ಪುಟಗಳು

28.2.17

manvi

ಶಾಶ್ವತ್ ಬಂದಿದ್ದ. ತನ್ನ ಎರಡನೇ ಮಗು ನಾಮಕರಣಕ್ಕೆ ಕರೆಯೋಕೆ. ಕಾಲೇಜ್‌ನಲ್ಲಿ ನನ್ನ ಸೀನಿಯರ್ ಅವ್ನ. ಮೊನ್ನೆ ಕತ್ರಿಗುಪ್ಪೆ ವಾಟರ್‌ಟ್ಯಾಂಕ್ ಹತ್ರ ಸಿಕ್ಕ ಮೇಲೆ ಮತ್ತೆ ನಂಬರ್‌ಗಳು ಎಕ್ಸ್‌ಚೇಂಜ್ ಆದವು. ಏನ್ ಹೆಸ್ರು ಇಡ್ತಿದೀರೋ ಕೇಳಿದ್ದಕ್ಕೆ ‘‘ನನ್ನ ಹೆಸರಿನ ಶಾ, ಅವಳ ಹೆಸರಿನ ನ್ವಿ ಸೇರಿಸಿ ಶಾನ್ವಿ ಅಂತಿಡೋಣ ಅಂತಾ’’ ಎಂದ. 
‘‘ಏನು ನಿಮ್ಮನೆಯೋರ ಹೆಸರು?‘‘
‘‘ಮಾನ್ವಿ.’’
ಆ ಒಂದು ಹೆಸರು ಅದೆಷ್ಟು ನೆನಪುಗಳನ್ನು ಮೇಲಕ್ಕೆಳೆದು ತಂತೋ! ಕೆಳಗೆ ಹೋಗಿದ್ದರೆ ತಾನೇ ಮೇಲೆ ಬರಲು. ಮಾನ್ವಿ, ನನ್ನ ಪ್ರೀತಿಯ ಮಾನು ಪ್ರತಿದಿನ ಕಾಲೇಜಿಗೆ ಹೋಗುವ ಸಮಯ. ಬೆಳಗ್ಗೆ 8.30ಕ್ಕೆ ಆ ಹನುಮಾನ್ ಬಸ್ಸಿನ ಮುಂದಿನಿಂದ ನಾಲ್ಕನೇ ಸೀಟಿನ ಕಿಟಕಿ ಪಕ್ಕ ಅವಳು ಇದ್ದೇ ಇರುತ್ತಿದ್ದಳು. ಅದಕ್ಕೆಂದೇ 10 ಗಂಟೆಯ ಕ್ಲಾಸಿಗೆ ಒಂದೂವರೆ ಗಂಟೆ ಮುಂಚೆಯೇ ಬಸ್ಸು ಹತ್ತುತ್ತಿದ್ದೆ. ಚೆಂದದ ಚೂಡಿಧಾರ್ ಹಾಕಿ ಕುಳಿತುಕೊಂಡಿರುತ್ತಿದ್ದ ಅವಳು ಬಹಳ ಡೀಸೆಂಟ್ ಎನಿಸುತ್ತಿದ್ದಳು. ತೆಳ್ಳಗೆ, ಬೆಳ್ಳಗೆ, ಉದ್ದಕೆ... ಆಹಾ! ಇನ್ನೂ ಆ ರೂಪ ಕಣ್ಮುಂದೆ ಕಟ್ಟಿದಂತಿದೆ. ಅವಳ ಉದ್ದ ರೆಪ್ಪೆಯ ಕಂದು ಬಣ್ಣದ ಕಣ್ಣುಗಳು ಹೊರಗೆಲ್ಲೋ ನೋಡುತ್ತಿದ್ದರೂ ನನ್ನನ್ನೇ ಗಮನಿಸುತ್ತಿದ್ದಾಳೆಂದು ನನಗನ್ನಿಸುತ್ತಿದ್ದಿದ್ದರಿಂದ ನನ್ನೊಳಗೆ ದಿನ ದಿನ ಸಂಭ್ರಮ ಉಕ್ಕೇರುತ್ತಿತ್ತು. ಕೈಗೊಂದು ಅಗಲ ಮುಖದ ವಾಚ್. ಅವಳ ಉದ್ದ ಜೆಡೆ- ಬಸ್ಸಿಳಿದು ನಡೆವಾಗ ಆ ಕಡೆ ಈ ಕಡೆ ಆಡುವ ರೀತಿ ನನಗೇ ಟಾಟಾ ಮಾಡುತ್ತಿದ್ದಾವೆನೋ ಎನಿಸುತ್ತಿತ್ತು. ಮತ್ತೆ ಸಂಜೆ ಮನೆಗೆ ಹೋಗುವಾಗ ಇವೇ ಸೀನ್‌ಗಳು ರಿಪೀಟ್ ಆಗುತ್ತಿದ್ದವು. 
ಆಗುತ್ತಿದ್ದುದು ಇಷ್ಟೇ ಆದರೂ ನಾನಾಗಲೇ ಅವಳ ಬಗ್ಗೆ ನೂರಾರು ಕನಸು ಕಂಡಿದ್ದೆ. ಇವಳ ಧ್ವನಿ ಯಾವಾಗ ಕೇಳುವೆನೋ ಎಂದು ಕಾತರದಲ್ಲಿ ಕಾಯುತ್ತಿದ್ದೆ. ಪಾಸ್ ಇರುತ್ತಿದ್ದುದ್ದರಿಂದ ಟಿಕೆಟ್‌ಗಾಗಿ ಕೂಡಾ ಅವಳು ಬಾಯಿ ಬಿಡಬೇಕಾದ ಸಂದರ್ಭ ಬರುತ್ತಿರಲಿಲ್ಲ. ಅದೊಂದು ದಿನ, ಕೇವಲ ದಿನವಲ್ಲ, ಸುದಿನ- ಮನೆಯ ಫೋನ್ ರಿಂಗಾದಾಗ ಎಂದಿನಂತೆ ನಾನೇ ಮುಂಚೆ ಓಡಿ ರಿಸೀವ್ ಮಾಡಿದ್ದೆ.
‘‘ಹಲೋ ನಚಿಕೇತ್, ನಿಮಗೆ ಬಯಾಲಜಿ ಎರಡನೇ ಚಾಪ್ಟರ್ ನೋಟ್ಸ್ ಬೇಕು ಅಂತಿದ್ರಲ್ಲಾ, ನನ್ನ ಹತ್ರ ಇದೆ. ಕಾಲೇಜ್ ಹತ್ರ ಬಂದು ಕಲೆಕ್ಟ್ ಮಾಡಿಕೊಳ್ಳಿ. ಬಸ್‌ನಲ್ಲಿ ಬೇಡ, ಯಾರಾದರೂ ನೋಡಿದರೆ ಕಷ್ಟ’’
‘‘ಯಾರಿದು?’’
‘‘ನಾನು ಮಾನ್ವಿ.’’
ಮಾನ್ವಿನಾ!!!!!!
ನನಗೆ ತಲೆಗೆ ಹೋಗುವಷ್ಟರಲ್ಲಿ ಅವಳು ಕಾಲ್ ಕಟ್ ಮಾಡಿದ್ದಳು. ಮಾನ್ವಿನೇ ನನಗೆ ಕಾಲ್ ಮಾಡಿದಳಾ? ನನ್ನ ಮಾನು?! ಜಾನು.... ನಾನಂತೂ ಅವತ್ತು ಈ ಭೂಮಿಯ ಮೇಲೆ ಇರಲಿಲ್ಲ. ಪ್ರತಿದಿನ ನೋಡಿದರೂ ಕೇಳದ ಧ್ವನಿಯನ್ನು ಫೋನ್‌ನಲ್ಲಿ ಕೇಳಿದ್ದೆ. 
ತಲೆ ತುಂಬ ನೋಟ್ಸ್ ತೆಗೆದುಕೊಳ್ಳುವಾಗಿನ ಸಂದರ್ಭದ ನೂರು ನೂರು ಕನಸು. ಏನು ಮಾತಾಡಬೇಕು, ಯಾವ ಬಟ್ಟೆ ಹಾಕಿಕೊಂಡು ಹೋಗಬೇಕು ಇತ್ಯಾದಿ ಯೋಚನೆಗಳು.
ಮರುದಿನ ಬಸ್ ಹತ್ತಿದಾಗ ಅವಳೆಡೆ ನೋಡಿದೆ. ನನ್ನತ್ತ ಕಣ್ಣು ಹಾಯಿಸಿ ಚಿಕ್ಕದೊಂದು ನಗೆ ಸೂಸಿದವಳು, ನಂತರ ಎಂದಿನಂತೆ ಹೊರಗೆ ನೋಡುತ್ತಾ ಕುಳಿತಳು. 
ಕಮಲಾ ನೆಹರೂ ಕಾಲೇಜ್ ಸ್ಟಾಪ್‌ನಲ್ಲಿ ಇಳಿದಳು. ನಾನೂ ಇಳಿದೆ. ಅವಳು ತಿರುಗಿ ನೋಡಲಿಲ್ಲ. ಸೀದಾ ಕಾಲೇಜ್ ಕ್ಯಾಂಪಸ್‌ನೊಳಗೆ ನಡೆದು ಹೋದಳು. 
ನನಗೆ ಭಯ ಆಗಲು ಶುರುವಾಯಿತು. ನಿಜವಾಗಿಯೂ ಇವಳೇ ಫೋನ್ ಮಾಡಿದ್ದಾ ಅಥವಾ ಬೇರೆ ಯಾರೋ ಆಟ ಆಡ್ಸೋಕೆ ಹೀಗೆ ಮಾಡಿದ್ರಾ? ಅವಳೇ ಮಾಡಿದ್ದಾದ್ರೆ ಹೀಗೆ ಇಲ್ಲಿ ನನ್ನ ನೋಡದವಳಂತೆ ಒಳ ಹೋಗುತ್ತಿದ್ದಳೇ? ಫೋನ್ ಮಾಡಿದವಳು ಇವಳಲ್ಲದಿದ್ದರೆ ಬಸ್‌ನಲ್ಲಿ ಸ್ಮೈಲ್ ಏಕೆ ಕೊಡುತ್ತಿದ್ದಳು? ನನಗೆ ಭಯ ಆಗಲು ಇನ್ನೊಂದು ಕಾರಣವಿತ್ತು. ಅದು ಕೇವಲ ಹುಡುಗಿಯರ ಕಾಲೇಜ್. ಮೊದಲೇ ಹುಡುಗಿಯರ ಪ್ರಪಂಚ ಅರಿಯದ ವಯಸ್ಸು. ಸುಮ್ಮನೇ ಅವಳ ಟಾಟಾ ಮಾಡುವ ಜೆಡೆ ನೋಡುತ್ತಾ ನಿಂತೆ. ಕಾಲೇಜ್ ಕಟ್ಟಡದ ಹತ್ತಿರ ಹೋದವಳು ಒಮ್ಮೆ ತಿರುಗಿ ನೋಡಿ ಬಾ ಎಂಬಂತೆ ಸನ್ನೆ ಮಾಡಿದಳು. ನಾನು ಒಳಗೊಳಗೇ ಹಾರಾಡುತ್ತಾ, ಎದುರಿಗೆ ಮಾತ್ರ ಡೀಸೆಂಟ್ ಆಗಿ ನಡೆದುಹೋದೆ. 
ಅಲ್ಲಲ್ಲಿ ಕುಳಿತ ಹುಡುಗಿಯರ ಗುಂಪು ಕಾಮೆಂಟ್ ಪಾಸ್ ಮಾಡಿ ನಗುತ್ತಿದ್ದರು. ಬಹುಸಂಖ್ಯಾತರಿದ್ದೀರಾ, ಮಾಡಿ, ಮಾಡಿ... ನಂಗೂ ಒಂದೂ ಕಾಲ ಬರುತ್ತಂತ ಅಂದುಕೊಳ್ಳುತ್ತಾ ಮುಂದೆ ಹೋದೆ. 
ನೋಟ್ಸ್ ಕೊಟ್ಟಳು.
‘‘ನಿನಗೆ ಹೇಗೆ ಗೊತ್ತಾಯ್ತು ನನಗೆ ಈ ನೋಟ್ಸ್ ಬೇಕಂತ?’’
‘‘ಮೊನ್ನೆ ಸಂಜೆ ನೀನು ಬಸ್‌ನಲ್ಲಿ ಫ್ರೆಂಡ್ಸ್ ಹತ್ರ ಕೇಳ್ತಿದ್ಯಲ್ಲಾ....’’
‘‘ನಮ್ಮನೆ ನಂಬರ್ ಎಲ್ಲಿ ಸಿಕ್ತು?’’
‘‘ಫೋನ್ ಡೆರೆಕ್ಟರಿಲಿ.’’
ಮುಂದೇನು ಕೇಳೋದೋ ಗೊತ್ತಾಗದೇ ‘‘ಥ್ಯಾಂಕ್ಸ್’’ ಎಂದೆ. ‘‘ವೆಲ್‌ಕಮ್’’ ಎಂದಳು. 
ನಾ ತಿರುಗಿ ನಡೆದೆ. ಅವತ್ತು ಕಾಲೇಜ್‌ಗೆ ಹೋಗಲೇ ಇಲ್ಲ.
ಇಲ್ಲಿ ನಡೆದ ಮೂರು ಮತ್ತೊಂದು ಸಂಭಾಷಣೆಯನ್ನು ಮೆಲುಕು ಹಾಕಲು ಮನಕ್ಕೆ ಅರ್ಜೆಂಟ್ ಆಗಿತ್ತು. ಆ ದಿನ ಹೇಗೆ ಕಳೆದೆನೋ ಗೊತ್ತಾಗಲೇ ಇಲ್ಲ.
ಮರುದಿನದಿಂದ ಬಸ್‌ನಲ್ಲಿ ಒಂದು ಸ್ಮೈಲ್, ಆಗಾಗ ಒಂದೊಂದು ಮಾತು ಶುರುವಾಯಿತು. ಆಗೆಲ್ಲ ನನ್ನ ಹೃದಯ ದೇಹದಿಂದ ಹೊರ ಬಂದು ಕಿವಿ ಪಕ್ಕ ನಿಂತು ಬಡಿದುಕೊಳ್ಳುತ್ತಿದೆಯೇನೋ ಅನ್ನಿಸುವುದು. ಆಗಿನ ಹಾಗೂ ಇಲ್ಲೀವರೆಗಿನ ನನ್ನ ಪ್ರಪಂಚದಲ್ಲಿ ಸುಂದರಿ ಎಂಬುದರ ಮೂರ್ತರೂಪ ಮಾನ್ವಿ ಒಬ್ಬಳೇ. ಯಾರು ಯಾರ ಬಗ್ಗೆಯೇ ಸುಂದರಿ ಎನ್ನಲೀ, ನನಗೆ ಮಾನ್ವಿಯ ರೂಪ ಕಣ್ಮುಂದೆ ನಿಲ್ಲುತ್ತದೆ. 
ಇದು ಹೀಗೆಯೇ ಒಂದು ವರ್ಷ ಕಳೆಯಿತು. ಪಿಯುಸಿ ಮುಗಿದಿತ್ತು. ನಾ ಮುಂದಿನ ಓದಿಗೆ ಬೆಂಗಳೂರಿನತ್ತ ಮುಖ ಮಾಡಿದ್ದೆ. ಮೊಬೈಲ್ ಫೋನ್ ಇರಲಿಲ್ಲ. ಊರಿಗೆ ಹೋದಾಗ ಮಾನ್ವಿಗೆ ಕಾಲ್ ಮಾಡುತ್ತಿದ್ದೆ. ಅವರಪ್ಪನೋ, ಅಮ್ಮನೋ ಎತ್ತಿದರೆ ಕಾಲ್ ಕಟ್ ಮಾಡುತ್ತಿದ್ದೆ. ಹಾಗಾಗಿ ನಂತರದ ವರ್ಷಗಳಲ್ಲಿ ಒಂದೆರಡು ಬಾರಿ ಮಾತಾಡಿದೆವೇನೋ. ಹಾಗಂತ ಮಾನ್ವಿ ನನ್ನ ಎಂದಿನ ಕನಸಿನ ಹುಡುಗಿಯಾಗಿ ಉಳಿದಿದ್ದಳು. 
ಬಳಿಕ ಒಂದು ದಿನ ಊರಿಗೆ ಹೋದಾಗ ಮನೆಗೆ ನನ್ನ ಹುಡುಕಿಕೊಂಡು ಒಬ್ಬ ಯುವಕ ಬಂದಿದ್ದ. 
‘‘ನಾನು ಮಾನ್ವಿಯ ತಮ್ಮ. ಅಕ್ಕ ಇದನ್ನು ನಿಮಗೆ ಕೊಟ್ಟುಬರಲು ಹೇಳಿದಳು’’ ಎಂದು ಹೇಳಿ ಕಾರ್ಡ್ ನೀಡಿದ. ಮಾನ್ವಿಯ ಮದುವೆಯದು! ಯಾಕೋ ಗೊತ್ತಿಲ್ಲ, ನಾ ಆ ಕಾರ್ಡನ್ನು ಡೇಟ್ ಕೂಡಾ ನೋಡದೆ ಅಲ್ಲೇ ಹರಿದುಬಿಟ್ಟೆ. ಇದಾಗಿ ವರ್ಷಗಳೇ ಕಳೆದವು. 
-----
ಶಾಶ್ವತ್ ಮನೆಯ ಫಂಕ್ಷನ್‌ಗೆ ಹೋದೆ. ಕಣ್ಣುಗಳು ಅವನ ಹೆಂಡತಿಯನ್ನು ನೋಡಲು ಕಾತರಿಸಿದವು. ಪರಿಚಯ ಮಾಡಿಸಲು ಆತ ಅವಳನ್ನು ಕರೆದ.
ಕುತ್ತಿಗೆ ಸೊಂಟಗಳಲ್ಲಿ ಬೊಜ್ಜು ತುಂಬಿರುವ, ದಪ್ಪನೆಯ ಗರತಿ. ಬಾಬ್‌ಕಟ್ ಮಾಡಿಸಿಕೊಂಡಿದ್ದಾರೆ. ಮಗುವನ್ನು ಕಂಕುಳಲ್ಲಿ ಹಾಕಿಕೊಂಡು ಬಂದರು. ಹತ್ತಿರ ಬಂದಾಗಲೇ ಗೊತ್ತಾಗಿದ್ದು, ಅವಳೇ ಇವಳು!! 
ಯಾಕೋ ಗೊತ್ತಿಲ್ಲ, ಇಬ್ಬರೂ ಪರಿಚಯವಿಲ್ಲದವರಂತೆ ನಟಿಸಿದೆವು. ಊಟ ಮಾಡಿ, ಮಗುವಿನ ಕೈಗೆ ದುಡ್ಡನ್ನಿತ್ತು ಮನೆಗೆ ಬಂದೆ. 
 ಇದುವರೆಗೂ ಅಮ್ಮ ಮದುವೆಯಾಗು ಎಂದಾಗಲೆಲ್ಲ ಬಸ್‌ನಲ್ಲಿ ಕುಳಿತು ಹೊರಗೆ ನೋಡುತ್ತಿದ್ದ ಮಾನ್ವಿಯೇ ಕಣ್ಮುಂದೆ ಬರುತ್ತಿದ್ದಳು. ಆದರೀಗ ಅದೇಕೋ ಒಂದೇ ದಿನದಲ್ಲಿ ಮಾನ್ವಿಯೆಡೆಗಿನ ನನ್ನ ಆಕರ್ಷಣೆಗಳೆಲ್ಲವೂ ಉದುರಿಬಿದ್ದವು. ಅವಳ ಕಳೆದು ಹೋದ ಆ ಜೆಡೆ ನನ್ನತ್ತ ನೋಡಿ ಕಡೆಯದಾಗಿ ಎಂಬಂತೆ ಜೋರಾಗಿ ಟಾಟಾ ಮಾಡುತ್ತಿತ್ತು. 
ನಾ ಆಗಿನ್ನೂ ಪಿಯುಸಿ. ಪ್ರೀತಿಸಲು ಚೆಂದದಾಚೆಗೆ ಅವಳ ಬಗ್ಗೆ ಅಷ್ಟೊಂದು ಯೋಚಿಸಿಯೇ ಇರಲಿಲ್ಲ. ಹೀಗಾಗಿ ಹುಡುಗಿಯರ ಚೆಂದಕ್ಕೆ ಅವಳು ಮಾನದಂಡವಾಗಿದ್ದಳು. ಈಗ ಅಂದಚೆಂದಕ್ಕೆ ಕೂಡಾ ಅವಳನ್ನು ಕಲ್ಪಿಸಿಕೊಳ್ಳಲಾಗಲಿಲ್ಲ. ಅವಳ ಇನ್ಯಾವ ಗುಣಗಳೂ ನನಗೆ ಗೊತ್ತಿರಲಿಲ್ಲ. ಹಾಗಾಗಿಯೋ ಏನೋ ಮಾನ್ವಿ ಮನದ ಪರದೆಯಿಂದಾಚೆ ಸರಿದಳು ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಅಮ್ಮ ಫೋಟೋವೊಂದನ್ನು ಹಿಡಿದು ತಂದು ಮುಂದಿಟ್ಟಳು. 
‘‘ಶಾರದಮ್ಮನ ಅಕ್ಕನ ಮಗಳಂತೆ. ಸ್ವಲ್ಪ ಕಪ್ಪು. ಚೂರು ಕುಳ್ಳಗಿದ್ದಾಳೆ. ಆದ್ರೆ ಅಂದಚೆಂದ ಎಲ್ಲ ಎರಡು ಮಕ್ಕಳಾಗುವವರೆಗೆ. ಅದ್ರ ಬಗ್ಗೆ ಯೋಚಿಸ್ಬೇಡ. ಒಮ್ಮೆ ಭೇಟಿಯಾಗಿ ಗುಣ, ಶಿಕ್ಷಣ, ಮಾತು ಮನಸ್ಸು ನೋಡಿ ಓ.ಕೆ.ನಾ ಹೇಳು. ಸರೀನಾ?’’

6.1.17

ಉಡುಪಿನ ಲೋಪ ಹುಡುಕುವ ನಿಮ್ಮ ಮನಸ್ಥಿತಿಗೆ ಧಿಕ್ಕಾರ

ಅದು ವಾಘಾ ಬಾರ್ಡರ್‌. ಭಾರತ ಪಾಕಿಸ್ತಾನದ ಗಡಿ ಬಾಗಿಲನ್ನು ತೆರೆವ ಸಮಯ. ಈ ಕಡೆಯಿಂದ ಇಂಡಿಯಾ ಜಿಂದಾಬಾದ್‌ ಕೂಗು, ಆ ಕಡೆಯಿಂದ ಪಾಕಿಸ್ತಾನ್‌ ಜಿಂದಾಬಾದ್‌, ಭಾರತ್‌ ಮುರ್ದಾಬಾದ್‌ ಅಬ್ಬರ... ಎಂಥವರ ಮೈಯ್ಯಲ್ಲೂ ದೇಶಭಕ್ತಿಯೆಂಬುದು ಜಾಗೃತವಾಗಿ ಉಕ್ಕುವಂಥ ಸನ್ನಿವೇಶ. ಜನಸಂದಣಿಯ ಸುತ್ತಲೂ ನಮ್ಮ ಸೈನಿಕರು, ನಡುವೆ ತಲೆ ಹಾಕಿ ಪಾಕಿಸ್ತಾನವನ್ನು ನೋಡುವ ಕಾತರದಲ್ಲಿ ಒದ್ದಾಡುತ್ತಿದ್ದ ನಾವು.... ಇದ್ದಕ್ಕಿದ್ದಂತೆ ನನ್ನ ಗೆಳತಿ, ಬೇಗ ಹೊರಗೆ ಹೋಗಣ... ಇಲ್ಯಾರೂ ಸರಿಯಿಲ್ಲ ಎನ್ನಲು ಶುರು ಮಾಡಿದಳು. ಯಾಕೆಂದು ನೋಡುವ ಹೊತ್ತಿಗೆ ಸಿಕ್‌ ಮೈಂಡೆಡ್‌ ಯುವಕನೊಬ್ಬ ಅವಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಮುಖ ಮಾತ್ರ ಎತ್ತರಿಸಿಕೊಂಡು ಗಡಿಯ ಗೇಟ್‌ ಬಳಿ ನೋಡುತ್ತಾ ಸಭ್ಯನಂತೆ ನಿಂತಿದ್ದ. ಭಾಷೆ ಬರದ ನಾವು ಅತ್ತೂ ಕರೆದು, ಸೈನಿಕರೊಬ್ಬರ ಸಹಾಯ ಪಡೆದು ಜನಜಂಗುಳಿಯಿಂದಾಚೆ ಹೋದೆವು. ಇಷ್ಟಕ್ಕೂ ಆಕೆಯೇನೂ ಪ್ರಚೋದನಾಕಾರಿ ಉಡುಗೆ ಧರಿಸಿರಲಿಲ್ಲ. ಅಮೃತಸರದಲ್ಲಿ ಆಗಿದ್ದ ಚಳಿ 9 ಡಿಗ್ರಿ ಸೆಲ್ಶಿಯಸ್‌. ದಪ್ಪ ಕೋಟ್‌ ಹಾಕದೆ ನೆಟ್ಟಗೆ ನಿಲ್ಲುವುದೂ ಸಾಧ್ಯವಿರಲಿಲ್ಲ. ಅದೇನು ಹೊಸ ವರ್ಷದ ಪಾರ್ಟಿಯೂ ಅಲ್ಲ, ರಾತ್ರಿಯೂ ಅಲ್ಲ, ಯಾರೂ ಕುಡಿದಿರಲೂ ಇಲ್ಲ, ಉಡುಪಿನಲ್ಲೂ ಲೋಪವಿರಲಿಲ್ಲ... ಹಾಗಿದ್ದೂ ಆ ಸ್ಫುರದ್ರೂಪಿ, ವಿದ್ಯಾವಂತನಂತೆ ಕಾಣುತ್ತಿದ್ದ ವಿಕೃತನಿಗೆ ಅವಳ ಬಟ್ಟೆ ಮೇಲೆ ಕೈಯಾಡಿಸುವ ವಾಂಛೆ ಹುಟ್ಟಿದ್ದು ಹೇಗೆ? ಆತನಿಗೆ ಕುಟುಂಬದಿಂದ ಒಳ್ಳೆಯ ಸಂಸ್ಕಾರ ಸಿಕ್ಕಿರಲಿಲ್ಲ ಇಲ್ಲವೇ ಆತನೊಬ್ಬ ಸೈಕೋಪಾತ್‌ ಎಂಬುದರ ಹೊರತಾಗಿ ನನಗಿನ್ಯಾವ ಕಾರಣವೂ ಇಲ್ಲಿ ಸಿಗುತ್ತಿಲ್ಲ. ಬೆಂಗಳೂರಿನ ಹೊಸ ವರ್ಷಾಚರಣೆಯ ಕಹಿ ಘಟನೆ, ಕಮ್ಮನಹಳ್ಳಿಯ ಗ್ರೋಪಿಂಗ್‌ ಪ್ರಕರಣದ ಬಳಿಕ, ಇಂಥ ಕೆಟ್ಟ ಘಟನೆಗಳು ಕರಗದಲ್ಲಾಗಲ್ಲ, ಕಡ್ಲೆಕಾಯಿ ಪರಿಷೆಯಲ್ಲಾಗಲ್ಲ, ಅವರೆಕಾಳು ಮೇಳದಲ್ಲಾಗಲ್ಲ, ಕನ್ನಡಿಗರು ಇದ್ದಲ್ಲಾಗಲ್ಲ ಅಂತೆಲ್ಲ ಹೊಸ ತರದಾದ ವಿಚಿತ್ರ ಸಮರ್ಥನೀಯ ವಾದಗಳು ಹುಟ್ಟಿಕೊಂಡಿವೆ. ಯಾರು ಸ್ವಾಮಿ ಹೇಳಿದ್ದು ಕರಗದಲ್ಲಾಗಲ್ಲ ಅಂತ? ಕರಗದಲ್ಲೂ ಆಗುತ್ತೆ, ಪರಿಷೆಯಲ್ಲೂ ಆಗುತ್ತೆ, ಬಸ್‌ನಲ್ಲೂ ಆಗುತ್ತೆ, ಬಸ್‌ಸ್ಟ್ಯಾಂಡ್‌ನಲ್ಲೂ ಆಗುತ್ತೆ. ಅಷ್ಟೇ ಏಕೆ? ಮನೆಯೊಳಗೇ ಎಷ್ಟೊಂದೆಲ್ಲ ಆಗುತ್ತದೆ, ಹೊರಜಗತ್ತಿಗೆ ಎಂದಿಗೂ ಬಹಿರಂಗವಾಗದ್ದು... ಯಾರೂ ಬಂದು ನಿಮಗೆ ಹೇಳಿಕೊಳ್ಳೋಲ್ಲ ಅಷ್ಟೆ. ಏಕೆಂದರೆ ಇಂಥ ಕೃತ್ಯದಲ್ಲಿ ತೊಡಗುವ ಗಂಡಸರಿಗೆ ಮಾನವಿಲ್ಲವೆಂಬುದು ಹೆಣ್ಣುಮಕ್ಕಳಿಗೆ ಗೊತ್ತು. ಸಂತ್ರಸ್ತೆಯಾದರೂ ತಮ್ಮ ಮೇಲೆ ಗೂಬೆ ಕೂರಿಸಿ ಮಾನ ತೆಗೆಯುತ್ತಾರೆಂಬುದೂ ಗೊತ್ತು. ಹೀಗಾಗಿ ಬಾಯ್ಬಿಡದೆ ತಮ್ಮೊಳಗೇ ಕಹಿಯೊಂದನ್ನು ಹೂತು ಹಾಕುವ ಹೆಣ್ಮಕ್ಕಳೇ ಹೆಚ್ಚು. ಒಂದು ವೇಳೆ ಪೋಷಕರಲ್ಲಿ ಹೇಳಿಕೊಂಡರೂ, ಮದುವೆಯಾಗಬೇಕಾದ ಹುಡುಗಿ, ಯಾರು ಹೆಣ್ಣು ಕೊಡುತ್ತಾರೆ, ಮನೆ ಮಾನ ಹೋಗುತ್ತದೆ ಇತ್ಯಾದಿ ಆತಂಕಗಳಿಂದ ತಾವೂ ಕೊರಗಿ, ಅವಳಲ್ಲೂ ಆತಂಕ ಹುಟ್ಟಿಸಿ ಬಾಯಿ ಮುಚ್ಚಿಸಿಬಿಡುತ್ತಾರೆ. ಅಪ್ಪನೇ ಮಗಳ ಮೇಲೆ ಅತ್ಯಾಚಾರವೆಸಗಿದ್ದು, ಅಣ್ಣನಿಂದಲೇ ತಂಗಿ ಬಸಿರಾದದ್ದು, ಶಿಕ್ಷ ಕನೇ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, 2 ವರ್ಷದ ಕೂಸಿನ ಮೇಲೆ ಅತ್ಯಾಚಾರದಂಥ ಘಟನೆಗಳು ಆಗಾಗ ರಿಪೋರ್ಟ್‌ ಆಗುತ್ತವಲ್ಲಾ... ಅದು ಹೇಗೆ ಆ ಮಗು ಇವರನ್ನು ಪ್ರಚೋದಿಸಿರುತ್ತದೆ? ಅದು ಹೇಗೆ ಪ್ರತಿ ವರ್ಷ ರಾಖಿ ಕಟ್ಟಿಸಿಕೊಂಡ ಅಣ್ಣನಿಗೆ ತಂಗಿಯ ಮೇಲೆ ಅಂಥದೊಂದು ಯೋಚನೆ ಹುಟ್ಟುತ್ತದೆ? ಬಸ್‌ನಲ್ಲಿ ಹೆಣ್ಣಿನ ಪಕ್ಕ ಕುಳಿತು ಡೀಸೆಂಟ್‌ ಮುಖ ಹಾಕಿಕೊಂಡು ಕೈಕಟ್ಟಿ ನಿದ್ದೆ ಮಾಡುವ ಸೋಗಿನ ಅದೆಷ್ಟು ಅಂಕಲ್‌ಗಳು 'ಕರಕುಶಲ ಕಲೆ'ಯಲ್ಲಿ ನಿಸ್ಸೀಮರೆಂಬುದು ಹುಡುಗಿಯರ ಜಗತ್ತಿಗೆ ಗೊತ್ತಿದೆ. ರಶ್ಶಿದೆ ಎಂಬ ಮಾತ್ರಕ್ಕೆ ಹುಡುಗಿಯ ಮೈಗೆ ವಾಲಿಕೊಂಡು ನಿಲ್ಲುವ ಹುಡುಗರ ಭಂಡತನದ ಬಗ್ಗೆಯೂ ಹುಡುಗಿಯರಿಗೆ ಗೊತ್ತಿದೆ. ಸೆಲ್ಫೀ ತೆಗೆದುಕೊಳ್ಳುವ ನೆಪದಲ್ಲಿ ರಸ್ತೆಯಲ್ಲಿ ಫೋಟೋ ತೆಗೆದುಕೊಂಡು ಹೋದ ಹುಡುಗನ ಕೆಲಸ ಆಕೆಗೆ ತಿಳಿಯುತ್ತದೆ. ಆದರೆ, ಇಲ್ಲೆಲ್ಲ ಪಕ್ಕಾ ಪರ್ಫೆಕ್ಟ್ ಆಗಿ ವಾದಿಸಲಾಗದಂತೆ ಹುಡುಗರು ಚಾಲಾಕಿತನ ಮೆರೆದಿರುತ್ತಾರೆ. ನನ್ನ ಫೋಟೋ ತೆಗೆದೆ ಎಂದರೆ, ತಾನು ಸೆಲ್ಫೀ ತೆಗೆದುಕೊಂಡೆನೆಂದು ಆಗ ತಾನೇ ತೆಗೆದ ಮತ್ತೊಂದು ಫೋಟೋ ತೋರಿಸುತ್ತಾನೆ, ಮೈಮೇಲೆ ಬೀಳಬೇಡವೆಂದರೆ ತಳ್ಳುತ್ತಿದ್ದಾರೆನ್ನುತ್ತಾನೆ... ಸುಳ್ಳಿಗೇ ನಿಲ್ಲುವುದಿಲ್ಲವಲ್ಲ ಆತನ ಓರಲ್‌ ಡಯೇರಿಯಾ... ಜೊತೆಗೆ ಒಂದಿಷ್ಟು ಕೆಟ್ಟ ಪದಗಳನ್ನುಗುಳಿ ಆಕೆಯ ನಡತೆ ಮೇಲೆ ಗೂಬೆ ಕೂರಿಸಿದರೆ ಮತ್ತೆ ಜನರ್ಯಾರೂ ಅವಳ ಮಾತನ್ನು ನಂಬುವುದಿಲ್ಲ. ಇದಕ್ಕೇ ಆಕೆ ಬಾಯಿ ತೆಗೆಯಲು ಹೆದರುವುದು. ಅಂಥದರಲ್ಲಿ ಇಲ್ಲಿ ಕೆಲವು ಹುಡುಗಿಯರು ಬಾಯಿ ತೆರೆದಿದ್ದಾರೆ. ತನ್ನ ತಪ್ಪಿಲ್ಲವೆಂಬ ಧೈರ್ಯದಿಂದಲೇ ಹೇಳುತ್ತಿದ್ದೇನೆ ಎಂದು ಕೂಡಾ ದೌರ್ಜನ್ಯಕ್ಕೊಳಗಾದ ಯುವತಿಯೊಬ್ಬಳು ಹೆಸರು ಸಮೇತ ತಿಳಿಸಿದ್ದಾಳೆ. ಹಾಗೆ ಹೇಳಲು ಅದೆಷ್ಟು ಧೈರ್ಯ, ನೈತಿಕತೆ ಬೇಕು? ಅವಳು ಗೋಳು ಹೇಳಿಕೊಳ್ಳುತ್ತಿದ್ದರೆ, ಅವಳು ಯಾವ ಬಟ್ಟೆ ತೊಟ್ಟಿದ್ದಳು? ಗಂಟೆ ಎಷ್ಟಾಗಿತ್ತು? ಇವಳೇಕೆ ಅಲ್ಲಿ ಹೋಗಬೇಕಿತ್ತು? ಕುಡಿದಿದ್ದಳಾ? ಇತ್ಯಾದಿ ಪ್ರಶ್ನೆಗಳು ನಿಮಗೆ ಮೂಡಿದ್ದರೆ ದಯವಿಟ್ಟು ನಿಮ್ಮ ಮನಸ್ಥಿತಿ ಬದಲಿಸಿಕೊಳ್ಳಿ. ಅವನೇಕೆ ಅಷ್ಟು ಹೊತ್ತಿನಲ್ಲಿ ಅಲ್ಲಿದ್ದ? ಕುಡಿದದ್ದು ತಪ್ಪಲ್ಲವಾ? ಅದ್ಯಾವ ಭಂಡತನದಿಂದ ಅವನು ಹುಡುಗಿಯ ಮೈಮೇಲೆ ಕೈ ಹಾಕಬಲ್ಲ? ಅಷ್ಟು ರಾತ್ರಿಯಲ್ಲೂ ಎಂಥ ಪಾರ್ಟಿ? ಅವನು ಅವಕಾಶಕ್ಕಾಗಿ ಕಾಯುತ್ತಲೇ ಅಲ್ಲಿ ಹೋಗಿದ್ದನಾ? ಇಂಥ ಪ್ರಶ್ನೆಗಳನ್ನು ಮೊದಲು ಕೇಳಿಕೊಳ್ಳಿ. ನಿಜವಾಗಿಯೂ ಬಟ್ಟೆ ಅಥವಾ ನಡತೆ ಪ್ರಚೋದನಾಕಾರಿಯಾಗಿರಬೇಕಿಲ್ಲ, ಅಲ್ಲಿರುವುದು ಹುಡುಗಿ ಎಂಬ ಒಂದು ವಿಷಯ ಸಾಕು, ಇವರು ಪ್ರಚೋದನೆಗೊಳಗಾಗಲು. ತಾವು ಮಾಡುವುದು ಯಾರಿಗೂ ಗೊತ್ತಾಗುವುದಿಲ್ಲವೆಂದರೆ, ಅವಕಾಶ ಸಿಕ್ಕಿತೆಂದರೆ ಅದೆಷ್ಟು 'ಗೋಮುಖ'ದ ದೇಹದಿಂದ 'ವ್ಯಾಘ್ರ'ಮನಸ್ಥಿತಿಗಳು ಹೊರಬರುತ್ತವೋ ತಿಳಿಯದು. ಬಟ್ಟೆ ಗಿಡ್ಡಕೆ ಹಾಕುವುದು ನಮ್ಮ ಸಂಸ್ಕೃತಿಯಲ್ಲ. ಸರಿ, ಹಾಗೆಯೇ ಪಾಶ್ಚಾತ್ಯ ಉಡುಗೆ ಹಾಕಿದ ಹೆಣ್ಮಕ್ಕಳನ್ನು ಬೇಕೆಂದಂತೆ ಮುಟ್ಟುವುದು ನಮ್ಮ ಸಂಸ್ಕೃತೀನಾ? ಅವಳಿಗೆ ಅರ್ಧ ರಾತ್ರಿ ಹೊರ ಹೋಗಬೇಡ ಎನ್ನುವುದು ಸರಿಯೆಂದೇ ಒಪ್ಪಿಕೊಳ್ಳೋಣ. ಆದರೆ ಅದನ್ನು ಅವನಿಗೂ ಹೇಳಿ. ಅವಳು ಕುಡಿಯುತ್ತಾಳೆಂದರೆ ನಡತೆಗೆಟ್ಟವಳೆಂದು ತೀರ್ಪು ನೀಡುವ ನಿಮ್ಮ ಮನಸ್ಸು ಅವನು ಕುಡಿಯುತ್ತಾನೆಂದಾಗಲೂ ನಡತೆಗೆಟ್ಟವನೆಂದು ತೀರ್ಪು ನೀಡಲಿ. ಅವಳು ಬಾಯ್‌ಫ್ರೆಂಡ್‌ ಜೊತೆಗೆ ಪಾರ್ಟಿ ಮಾಡಿದಳೆಂದ ಮಾತ್ರಕ್ಕೆ ಹಿಂದೂಮುಂದೂ ಯೋಚಿಸದೆ ಅವಳನ್ನು 'ಪ್ರಾಸ್ಟಿಟ್ಯೂಟ್‌' ಎನ್ನುವ ನಾಲಿಗೆಗಳಿಗೆ, ಪ್ರಾಸ್ಟಿಟ್ಯೂಟ್‌ಗಳದ್ದೂ ಸೇರಿಸಿ ಯಾರೊಬ್ಬರ ದೇಹವನ್ನೂ ಮತ್ತೊಬ್ಬ ವ್ಯಕ್ತಿ ಆಕೆಯ ಅನುಮತಿ ಇಲ್ಲದೆ ಮುಟ್ಟುವ ಹಕ್ಕಿಲ್ಲ ಎಂಬ ಕಾಮನ್‌ಸೆನ್ಸ್‌ ಹೇಳಿಕೊಡುವವರಾರ‍ಯರು? ಅರ್ಧರಾತ್ರಿಯಲ್ಲಿ ಪಾರ್ಟಿ ಮಾಡುತ್ತಿದ್ದಾಳೆಂಬ ಕಾರಣಕ್ಕೆ ಅವಳನ್ನು ಮುಟ್ಟುವ, ಅವಳ ಬಗ್ಗೆ ಕೆಟ್ಟದಾಗಿ ಮಾತಾಡುವ ಹಕ್ಕು ನೀಡಿದವರಾರು? ಹಾಗೆಂದು ಎಲ್ಲ ಗಂಡಸರೂ ಹಾಗೆಯೇ ಎನ್ನುತ್ತಿಲ್ಲ. ಆದರೆ, ಬದಲಾಗಬೇಕಾದ್ದು ಬಹಳಷ್ಟಿದೆ. ಕೀಚಕರಿದ್ದಾರೆ ಎಂದು ಮಗಳಿಗೆ ತಿಳಿಸುವಾಗ ಅವರನ್ನು ಎದುರಿಸುವುದು ಹೇಗೆಂಬುದನ್ನೂ ತಿಳಿಸಿ. ಅಂತೆಯೇ ಮಗನಿಗೆ ಮಹಿಳೆಯರನ್ನು ಗೌರವಿಸುವ, ರಕ್ಷಿಸುವ, ಅವರೊಂದಿಗೆ ಹೇಗೆ ವರ್ತಿಸಬೇಕೆಂಬುದರ ಸಂಸ್ಕಾರವನ್ನು ಮೊದಲು ಕಲಿಸಿ. ಒಮ್ಮೆ ಕಲ್ಪಿಸಿಕೊಳ್ಳಿ, ಎಲ್ಲ ಗಂಡ್ಮಕ್ಕಳೂ ಸಂಸ್ಕಾರವಂತರಾದರೆ, ಹೆಣ್ಮಕ್ಕಳ ಮೇಲೆ ಬಟ್ಟೆ, ರಾತ್ರಿ ಎಂದು ನೀವೀಗ ಕೂರಿಸುವ ಗೂಬೆಗಳೆಲ್ಲ ಇನ್ನಾವುದೋ ಗ್ರಹಕ್ಕೆ ಹಾರಿಹೋಗುವುದರಲ್ಲಿ ಸಂಶಯವಿಲ್ಲ.