಿಹಾಸ ತಿಳಿಯಲು ಈ ಆ್ಯಪ್ ಸಹಾಯಕ. ಪಕ್ಷಗಳು, ಅವುಗಳ ಸಿದ್ಧಾಂತ ಸೇರಿದಂತೆ ರಾಜಕೀಯ ವಿಷಯಗಳನ್ನು ತಿಳಿಯಲು ರಾಜಮಾರ್ಗ ಒದಗಿಸುತ್ತದೆ.
ಲೈವ್ ಇಂಡಿಯಾ ಎಲೆಕ್ಷನ್ ರಿಸಲ್ಟ್ಸ್
ಚುನಾವಣಾ ಸಂಬಂಧಿ ಪ್ರಸ್ತುತ ವಿದ್ಯಮಾನಗಳೆಲ್ಲವೂ ಕ್ಷಣಕ್ಷಣಕ್ಕೂ ಅಪ್‌ಡೇಟ್ ಆಗುತ್ತಾ ನಿಮ್ಮನ್ನು ಮಾಹಿತಿಪೂರ್ಣರನ್ನಾಗಿಡುತ್ತದೆ.ಇಂಡಿಯಾ ಎಲೆಕ್ಷನ್ಸ್ಇದು ಮತ್ತೊಂದು ಅದ್ಭುತ ಅಪ್ಲಿಕೇಶನ್ ಆಗಿದ್ದು, ಅಭ್ಯರ್ಥಿಗಳು ಮತ್ತು ಪಕ್ಷಗಳ ಎಲ್ಲ ಕಾರ್ಯಚಟುವಟಿಕೆಗಳೂ ನಿಮ್ಮ ಮುಂದೇ ನಡೆಯಿತೇನೋ ಎಂಬಷ್ಟು ಪ್ರಖರವಾಗಿ ಮಾಹಿತಿ ನೀಡುತ್ತದೆ.

2.4.14

ಸಿಂಗಲ್ ಈಸ್ ಕಿಂಗ್!

ಪಾಲಿಟಿಕ್ಸೇ ಇವರಿಗೆ ಪತಿ, ಪತ್ನಿ ಎಲ್ಲ...
ನೀವು ಬಾಲಿವುಡ್‌ನ ಬ್ಯಾಚುಲರ್‌ಗಳ ಬಗ್ಗೆ ಮೇಲಿಂದ ಮೇಲೆ ಕೇಳಿರಬಹುದು. ಅದಕ್ಕಿಂತಲೂ ಮೇಲ್ದರ್ಜೆಯ ಬ್ಯಾಚುಲರ್‌ಗಳು ರಾಜಕೀಯದಲ್ಲಿ ಕಾಣಿಸುತ್ತಾರೆ. ಇವರೆಲ್ಲ ಅಜನ್ಮ ಬ್ರಹ್ಮಚಾರಿಗಳು. ರಾಜಕಾರಣದ ಸಂದಿಗೊಂದಿಯಲ್ಲೂ ಹಾದು ಪ್ರಸ್ತುತ ಒಂದು ಹಂತ ತಲುಪಿ ನಾಯಕತ್ವದ ಪಟ್ಟ ಅಲಂಕರಿಸಿರುವ ಈ ದಿಗ್ಗಜರು ಹೆಂಡತಿಯ/ ಗಂಡನ ಜುಟ್ಟು ಹಿಡಿಯುವ ಸಾಹಸಕ್ಕೆ ಹೋಗಲಿಲ್ಲ. ಆದರೆ ದೇಶದ ಜುಟ್ಟನ್ನು ಭದ್ರವಾಗಿ ಹಿಡಿಯಲು ಪೈಪೋಟಿಗೆ ಬಿದ್ದಿದ್ದಾರೆ. ರಾಜಕೀಯದೊಂದಿಗೇ ಇವರ ಎಲ್ಲ ಸರಸ, ವಿರಸ, ಅಪರೂಪಕ್ಕೊಮ್ಮೊಮ್ಮೆ ಸಮರಸ ಕೂಡ. ಆಡಳಿತ ನಡೆಸುವುದು ಹೆಂಡತಿಯನ್ನಾಳುವುದಕ್ಕಿಂತಲೂ ಸುಲಭವೆಂಬುದು ಇವರ ಬಾಯಲ್ಲಿ ಬರಬಹುದಾದ ವಕ್ರತುಂಡೋಕ್ತಿ...
ಎಪಿಜೆ ಅಬ್ದುಲ್ ಕಲಾಂ
ದೇಶ ಕಂಡ ಅತ್ಯಂತ ಜನಾನುರಾಗಿ, ಸಮರ್ಥ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ. ಬಡ ಕುಟುಂಬದಲ್ಲಿ ಹುಟ್ಟಿದ ಈ ವಿಜ್ಞಾನಿ, ಈ ರಾಷ್ಟ್ರಪತಿಯ ಸಾಧನೆಯ ಹಿಂದೆ ಹೆಣ್ಣಿಲ್ಲ. 'ಇಂಡಿಯಾ 2020' ಎಂಬ ಪುಸ್ತಕ ಬರೆದಿರುವ ಕಲಾಂ 2020ರಲ್ಲಿ ಪ್ರಕಾಶಿಸುವ ಭಾರತವನ್ನು ನೋಡುವ ಕನಸು ಕಂಡವರು. ಇವರ ಆತ್ಮಕತೆ 'ವಿಂಗ್ಸ್ ಆಫ್ ಫೈರ್‌'ನಲ್ಲೂ ಹೆಣ್ಣಿನ ಪ್ರೀತಿಯ ಪರಿಮಳವನ್ನು ನೀವು ಕಾಣಲಾರಿರಿ.
ರಾಹುಲ್ ಗಾಂಧಿ 
ಇನ್ನೂ ಯುವಕನೆಂದೇ ಎಲ್ಲೆಡೆ ಬಿಂಬಿತವಾಗುತ್ತಿರುವ 44ರ ರಾಹುಲ್ 2004ರಿಂದಲೇ ವೆನಿಜುವೆಲಾದ ಗರ್ಲ್‌ಫ್ರೆಂಡ್ ವೆರೋನಿಕ ಜೊತೆ ಡೇಟಿಂಗ್ ನಡೆಸುತ್ತಿದ್ದರೂ ಅದೇಕೋ, ಕಂಕಣಭಾಗ್ಯ ಮಾತ್ರ ಕೂಡಿಬರುತ್ತಿಲ್ಲ. ಕಾಂಗ್ರೆಸ್‌ನಿಂದ ಪ್ರಧಾನಿ ಅಭ್ಯರ್ಥಿಯಾಗಿ ನಿಂತು, ಮಾಧ್ಯಮಗಳು ಏನೇ ಪ್ರಶ್ನೆ ಕೇಳಿದರೂ ತಾನು ಬಾಯಿಪಾಠ ಮಾಡಿದ್ದನ್ನು ಮಾತ್ರ ಉದುರಿಸಿ 'ಪಪ್ಪು' ಪಟ್ಟ ಅಲಂಕರಿಸಿರುವ ರಾಹುಲ್‌ಗೆ 'ಪಪ್ಪ' ಆಗುವ ಇಚ್ಛೆ ಇದ್ದಂತಿಲ್ಲ.
ಉಮಾ ಭಾರತಿ
ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಕೂಡಾ ಇಂದಿಗೂ ಕುಮಾರಿ. ಆರೆಸ್ಸೆಸ್‌ನೊಂದಿಗೆ ಗಟ್ಟಿ ಸಂಬಂಧ ಹೊಂದಿದ್ದ ಉಮಾ, ವಾಜಪೇಯಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ.
ಕೆ.ಎನ್. ಗೋವಿಂದಾಚಾರ್ಯ
ಪರಿಸರವಾದಿ, ಸಮಾಜವಾದಿ, ಬುದ್ಧಿಜೀವಿ ಎಂದು ಹೆಸರಾದ ಗೋವಿಂದಾಚಾರ್ಯ, ಜಯಪ್ರಕಾಶ ನಾರಾಯಣರ 'ಸಂಪೂರ್ಣ ಕ್ರಾಂತಿ'ಯಲ್ಲಿ ಪ್ರಖರಗೊಂಡವರು. ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ 2000ದವರೆಗೂ ಕಾರ್ಯನಿರ್ವಹಿಸಿದ್ದರು. ಮದುವೆಗೆ ಗೋವಿಂದಾ ಎಂದು ಬ್ರಹ್ಮಾಚಾರ್ಯವನ್ನೇ ಅಪ್ಪಿಕೊಂಡವರು.
ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮೊದಲ ಹಾಗೂ ಹಾಲಿ ಮುಖ್ಯಮಂತ್ರಿ ಮಮತಾ 1970ರಲ್ಲೇ ಕಾಂಗ್ರೆಸ್‌ಗೆ ಸೇರುವ ಮೂಲಕ ರಾಜಕೀಯಕ್ಕೆ ಧುಮುಕಿದವರು. ಅನಂತರ ಎರಡು ಅವಧಿಗೆ ರೇಲ್ವೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ದೇಶಾದ್ಯಂತ 'ದೀದೀ' (ಅಕ್ಕ) ಎಂದೇ ಪ್ರಸಿದ್ಧರಾದದ್ದಕ್ಕೂ, ಮಮತಾ ಮದುವೆಯಾಗದಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಅವರು ಕೊಡದಿದ್ದರೂ ಸ್ಪಷ್ಟನೆಯಾಗಿಯೇ ಉಳಿಯಬಹುದಾದ ಮಾತು.
ಮಾಯಾವತಿ
ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ದಲಿತರ ಪ್ರತಿನಿಧಿಯಾಗಿ ಅವರನ್ನು ಮೇಲೆತ್ತುವ ಕಾರ್ಯಗಳಿಂದ ಪ್ರಸಿದ್ಧರಾದವರು. ಬಹುಜನ ಸಮಾಜ ಪಕ್ಷದ ನೇತಾರೆಯಾಗಿರುವ ಮಾಯಾಗೂ 'ಬೆಹನ್‌ಜೀ' (ಅಕ್ಕ) ಎಂಬ ವಿಶೇಷಣ ಸೇರಿದ್ದು, ಅವರೂ ವಿವಾಹವಾಗಿಲ್ಲ.
ಜಯಲಲಿತಾ
'ಅಕ್ಕತಂಗಿ'ಯರು ಮದುವೆಯಾಗದಿದ್ದರೆ ವಿಶೇಷವಿಲ್ಲ. ಆದರೆ ಚಲನಚಿತ್ರ ತಾರೆಯಾಗಿದ್ದ ಈ ಸುಂದರಿ 'ಅಮ್ಮ'ನೂ ಮದುವೆಯಾಗದೆ ಉಳಿದಿರುವುದು ಆಶ್ಚರ್ಯವೇ ಸರಿ. 1991ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಜಯಾ ಇಂದಿಗೂ 'ಹಾಲಿ' ಪಟ್ಟ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೇಂದ್ರದಲ್ಲೂ ಹೆಚ್ಚಿನ ಪ್ರಭಾವ ಬೀರಿ ತಾವಂದುಕೊಂಡಿದ್ದರಲ್ಲಿ 'ಜಯಾ' ಗಳಿಸುತ್ತಾರೆ. 
ನರೇಂದ್ರ ಮೋದಿ
ಭಾರತದಾದ್ಯಂತ ತನ್ನ ಪ್ರಭಾವಶಾಲಿ ವ್ಯಕ್ತಿತ್ವದಿಂದ ಮೋಡಿ ಮಾಡಿರುವ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇಂದು ಅವರನ್ನು ಪ್ರಧಾನಿ ಪಟ್ಟದ ಮೆಟ್ಟಿಲನ್ನೇರಿಸಲು ತುದಿಗಾಲಲ್ಲಿ ನಿಂತಿವೆ. ಇವರು ಮದುವೆಯಾಗಿದ್ದರಾದರೂ ಹೆಂಡತಿಯೊಂದಿಗೆ ಬಾಳು ನಡೆಸದೆ ಅಜನ್ಮ ಬ್ರಹ್ಮಚಾರಿಯಾಗಿಯೇ ಗುರುತಿಸಿಕೊಂಡಿದ್ದಾರೆ. 
ಅಟಲ್ ಬಿಹಾರಿ ವಾಜಪೇಯಿ
1996ರಿಂದ 2004ರವರೆಗೆ 3 ಅವಧಿಗೆ ಪ್ರಧಾನಮಂತ್ರಿಯಾಗಿ ಇಂದಿಗೂ ತಮ್ಮ ಸಚ್ಚಾರಿತ್ರ್ಯ ಹಾಗೂ ಅಭಿವೃದ್ಧಿ ಕೆಲಸಗಳಿಂದ ಜನಮನದಲ್ಲಿ ನೆಲೆಯೂರಿರುವ ವಾಜಪೇಯಿ ಕೂಡಾ ಭವಬಂಧನಕ್ಕೆ ಬೀಳಲಿಲ್ಲ. ಬಿಜೆಪಿಯ ಅತ್ಯುತ್ತಮ ರಾಜಕಾರಣಿಯಾಗಿದ್ದ ವಾಜಪೇಯಿ ಕವಿಯಾಗಿಯೂ ಹೆಸರು ಮಾಡಿದ್ದರು.
ನವೀನ್ ಪಟ್ನಾಯಕ್
ಒರಿಸ್ಸಾದ ಮಾಜಿ ಸಿಎಂ ಬಿಜು ಪಟ್ನಾಯಕ್ ಅವರ ಮಗ ನವೀನ್ ಕೂಡಾ ಅಪ್ಪನನ್ನೇ ಹಿಂಬಾಲಿಸಿ 1997ರಲ್ಲಿ ರಾಜಕೀಯ ಅಖಾಡಕ್ಕಿಳಿದವರು. ನಂತರ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಜನಮೆಚ್ಚುಗೆ ಗಳಿಸಿದ ನವೀನ್, 2000ದಲ್ಲಿ ಒರಿಸ್ಸಾದ ಸಿಎಂ ಪದವಿ ಗಳಿಸುವಲ್ಲಿ ಸಫಲರಾದರು.
 ರೇಶ್ಮಾರಾವ್ ಸೊನ್ಲೆ

1.4.14

ಎಲೆಕ್ಷನ್ ಇಲೆವೆನ್

ಇದು Epl ಎಲೆಕ್ಷನ್ ಪ್ರಿಮಿಯರ್ ಲೀಗ್
11 ದೇಶಗಳ ಹಣೆಬರಹ ಬರೆಯಲು 2014 ಎಂಬ ಬ್ರಹ್ಮ ಸಿದ್ಧನಾಗಿ ಕುಳಿತಿದ್ದಾನೆ. ಈ ವರ್ಷ 11 ಪ್ರಮುಖ ದೇಶಗಳಲ್ಲಿ ರಾಷ್ಟ್ರಮಟ್ಟದ ಚುನಾವಣೆ ನಡೆಯಲಿದೆ. ಆದರೆ ಈ ಗಾಳಿ ಎಷ್ಟು ಕಡೆ ತಂಗಾಳಿಯಾಗಿ ದೇಶದ ಹಿತ ಕಾಯುವುದೋ, ಎಷ್ಟು ಕಡೆ ಬಿರುಗಾಳಿಯಾಗಿ ಮತ್ತಿಷ್ಟು ಹಗರಣಗಳ ಭಾರ ಏರಿಸುವುದೋ ಕಾದು ನೋಡಬೇಕಿದೆ. ಜನರೇನೋ ಬಲು ಉತ್ಸಾಹದಲ್ಲಿ ಹೊಸತನ್ನು ಆಹ್ವಾನಿಸಲು ಕಾದಿದ್ದಾರೆ. ಆದರೆ ರಾಜಕೀಯದಲ್ಲಿ ಕೆಲವೊಂದಿಷ್ಟು ಬೇಡದ್ದೂ ಸಾಂಕ್ರಾಮಿಕವಾಗಿ ಹರಡುತ್ತದೆ.
ಭಾರತ (ಏ.17)
1.3 ದಶಲಕ್ಷ ಮತಯಂತ್ರಗಳನ್ನು ಬಳಸಿಕೊಂಡು, ಒಟ್ಟು 800,000 ಮತಕೇಂದ್ರಗಳಲ್ಲಿ ಸುಮಾರು 700 ದಶಲಕ್ಷ ಜನ ಮತ ಚಲಾಯಿಸಿ ಪ್ರಧಾನಿಯನ್ನು ಆಯ್ಕೆ ಮಾಡುವುದನ್ನು ಉಳಿದ ದೇಶಗಳು ಕಲ್ಪಿಸಿಕೊಳ್ಳುವುದೂ ಕಷ್ಟದ ಮಾತೇ ಸರಿ. ಇದು ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ನಮ್ಮ ದೇಶದ ಹೆಗ್ಗಳಿಕೆ. ಈ ಬಾರಿ ಏ.17ರಂದು ದೇಶಾದ್ಯಂತ ಮತದಾನ ನಡೆಯಲಿದ್ದು 10 ವರ್ಷದ ಯುಪಿಎ ಆಡಳಿತಕ್ಕೆ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಸಮೀಕ್ಷೆಗಳು ಮೋದಿ ಅಲೆಯನ್ನು ಖಚಿತಪಡಿಸುತ್ತಿವೆ. 1989ರಿಂದ ನಂತರ ಒಂದೇ ಪಕ್ಷಕ್ಕೆ ಬಾಹ್ಯ ಬೆಂಬಲವಿಲ್ಲದೆ ಕೇಂದ್ರಾಡಳಿತದ ಕೀಲಿ ಹಿಡಿಯಲು ಸಾಧ್ಯವಾಗಿಲ್ಲ. ಈ ಬಾರಿಯೂ ಅದು ಮುಂದುವರಿಯಲಿದೆ ಎನ್ನುತ್ತಿವೆ ಸಮೀಕ್ಷೆಗಳು.
ಅಫ್ಘಾನಿಸ್ತಾನ (ಏ.5)
ಬರುವ ಏ.5ರಂದು ಆಫ್ಘಾನಿಸ್ತಾನದ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಹಿಂದಿನ ಎರಡು ಅವಧಿಗೆ ಪದವಿ ಅಲಂಕರಿಸಿದ್ದ ಹಮೀದ್ ಕರ್ಜಾಯ್‌ಗೆ 3ನೇ ಬಾರಿಗೆ ಅದೃಷ್ಟಪರೀಕ್ಷೆಗೊಡ್ಡಲು ಕಾನೂನು ಅಡ್ಡಗಾಲಾಗಿದೆ. ಹೀಗಾಗಿ 2009ರ ಚುನಾವಣೆಯಲ್ಲಿ 2, 3ನೇ ಸ್ಥಾನ ಗಳಿಸಿದ್ದ ಅಬ್ದುಲ್ಲಾ ಅಬ್ದುಲ್ಲಾ, ಅಶ್ರಫ್ ಘಾನಿ ಅಹ್ಮದ್‌ಜಾಯ್ ಮುಂಚೂಣಿಯಲ್ಲಿರುವ ಆಕಾಂಕ್ಷಿ ಅಭ್ಯರ್ಥಿಗಳು ಸೇರಿ ಒಟ್ಟು 11 ಮಂದಿ ಕಣದಲ್ಲಿದ್ದಾರೆ.
ಇರಾಕ್ (ಏ.30)
ಇಲ್ಲಿನ ಸಂಸತ್ ಚುನಾವಣೆಗೆ ಏ.30ರಂದು ಮುಹೂರ್ತ ನಿಗದಿಯಾಗಿದೆ. ಹಾಲಿ ಪ್ರಧಾನಿ ನೌರಿ ಅಲ್- ಮಲ್ಲಿಕ್ ಮೂರನೇ ಬಾರಿಗೂ ಪಟ್ಟದಲ್ಲೇ ಮುಂದುವರಿಯಲು ಆಕಾಂಕ್ಷಿಯಾಗಿದ್ದಾರೆ. ಆದರೆ ಇಲ್ಲಿನ ಸುಪ್ರೀಂ ಕೋರ್ಟ್ 3ನೇ ಬಾರಿ ಅವಕಾಶ ನೀಡುವುದಿಲ್ಲವೆಂದು ಆದೇಶಿಸುವ ಸಂಭವವಿದೆ. ಶಿಯಾ ಸುನ್ನಿ ಪಂಗಡಗಳ ನಡುವಿನ ಆಂತರಿಕ ಕಲಹದಿಂದ ಬೆಂದಿರುವ ಇರಾಕ್ ನೌರಿ ಅಲ್- ಮಲ್ಲಿಕ್ ಆಡಳಿತದಲ್ಲಿ ನಿಯಂತ್ರಣದಲ್ಲಿದೆ. ಬದಲಾದರೆ ಅನಿಶ್ಚಿತತೆ ಮೂಡಬಹುದೆಂಬ ಭಯದಿಂದ ಪ್ರತಿಪಕ್ಷಗಳು ಮಲ್ಲಿಕ್ ಮುಂದುವರಿಯಲಿ ಎಂದರೆ ಮಾತ್ರ ಮತ್ತೆ ಮುಂದಿನ ಐದು ವರ್ಷಗಳಿಗೆ ನೌರಿ ಅಲ್ ಮಲ್ಲಿಕ್ ಪ್ರಧಾನಿಯಾಗುವ ಅವಕಾಶವಿದೆ.
ಬ್ರೆಜಿಲ್ (ಅ.5)
ಹಾಲಿ ರಾಷ್ಟ್ರಪತಿ ಡಿಲ್ಮಾ ರುಸೆಫ್ ಮುಂದಿನ ಅವಧಿಗೂ ಮುಂದುವರಿಯುವ ಸಂಭವ ಹೆಚ್ಚಾಗಿದೆ. ಅಲ್ಲದೆ ಪ್ರತಿಪಕ್ಷಗಳು ಮಾಡಿದ ಹಲವು ಎಡವಟ್ಟುಗಳು ಆಕೆಯ ಜನಪ್ರಿಯತೆಯನ್ನು ಹೆಚ್ಚಿಸಿರುವುದು ಡಿಲ್ಮಾಗೆ ವರದಾಯಕವಾಗಲಿದೆ.ಯುಎಸ್ (ನ.4)ಬರುವ ನವೆಂಬರ್‌ನಲ್ಲಿ ಅಮೆರಿಕದಲ್ಲಿ ಕಾಂಗ್ರೆಶ್ನಲ್ ಚುನಾವಣೆ ನಡೆಯಲಿದ್ದು, ಇದು 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರು ಅಭ್ಯರ್ಥಿಯಾಗಬಹುದೆಂಬ ನಿರ್ಣಾಯಕ ಚುನಾವಣೆಯಾಗಿರಲಿದೆ. ಹೀಗಾಗಿ ಒಬಾಮ ಭವಿಷ್ಯದ ದೃಷ್ಟಿಯಿಂದಲೂ ಈ ಚುನಾವಣೆ ಮಹತ್ವದ್ದೆನಿಸಿದೆ.
ಸೌತ್ ಆಫ್ರಿಕಾ (ಏ- ಜೂನ್ ನಡುವೆ)
ಈ ಬಾರಿ ದಕ್ಷಿಣಾ ಆಫ್ರಿಕಾದ 5ನೇ ಲೋಕಸಭಾ ಚುನಾವಣೆ ನಡೆಯಲಿದ್ದು, ಜನರು ಮಂತ್ರಿಗಳನ್ನು ಚುನಾಯಿಸಲಿದ್ದು, ಮಂತ್ರಿಗಳು ತಮ್ಮ ಪ್ರಧಾನಿಯನ್ನು ಆಯ್ಕೆ ಮಾಡಲಿದ್ದಾರೆ. 1994ರಿಂದ ಆಡಳಿತದ ಚುಕ್ಕಾಣಿ ಹಿಡಿದಿರುವ ದಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್‌ಸಿ), ಡೆಮೊಕ್ರಟಿಕ್ ಅಲೈಯನ್ಸ್ ನಡುವೆ ಸ್ಪರ್ಧೆ ಇದೆ. ಕಳೆದ ಕೆಲ ವರ್ಷಗಳಿಂದ ನಿರುದ್ಯೋಗ, ಆರ್ಥಿಕ ಕುಸಿತ, ಭ್ರಷ್ಟಾಚಾರದಿಂದ ಬೇಸತ್ತಿರುವ ಪ್ರತಿಪಕ್ಷಗಳು ರಾಷ್ಟ್ರಪತಿ ಜೇಕಬ್ ಜುಮಾ ಅವರನ್ನು ಸ್ಥಾನದಿಂದ ಕೆಳಗಿಳಿಸಲು ಸಂಚು ರೂಪಿಸಿವೆ. ಆದರೆ ಹೊಸ ಪಕ್ಷ ದಿ ಎಕನಾಮಿಕ್ ಫ್ರೀಡಮ್ ಫೈಟರ್ಸ್ ಮಾತ್ರ ಕರಿಯರ ಗೌರವಘನತೆ ಉಳಿಸಲು ಎಎನ್‌ಸಿಯನ್ನು ಬೆಂಬಲಿಸಲು ಕೋರಿದೆ.
ಯೂರೋಪ್  (ಮೇ 22- 25)
ತೀವ್ರ ಆರ್ಥಿಕ ಮುಗ್ಗಟ್ಟು, ಮಿತಿ ಮೀರಿದ ನಿರುದ್ಯೋಗ ಸೇರಿದಂತೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಂಬಿಕೆಗಳನ್ನೇ ಕಳೆದುಕೊಂಡಿರುವ ಯೂರೋಪ್‌ನ ಸದ್ಯದ ಪರಿಸ್ಥಿತಿಯಲ್ಲಿ ಮೇನಲ್ಲಿ ನಡೆಯುವ ಚುನಾವಣೆ ಒಂದು ಆಶಾಕಿರಣದಂತೆ ಬಿಂಬಿತವಾಗಿದೆ. ಯುಕೆ ಇಂಡಿಪೆಂಡೆನ್ಸ್ ಪಕ್ಷ, ಟ್ರೂ ಫಿನ್ಸ್, ಫ್ರಂಟ್ ನ್ಯಾಷನಲ್ ಪಕ್ಷಗಳು ಗದ್ದುಗೆ ಅಲಂಕರಿಸಲು ಮುಂಚೂಣಿಯಲ್ಲಿವೆ. 
ಕೊಲಂಬಿಯಾ (ಮೇ 25)
ಇಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿಯೂ ಹಾಲಿ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಮರು ಆಯ್ಕೆಯಾಗುವ ಸಂಭವವೇ ಹೆಚ್ಚಿದೆ. ಜುವಾನ್‌ರೊಂದಿಗೆ ಬಂಡಾಯವೆದ್ದ ಪ್ರಮುಖ ರಾಜಕಾರಣಿ ಯೂರಿಬ್ ಹೊಸ ಪಕ್ಷ ಸ್ಥಾಪಿಸಿ ಆಸ್ಕರ್ ಇವಾನ್ ಜುಲಾಂಗಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಹಾಗಾಗಿ ಅಧ್ಯಕ್ಷೀಯ ಚುನಾವಣೆ ಕಳೆಗಟ್ಟಿದೆ.
ಇಂಡೋನೇಷ್ಯಾ (ಜು.9)
ಜಕಾರ್ತದ ಗವರ್ನರ್ ಜೋಕೋ ವಿಡೊಡೊ ಜಕಾರ್ತದ ಒಬಾಮ ಎಂದೇ ಬಿಂಬಿತವಾಗಿದ್ದು ಅವರು ಈ ಬಾರಿಯ ಅಧ್ಯಕ್ಷೀಯ ಚುನಾವಣೆಗೆ ನಿಲ್ಲಬೇಕೆಂಬುದು ಇಲ್ಲಿನ ಜನರ ಒಮ್ಮತವಾಗಿದೆ. ಆದರೆ ಅವರ ಪಕ್ಷದ ನೇತಾರೆ, ಎರಡು ಬಾರಿ ಸೋಲನ್ನನುಭವಿಸಿರುವ ಮೇಘಾವತಿ ಸುಕರ್ನೋಪುತ್ರಿ ಕಣಕ್ಕಿಳಿಯುವುದಾದರೆ ವಿಡೊಡೊ ಸ್ಪರ್ಧಿಸುವುದಿಲ್ಲ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಅಧ್ಯಕ್ಷಗಾದಿ ಹಿಡಿಯುವುದು ಖಚಿತವಾಗಿದೆ.
ಟರ್ಕಿ (ಆಗಸ್ಟ್)
ಇಲ್ಲಿನ ರಾಷ್ಟ್ರಪತಿ ಹುದ್ದೆಗೆ ಆಗಸ್ಟ್‌ನಲ್ಲಿ ಚುನಾವಣೆ ನಡೆಯಲಿದ್ದು ಹಾಲಿ ಪ್ರಧಾನಮಂತ್ರಿ ರಿಸೆಪ್ ಎರ್ಡೋಗನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಅವರ ಪ್ರಧಾನಮಂತ್ರಿ ಅವಧಿ 2015ಕ್ಕೆ ಮುಗಿಯಲಿರುವುದು. ಮಾರ್ಚ್‌ನಲ್ಲಿ ನಡೆವ ಪ್ರಾಂತೀಯ ಚುನಾವಣೆಯಲ್ಲಿ ಎರ್ಡೋಗನ್‌ರ ಎಕೆಪಿ ಪಕ್ಷ ಉತ್ತಮ ಫಲಿತಾಂಶ ಪಡೆದರೆ ಅವರ ರಾಷ್ಟ್ರಪತಿ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ.
ಈಜಿಪ್ಟ್ (ಮೇ- ಆಗಸ್ಟ್)
ಸರ್ವಾಧಿಕಾರಿ ಧೋರಣೆ ತೋರಿದ ಮೊಹಮ್ಮದ್ ಮೊರ್ಸಿಯನ್ನು ಬಲವಂತವಾಗಿ ಕೆಳಕ್ಕಿಳಿಸಿದ ನಂತರ ಈಜಿಪ್ಟ್ ಹೊಸ ಅಧ್ಯಕ್ಷರ ಹುಡುಕಾಟದಲ್ಲಿ ತೊಡಗಿದೆ. ಬೇಸಿಗೆ ಮುಗಿಯುತ್ತಿದ್ದಂತೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ ಎಂದು ವಿದೇಶಾಂಗ ಸಚಿವ ನೆಬಿಲ್ ಫಾಮಿ ತಿಳಿಸಿದ್ದಾರೆ. ಇದುವರೆಗೂ ದಿನಾಂಕ ಹಾಗೂ ಅಭ್ಯರ್ಥಿಗಳ ಆಯ್ಕೆ ಘೋಷಣೆಯಾಗಿಲ್ಲ.

29.3.14

ಪೊಲೀಸ್ ಟಿಕ್ಸ್

cop ಆಡಿ cop ಆಡಿ
ಪೊಲೈಟ್ ಎನಿಸಿಕೊಂಡ ಪೊಲೀಸ್ ಆಫೀಸರುಗಳೆಲ್ಲಾ ಪೊಲಿಟಿಕ್ಸ್ನತ್ತ ಮುಖ ಮಾಡಿದರೆ ಪೋಲಿಗಳ ಜುಟ್ಟು ಹಿಡಿಯೋರ್ಯಾರು? ಖಾಕಿ ಹಾಕುತ್ತಿದ್ದವರೆಲ್ಲ ಟೈಡ್ ಪ್ಲಸ್ ಬಳಸುತ್ತಿದ್ದಾರೋ ಎಂಬಂತೆ ಬಿಳಿ ಖಾದಿ ಧರಿಸಿ ರಾಜಕೀಯ ರಂಗಕ್ಕೆ ಇಳಿಯುತ್ತಿದ್ದಾರೆ. ಗನ್ ಹಿಡಿಯುತ್ತಿದ್ದ ಕೈಯನ್ನು ಅಷ್ಟು ಸುಲಭವಾಗಿ ಹಿಡಿಯಲೊಪ್ಪದ ರಾಜಕೀಯರಂಗ, ಎಲ್ಲೋ ಮೂರು ಮತ್ತೊಬ್ಬರಿಗೆ ಮಾತ್ರ ಸಲ್ಯೂಟ್ ಹೊಡೆದಿದೆ. 
ಗಿರೀಶ್ ಮಟ್ಟಣ್ಣನವರ್
ಸದ್ಯ ಕಂಠೀರವ ಸ್ಟುಡಿಯೋದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿದ್ದವರು. ರಾಜಕೀಯದ ಭ್ರಷ್ಟ ವ್ಯವಸ್ಥೆ ನೋಡಿ ಹೇಸಿಗೆಪಟ್ಟು ವಿಧಾನಸೌಧಕ್ಕೇ ಬಾಂಬ್ ಇಡುವ ದುಸ್ಸಾಹಸಕ್ಕೆ ಕೈ ಹಾಕಿ ಸೋತ ಗಿರೀಶ್, ಭ್ರಷ್ಟ ವ್ಯವಸ್ಥೆ ಸರಿಪಡಿಸಲೆಂದೇ ಬಿಜೆಪಿ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.
ಬಿ.ಕೆ. ಶಿವರಾಂ
ಬೆಂಗಳೂರಿನ ಮಲ್ಲೇಶ್ವರಂನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದ ಬಿ.ಕೆ.ಶಿವರಾಂ ಐಪಿಎಸ್ ಅಧಿಕಾರಿಯಾಗಿದ್ದವರು. ವೃತ್ತಿಗೆ ಸ್ವಯಂನಿವೃತ್ತಿ ಘೋಷಿಸಿ ಅಣ್ಣ ಬಿ.ಕೆ.ಹರಿಪ್ರಸಾದ್ ಹಾದಿ ಹಿಡಿದು ರಾಜಕಾರಣಕ್ಕೆ ಧುಮುಕಿದರು. ಮಲ್ಲೇಶ್ವರಂನಲ್ಲಿ ಸೋಲಾಯಿತಾದರೂ ರಾಜಕಾರಣದಲ್ಲಿನ್ನೂ ಸಕ್ರಿಯವಾಗಿದ್ದಾರೆ.
ಶಂಕರ್ ಬಿದರಿ
ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಎಲ್ಟಿಟಿಇ ಮುಖಂಡರಾದ ಶುಭಾ, ಶಿವರಸನ್ ಹಿಡಿವಲ್ಲಿ ಪ್ರಮುಖ ಪಾತ್ರ ವಹಿಸಿ ತಮ್ಮ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ ಬಿದರಿಯವರು ಕಳೆದ ವರ್ಷ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುವ ಮೂಲಕ 30 ವರ್ಷಗಳ ತಮ್ಮ ಪೊಲೀಸ್ ಒಡನಾಟಕ್ಕೆ ಬೈಬೈ ಹೇಳಿದರು.
ಬಿ.ಸಿ.ಪಾಟೀಲ್
1979ರಲ್ಲಿ ಪೊಲೀಸ್ ಟ್ರೈನಿಂಗ್ ಪಡೆದ ಈ 'ಬಿಸಿ' ರಕ್ತದ ಯುವಕ ನಂತರ ಚಿತ್ರೋದ್ಯಮದಲ್ಲಿ ನೆಲೆ ಕಂಡುಕೊಂಡು ಕೌರವನಾಗಿ ರೌರವ ರೂಪದಿಂದಲೇ ಜನಮನ ಗೆದ್ದರು. ಹಲವಾರು ಯಶಸ್ವಿ ಚಿತ್ರಗಳನ್ನು ಕೊಟ್ಟ ಪಾಟೀಲ್, ಹಿರೇಕೆರೂರು ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಸಾಂಗ್ಲಿಯಾನ
ವಿಶೇಷ ಪೊಲೀಸ್ ಆಯುಕ್ತರಾಗಿದ್ದ ಮಿಜೋರಾಂ ಮೂಲದ ಸಾಂಗ್ಲಿಯಾನಾ ಅದೆಷ್ಟು ಖ್ಯಾತಿ ಗಳಿಸದ್ದರೆಂಬುದನ್ನು ಹೇಳಲು ಅವರ ಹೆಸರಿನಲ್ಲಿ ಬಂದ ಎರಡು ಕನ್ನಡ ಚಿತ್ರಗಳೇ ಸಾಕು. ಸಾಂಗ್ಲಿಯಾನಾರನ್ನು ಖ್ಯಾತಿಯೇ ರಾಜಕೀಯಕ್ಕೆ ಎಳೆತಂದಿತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಂಗ್ಲಿಯಾನಾ ಸಂಸದರಾಗಿ ಕಾರ್ಯ ನಿರ್ವಹಿಸಿದರು. ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅಬ್ದುಲ್ ಅಜೀಮ್
ಪ್ರಾಮಾಣಿಕತೆ ಹಾಗೂ ಶಿಸ್ತಿಗೆ ಹೆಸರಾದ, ಸಾಂಗ್ಲಿಯಾನ ಅವರಿಂದ 'ಬೆಂಗಳೂರಿನ ಶೆರ್ಲಾಕ್ ಹೋಮ್ಸ್' ಎಂದೇ ಕರೆಸಿಕೊಂಡಿದ್ದ ಮಾಜಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಅಬ್ದುಲ್ ಅಜೀಮ್, ಹೆಸರು ಕೊಟ್ಟ ಹುದ್ದೆ ಬಿಟ್ಟು 'ಹಸಿರು' ತೆನೆ ಹೊತ್ತದ್ದು 2004ರಲ್ಲಿ. 2006ರಲ್ಲಿ ಶಾಸನಮಂಡಳಿ ಸದಸ್ಯರಾಗಿ ಆಯ್ಕೆಯಾಗಿ 2013ರಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದರು.
ಕೆನಡಿ ಸಿ ಕಿರಿಮ್
ಮ್ಮ ಹೊಸ ಶೈಲಿಯ ಪ್ರಚಾರಗಳಿಂದ ಬಹುಮತ ಗಳಿಸಿ ಅದುವರೆಗೂ ಮೂರು ಬಾರಿ ಗೆದ್ದಿದ್ದ ಆಡಳಿತ ಪಕ್ಷದ ಎದುರಾಳಿಯನ್ನು ಸೋಲಿಸಿದ ಶಿಲ್ಲಾಂಗ್ನ ಮಾಜಿ ಪೊಲೀಸ್ ಅಧಿಕಾರಿ ಕಿರಿಮ್ ಗೆಲುವಿಗೆ ಸ್ವತಃ ಮುಖ್ಯಮಂತ್ರಿಯೇ ಆಶ್ಚರ್ಯಸಹಿತ ಮೆಚ್ಚುಗೆ ವ್ಯಕ್ತಪಡಿಸಿದ್ದರು. 
ಅಫ್ತಾಬ್ ಅಹ್ಮದ್ ಖಾನ್
ಮಹಾರಾಷ್ಟ್ರದ ಲೋಖಂಡ್ವಾಲಾ ಶೂಟ್ಔಟ್ನಿಂದ ಖ್ಯಾತರಾಗಿದ್ದ ದಕ್ಷ ಪೊಲೀಸ್ ಅಧಿಕಾರಿ ಅಫ್ತಾಬ್ ಅಹ್ಮದ್ಖಾನ್ರನ್ನೂ ಕೂಡಾ ರಾಜಕೀಯ ಅಯಸ್ಕಾಂತದಂತೆ ಸೆಳೆದಿದ್ದು 1990ರ ಹೊಸ್ತಿಲಲ್ಲಿ. ಸಮಾಜವಾದಿ ಪಕ್ಷದ ಮೂಲಕ ರಾಜಕೀಯಕ್ಕೆ ಬಂದು ನಂತರ ಜೆಡಿಎಸ್ಗೆ ಹಾರಿಕೊಂಡ ಅಫ್ತಾಬ್ ದಶಕಗಳ ಬಳಿಕ ರಾಜಕೀಯದಿಂದ ಹೊರಬಂದು ಸದ್ಯ ಖಾಸಗಿ ಭದ್ರತಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ.
ಸೋಮ್ ಪ್ರಕಾಶ್ ಸಿಂಗ್
ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಸ್ವಯಂನಿವೃತ್ತಿ ಘೋಷಿಸಿ, ಹಲವು ಧ್ಯೇಯಗಳೊಂದಿಗೆ 2010ರಲ್ಲಿ ಬಿಹಾರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಶಾಸಕರಾದ ಸೋಮ್ಪ್ರಕಾಶ್ ಸಿಂಗ್ ಸದ್ಯ ಭ್ರಮನಿರಸನಗೊಂಡು ಮತ್ತೆ ತಮ್ಮ ಹಿಂದಿನ ಹುದ್ದೆಗೆ ಮರಳುವ ಬಗ್ಗೆ ಯೋಚಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದಾಗ ಕೆಲವಾದರೂ ಭ್ರಷ್ಟರನ್ನು ಒಳತಳ್ಳುವ ಅಧಿಕಾರವಿತ್ತು. ಆದರೆ ಶಾಸಕನಾದ ಮೇಲೆ ಎಲ್ಲ ಭ್ರಷ್ಟಾಚಾರಗಳಿಗೆ ಸಾಕ್ಷಿಯಾಗಿಯೂ ಏನೂ ಮಾಡಲಾಗುತ್ತಿಲ್ಲ ಎಂಬುದು ಅವರ ಅಳಲು.
ಸುಶೀಲ್ ಕುಮಾರ್ ಸಂಭಾಜಿರಾವ್ ಶಿಂಧೆ
ಸದ್ಯ ಯುಪಿಎ ಸರ್ಕಾರದಲ್ಲಿ ಗೃಹಮಂತ್ರಿಯಾಗಿರುವ ಸುಶೀಲ್ಕುಮಾರ್ ಶಿಂಧೆ, ಮಹಾರಾಷ್ಟ್ರ ರಾಜ್ಯ ಪೊಲೀಸ್ ಬಳಗದಲ್ಲಿ ಕಾನ್ಸ್ಟೆಬಲ್ ಆಗಿ, ಸಬ್ಇನ್ಸ್ಪೆಕ್ಟರ್ ಆಗಿ, ಸಿಐಡಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು. ರಾಜಕಾರಣಕ್ಕೆ ಕಾಲಿಟ್ಟ ಪೊಲೀಸ್ ಅಧಿಕಾರಿಗಳಲ್ಲಿ ಉನ್ನತ ಸ್ಥಾನಕ್ಕೇರಿದ ಕೀರ್ತಿ ಇವರದು.
ಆರ್. ಚಕ್ರವರ್ತಿ ರಾಜಗೋಪಾಲಕೃಷ್ಣನ್
ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಗಿದ್ದ ಚಕ್ರವರ್ತಿ ಭ್ರಷ್ಟವಿರೋಧಿ ನೀತಿಗಳಿಂದ ಪ್ರಖ್ಯಾತರಾಗಿದ್ದವರು. ಹಾಗಾಗೇ ಆಮ್ ಆದ್ಮಿ ಪಕ್ಷದ ತತ್ವಗಳಿಗೆ ಮನಸೋತು ಆರು ತಿಂಗಳ ಹಿಂದಷ್ಟೇ ರಾಜಕೀಯಕ್ಕೆ ಬಂದ ಚಕ್ರವರ್ತಿ, ಇದೀಗ ಆಪ್ನ ತಿರುಪುರ ಲೋಕಸಭಾ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಇಣುಕು nota

First Published: 29 Mar 2014 02:00:00 AM IST
ಹಳೇ ವೋಟಾ, ಹೊಸ ನೋಟಾ..?
ಈ ಬಾರಿ ನೀವು ವೋಟ್ ಮಾಡುತ್ತೀರೋ, ನೋಟಾ ಅನ್ನುತ್ತೀರೋ? ಭಾರತದ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮತದಾರನ ಅಮೂಲ್ಯ ಮತದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲು ಮತಪಟ್ಟಿಯಲ್ಲಿ 'ಮೇಲಿನ ಆಯ್ಕೆಗಳಲ್ಲಿ ಯಾವುದೂ ಅಲ್ಲ' (none of the above- NOTA) ಎಂಬ ಆಯ್ಕೆ ನೀಡಿದೆ. ರಾಜಕೀಯ ಪಕ್ಷಗಳ ವಿರೋಧದ ನಡುವೆಯೂ ಸುಪ್ರೀಂ ಕೋರ್ಟ್ ಈ 'ನೋಟಾ' ಆಯ್ಕೆಗೆ ಸಮ್ಮತಿ ನೀಡಿದೆ. ಅಭ್ಯರ್ಥಿಗಳಲ್ಲಿ ಯಾರೂ ನನ್ನ ಮತ ಪಡೆಯುವ ಅರ್ಹತೆ ಹೊಂದಿಲ್ಲ, ನನ್ನ ಪ್ರತಿನಿಧಿಯಾಗಬಲ್ಲವ ಇವರ್ಯಾರೂ ಅಲ್ಲ ಎಂದು ಹೇಳುವ ಹಕ್ಕನ್ನು ಮತದಾರನಿಗೆ ನೀಡುವ ಮೂಲಕ ಪಕ್ಷಗಳಿಗೆ ಸ್ವಚ್ಛ ಅಭ್ಯರ್ಥಿಯನ್ನು ನಿಲ್ಲಿಸುವಲ್ಲಿ ಜವಾಬ್ದಾರಿ ಹೆಚ್ಚಿಸಿದೆ. ಆದರೆ ಭಾರತದಲ್ಲಿ ಈ ಆಯ್ಕೆ ಮೂಲಕ ಅಭ್ಯರ್ಥಿಯನ್ನು ತಿರಸ್ಕರಿಸಲಾಗುವುದಿಲ್ಲ. ಏಕೆಂದರೆ 'ಮೇಲಿನ ಆಯ್ಕೆಗಳಲ್ಲಿ ಯಾವುದೂ ಅಲ್ಲ' ಎಂಬ ನಮ್ಮ ಮತ ಮತದಾರನ ಮನಸ್ಸನ್ನು ತಿಳಿಯಲು ಮಾತ್ರವೇ ಹೊರತು ಎಣಿಕೆಗೊಳಪಡುವುದಿಲ್ಲ.
ಸದ್ಯದ ಸರ್ವೆಯ ಪ್ರಕಾರ, ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಬಹುದಾದ ಆಯ್ಕೆಯನ್ನು 2014ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಶೇ.1 ಮಂದಿ ಮತದಾರರು ಮಾತ್ರ ಬಳಸಿಕೊಳ್ಳಲಿದ್ದಾರೆ. ಇದಕ್ಕೆ ಈ ಆಯ್ಕೆಯ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲದಿರುವುದು ಮೊದಲ ಕಾರಣ. ಇದರಿಂದ ನಮ್ಮ ಒಂದೇ ಒಂದು ಮತ ಎಣಿಕೆಗಿಲ್ಲದೆ ವ್ಯರ್ಥವಾಗುತ್ತದೆ ಎಂಬುದು ಮತ್ತೊಂದು ಕಾರಣ. ಬೇರೆ ದೇಶಗಳಲ್ಲಾದರೆ ಹೆಚ್ಚು ಮಂದಿ ನೋಟಾ ಆಯ್ಕೆ ಬಳಸಿದರೆ ಮರುಚುನಾವಣೆ ನಡೆಯುತ್ತದೆ. ಆದರೆ ಭಾರತದಲ್ಲಿ ಇದು ಕೇವಲ ಅಂಕಿಅಂಶಗಳಿಗೆ ಸೀಮಿತವಾಗಿ ಕುಳಿತುಕೊಳ್ಳುತ್ತದೆ. ನೋಟಾ ಭಾರತದ ಚುನಾವಣೆಯ ಮೇಲೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲವಂತೆ. ಏಕೆಂದರೆ ಸರ್ವೆಗಳಲ್ಲಿ ನೋಟಾ ಬಳಸುತ್ತೇವೆಂದವರು ಒಂದು ವೇಳೆ ಈ ಆಯ್ಕೆಯೇ ಇಲ್ಲದಿದ್ದರೆ ಮತ ನೀಡುತ್ತಿದ್ದುದೇ ಅನುಮಾನ ಎನ್ನುತ್ತಾರೆ ವಿಶ್ಲೇಷಕರು.
ದೆಹಲಿ, ರಾಜಸ್ತಾನ, ಚತ್ತೀಸ್ಘಡ, ಮಧ್ಯಪ್ರದೇಶ ನಾಲ್ಕು ರಾಜ್ಯಗಳಲ್ಲಿ ನಡೆಸಿದ ಸರ್ವೆ ಹೇಳುವಂತೆ 115 ದಶಲಕ್ಷ ಜನರಲ್ಲಿ 1.67 ದಶಲಕ್ಷ ಜನರು ಮಾತ್ರ 'ನೋಟಾ' ಆಯ್ಕೆ ಬಳಸುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿ ಈ ಆಯ್ಕೆಯ ಬಗ್ಗೆ ಒಲವು ತೋರಿದವರ ಸಂಖ್ಯೆ ಶೇ.1ಕ್ಕಿಂತಲೂ ಕಡಿಮೆ. ದೆಹಲಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಹುಟ್ಟಿಕೊಂಡಿರುವ ಪಕ್ಷವೆಂಬಂತೆ ಆಪ್ ಬಿಂಬಿಸಿಕೊಂಡಿರುವುದರಿಂದ, ಆಪ್ಗೆ ನೀಡುವ ಮತವೇ ಉಳಿದ ಪಕ್ಷಗಳೆಡೆ ಮತದಾರರು ತಮ್ಮ ಸಿಟ್ಟನ್ನು ವ್ಯಕ್ತಪಡಿಸುವ ಬಗೆಯಾಗಿದೆ. ಹೀಗಾಗಿ ದೆಹಲಿಯಲ್ಲಿ ನೋಟಾ ಮತದಾರರು ಕಡಿಮೆ ಎನ್ನುವುದು ತಜ್ಞರ ವಿಶ್ಲೇಷಣೆ.
ಈ ನನ್ ಆಫ್ ದಿ ಎಬೌ ಆಯ್ಕೆ ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಜಾರಿಯಲ್ಲಿದ್ದು ಕೆಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ.
ಯುನೈಟೆಡ್ ಕಿಂಗ್ಡಮ್
2000, ನವೆಂಬರ್ನಲ್ಲಿ ಯುಕೆಯಲ್ಲಿ ನೋ ಕ್ಯಾಂಡಿಡೇಟ್ ಡಿಸರ್ವ್ಸ್ ಮೈ ವೋಟ್(ನನ್ನ ಮತ ಪಡೆದುಕೊಳ್ಳುವ ಅರ್ಹತೆ ಯಾವ ಅಭ್ಯರ್ಥಿಗೂ ಇಲ್ಲ) ಎಂಬ ಹೆಸರಿನಲ್ಲೇ ಹೊಸ ಪಕ್ಷವೊಂದು ಅಧಿಕೃತವಾಗಿ ಸೃಷ್ಟಿಯಾಯಿತು! ಈ ಪಕ್ಷದ ಮುಖ್ಯ ಉದ್ದೇಶ ದೇಶದಲ್ಲಿ ಗ್ರಾಮ ಮಟ್ಟದಿಂದ ದೇಶಮಟ್ಟದವರೆಗೆ ನಡೆವ ಪ್ರತೀ ಚುನಾವಣೆಯಲ್ಲೂ 'ನನ್ ಆಫ್ ದಿ ಎಬೌ' ಆಯ್ಕೆ ಅಳವಡಿಸಬೇಕೆಂಬುದಾಗಿತ್ತು! ಇನ್ನೊಂದು ಸ್ವಾರಸ್ಯವೆಂದರೆ 2010ರಲ್ಲಿ ಎರಿಕ್ ಮಚ್ ಎಂಬಾತ ತನ್ನ ಹೆಸರನ್ನು ಬದಲಿಸಿಕೊಂಡು 'ಜೀರೋ, ನನ್ ಆಫ್ ದಿ ಎಬೌ' ಎಂಬ ಹೆಸರಿನಲ್ಲಿ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದ. ಆ ಮೂಲಕವಾದರೂ ತನ್ನ ದೇಶದ ಮತದಾರರಿಗೆ 'ನನ್ ಆಫ್ ದಿ ಎಬೌ' ಆಯ್ಕೆ ನೀಡುವ ಉದ್ದೇಶ ಅವನದಾಗಿತ್ತು!
ಸೋವಿಯತ್ ಯೂನಿಯನ್
1991ರಲ್ಲಿ ಸೋವಿಯತ್ ಸಂಯುಕ್ತ ರಾಷ್ಟ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಜನತೆ ನೋಟಾ ಬಟನ್ ಒತ್ತಿದ್ದರಿಂದ ಕಮ್ಯೂನಿಸ್ಟ್ ಪಕ್ಷದ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಅನರ್ಹರೆಂದು ರಾಜಕೀಯ ಕ್ಷೇತ್ರದಿಂದ ಹೊರಹೋಗಬೇಕಾಯಿತು. ಅಲ್ಲದೆ ಮರುಚುನಾವಣೆ ನಡೆಯಲು ಕಾರಣವಾಯಿತು. ಈ ಮೂಲಕ ಪ್ರಜಾಪ್ರಭುತ್ವದ ಅರ್ಥ ಹೆಚ್ಚು ಕಳೆಗಟ್ಟಿತು.
ಸ್ಪೇನ್
ಇಲ್ಲಿನ ಮತನಿಯಮಗಳ ಪ್ರಕಾರ ಯಾವುದೇ ಅಭ್ಯರ್ಥಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ಖಾಲಿ ಬಾಕ್ಸ್ವೊಂದನ್ನು ಆಯ್ಕೆ ಮಾಡುವ ಅಧಿಕಾರ ಮತದಾರನಿಗಿದೆ. ಇಲ್ಲಿ ಖಾಲಿ ಬಾಕ್ಸ್ಗೆ ಬಿದ್ದ ಮತಗಳ ಸಂಖ್ಯೆ 5 ಶೇಕಡ ದಾಟಿದರೆ ಆ ಪಕ್ಷವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಅಲ್ಲದೆ ಹಾಗೆ ಮತದಾರರಿಂದ ತಿರಸ್ಕರಿಸಲ್ಪಟ್ಟ ಅಭ್ಯರ್ಥಿಗಳ ಸ್ಥಾನವನ್ನು ಮಂತ್ರಿಮಂಡಲದಲ್ಲೂ ಮರುಚುನಾವಣೆ ನಡೆವವರೆಗೆ ಖಾಲಿ ಬಿಡಲಾಗುತ್ತದೆ.
ಯುಎಸ್
ಅಮೆರಿಕ ಸಂಯುಕ್ತ ರಾಷ್ಟ್ರಗಳಲ್ಲಿ ನೆವಾಡ ರಾಜ್ಯದಲ್ಲಿ ಮಾತ್ರ 1978ರಿಂದಲೇ 'ನೋಟಾ' ಆಯ್ಕೆಯ ಅನುಕೂಲವಿದೆ. 1999ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನೋಟಾ ಬೇಕೆಂಬ ಕೂಗು ಕೇಳಿಬಂದು ಅದರ ಪ್ರಚಾರಕ್ಕಾಗಿ 987000 ಡಾಲರ್ಗಳನ್ನು ವ್ಯಯಿಸಲಾಯಿತಾದರೂ 2000ನೇ ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ಅಭ್ಯರ್ಥಿ ಅತ್ಯಧಿಕ ಮತ ಗಳಿಸುವ ಮೂಲಕ ನೋಟಾ ಮತದಾರರಿಂದಲೇ ತಿರಸ್ಕರಿಸಲ್ಪಟ್ಟಿತು.
ಬ್ರಿಟನ್
ಬ್ರಿಟನ್ ಸರ್ಕಾರ ಯಾವುದೇ ಪಕ್ಷಗಳೂ 'ನನ್ ಆಫ್ ದಿ ಎಬೌ' ಎಂಬ ಹೆಸರಿಟ್ಟುಕೊಳ್ಳುವಂತಿಲ್ಲವೆಂದು ಆದೇಶ ಹೊರಡಿಸಿತ್ತು. ಇದರಿಂದ ಕುಪಿತನಾದ ದೊಡ್ಡ ತಲೆಯ ಬ್ರಿಟಿಷ್ ವ್ಯಕ್ತಿಯೊಬ್ಬ 'ನನ್ ಆಫ್ ದಿ ಎಬೌ ಎಕ್ಸ್' ಎಂಬ ಹೆಸರಿನಲ್ಲಿ ಕಣಕ್ಕಿಳಿದಿದ್ದ. ಆ ಹೆಸರಿನಲ್ಲಿ ಪಕ್ಷವಿರಬಾರದೇ ಹೊರತೂ, ಅಭ್ಯರ್ಥಿ ಇರಬಾರದೆದೇನಿಲ್ಲವಲ್ಲ, ನನ್ನ ಹೆಸರಿನ ಆಯ್ಕೆಯ ಸ್ವಾತಂತ್ರ್ಯವನ್ನು ಜಾಹೀರುಗೊಳಿಸಲೋಸುಗವೇ ಹೀಗೆ ಚುನಾವಣೆಗೆ ನಿಂತಿದ್ದೇನೆ ಎಂದು ಸಾರಿದ್ದ. ಒಂದು ವೇಳೆ 'ನನ್ ಆಫ್ ದಿ ಎಬೌ'ಗೆ ಹೆಚ್ಚು ಮತ ಬಂದರೆ ಅವನು ಗೆಲ್ಲುತ್ತಿದ್ದನೋ, ಸೋಲುತ್ತಿದ್ದನೋ!?
ಪೋಲಂಡ್
1989ರ ಚುನಾವಣೆಯಲ್ಲಿ ಪೋಲೆಂಡ್ನಲ್ಲಿ ಕಮ್ಯೂನಿಸ್ಟ್ ಪಕ್ಷದಿಂದ ನಿಂತಿದ್ದ ಏಕೈಕ ಅಭ್ಯರ್ಥಿಯ ಹೆಸರನ್ನು ಮತದಾನದಂದು ಮತದಾರರೆಲ್ಲರೂ ಚಿತ್ತು ಹಾಕುವ ಮೂಲಕ ಅಂದಿನ ಪ್ರಧಾನಮಂತ್ರಿ ಹಾಗೂ ಪ್ರಮುಖ ಕಮ್ಯೂನಿಸ್ಟ್ ನೇತಾರರನ್ನು ಅಧಿಕಾರದಿಂದ ಕೆಳಗಿಳಿಸಿದರು.
-ರೇಶ್ಮಾರಾವ್ ಸೊನ್ಲೆ

27.3.14

ಕಣ್ಕಟ್ ಬಾಯ್ಕಟ್



First Published: 27 Mar 2014 02:00:00 AM IST
ಪವರ್ ಶಿರೋಮಣಿಯರ ಫ್ರೀ ಸ್ಟೈಲ್
ಅಧಿಕಾರದಲ್ಲಿರುವ ಮಹಿಳೆಯರೇಕೆ ಬಾಯ್ಕಟ್ಗೆ ಮೊರೆ ಹೋಗುತ್ತಾರೆ?ಮಹಿಳೆ ಎಂದರೆ ನೀಳ ಕೇಶರಾಶಿ, ಹಣೆಗೆ ಕುಂಕುಮ, ಕೈತುಂಬ ಬಳೆ, ಭೂಮಿಯೆಡೆಗೆ ನೋಟವಿಟ್ಟ ನಡಿಗೆ...ಹೀಗೆ ವರ್ಣಿಸಿ ವರ್ಣಿಸಿಯೇ ಆಕೆಯನ್ನು ಈ ಸ್ಟಿಗ್ಮಾಕ್ಕೆ ಅಂಟಿಸಿರುವುದು ಭಾರತೀಯ ಪುರುಷ ಪ್ರಧಾನ ಸಮಾಜ. ಇದರಲ್ಲಿ ತಮ್ಮ ಕಲ್ಪನೆಯ ಹುಡುಗಿಯನ್ನು ತೆರೆದಿಡುವುದರೊಂದಿಗೆ ಮಹಿಳೆಯರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳಬಾರದೆಂಬ ಧೋರಣೆಯೂ, ತಮ್ಮನ್ನು ಮೀರಿ ಬೆಳೆವ ಭಯವೂ ಪುರುಷರ ಕಳ್ಳ ಮನಸ್ಸಿನಲ್ಲಿ ಹುಳ್ಳಹುಳ್ಳಗೆ ಇರುತ್ತದೆ. ಇಂಥ ಬಹುಸಂಖ್ಯಾತ, ಬಲಾಢ್ಯ ಪುರುಷ ಜಾತಿಯ ಕಟ್ಟುಕಟ್ಟಳೆಗಳನ್ನು ಮೀರಲು ಸಹಜವಾಗಿಯೇ ಭಯವೂ, ಪುರುಷರ ಮೆಚ್ಚುಗೆ ಕಣ್ಗಳಿಂದ ದೂರವಾಗುವ ಆತಂಕವೂ ಮಹಿಳೆಯ ಆತ್ಮಕ್ಕೇ ಬೇಲಿ ಹಾಕಿರುತ್ತದೆ. 
ಇಂಥ ವಾತಾವರಣದಲ್ಲಿ ಈ ಬೇಲಿ ದಾಟುವ ಆಕೆಯ ಯಾವುದೇ ಸಣ್ಣ ಪ್ರಯತ್ನವೂ ಬಹುಶೀಘ್ರವಾಗಿ ಸಮಾಜದ ಗಮನ ಸೆಳೆಯಬಲ್ಲದು. ಹಾಗಾಗಿಯೇ ಅಧಿಕಾರಯುತ ಮಹಿಳೆಯ ಬಾಯ್ಕಟ್ ಆಕೆಯ ವ್ಯಕ್ತಿತ್ವವನ್ನೇ ಬದಲಿಸಬಲ್ಲದು. ಒಬ್ಬಳು ಮಧ್ಯವಯಸ್ಸಿನ ಮಹಿಳೆ ಬಾಯ್ಕಟ್ ಮಾಡಿಕೊಂಡಿದ್ದಾಳೆಂದರೆ ಓದಿದವಳು, ದಿಟ್ಟೆ, ಅಧಿಕಾರಯುತಸ್ಥಾನದಲ್ಲಿರಬೇಕು.. ಇತ್ಯಾದಿ ಊಹೆಗಳು ನೋಡುವವರ ಕಣ್ಗಳಲ್ಲಿ ಆಕೆಯ ತೂಕವನ್ನು ಹೆಚ್ಚಿಸುತ್ತವೆ. (ತೀರ್ಥಕ್ಷೇತ್ರಗಳಲ್ಲಿ ಕಾಣಸಿಗುವವರನ್ನು ಹೊರತುಪಡಿಸಿ) ಆದ್ದರಿಂದಲೇ ಬಹುತೇಕ ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರು ಬಾಯ್ಕಟ್ ಮೊರೆ ಹೋಗುತ್ತಾರೆ. 
ಇಂದಿರಾ ಗಾಂಧಿ
50ರ ದಶಕದಲ್ಲಿ ಮಧ್ಯೆ ಬೈತಲೆ ತೆಗೆದು ಸಣ್ಣ ಜುಟ್ಟು ಕಟ್ಟಿ ಪಾರ್ಲಿಮೆಂಟ್ಗೆ ಹಾಜರಾಗುತ್ತಿದ್ದ ಇಂಧಿರಾ ಗಾಂಧಿ 60ರ ದಶಕಕ್ಕೆ ಕಾಲಿಡುತ್ತಿದ್ದಂತೆ ಬೊಫ್ಯಾಂಟಿಶ್ ಸ್ಟೈಲ್(ಬಾಯ್ಕಟ್)ಗೆ ಮೊರೆ ಹೋದರು. ಮಹಿಳೆಯನ್ನು ಸದಾ ಮನೆಯೊಳಗಡಗಿಸುವ ಸಂಸ್ಕೃತಿ ಹೊತ್ತಿದ್ದ ಭಾರತದ ತೊಟ್ಟಿಲು ತೂಗುವ ಕೈ ತನ್ನ ಹುಡುಗರ ಶೈಲಿಯ ಕೇಶರಾಶಿಯ ಮೇಲೆ ಕೈಯಾಡಿಸುತ್ತಿದ್ದರೆ ಅಧಿಕಾರಯುತ ಪುರುಷ ಪುಂಗವರು ಇವರ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದರು! ತಂದೆಯಿಂದಲೇ ಫ್ಯಾಷನ್ ಪ್ರೀತಿಯನ್ನು ಎರವಲು ಪಡೆದಿದ್ದ ಇಂದಿರಾ ತಲೆ ಸಂಪೂರ್ಣ ಬೆಳ್ಳಗಾಗತೊಡಗಿದಾಗ ಪ್ಯಾರಿಸ್ಗೆ ಹಾರಿ ಒಂದೆಳೆಯನ್ನು ಬಿಳಿಯಾಗಿಯೇ ಬಿಟ್ಟು ಉಳಿದ ಕೂದಲನ್ನು ಕಪ್ಪಾಗಿಸಿಕೊಂಡು ಬಂದಿದ್ದರು. ಮಹಿಳೆಯ ಈ ವಿಶಿಷ್ಟ ಕೇಶಶೈಲಿಗೆ ಭಾರತ ಸಾಕ್ಷಿಯಾದದ್ದು ಅದೇ ಮೊದಲಿರಬೇಕು. ತುರ್ತು ಸಂದರ್ಭದಲ್ಲಿ ಇಂದಿರಾ ತಲೆಯ ಅರ್ಧಬಿಳಿ, ಅರ್ಧ ಕಪ್ಪು ಕೂದಲು ಆಕೆಯ ವಿಕೃತ ಮನಸ್ಸಿನ ಕುರೂಪವೆಂದು ವಿಶೇಷ ಅರ್ಥ ಪಡೆದುಕೊಂಡಿದ್ದು ಸಹ ಗಮನಾರ್ಹ.
ಮಾಯಾವತಿ
ಸಮಾಜವಾದಿ ಪಕ್ಷದ ನೇತಾರೆ, ಭಾರತದ ಮೊದಲ ಮಹಿಳಾ ದಲಿತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯ ಮಾಯಾವತಿ ವ್ಯಕ್ತಿತ್ವಕ್ಕೆ ಕೂಡಾ ಆಕೆಯ ಬಾಯ್ಕಟ್ ಹೇರ್ಸ್ಟೆ ೈಲ್ ವಿಶಿಷ್ಟ ದಿಟ್ಟತನವನ್ನೊದಗಿಸಿಕೊಟ್ಟಿದೆ. 2 ಬಾರಿ ಮುಖ್ಯಮಂತ್ರಿಯಾದಾಗಲೂ ಎಣ್ಣೆ ತೀಡಿ ಜೆಡೆ ಹೆಣೆದುಕೊಂಡು ಬರುತ್ತಿದ್ದ ಮಾಯಾ, 3ನೇ ಬಾರಿಗೆ ಮುಖ್ಯಮಂತ್ರಿಯಾಗುವಾಗ ಅವರ ಜಡೆಯೂ ಮಾಯ! 'ದಲಿತ' ಎಂಬ ಪಟ್ಟದಿಂದ ಹೊರಬಂದು ಮೇಲ್ವರ್ಗದವರೊಂದಿಗೆ ತನ್ನನ್ನು ತಾನು ಸಮೀಕರಿಸಿಕೊಳ್ಳಲು ಮಾಯಾವತಿಗೆ ಈ ಹೇರ್ಸ್ಟೈಲ್ ಮಹತ್ವದ್ದೆಂದೆನಿಸಿರಬಹುದು.
ಪ್ರಿಯಾಂಕ ಗಾಂಧಿ
ರಾಜಕೀಯ ಅಖಾಡಕ್ಕಿಳಿಯದಿದ್ದರೂ ನೆಹರೂ ಕುಟುಂಬದ ಕುಡಿಯಾಗಿದ್ದರಿಂದ ರಾಜಕೀಯವಾಗಿ ಗುರುತಿಸಿಕೊಂಡಿರುವವರು ಪ್ರಿಯಾಂಕ ಗಾಂಧಿ. ಈಕೆ ಮೊದಲಿಂದಲೂ ತನ್ನ ಅಜ್ಜಿಯ ಕೇಶಶೈಲಿಯನ್ನೇ ನೆಚ್ಚಿಕೊಂಡು ಬಂದವರು. ಆದರೂ ಈ ಫ್ಯಾಷನ್'ಪ್ರಿಯೆ'ಯ ಕೇಶಶೈಲಿ ಸದ್ದು ಮಾಡಿದ್ದು 2011ರಲ್ಲಿ. 40ರ ಹೊಸ್ತಿಲಲ್ಲಿದ್ದ ಪ್ರಿಯಾಂಕಳ ಕೇಶಶೈಲಿಯನ್ನು 20-25ರ ಯುವತಿಯರು ಟ್ರೆಂಡ್ ಆಗಿ ಸ್ವೀಕರಿಸಿ ಅನುಕರಿಸತೊಡಗಿದ್ದರು.
ಗೀತಾ ಶಿವರಾಜ್ ಕುಮಾರ್
ದೀಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ, ರಾಜ್ ಕುಟುಂಬದ ಗೀತಾ ಶಿವರಾಜ್ಕುಮಾರ್ ಕೂಡಾ ಬಾಯ್ಕಟ್ನೊಂದಿಗೇ ರಾಜಕೀಯ ಪ್ರವೇಶಿಸಿದ್ದು, ಈ ಹೇರ್ಸ್ಟೈಲ್ ಆಕೆಯ ರಾಜಕೀಯ ಜೀವನದಲ್ಲಿ ಯಾವ ಪಾತ್ರ ವಹಿಸಲಿದೆ ಕಾದು ನೋಡಬೇಕಿದೆ.
ಕಿರಣ್ ಬೇಡಿ
ರಾಜಕೀಯದ ಗಾಳಿಯನ್ನು ಹತ್ತಿರದಿಂದ ಸೇವಿಸಿ ಅದು ಕಾರುವ ವಿಷಕ್ಕೆ ಭಯಗೊಂಡು ದೂರ ಓಡಿದ ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ ಆಫೀಸರ್ ಕಿರಣ್ ಬೇಡಿ ವ್ಯಕ್ತಿತ್ವಕ್ಕೆ ವಿಶೇಷಣಗಳು ಅಂಟಿದ ದಿನದಿಂದಲೂ ಬಾಯ್ಕಟ್ ಆಕೆಯ ಬಾಯ್ಫ್ರೆಂಡ್ನ ಹಾಗೆ ಜೊತೆಗೇ ಇದೆ.
ಪ್ರಿಯಾದತ್
ಸುನೀಲ್ದತ್ ಮತ್ತು ನರ್ಗೀಸ್ ಪುತ್ರಿ ಪ್ರಿಯಾ ದತ್ ರಾಜಕೀಯ ಅಖಾಡಕ್ಕಿಳಿದ ಕೆಲ ಸಮಯ ಬಾಯ್ಕಟ್ಗೆ ಮೊರೆ ಹೋದದ್ದು ಮತ್ತೊಮ್ಮೆ ರಾಜಕೀಯಕ್ಕೂ ಮಹಿಳೆಯ ಬಾಯ್ಕಟ್ಗೂ ಇರುವ ಸಂಬಂಧವನ್ನು ಪುಷ್ಟೀಕರಿಸುತ್ತದೆ.
ಮಾರ್ಗರೆಟ್ ಹಿಲ್ಡಾ ಥ್ಯಾಚರ್
ತಿ ಹೆಚ್ಚು ಕಾಲ ಬ್ರಿಟಿಷ್ ಪ್ರೈಮ್ ಮಿನಿಸ್ಟರ್ ಆಗಿದ್ದ ಮಾರ್ಗರೆಟ್ ಹಿಲ್ಡಾ ಥ್ಯಾಚರ್ ಕೂಡಾ ಕೆಂಪುಕೂದಲನ್ನು ಹೊರತುಪಡಿಸಿದರೆ ನಮ್ಮ ಇಂದಿರಾ ಗಾಂಧಿಯದೇ ಎನಿಸುವ ಹೇರ್ಸ್ಟೈಲ್ ಹೊಂದಿದ್ದರು. ಅದು ಈ ಉಕ್ಕಿನ ಮಹಿಳೆಯ ನಾಯಕತ್ವದ ವರ್ಚಸ್ಸನ್ನು ಹೆಚ್ಚಿಸಿತ್ತು.
ಹಿಲರಿ ಕ್ಲಿಂಟನ್
ಅಮೆರಿಕ ಸಂಯುಕ್ತ ಸಂಸ್ಥಾನದ ಕಾರ್ಯದರ್ಶಿಯಾಗಿ ಉತ್ತಮ ಹೆಸರು ಮಾಡಿರುವ, ಅಮೆರಿಕದ ಅತ್ಯುತ್ಕೃಷ್ಟ ವಕೀಲೆ ಎಂಬ ಖ್ಯಾತಿವೆತ್ತ ಹಿಲರಿ ಕ್ಲಿಂಟನ್ಗೆ ಕೂಡಾ ಬಾಯ್ಕಟ್ ವಿಶಿಷ್ಟ ಮೆರುಗು ನೀಡಿದೆ.
ಮಿಶೆಲ್ ಒಬಾಮ
ಅಮೆರಿಕ ಅಧ್ಯಕ್ಷ ಒಬಾಮ ಪತ್ನಿ ಸ್ವತಃ ವಕೀಲೆ ಮತ್ತು ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಮಿಶೆಲ್ ಬಾಯ್ಕಟ್ಗೆ ಸಮೀಪದ ಎಲ್ಲ ಹೇರ್ಸ್ಟೈಲ್ಗಳನ್ನು ತನ್ನ ಮೇಲೇ ಪ್ರಯೋಗಿಸಿಕೊಂಡು ನೋಡುಗರ ಗಮನ ಸೆಳೆಯುತ್ತಾರೆ.

1.3.14

ಟಿಪಿಕಲ್ ಸಿಂಹ

ಅದು 1992. ಅಪಘಾತದಲ್ಲಿ ಕಾಲಿಗೆ ತೀವ್ರ ಸುಟ್ಟ ಏಟಾಗಿ ಸಿ.ಆರ್.ಸಿಂಹ ಎಂಬ ಚೈತನ್ಯ ಹಾಸಿಗೆಯಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯವಿತ್ತು. ಅಷ್ಟೇ ಅಲ್ಲ, ಅವರು ಮತ್ತೆ ಚೇತರಿಸಿಕೊಳ್ಳುವ ಭರವಸೆ ಕೊಡಲು ವೈದ್ಯರು ಧೈರ್ಯ ಮಾಡಲಿಲ್ಲ. ಹೀಗಾಗಿ ಖಿನ್ನತೆಗೊಳಗಾದ ಸಿಂಹ ಅದರಿಂದ ಹೊರ ಬರುವ ಪ್ರಯತ್ನವಾಗಿ ಕುವೆಂಪು ಸಾಹಿತ್ಯದ ಮೊರೆ ಹೊಕ್ಕರು. ಅಂದಿನಿಂದ ಅವರ ಬದುಕಿನಲ್ಲಿ ಕುವೆಂಪು ಹಾಸುಹೊಕ್ಕಾದರು. 
ಎದ್ದು ಓಡಾಡುವಂತಾದ ಕೂಡಲೇ ಕುವೆಂಪುರನ್ನು ಭೇಟಿಯಾಗಲು ಯತ್ನಿಸಿ ಕೊನೆಗೂ ಸಾಹಿತ್ಯದ ಮೂಲಕವೇ ಅವರನ್ನು ಗ್ರಹಿಸಿ, ಸಿಂಹ ಅವರೇ ಬರೆದು ನಿರ್ದೇಶಿಸಿ ರಂಗದ ಮೇಲೆ 'ರಸಋಷಿ ಕುವೆಂಪು'ವಿನ ಮುಖಕ್ಕೆ ಬೆಳಕು ಹಾಯಿಸೇ ಬಿಟ್ಟರು. ಆ ಬೆಳಕು, ನೋಡಲು ಕುಪ್ಪಳಿಯ ಪುಟ್ಟಪ್ಪನ ದೇಹಾಕಾರಕ್ಕೆ ಹೊಂದುತ್ತಿದ್ದ ಕುವೆಂಪು ಪಾತ್ರಾಧಾರಿ ಸಿಂಹರ ಮುಖದ ಮೇಲೆ 100ಕ್ಕೂ ಹೆಚ್ಚು ಬಾರಿ ಬಿದ್ದು ಅಭೂತಪೂರ್ವ ಯಶಸ್ಸು ತಂದುಕೊಟ್ಟಿತು. ಕುವೆಂಪು ಬದುಕಿದ್ದಾಗಲೇ ಈ ರಂಗಪ್ರಯೋಗವಾಯಿತಾದರೂ ಅನಾರೋಗ್ಯದಿಂದಾಗಿ ಕುವೆಂಪು ನಾಟಕ ನೋಡಲಾಗಲಿಲ್ಲ.
c.r. shima photosತಮ್ಮ ಭಾಷಣಗಳಲ್ಲೆಲ್ಲ ಕುವೆಂಪುವಿನ ಕತೆ, ಕವಿತೆ, ಕಾದಂಬರಿಯ ಸಾಲುಗಳನ್ನು ಅನಾಯಾಸವಾಗಿ ಉದುರಿಸುತ್ತಿದ್ದ ಸಿಂಹ ಈ ಬಹುಮುಖಿ ವ್ಯಕ್ತಿತ್ವದೆಡೆಗೆ ಅದೆಷ್ಟು ಆಕರ್ಷಿತರಾಗಿದ್ದರೆಂದರೆ ತಮ್ಮ ಎಂಟರ್‌ಪ್ರೈಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ರಸಋಷಿ ಕುವೆಂಪು ಎಂಬ ಚಲನಚಿತ್ರವನ್ನೂ ತಂದರು. ತಮ್ಮ ಮಗ ಋತ್ವಿಕ್ ನಿರ್ದೇಶಿಸಿದ ಈ ಚಿತ್ರದಲ್ಲೂ ತಾವೇ ಕುವೆಂಪುವಿನ ಪಾತ್ರಧಾರಿಯಾದರು. ಆದರೆ ಅವರೆಲ್ಲೂ ಅಭಿನಯಿಸಲಿಲ್ಲ. ಅವರೇ  ಹೇಳುವಂತೆ ಕುವೆಂಪುವೇ ಆಗಬೇಕಾದ ಅದಮ್ಯ ಆಸೆ ಹಾಗು ಅನಿವಾರ್ಯತೆ ಇತ್ತು. 
ರಂಗಗಾಥೆ
1942ರಲ್ಲಿ ಹುಟ್ಟಿದ ಸಿಂಹ 12ನೇ ವಯಸ್ಸಿಗೇ ವೇದಿಕೆ ಏರಿದವರು. ಬಸವನಗುಡಿಯ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿ ಹಾಗೂ ಹಳೆ ವಿದ್ಯಾರ್ಥಿಯಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ತಮ್ಮ ಮೂವತ್ತನೇ ವಯಸ್ಸಿನಲ್ಲಿ ಗೆಳೆಯರನ್ನೆಲ್ಲ ಸೇರಿಸಿಕೊಂಡು 'ನಟರಂಗ' ಎಂಬ ರಂಗಸಂಸ್ಥೆಯೊಂದನ್ನು ಹುಟ್ಟುಹಾಕಿದರು. ಕಾಕನಕೋಟೆ, ತಲೆದಂಡ, ತುಘಲಕ್, ಸಂಕ್ರಾಂತಿ ಮುಂತಾದ ನಾಟಕಗಳ ಪ್ರಖ್ಯಾತಿಗೆ ನಿರ್ದೇಶಕ ಮತ್ತು ನಟನಾಗಿ ಓನಾಮ ಹಾಕುತ್ತಲೇ ಸಾಗಿದರು. 30ಕ್ಕೂ ಹೆಚ್ಚು ವರ್ಷ ತುಘಲಕ್ ಆಗಿ ರಂಗದರ್ಬಾರು ಮೆರೆಸಿದ ಹೆಗ್ಗಳಿಕೆ ಸಿಂಹ ಅವರದ್ದು.
ಸಿನಿಮಾರಂಗದಿಂದ ತಮ್ಮನ್ನು ಗುರುತಿಸುವವರ ಸಂಖ್ಯೆ ಹೆಚ್ಚಿದ್ದರೂ ರಂಗಭೂಮಿಯನ್ನೇ ಕರ್ಮಭೂಮಿ, ಧರ್ಮಭೂಮಿ ಎಂದು ಭಾವಿಸಿದ ಸಿಂಹ 1983ರಲ್ಲಿ ಮತ್ತೊಂದು ರಂಗಗುಂಪು 'ವೇದಿಕೆ' ಹುಟ್ಟು ಹಾಕಿದರು. ಏಕವ್ಯಕ್ತಿ ಪ್ರದರ್ಶಕರಾಗಿ 'ಟಿಪಿಕಲ್ ಟಿ.ಪಿ.ಕೈಲಾಸಂ'ನ್ನು ಅಮೆರಿಕ, ಕೆನಡ, ಇಂಗ್ಲೆಂಡ್ ಮತ್ತಿತರೆ ವಿದೇಶಿ ನೆಲಕ್ಕೂ ಕೊಂಡೊಯ್ದದ್ದು ನಮ್ಮ ರಂಗಭೂಮಿಗೆ ದೊಡ್ಡ ಮಟ್ಟದ ಯಶಸ್ಸೇ.
'ವೇದಿಕೆ' ಮೀಸೆ ಬಂದೋರು, ಕರ್ಣ, ಭೈರವಿ, ಕೋಲ್ಮಿಂಚು, ಅಗ್ನಿ ಮತ್ತು ಮಳೆ ಸೇರಿದಂತೆ ಹಲವಾರು ಹೊಸ ನಾಟಕಗಳಿಗೆ ವೇದಿಕೆಯಾಗಿ 'ಸಿಂಹ'ಘರ್ಜನೆ ಜೋರಾಗೇ ಮೊಳಗಿತು.
ಕೊರಗು 
ಸಿ.ಆರ್. ಸಿಂಹ ತಮ್ಮ ಇತ್ತೀಚಿನ ಭಾಷಣಗಳಲ್ಲಿ ರಂಗಭೂಮಿ ಕಲಾವಿದರ ಹರಸಾಹಸದ ಹೊರತಾಗಿಯೂ ಜನ ರಂಗಭೂಮಿಯಿಂದ ದೂರ ಸರಿಯುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು. ಎಪ್ಪತ್ತು ಎಂಬತ್ತರ ದಶಕದಲ್ಲಿ ನಾಟಕ ನೋಡಲು ಬಂದು ರಂಗಭೂಮಿಯ ಸೀಟುಗಳಿಗೆ ತುಂಬಿ 'ತುಳುಕಿ' ಮರುಪ್ರದರ್ಶನಕ್ಕಾಗಿ ಹಾತೊರೆಯುತ್ತಿದ್ದ ಮಂದಿ ತ್ತೊಂಬತ್ತರಿಂದೀಚೆಗೆ ಕಳೆದು ಹೋಗಿರುವ ವಿಷಾದ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕ್ರಮಗಳನ್ನು ಸೂಚಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗದ ಹತಾಶೆ ಬಗ್ಗೆ ಹೇಳಿಕೊಳ್ಳುತ್ತಿದ್ದರು.
ವಯಸ್ಸು ಸಿಂಹದ ಬೇಟೆಯಾಡಿ ಆರ್ಭಟಕ್ಕೆ ಅಂತ್ಯ ಹಾಡಿದೆ. ಆದರೆ ಅಭಿಮಾನಿಗಳ ನೆನಪಿನ ಕಾಡೊಳಗೆ ಸಿಂಹದ ಓಡಾಟ ಗಾಂಭೀರ್ಯದೊಂದಿಗೆ ನಡೆದೇ ಇದೆ.
ರೇಶ್ಮಾ ರಾವ್ ಸೊನ್ಲೆ